Puri Ratha Yatra: 208 ಕೆಜಿ ಚಿನ್ನಾಭರಣದಲ್ಲಿ ಕಂಗೊಳಿಸೋ ಜಗನ್ನಾಥ!

First Published Jul 1, 2023, 6:33 PM IST

ಪುರಿಯಲ್ಲಿ‌ ಜಗನ್ನಾಥನು (ಕೃಷ್ಣ) ತನ್ನ ಸೋದರ ಬಲಭದ್ರ (ಬಲರಾಮ) ಹಾಗೂ ಸೋದರಿ ಸುಭದ್ರಾದೇವಿಯರ ಜೊತೆಗೆ ನೆಲೆಸಿದ್ದಾನೆ. ಇತರೆಡೆ ಉತ್ಸವ ಮೂರ್ತಿಗಳ ಯಾತ್ರೆ ನಡೆದರೆ, ಪುರಿಯಲ್ಲಿ ಮೂರೂ ದೇವರ ಮೂಲ ವಿಗ್ರಹಗಳನ್ನೇ ರಥಗಳಲ್ಲಿಟ್ಟು ಮೆರವಣಿಗೆ ಮಾಡುವುದು ವಿಶೇಷ. ಭಕ್ತರಿಗೆ ರೋಮಾಂಚನ ನೀಡುವ ಪ್ರತಿ ರಥವೂ ಅದರದ್ದೇ ಆದ ವೈಶಿಷ್ಟ್ಯ ಹೊಂದಿದೆ.

ಚಿತ್ರ, ಬರಹ: ರವಿಶಂಕರ್ ಭಟ್, ಕನ್ನಡ ಪ್ರಭ

ವಿಶ್ವದಲ್ಲೇ ಅತಿದೊಡ್ಡ ರಥಯಾತ್ರೆಯೆಂಬ ಹೆಗ್ಗಳಿಕೆ ಹೊಂದಿರುವ ಜಗನ್ನಾಥನ ರಥೋತ್ಸವ 9 ದಿನಗಳ ಮಹಾ ಜಾತ್ರೆ. ಆಷಾಢ ಮಾಸ ಶುಕ್ಲಪಕ್ಷದ ಬಿದಿಗೆಯಿಂದ ದಶಮಿಯವರೆಗೆ ನಡೆಯುವ ಮಹೋತ್ಸವ ಇದು. ಜೂನ್ 20ರ ಬಿದಿಗೆಯಂದು ತೇರನ್ನೇರಲು ಬರುತ್ತಿರುವ ಪುರಿ ಜಗನ್ನಾಥ ಮೂರ್ತಿ

ಪುರಿ ಜಗನ್ನಾಥ ಮಂದಿರದ ಸಿಂಹದ್ವಾರದ ಬಳಿ ಮೆರವಣಿಗೆಯಲ್ಲಿ ಹೊರಡಲು ಸಜ್ಜಾಗಿ ನಿಂತಿದ್ದ ಬಲಭದ್ರ, ಸುಭದ್ರಾ ಹಾಗೂ ಜಗನ್ನಾಥನ ಮಹಾರಥಗಳು.

Latest Videos


ಪುರಿಯ "ಬಡಾ ದಂಡಾ" ಖ್ಯಾತಿಯ ರಥಬೀದಿಯಲ್ಲಿ ಸಾಗಿದ ಜಗನ್ನಾಥ, ಸುಭದ್ರಾದೇವಿ ಹಾಗೂ ಬಲಭದ್ರ ಸ್ವಾಮಿಯ ರಥಗಳ ಸುತ್ತ ನೆರೆದ ಜನಸ್ತೋಮ

ಕೆಂಪು-ಕಪ್ಪು ಬಣ್ಣದ ವಸ್ತ್ರದ ಹೊದಿಕೆ ಹೊತ್ತ ಸುಭದ್ರಾದೇವಿಯ ತೇರನ್ನು ಎಳೆಯುತ್ತಿರುವ ಭಕ್ತ ಸಮೂಹ. ಭಕ್ತರ ಭಕ್ತಿಯ ಭಾವೋನ್ಮಾದ ನೋಡುವುದೇ ಇಲ್ಲಿ ಹಬ್ಬ. 

ರಥಯಾತ್ರೆಯಲ್ಲಿ ಮೊದಲು ಹೊರಡುವುದು ಕೆಂಪು-ಹಸಿರು ಬಣ್ಣದ ಹೊದಿಕೆ ಇರುವ ಬಲಭದ್ರನ ರಥ. ನಂತರ ಸುಭದ್ರೆ, ಕಡೆಯದಾಗಿ ಜಗನ್ನಾಥ ರಥ.

ಬಹುದಾ ಯಾತ್ರೆಯ ಬಳಿಕ ರಥಗಳು ಜಗನ್ನಾಥ ಮಂದಿರದ ಸಿಂಹದ್ವಾರದ ಬಳಿ ನೆಲೆಗೊಳ್ಳುತ್ತವೆ. ಆ ರಥಗಳಲ್ಲೇ ವಿರಾಜಮಾನರಾಗಿರುವ ಜಗನ್ನಾಥ, ಬಲಭದ್ರ, ಸುಭದ್ರೆಯರ ವಿಗ್ರಹಗಳನ್ನು ಮರುದಿನ, ಅಂದರೆ ಏಕಾದಶಿಯಂದು ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗುತ್ತದೆ. ಹಿಂದೆಲ್ಲ ಸುಮಾರು 370 ಕಿಲೋ ತೂಕದ, 135 ವಿವಿಧ ಚಿನ್ನಾಭರಣಗಳೊಂದಿಗೆ ಜಗನ್ನಾಥ, ಬಲಭದ್ರ, ಸುಭದ್ರೆಯರನ್ನು ಅಲಂಕರಿಸಲಾಗುತ್ತಿತ್ತಂತೆ. ಸುರಕ್ಷತೆ ಸೇರಿ ಅನೇಕ ಕಾರಣಗಳಿಗಾಗಿ ಈಗ ಸರಿಸುಮಾರು 208 ಕಿಲೋ ತೂಕದ ಆಭರಣಗಳನ್ನು ದೇವರಿಗೆ ತೊಡಿಸಲಾಗುತ್ತದೆ. ಸೋನಾ (ಚಿನ್ನ), ವೇಷ್ (ಅಲಂಕೃತ) ದೇವರ ದರ್ಶನ ಪಡೆಯಲೂ‌ ಲಕ್ಷೋಪಲಕ್ಷ ಜನ ಆಗಮಿಸುತ್ತಾರೆ. ಅಂದು ರಾತ್ರಿ ವೇಳೆಯೂ ಸ್ವರ್ಣಾಲಂಕೃತ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮರುದಿನ, ದ್ವಾದಶಿಯಂದು ದೇವರ ವಿಗ್ರಹಗಳನ್ನು ಮೂಲಮಂದಿರದ ಸ್ವಸ್ಥಾನಕ್ಕೆ ಮರಳಿಸಲಾಗುತ್ತದೆ. ಇದರೊಂದಿಗೆ ವಾರ್ಷಿಕ ರಥಯಾತ್ರೆಗೆ ವಿಧ್ಯುಕ್ತ ತೆರೆ ಬೀಳುತ್ತದೆ. 

ದ್ವಾದಶಿಯಂದು ಮೂಲ ಮಂದಿರಕ್ಕೆ ವಿಗ್ರಹಗಳು ಸ್ಥಳಾಂತರಗೊಳ್ಳುವ ಮುನ್ನ ರಥಗಳಲ್ಲಿ ಕಡೆಯ ಬಾರಿಗೆ ದರ್ಶನ ನೀಡುವ ಸ್ವರ್ಣಾಲಂಕೃತ ಜಗನ್ನಾಥ, ಸುಭದ್ರಾ ಹಾಗೂ ಬಲಭದ್ರ

ರಥಯಾತ್ರೆಯ ಸಂದರ್ಭದಲ್ಲಿ ಜೈ ಜಗನ್ನಾಥ್ ಉದ್ಘೋಷದೊಂದಿಗೆ ಮಹಿಳಾ ಭಕ್ತೆಯರಿಂದಲೂ ನೃತ್ಯ. ಭಕ್ತಿಯಲ್ಲಿ ಭಕ್ತರು ಮಿಂದೇಳುವುದು ನೋಡುವುದು ಈ ರಥಯಾತ್ರೆಯ ವಿಶೇಷತೆ.

ಬಿಸಿಲಿನ ಝಳಕ್ಕೆ ಬಸವಳಿದ ಭಕ್ತರಿಗೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಜಲಸಿಂಚನವಾದರೆ, ಅಲ್ಲಲ್ಲಿ ಬಣ್ಣ ಬಣ್ಣ ವಿವಿಧ ವಸ್ತುಗಳನ್ನು ಮಾರುವುದ ನೋಡುವುದೇ ಕಣ್ಣಿಗೆ ಹಬ್ಬ. 

ಜಗನ್ನಾಥ ಮಂದಿರಕ್ಕೆ ರಥಗಳು ಮರಳಿ ಬರುವ ಬಹುದಾ ಯಾತ್ರೆಗೆ ಮುನ್ನ ಸುಭದ್ರೆಯ ರಥೆದೆದುರು ಬೆಂಗಳೂರಿನಿಂದ ತೆರಳಿದ್ದ ನಮ್ಮ ತಂಡದ ಸಂಭ್ರಮ.

click me!