ಚೆನ್ನಮ್ಮನ 11 ದಿನದ ತಿಥಿಕಾರ್ಯ ಮುಗಿದರೂ, ಮಾಜಿ ಪ್ರಧಾನಿ ದೇವೇಗೌಡರ ಸಂಗಾತಿ ದೂರವಾದ ನೋವು ಮುಗಿಯುತ್ತಿಲ್ಲ!

Published : Jul 30, 2026, 08:14 PM IST

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ತಿಥಿ ಕಾರ್ಯ ಹಾಸನದಲ್ಲಿ ನೆರವೇರಿತು. ಪತ್ನಿಯ ಅಗಲಿಕೆಯಿಂದ ತೀವ್ರ ದುಃಖಿತರಾದ ದೇವೇಗೌಡರು ಭಾವುಕರಾದರು. ಚೆನ್ನಮ್ಮ ಅವರ ಸ್ಮರಣಾರ್ಥ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದರು.

PREV
18

ಮಾಜಿ ಪ್ರಧಾನಮಂತ್ರಿ (Former Prime Minister) ಹೆಚ್.ಡಿ. ದೇವೇಗೌಡ (H.D. Deve Gowda) ಅವರ ಪತ್ನಿ ಚೆನ್ನಮ್ಮ ದೇವೇಗೌಡ (Chennamma Deve Gowda) ಅವರು ನಿಧನರಾಗಿ 11 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಹಾಸನದಲ್ಲಿ ಒಕ್ಕಲಿಗ ಸಂಪ್ರದಾಯದಂತೆ (Vokkaliga Tradition) ಉತ್ತರಕ್ರಿಯೆ ಹಾಗೂ 11ನೇ ದಿನದ ತಿಥಿ (11th Day Ritual) ಕಾರ್ಯಗಳು ಭಕ್ತಿಭಾವದಿಂದ ನೆರವೇರಿದವು.

28

ಸಾವಿರಾರು ಜನರು, ರಾಜಕೀಯ ನಾಯಕರು, ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿ ಚೆನ್ನಮ್ಮ ಅವರಿಗೆ ನಮನ ಸಲ್ಲಿಸಿದರು. ಆದರೆ, 70 ವರ್ಷಗಳ ಕಾಲ ಒಡನಾಟವಿದ್ದ ಸಂಗಾತಿಯನ್ನು ಕಳೆದುಕೊಂಡ ಮಾಜಿ ಪ್ರಧಾನಿ ದೇವೇಗೌಡರ ನೋವು ಮಾತ್ರ ಇನ್ನೂ ಮುಗಿಯುತ್ತಿಲ್ಲ. ಅವರ ನೋವನ್ನು ನೋಡಿದ ಕುಟುಂಬ ಸದಸ್ಯರು ಮತ್ತು ಅಲ್ಲಿ ನೆರೆದಿದ್ದ ಜನರೂ ಕೂಡ ಒಂದು ಕ್ಷಣ ಭಾವುಕರಾದರು.

38

ಚೆನ್ನಮ್ಮನವರ ತಿಥಿ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಅತ್ಯಂತ ಭಾವುಕರಾಗಿದ್ದರು. ಸುಮಾರು 72 ವರ್ಷಗಳ ಕಾಲ ಜೀವನ ಸಂಗಾತಿಯಾಗಿದ್ದ ಚೆನ್ನಮ್ಮ ಅವರನ್ನು ಕಳೆದುಕೊಂಡ ನೋವು, ಸಂಕಟ ಹಾಗೂ ಒಂಟಿತನ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. 

ಪತ್ನಿಯ ಸಮಾಧಿಗೆ ಮೈಸೂರು ಮಲ್ಲಿಗೆ (Mysore Mallige) ಅರ್ಪಿಸಿ, ಪತ್ನಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು ಕೆಲಕಾಲ ಮೌನವಾಗಿ ಕುಳಿತು ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದವರ ಮನಸ್ಸನ್ನು ಕಲಕಿತು. 'ನನ್ನನ್ನೇಕೆ ಏಕಾಂಗಿಯಾಗಿ (Lonely) ಬಿಟ್ಟುಹೋದೆ?' ಎಂಬ ಭಾವನೆ ಅವರ ಮೌನದಲ್ಲೇ ವ್ಯಕ್ತವಾಗುತ್ತಿತ್ತು.

48

ಚೆನ್ನಮ್ಮ ಅವರಿಗೆ ಅತ್ಯಂತ ಇಷ್ಟವಾಗಿದ್ದ ಮೈಸೂರು ಮಲ್ಲಿಗೆ, ಚಕ್ಕುಲಿ (Chakkuli) ಹಾಗೂ ಕಜ್ಜಾಯ (Kajjaya) ಸೇರಿದಂತೆ ಅವರ ನೆಚ್ಚಿನ ತಿನಿಸುಗಳನ್ನು ಅರ್ಪಿಸಲಾಯಿತು. ಭವಾನಿ ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರು ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿದರು. ಬಳಿಕ ಹೆಚ್.ಡಿ. ರೇವಣ್ಣ ನಿವಾಸದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಉತ್ತರಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಚೆನ್ನಮ್ಮ ಅವರ ಬಟ್ಟೆ, ಒಡವೆಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಯಿತು.

58

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ (Union Minister) ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy), ಮಾಜಿ ಸಚಿವ ಹೆಚ್.ಡಿ. ರೇವಣ್ಣ (H.D. Revanna) ಸೇರಿದಂತೆ ದೇವೇಗೌಡರ ಕುಟುಂಬದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಅಲ್ಲದೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V. Somanna), ಮಾಜಿ ಸಚಿವ ಸಿ.ಎಂ. ಇಬ್ರಾಹಿಂ (C.M. Ibrahim), ಹಲವು ಶಾಸಕರು, ಮಾಜಿ ಸಚಿವರು, ಜೆಡಿಎಸ್ (JDS) ಮುಖಂಡರು ಹಾಗೂ ವಿವಿಧ ಪಕ್ಷಗಳ ನಾಯಕರು ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.

68

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, 'ನಮ್ಮ ತಾಯಿ ಅಗಲಿಕೆಯ ನಂತರ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಜನತೆ, ವಿವಿಧ ಪಕ್ಷಗಳ ನಾಯಕರು ಹಾಗೂ ಮಾಧ್ಯಮ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ತಾಯಿ ಎಂದಿಗೂ ರಾಜಕೀಯದಲ್ಲಿ (Politics) ನೇರವಾಗಿ ತೊಡಗಿಸಿಕೊಳ್ಳಲಿಲ್ಲ. ಹಳ್ಳಿಯ ಸರಳ ಬದುಕನ್ನು (Simple Life) ಇಷ್ಟಪಟ್ಟ ಅವರು, ತಂದೆ ಪ್ರಧಾನಿಯಾಗಿದ್ದರೂ ಯಾವುದೇ ಆಡಂಬರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿಲ್ಲ' ಎಂದು ಸ್ಮರಿಸಿದರು.

78

ಮುಂದುವರಿದು ಮಾತನಾಡಿದ ಕುಮಾರಸ್ವಾಮಿ ಅವರು, ಚೆನ್ನಮ್ಮ ಅವರ ಸ್ಮರಣಾರ್ಥ ಈ ಸ್ಥಳವನ್ನು ಸಮಾಜಮುಖಿ (Social Service) ಕಾರ್ಯಗಳಿಗೆ ಮೀಸಲಿಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಇಲ್ಲಿ ಆರಂಭಿಸುವ ಉದ್ದೇಶವಿದ್ದು, ಈ ನೆಲವು ಮುಂದಿನ ಪೀಳಿಗೆಗೂ ಸೇವೆಯ ಸಂಕೇತವಾಗಬೇಕು ಎಂಬುದು ಕುಟುಂಬದ ಆಶಯ ಎಂದು ಹೇಳಿದರು.

88

ಚೆನ್ನಮ್ಮ ದೇವೇಗೌಡ ಅವರ ಅಂತಿಮ ವಿಧಿವಿಧಾನಗಳಂತೆ 11ನೇ ದಿನದ ತಿಥಿ ಕಾರ್ಯವೂ ಅತ್ಯಂತ ಶಿಸ್ತಿನಿಂದ ನಡೆಯಿತು. ಬೆಳಗ್ಗೆಯಿಂದಲೇ ಸಾವಿರಾರು ಜನರು ಸರತಿ ಸಾಲಿನಲ್ಲಿ ಬಂದು ಸಮಾಧಿ ದರ್ಶನ ಮಾಡಿ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕುಟುಂಬದ ದುಃಖದ ಜೊತೆಗೆ ಜನರ ಅಪಾರ ಅಭಿಮಾನವೂ ಸ್ಪಷ್ಟವಾಗಿ ಗೋಚರಿಸಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories