ಇದು ಸಕ್ಕರೆ ಲೇಪಿತ ವೇಶ್ಯಾಗೃಹ: ಬೆಂಗಾಲಿ ಸಿನಿಮೋದ್ಯಮದ ಬಗ್ಗೆ ನಟಿಯ ಶಾಕಿಂಗ್ ಹೇಳಿಕೆ

First Published Aug 27, 2024, 5:07 PM IST

ಜಡ್ಜ್‌ ಹೇಮಾ ಕಮಿಟಿ ವರದಿ ಮಲೆಯಾಳಂ ಸಿನಿಮಾ ರಂಗದ ಕರಾಳ ಮುಖವನ್ನು ಬಯಲು ಮಾಡಿರುವ ಬೆನ್ನೆಲೇ ಈಗ ಬೆಂಗಾಲಿ ಸಿನಿಮಾ ನಟಿಯೊಬ್ಬರು ಬೆಂಗಾಲಿ ಸಿನಿಮಾ ರಂಗದಲ್ಲೂ ಇಂತಹದ್ದೇ ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿದೆ ಎಂದು ದೂರಿದ್ದಾರೆ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಮತ್ತು ನಟಿಯರ ಮೇಲೆ  ಲೈಂಗಿಕ ದೌರ್ಜನ್ಯವನ್ನು ಬಯಲು ಮಾಡಿದ ಹೇಮಾ ಆಯೋಗದ ವರದಿಯನ್ನು ಉಲ್ಲೇಖಿಸಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಬೆಂಗಾಲಿ ಚಿತ್ರನಟಿ ರೀತಾಭರಿ ಚಕ್ರವರ್ತಿ, ಇಂತಹ  ಅನೇಕ ವರದಿಗಳು ತಮ್ಮ ಸ್ವಂತ ಅನುಭವಗಳೊಂದಿಗೆ ಹೋಲಿಕೆಯನ್ನು ಹೊಂದಿವೆ ಎಂದಿದ್ದಾರೆ. 

ಇಲ್ಲೂ ಇಂತಹದ್ದೇ ದೌರ್ಜನ್ಯಗಳು ನಡೆದಿವೆ. ಹೀಗಾಗಿ ಬೆಂಗಾಲಿ ಚಲನಚಿತ್ರೋದ್ಯಮದಲ್ಲಿ ಇಂತಹ ಕೃತ್ಯಗಳ ಬಗ್ಗೆ ತನಿಖೆ ಮಾಡಲು ಕೇರಳದಲ್ಲಿ ಹೇಮಾ ಆಯೋಗ ಜಾರಿ ಮಾಡಿದಂತೆ ಇಲ್ಲೂ ಸಮಿತಿಯೊಂದನ್ನು ರಚಿಸಿ ತನಿಖೆ ಮಾಡಬೇಕು ಎಂದು ಅವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರಿಗೆ ಒತ್ತಾಯಿಸಿದ್ದಾರೆ. 

Latest Videos


ಹೇಮಾ ಕಮಿಟಿ ವರದಿ ಬಗ್ಗೆ ಕೇಳಿದ ನಂತರ ಏಕೆ ಇದೇ ರೀತಿಯ ಸಮಿತಿಯನ್ನು ಬೆಂಗಾಲಿ ಸಿನಿಮಾ ರಂಗದ ಬಗ್ಗೆ ರಚನೆ ಮಾಡುತ್ತಿಲ್ಲ ಎಂದು ಯೋಚನೆ ಮಾಡುವಂತೆ ಆಗಿದೆ.  ಹೇಮಾ ಕಮಿಟಿ ನೀಡಿರುವ ವರದಿಗೂ ನಾವು ಅನುಭವಿಸಿದ ಅಥವಾ ನನ್ನಂತ ಇನ್ಯಾರೋ ನಟಿಯರ ಅನುಭವಕ್ಕೆ ಹತ್ತಿರದ ಹೋಲಿಕೆ ಇದೆ. 

 ಹಲವು ಕನಸುಗಳೊಂದಿಗೆ ಈ ಸಿನಿಮಾರಂಗಕ್ಕೆ ಬರುವ ಯುವ ನಟಿಯರ ಬಗ್ಗೆ ನಮಗೆ ಯಾವುದೇ ಜವಾಬ್ದಾರಿ ಇಲ್ಲವೇ ಮತ್ತು ಇದು ಸಕ್ಕರೆ ಲೇಪಿತ ವೇಶ್ಯಾಗೃಹವಲ್ಲದೆ ಬೇರೇನೂ ಅಲ್ಲ ಎಂದು ರೀತಾಭರಿ ಚಕ್ರವರ್ತಿ ಅವರು  ಬೆಂಗಾಲಿ ಸಿನಿರಂಗದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಅಲ್ಲದೇ ತಮ್ಮ ಪೋಸ್ಟನ್ನು ಸಿಎಂ ಮಮತಾ ಬ್ಯಾನರ್ಜಿಯವರಿಗೆ ಟ್ಯಾಗ್ ಮಾಡಿರುವ ರೀತಾಭರಿ, ನಾವು ಕೂಡ ಇಂತಹ ತನಿಖೆಯನ್ನು, ವರದಿಯನ್ನು ಹಾಗೂ ಸುಧಾರಣೆಯನ್ನು ಬಯಸಿದ್ದೇವೆ ಎಂದು ಹೇಳಿದ್ದು, ಯರೊಬ್ಬರ ಹೆಸರನ್ನು ಉಲ್ಲೇಖಿಸದೇ ಬೆಂಗಾಲಿ ಸಿನಿಮೋದ್ಯಮವೂ ಕೂಡ ಇಂತಹದ್ದೇ ನಡವಳಿಕೆಯನ್ನು ಹೊಂದಿದೆ. ಅಲ್ಲಿನವರ ಮುಖವಾಡವನ್ನು ಕೂಡ ಬಯಲಿಗೆಳೆಯಬೇಕು ಎಂದು ಮನವಿ ಮಾಡಿದರು. 

ಬೆಂಗಾಲಿ ಸಿನಿಮಾ ರಂಗದಲ್ಲೂ ಇಂತಹ ಕೊಳಕು ಮನಸ್ಸು ಮತ್ತು ನಡವಳಿಕೆಯನ್ನು ಹೊಂದಿರುವ ಹೀರೋ, ನಿರ್ಮಾಪಕ, ನಿರ್ದೇಶಕರು ಇದ್ದು, ತಮ್ಮ ಕೃತ್ಯಗಳ ಬಗ್ಗೆ  ಯಾವುದೇ ಪರಿಣಾಮಗಳನ್ನು ಎದುರಿಸದೆ ಕೆಲಸ ಮುಂದುವರೆಸುತ್ತಾರೆ ಮತ್ತು ಅವರು ಮಹಿಳೆಯನ್ನು ಮಾಂಸಕ್ಕಿಂತ ಉತ್ತಮ ಎಂದು ಭಾವಿಸುವುದರಿಂದ ಅಂತಹವರೇ ಕೋಲ್ಕತ್ತಾದ ಆರ್‌ ಜಿ ಕಾರ್ ಆಸ್ಪತ್ರೆಯ ಅತ್ಯಾಚಾರ ಸಂತ್ರಸ್ತೆ ಪರ ಮೇಣದಬತ್ತಿಗಳನ್ನು ಹಿಡಿದಿಟ್ಟುಕೊಂಡು ಸಾಗುತ್ತಾರೆ ಎಂದು ರೀತಾಭರಿ ದೂರಿದ್ದಾರೆ.

ಇಂತಹ ಪರಭಕ್ಷಕಗಳ ಮುಖವಾಡ ಕಳಚೋಣ, ಈ ರಾಕ್ಷಸರ ವಿರುದ್ಧ ನಿಲ್ಲಲು ನಾನು ನನ್ನ ಸಹನಟಿಯರನ್ನು ಕರೆಯುತ್ತಿದ್ದೇನೆ. ಇಂತಹ ಕಿರುಕುಳ ನೀಡಿದ ಪುರುಷರಲ್ಲಿ ಹೆಚ್ಚಿನವರು ಪ್ರಭಾವಿಗಳಾಗಿರುವುದರಿಂದ ನೀವು ನಿಮ್ಮ ನಟನೆಯ ಅವಕಾಶವನ್ನು ಕಳೆದುಕೊಳ್ಳುವ ಅಥವಾ ಎಂದಿಗೂ ನಟಿಸಲಾಗದು ಎಂಬ ಭಯದಲ್ಲಿದ್ದೀರಿ   ಎಂದು ನನಗೆ ತಿಳಿದಿದೆ. ಆದರೆ ನಾವು ಎಷ್ಟು ದಿನ ಸುಮ್ಮನಿರಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ ಈ ಬಗ್ಗೆ ಸಿಎಂಗೆ ಭಾವುಕ ಮನವಿ ಮಾಡಿದ ಆಕೆ, ದೀದಿ  ನಮ್ಮ ಸಿನಿಮೋದ್ಯಮದಲ್ಲೂ ನಮಗೆ ಈಗಲೇ ಇಂತಹ ತನಿಖೆಯ ಅಗತ್ಯವಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು ನಾವು ಇನ್ನೊಂದು ಅತ್ಯಾಚಾರ ಅಥವಾ ಲೈಂಗಿಕ ಹಲ್ಲೆಯಂತಹ ಪ್ರಕರಣವನ್ನು ಬಯಸುವುದಿಲ್ಲ, 

 ಈ ಸಿನಿಮೋದ್ಯಮದಲ್ಲಿ ತೊಡಗಿರುವ ಯಾವುದೇ ವ್ಯಕ್ತಿಗೆ ನಾವು ನಮ್ಮನ್ನು ಸರಕಿನಂತೆ ನೋಡುವಂತಹ ಹಕ್ಕನ್ನು ಅಥವಾ ಅಧಿಕಾರವನ್ನು ಅಥವಾ ಅವರ ಲೈಂಗಿಕ ದಾಹವನ್ನು ಈಡೇರಿಸುವ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಬೆಂಗಾಲಿ ಸಿನಿಮಾದಲ್ಲಿ ರೀತಾಭರಿ ಜನಪ್ರಿಯ ಹೆಸರಾಗಿದ್ದು, ಅವರು ಚೋಟುಷ್‌ಕೋಣೆ (2014), ಒನ್ಸ್ ಅಪಾನ್ ಎ ಟೈಮ್ ಇನ್ ಕೋಲ್ಕತ್ತಾ (2014), ಬವಾಲ್ (2015), ಫಟಾಫಟಿ (2022) ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿರಿಯ ಬಂಗಾಳಿ ನಟಿ ಶ್ರೀಲೇಖಾ ಮಿತ್ರ ಅವರು ಇತ್ತೀಚೆಗೆ ಮಲಯಾಳಂನ ಹೆಸರಾಂತ ನಿರ್ದೇಶಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

click me!