ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ

Published : Jul 05, 2026, 12:18 PM IST

ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ

PREV
15
ಪ್ರೀತಿ ಹುಡುಕುತ್ತ ಗಡಿ ದಾಟಿದ

ಶ್ರೀನಗರ: ಪ್ರೀತಿ ಹುಡುಕುತ್ತ ಗಡಿದಾಟಿ ಭಾರತ ಪ್ರವೇಶ ಮಾಡುವ ಪಾಕಿಸ್ತಾನಿಯರ ಸುದ್ದಿ ಹೊಸತೇನೂ ಅಲ್ಲ. ಇದೀಗ ಅಂತಹುದೇ ಮತ್ತೊಂದು ಪ್ರಸಂಗ ನಡೆದಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಮೇಲಿನ ಪ್ರೀತಿ ಹಾಗೂ ತನ್ನ ಪೂರ್ವಜರ ಆಸ್ತಿಯನ್ನು ಮರಳಿ ಪಡೆಯುವ ಹಂಬಲದಿಂದ ಗಡಿ ದಾಟಿ ಭಾರತಕ್ಕೆ ಬಂದಿದ್ದ 22 ವರ್ಷದ ಪಾಕ್ ಆಕ್ರಮಿತ ಕಾಶ್ಮೀರದ (POJK) ಯುವಕನನ್ನು ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

25
ಸ್ನ್ಯಾಪ್‌ಚಾಟ್ ಪ್ರೀತಿಗಾಗಿ ಗಡಿ ದಾಟಿದ..

ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಜೀಶನ್ ಮಿರ್ (22) ಎಂಬಾತ ಮೇ 31 ರಂದು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯನ್ನು (LoC) ದಾಟಿ ಭಾರತದೊಳಗೆ ಪ್ರವೇಶಿಸಿದ್ದ. ಆತನನ್ನು ಭಾರತೀಯ ಸೇನೆಯು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಸುಮಾರು ಒಂದು ತಿಂಗಳ ನಂತರ, ಜುಲೈ 4 ರಂದು ಮಧ್ಯಾಹ್ನ 12:24 ಕ್ಕೆ ಆತನನ್ನು ಅಧಿಕೃತವಾಗಿ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದೆ.

35
ಸೇನೆಯಿಂದ ತನಿಖೆ

ತನಿಖಾ ಸಂಸ್ಥೆಗಳ ಮಾಹಿತಿಯ ಪ್ರಕಾರ, ಜೀಶನ್ ಮಿರ್‌ಗೆ ಬಾರಾಮುಲ್ಲಾದ ತುಲ್ವಾರಿ ಗ್ರಾಮದ ನಿವಾಸಿ ಇರಮ್ ಬಾನೊ ಎಂಬ ಯುವತಿಯ ಪರಿಚಯ ಸ್ನ್ಯಾಪ್‌ಚಾಟ್‌ನಲ್ಲಿ ಆಗಿತ್ತು. ಈ ಸ್ನೇಹ ಕ್ರಮೇಣ ಗಾಢವಾದ ಪ್ರೀತಿಗೆ ತಿರುಗಿತ್ತು. ಪಾಕಿಸ್ತಾನದಲ್ಲಿದ್ದ ಜೀಶನ್ ಕುಟುಂಬ ನಿರ್ವಹಣೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಮಾನಸಿಕ ಒತ್ತಡದಲ್ಲಿದ್ದನು. ಇದೇ ಸಮಯದಲ್ಲಿ ತನ್ನ ಪೂರ್ವಜರು ಸಹ ಇರಮ್ ಬಾನೊ ವಾಸಿಸುವ ಅದೇ ತುಲ್ವಾರಿ ಗ್ರಾಮದವರು ಎಂಬ ವಿಷಯ ಆತನಿಗೆ ತಿಳಿದುಬಂದಿತ್ತು.

45
ಕಿಲಾಡಿ ಪ್ಲಾನ್

ತನ್ನ ಕಷ್ಟಗಳನ್ನು ಇರಮ್ ಬಾನೊ ಜೊತೆ ಹಂಚಿಕೊಂಡಾಗ, ಆಕೆ ಜೀಶನ್‌ಗೆ ಗಡಿ ದಾಟಿ ಭಾರತಕ್ಕೆ ಬರುವಂತೆ ಸಲಹೆ ನೀಡಿದ್ದಳು. ಗಡಿ ದಾಟಿ ನೇರವಾಗಿ ಭಾರತೀಯ ಸೇನೆಗೆ ಶರಣಾಗುವುದು, ನಂತರ ಅಕ್ರಮ ಪ್ರವೇಶಕ್ಕಾಗಿ ನೀಡಲಾಗುವ ಕಾನೂನುಬದ್ಧ ಶಿಕ್ಷೆಯನ್ನು ಅನುಭವಿಸುವುದು ಮತ್ತು ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಪೂರ್ವಜರ ಆಸ್ತಿಯನ್ನು ಕಾನೂನುಬದ್ಧವಾಗಿ ಪಡೆದು ಇಲ್ಲೇ ನೆಲೆಸುವುದು ಇವರಿಬ್ಬರ ಯೋಜನೆಯಾಗಿತ್ತು.

55
ಭಾರತೀಯ ಸೇನೆಯ ಮಾನವೀಯ ನಡೆ

ಮೇ ತಿಂಗಳಲ್ಲಿ ಗಡಿ ದಾಟುವಾಗ ಜೀಶನ್ ಸಿಕ್ಕಿಬಿದ್ದಿದ್ದ. ವಿಚಾರಣೆಯ ವೇಳೆ ಜೀಶನ್ ನೀಡಿದ ಮಾಹಿತಿಯನ್ನು ದೃಢೀಕರಿಸಲು ಸೇನೆಯು ಇರಮ್ ಬಾನೊಳನ್ನು ವಿಚಾರಣೆಗೆ ಒಳಪಡಿಸಿತ್ತು. ಆಕೆ ಜೀಶನ್ ಹೇಳಿದ್ದೆಲ್ಲವೂ ನಿಜವೆಂದು ಒಪ್ಪಿಕೊಂಡು, ಆತನನ್ನು ಇಲ್ಲೇ ಇರಲು ಬಿಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಳು. ಯಾವುದೇ ಬಾಹ್ಯ ಸಂಚು ಅಥವಾ ದೇಶವಿರೋಧಿ ಅಂಶಗಳಿಲ್ಲ ಎಂಬುದು ಖಚಿತವಾದ ನಂತರ ಭಾರತೀಯ ಸೇನೆಯು ಆತನನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿತು.

ಶನಿವಾರ 'ಕಮನ್ ಅಮನ್ ಸೇತು' ಮೂಲಕ ಜೀಶನ್‌ನನ್ನು ಪಾಕ್ ಸೇನೆಗೆ ಒಪ್ಪಿಸಲಾಯಿತು. ಭಾರತದಲ್ಲಿದ್ದ ಸಮಯದಲ್ಲಿ ಜೀಶನ್‌ನನ್ನು ಅತ್ಯಂತ ಗೌರವ ಮತ್ತು ಕಾಳಜಿಯಿಂದ ನಡೆಸಿಕೊಳ್ಳಲಾಗಿದೆ. ಇದು ಭಾರತೀಯ ಸೇನೆಯ ವೃತ್ತಿಪರತೆ ಮತ್ತು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories