'ತಲೆ ತುಂಬಾ ಮಲ್ಲಿಗೆ, ಝರಿಸೀರೆ- ತಿರುಪತಿಯಲ್ಲಾಗ್ಬೇಕು ನನ್ನ ಮದುವೆ'; ಆಸೆ ತೆರೆದಿಟ್ಟ ಜಾನ್ವಿ ಕಪೂರ್‌

First Published Apr 11, 2024, 11:35 AM IST

ಬಾಲಿವುಡ್ ನಟಿ ಜಾನ್ವಿ ಕಪೂರ್‌ಗೆ ತಿರುಪತಿಯ ಮೇಲೆ ವಿಶೇಷ ಭಕ್ತಿ. ಅದನ್ನವರು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಇದೀಗ ನಟಿಯು ತನಗೆ ತಿರುಪತಿಯಲ್ಲಿ ಮದುವೆಯಾಗುವ ಆಸೆ ಎಂದು ಹೇಳಿ ದಕ್ಷಿಣ ಭಾರತೀಯರ ಮನ ಗೆದ್ದಿದ್ದಾರೆ. 

ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿ ಮತ್ತು ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮಗಳಾದ ಜಾನ್ವಿ ಕಪೂರ್ ಹುಟ್ಟುತ್ತಲೇ ಚಿನ್ನದ ಚಮಚ ಬಾಯೊಳಗಿಟ್ಟುಕೊಂಡವರು. ಸುತ್ತ ಮುತ್ತಣ ಕೇವಲ ಐಶಾರಾಮಿತನವನ್ನೇ ನೋಡಿಕೊಂಡು, ತಾವೂ ಹಾಗೆಯೇ ಬೆಳೆದವರು. 

ಅಂಬಾನಿ ಮನೆಯ ವಿವಾಹಗಳಿಂದ ಹಿಡಿದು ಬಾಲಿವುಡ್‌ನ ಸೆಲೆಬ್ರಿಟೀಸ್‌ಗಳ ನೂರಾರು ಕೋಟಿ ಖರ್ಚಿನ ವಿವಾಹ ಸಮಾರಂಭಗಳನ್ನು ನೋಡಿಕೊಂಡು ಬಂದವರು. ಇನ್ನು ಆಕೆಯ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ದೊಡ್ಡ ರಾಜಕೀಯ ಮನೆತನಕ್ಕೆ ಸೇರಿದವನು. 

ಹೀಗಾಗಿ ಜಾನ್ವಿ ಮನಸ್ಸು ಮಾಡಿದರೆ, ಇಡೀ ದೇಶ ತಿರುಗಿ ನೋಡುವಂತೆ ಅದ್ಧೂರಿಯಾಗಿ ವಿವಾಹವಾಗಬಹುದು. ಆದರೆ, ನಟಿ ಮಾತ್ರ ತನ್ನ ವಿವಾಹ ಹೇಗಿರಬೇಕೆಂಬ ಬಗ್ಗೆ ಸಂಪೂರ್ಣ ಖಚಿತತೆ ಹೊಂದಿದ್ದು, ಅವರ ಆಸೆ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದೆ. 

ಹೌದು, ಥ್ರೋಬ್ಯಾಕ್ ಸಂದರ್ಶನವೊಂದರಲ್ಲಿ, ಜಾನ್ವಿ ಕಪೂರ್ ತಿರುಪತಿ ದೇವಸ್ಥಾನದಲ್ಲಿ ಮದುವೆಯಾಗಲು ತನ್ನ ಇಚ್ಛೆಯನ್ನು ಚರ್ಚಿಸಿದ್ದಾರೆ ಮತ್ತು ಅಲ್ಲಿನ ಆಹಾರ ಮತ್ತು ವೇಷಭೂಷಣಗಳ ಅರ್ಥಪೂರ್ಣ ಆದ್ಯತೆಗಳ ಬಗ್ಗೆ ಮಾತನಾಡಿದ್ದಾರೆ.

2021 ರ ಬ್ರೈಡ್ಸ್ ಟುಡೇ ಸಂದರ್ಶನದಲ್ಲಿ, ಜಾನ್ವಿ ಕಪೂರ್ ತಮ್ಮ ಕನಸಿನ ಮದುವೆಯ ಬಗ್ಗೆ ಮಾತನಾಡಿದ್ದು, 'ನಾನು ಮೊದಲಿನಿಂದಲೂ ಅದರ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ಹೊಂದಿದ್ದೇನೆ! ನಾನು ತಿರುಪತಿಯಲ್ಲಿ ಮದುವೆಯಾಗಲು ಬಯಸುತ್ತೇನೆ; ಅದು ತುಂಬಾ ಆತ್ಮೀಯ ಸಂಬಂಧವಾಗಿರುತ್ತದೆ' ಎಂದಿದ್ದಾರೆ.

'ನಾನು ಏನು ಧರಿಸುತ್ತೇನೆ ಎಂದು ನನಗೆ ತಿಳಿದಿದೆ - ಚಿನ್ನ, ಝರಿಯ ಕಾಂಜೀವರಂ ಸೀರೆ; ಮತ್ತು ನಾನು ನನ್ನ ತಲೆ ತುಂಬಾ ಮಲ್ಲಿಗೆ ಮುಡಿದಿರುತ್ತೇನೆ. ನನ್ನ ಪತಿ ಪಂಚೆಯಲ್ಲಿ ಇರುತ್ತಾನೆ ಮತ್ತು ಮದುವೆಯ ನಂತರ ನಾವೆಲ್ಲರೂ ಬಾಳೆ ಎಲೆಯಲ್ಲಿ ಊಟ ಮಾಡುತ್ತೇವೆ.'

ಜಾನ್ವಿಯ ಈ ಮಾತುಗಳು ಆಕೆಯ ಫ್ಯಾನ್‌ಬೇಸ್ ಹೆಚ್ಚಿಸಿವೆ. ಆಕೆಯ ಸಿಂಪ್ಲಿಸಿಟಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ. ಹಿಂದೊಮ್ಮೆ ಆತ್ಮೀಯರು ತಿರುಪತಿಯಲ್ಲಿ ವಿವಾಹವಾದಾಗ ಆಕೆ ನಿಕಟ ವಿವಾಹಗಳ ಸೌಂದರ್ಯವನ್ನು ಅನುಭವಿಸಿದ್ದಾಗಿ ಹೇಳಿದ್ದರು. 

'ನನಗೆ ದೊಡ್ಡ ಮದುವೆಗಳು ಇಷ್ಟವಿಲ್ಲ. ಅಂತಹ ದೊಡ್ಡ ಸಮಾರಂಭದಲ್ಲಿ ಗಮನದ ಕೇಂದ್ರವಾಗಿರುವುದು ನನಗೆ ತುಂಬಾ ಆತಂಕವನ್ನು ನೀಡುತ್ತದೆ!' ಎಂದು ನಟಿ ಹೇಳಿದ್ದರು.

ನಟಿಗೆ ತಿರುಪತಿಯ ಮೇಲೆ ಅಗಾಧ ಭಕ್ತಿ ಇರುವುದು ಆಗಾಗ ವ್ಯಕ್ತವಾಗುತ್ತಲೇ ಇರುತ್ತದೆ. ಈ ವರ್ಷ ಹುಟ್ಟುಹಬ್ಬಕ್ಕೆ ಕೂಡಾ ಜಾನ್ವಿ ತನ್ನ ಬಾಯ್‌ಫ್ರೆಂಡ್ ಜೊತೆ ತಿರುಪತಿಗೆ ಭೇಟಿ ನೀಡಿದ್ದರು. 2022ರಲ್ಲಿಯೂ ಇದೇ ದೇವಾಲಯದಲ್ಲೇ ಹುಟ್ಟುಹಬ್ಬ ಆಚರಿಸಿದ್ದರು.

ಮೆಟ್ಟಿಲ ಮೇಲೆ ಮೊಣಕಾಲಿನಲ್ಲಿ ಹತ್ತಿ ಭಕ್ತಿ ಪ್ರದರ್ಶಿಸಿದ್ದರು. ಇದಲ್ಲದೆ ಈ ಹಿಂದೆ ತಾಯಿ ಶ್ರೀದೇವಿಯ 56ನೇ ಹುಟ್ಟುಹಬ್ಬಕ್ಕೂ ಜಾನ್ವಿ ತಿರುಪತಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಎಲ್ಲ ಸಂದರ್ಭದಲ್ಲಿ ಬರಿಗಾಲಿನಲ್ಲಿ ಮೆಟ್ಟಿಲು ಹತ್ತಿದ್ದರು. 

ತಾಯಿಯಂತೆಯೇ ದೇವರಲ್ಲಿ ಅಗಾಧ ಭಕ್ತಿ ಹೊಂದಿರುವ ಜಾನ್ವಿ ಕಪೂರ್ ಆಗಾಗ್ಗೆ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. 

click me!