ರಾಜ್ಯದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಭಾರೀ ಉತ್ತೇಜನ, 1600ಕೋಟಿ ಗೂ ಮೀರಿ ವಿನಿಯೋಗ, ಈ ಜಿಲ್ಲೆಗಳಿಗೆ ಜಾಕ್‌ಪಾಟ್!

Published : May 17, 2026, 09:01 PM IST

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು (550 ಪಿಜಿ ಮತ್ತು 572 ಎಂಬಿಬಿಎಸ್‌) ಮಂಜೂರು ಮಾಡಿದೆ. ಈ ಸೀಟುಗಳನ್ನು ರಾಜ್ಯದ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ₹1090 ಕೋಟಿ ಅನುದಾನವನ್ನೂ ನೀಡಲಾಗಿದೆ. 

PREV
17
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ

ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ನೀಡುವ ನಿರ್ಧಾರವಾಗಿ, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಒಟ್ಟು 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡಿದೆ. ಇದರಲ್ಲಿ 550 ಸ್ನಾತಕೋತ್ತರ (ಪಿಜಿ) ಮತ್ತು 572 ಸ್ನಾತಕ (ಎಂಬಿಬಿಎಸ್‌) ಸೀಟುಗಳು ಸೇರಿದ್ದು, ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

27
ಯಾವ ಜಿಲ್ಲೆಗಳಿಗೆ ಹಂಚಿಕೆ?

ವಿಕಾಸಸೌಧದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಲಭ್ಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರದಿಂದ ಈ ಬಾರಿ ದೊರೆತಿರುವ ಹೆಚ್ಚುವರಿ 1122 ಸೀಟುಗಳು ಮಹತ್ವದ ಮೈಲಿಗಲ್ಲು ಎಂದರು. ಈ ಸೀಟುಗಳನ್ನು ಮುಖ್ಯವಾಗಿ ಕೊಪ್ಪಳ, ಶಿವಮೊಗ್ಗ, ಹುಬ್ಬಳ್ಳಿ, ಮಂಡ್ಯ, ಗದಗ, ಮಡಿಕೇರಿ, ಚಾಮರಾಜನಗರ, ಕಾರವಾರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

37
ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಅನುದಾನ

ಹೆಚ್ಚುವರಿ ಸೀಟುಗಳ ಜೊತೆಗೆ, ವೈದ್ಯಕೀಯ ಮೂಲಸೌಕರ್ಯವನ್ನು ಬಲಪಡಿಸಲು ಕೇಂದ್ರ ಸರ್ಕಾರವು ಒಟ್ಟು ₹1090 ಕೋಟಿ ಅನುದಾನ ನೀಡಲಿದ್ದು, ರಾಜ್ಯ ಸರ್ಕಾರವೂ ₹600 ಕೋಟಿಗೂ ಅಧಿಕ ಮೊತ್ತವನ್ನು ವಿನಿಯೋಗಿಸಲು ಸಿದ್ಧವಾಗಿದೆ. ಇದರಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸೌಲಭ್ಯಗಳು ಮತ್ತಷ್ಟು ವಿಸ್ತರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ಸಾಧ್ಯವಾಗಲಿದೆ.

47
ಹೊಸ ಕಾಲೇಜುಗಳಷ್ಟೇ ಸೀಟುಗಳ ಹೆಚ್ಚಳ

ರಾಜ್ಯ ಸರ್ಕಾರದ ನಿರಂತರ ಪ್ರಯತ್ನಗಳ ಫಲವಾಗಿ ಈ ಹೆಚ್ಚುವರಿ ಸೀಟುಗಳು ಲಭಿಸಿವೆ ಎಂದು ಸಚಿವರು ಹೇಳಿದರು. ಕಳೆದ ವರ್ಷವೂ ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಲಾಗಿತ್ತು. ಈ ಬಾರಿ ದೊರೆತಿರುವ ಸೀಟುಗಳ ಹೆಚ್ಚಳವು, ಯಾವುದೇ ಹೊಸ ವೈದ್ಯಕೀಯ ಕಾಲೇಜು ನಿರ್ಮಿಸದೆ ಸುಮಾರು 10 ಹೊಸ ಕಾಲೇಜುಗಳಷ್ಟು ಅವಕಾಶ ಸೃಷ್ಟಿಸಿದಂತಾಗಿದೆ. ಒಂದೇ ವರ್ಷದಲ್ಲಿ ಒಂದು ರಾಜ್ಯಕ್ಕೆ ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳು ದೊರೆತಿರುವುದು ದಾಖಲೆಯಾಗಿದೆ ಎಂದು ಅವರು ಹೇಳಿದರು.

57
ನೀಟ್‌ ವ್ಯವಸ್ಥೆ ಕುರಿತು ಆಕ್ಷೇಪ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಾ. ಶರಣಪ್ರಕಾಶ್ ಪಾಟೀಲ್, ಕಳೆದ ಐದು ವರ್ಷಗಳಿಂದ ಪದೇಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾನಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ವೈದ್ಯರಾಗುವ ಕನಸು ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅನ್ಯಾಯವಾಗಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಹೊಣೆಗಾರಿಕೆ ಪ್ರಶ್ನೆಗೆ ಒಳಗಾಗುತ್ತದೆ ಎಂದರು. ಈ ಹಿನ್ನೆಲೆಯಲ್ಲಿ, ಸಿಬಿಐ ತನಿಖೆ ಮಾತ್ರವಲ್ಲದೆ ನ್ಯಾಯಾಂಗ ಮೇಲ್ವಿಚಾರಣೆಯಲ್ಲಿಯೇ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು. ಎಂಬಿಬಿಎಸ್‌ ಸೀಟುಗಳ ಅಕ್ರಮ ಮಾರಾಟದ ಉದ್ದೇಶದಿಂದಲೇ ಈ ರೀತಿಯ ಹಗರಣಗಳು ನಡೆಯುತ್ತಿವೆ ಎಂಬ ಅನುಮಾನವೂ ವ್ಯಕ್ತಪಡಿಸಿದರು.

67
ಸಿಇಟಿ ಮಾದರಿಯನ್ನು ಅಳವಡಿಸಬೇಕು

ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದೆ. ಈ ಮಾದರಿಯನ್ನು ಕೇಂದ್ರ ಸರ್ಕಾರ ನೀಟ್‌ ಪರೀಕ್ಷೆಗೆ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ, ರಾಜ್ಯಗಳಿಗೆ ಸ್ವತಂತ್ರವಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರವು ರಾಜ್ಯಗಳ ಸಲಹೆ ಪಡೆಯದೆ ತೀರ್ಮಾನಗಳನ್ನು ಕೈಗೊಳ್ಳುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಟೀಕಿಸಿದ ಅವರು, ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಮರ್ಥಿಸುವವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

77
ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು

ಒಟ್ಟಾರೆ, ಹೆಚ್ಚುವರಿ ವೈದ್ಯಕೀಯ ಸೀಟುಗಳ ಮಂಜೂರಾತಿಯಿಂದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ಸಾಕಾರಗೊಳಿಸುವ ಅವಕಾಶ ದೊರೆಯಲಿದೆ. ಇದರ ಜೊತೆಗೆ, ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹಾಗೂ ಮೂಲಸೌಕರ್ಯವೂ ಮತ್ತಷ್ಟು ಬಲವಾಗುವ ನಿರೀಕ್ಷೆಯಿದೆ.

Read more Photos on
click me!

Recommended Stories