
ಗಣೇಶ ಹಬ್ಬದ ಸಂಭ್ರಮ ಇಂದಿಗೂ ನಡೆದೇ ಇದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಗಣೇಶನಲ್ಲಿ ನಾನಾ ರೂಪಗಳಿವೆ. ತಮ್ಮ ತಮ್ಮ ಭಕ್ತಿ ಭಾವಕ್ಕೆ ತಕ್ಕಂತೆ, ತಮ್ಮ ಕಲ್ಪನೆಗೆ ತಕ್ಕಂತೆ ಗಣಪನಿಗೆ ರೂಪು ನೀಡಲಾಗುತ್ತದೆ.
ವಿಘ್ನಗಳನ್ನು ನಿವಾರಿಸುವ ಅವನ ಕಾರ್ಯಕ್ಕೆ ಸಂಬಂಧಿಸಿದ್ದರೆ ವಿಘ್ನೇಶ್ವರ ಎಂದೂ, ಆನೆ ಮುಖವಾಗಿದ್ದಕ್ಕೆ ಗಜಾನನ ಎಂದೂ, ಒಂದೇ ದಂತ ಉಳ್ಳವನಾಗಿರುವುದಕ್ಕೆ "ಏಕದಂತ"ನೆಂದೂ, ಹೊಗೆ ಬಣ್ಣದವನಾದ್ದರಿಂದ ಧೂಮ್ರವರ್ಣನೆಂದು, ಬಾಲಕನಾದ ಗಣೇಶನಿಗೆ "ಬಾಲಗಣಪತಿ"ಯೆಂದೂ, ಕಲಿಯುಗದಲ್ಲಿ ಕುದುರೆಯ ಮೇಲೆ ಸವಾರಿ ಮಾಡುವವನು "ಧೂಮ್ರವರ್ಣ" ಅಥವಾ "ಶೂರ್ಪಕರ್ಣ" ರೂಪದಲ್ಲೂ ಕಾಣಿಸಿಕೊಳ್ಳುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಇದೇ ರೀತಿಯಲ್ಲಿ ಗಣಪತಿಯ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಲವು ವರ್ಷಗಳಿಂದ ಗಣೇಶನ ಹಬ್ಬಕ್ಕೆ ಅಬ್ಬರದ ಆರ್ಕೆಸ್ಟ್ರಾ ಸೇರಿಕೊಂಡಿದೆ. ಕೆಲವು ಸಂದರ್ಭಗಳಲ್ಲಿ ಕಿವಿಗಳನ್ನು ಮುಚ್ಚಿಕೊಳ್ಳುವಷ್ಟು ಕರ್ಕಶವಾಗಿ ಸಂಗೀತದ ಹೆಸರಿನಲ್ಲಿ ಹಾಡುವವರೂ ಇದ್ದಾರೆ. ಈ ಹಬ್ಬ ಯಾಕಾಗಿ ಬಂತೋ ಎನ್ನುವಷ್ಟರ ಮಟ್ಟಿಗೆ ನಡೆದುಕೊಂಡು ಹೋಗುತ್ತಿದೆ. ಸುಮಧುರ ಸಂಗೀತ ಬಿಡಿ, ದೇವರ ಹಾಡನ್ನು ಹಾಡುವ ಬದಲು ಲಾಂಗು, ಮಚ್ಚು ಹಿಡಿದ ಹಾಡುಗಳು, ಆಧುನಿಕತೆಯ ಹೆಸರಿನಲ್ಲಿ ಯಾವ ಭಾಷೆ ಎಂದೇ ತಿಳಿಯದ ಕರ್ಕಶ ಹಾಡುಗಳ ಅಬ್ಬರೂ ಗಣೇಶನ ನೆಪದಲ್ಲಿ ನಡೆದೇ ಇದೆ.
ಇದೀಗ ಇದರ ನಡುವೆಯೇ, ಗಣೇಶನ ಹಬ್ಬ ಮಾಡಿ ಎಂದರೆ ಆತನ ಮದುವೆ ಮಾಡಿಸಲು ಹೋದಂಥ ಗಣಪ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಎಲ್ಲಿಯದ್ದು ಎನ್ನುವ ಸ್ಪಷ್ಟತೆ ಇಲ್ಲ. ಆದರೆ ಪ್ಯಾಂಟ್ ಧರಿಸಿದ ಗಣಪ, ಯುವತಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗುವಂತೆ ಇದರಲ್ಲಿ ಮಾಡಲಾಗಿದೆ.
ಇದನ್ನು ಕೆಲವರು ತಮಾಷೆಯಾಗಿ ಕಂಡರೂ, ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ದೇವರಿಗೆ ಏನು ಬೇಕಾದರೂ ಮಾಡಬಹುದು ಎಂದುಕೊಂಡು ಈ ಪರಿಯಲ್ಲಿ ಚಿತ್ರಿಸುತ್ತಿರುವುದು ಗಂಭೀರ ಅಪರಾಧ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂಥದ್ದು, ತಮಾಷೆಯ ಹೆಸರಿನಲ್ಲಿ ದೇವತೆಗಳನ್ನು ಈ ರೀತಿಯಾಗಿ ವಿಕೃತವಾಗಿ ಚಿತ್ರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದೂ ಹಲವರು ಆಕ್ರೋಶ ಹೊರಹಾಕುತ್ತಿದ್ದಾರೆ.
ಅಷ್ಟಕ್ಕೂ, ಗಣೇಶನು ಒಬ್ಬ ಬ್ರಹ್ಮಚಾರಿಯೂ ಹೌದು, ಪತ್ನಿ ಇರುವವನೂ ಹೌದು. ಕೆಲವೊಂದು ಸಂಪ್ರದಾಯಗಳಲ್ಲಿ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಗಣೇಶನನ್ನು ಅಜೀವನ ಬ್ರಹ್ಮಚಾರಿಯಾಗಿ ಪರಿಗಣಿಸಲಾಗುತ್ತದೆ, ಆದರೆ ಕೆಲವು ಪುರಾಣಗಳು ಗಣೇಶನಿಗೆ ರಿದ್ಧಿ ಮತ್ತು ಸಿದ್ಧಿ ಎಂಬ ಪತ್ನಿಯರಿದ್ದರು ಎಂದು ಹೇಳುತ್ತವೆ. ಗಣೇಶನ ಮದುವೆಯ ಹಿಂದೆಯೂ ಹಲವಾರು ದಂತಕಥೆಗಳಿವೆ.
ದಕ್ಷಿಣ ಭಾರತದಲ್ಲಿನ ಒಂದು ಮುಖ್ಯವಾಹಿನಿಯೇತರ ಸಂಪ್ರದಾಯದ ಪ್ರಕಾರ, ಗಣೇಶನು ಜೀವನ ಪೂರ್ತಿ ಬ್ರಹ್ಮಚಾರಿಯಾಗಿದ್ದನು. ಈ ಮಾದರಿಯು ಆಧ್ಯಾತ್ಮಿಕ ಬೆಳವಣಿಗೆಗೆ ಬದ್ಧತೆಯನ್ನು ಸೂಚಿಸುತ್ತದೆ. ಭಾಸ್ಕರಯ್ಯರಂತಹ ಪಂಡಿತರು, ಗಣೇಶ ಸಹಸ್ರನಾಮದಲ್ಲಿ ಗಣೇಶನಿಗೆ 'ಅಭಿರು' ಎಂಬ ಹೆಸರು ಇರುವುದನ್ನು ಉಲ್ಲೇಖಿಸುತ್ತಾರೆ. ಇದರ ಅರ್ಥ "ಹೆಣ್ಣು ಇಲ್ಲದೆ" ಎಂದರ್ಥ, ಇದು ಅವನ ಬ್ರಹ್ಮಚಾರಿ ಸ್ವರೂಪವನ್ನು ಸೂಚಿಸುತ್ತದೆ ಎಂದು ವಿವರಿಸುತ್ತಾರೆ.
ದಂತಕಥೆಯೊಂದರ ಪ್ರಕಾರ, ಪ್ರಜಾಪತಿ ವಿಶ್ವರೂಪನ ಪುತ್ರಿಯರಾದ ರಿದ್ಧಿ ಹಾಗೂ ಸಿದ್ಧಿ, ಗಣೇಶನಿಗೆ ಪತ್ನಿಯರಾಗಲು ಆಯ್ಕೆಯಾದರು. ದೇವಶಿಲ್ಪಿ ವಿಶ್ವಕರ್ಮನು ವಿವಾಹ ಮಂಟಪವನ್ನು ನಿರ್ಮಿಸಿದನು ಮತ್ತು ಶಿವ-ಪಾರ್ವತಿಯರ ಉಪಸ್ಥಿತಿಯಲ್ಲಿ ಗಣೇಶನು ರಿದ್ಧಿ-ಸಿದ್ಧಿಯರನ್ನು ವಿವಾಹವಾದನು. ಮತ್ತೊಂದು ದಂತಕಥೆಯ ಪ್ರಕಾರ, ತುಳಸಿ ದೇವಿಯು ಗಣೇಶನಿಗೆ ಎರಡು ವಿವಾಹಗಳನ್ನು ಮಾಡುವಂತೆ ಶಪಿಸಿದಳು.