ಹೋಳಿ ಹಬ್ಬಕ್ಕೂ ಮುನ್ನ ಬರುವ ಎಂಟು ದಿನಗಳ ಅವಧಿಯನ್ನು ಹೋಲಾಷ್ಟಕ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಗ್ರಹಗಳ ಸ್ಥಾನವು ಪ್ರತಿಕೂಲವಾಗಿರುವುದರಿಂದ ಮದುವೆ, ಗೃಹಪ್ರವೇಶದಂತಹ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ.
ಮಾರ್ಚ್ 3ರಂದು ಹೋಳಿ ಹಬ್ಬ ಆಚರಣೆಯನ್ನು ಭಾರತಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಣ್ಣದ ಓಕುಳಿಯಲ್ಲಿ ಜನರು ಮಿಂದೇಳುತ್ತಾರೆ. ಆದರೆ ಇದಕ್ಕೂ ಮುನ್ನ ಬರುವ ಎಂಟು ದಿನಗಳು ಮಾತ್ರ ಅತ್ಯಂತ ಅಶುಭ ಎಂದೇ ಪರಿಗಣಿಸಲಾಗಿದೆ. ಫೆಬ್ರುವರಿ 24 ರಿಂದ ಮಾರ್ಚ್ 3ರವರೆಗೆ ಇದು ಇರುತ್ತದೆ. ಅಷ್ಟಕ್ಕೂ ಚಿಕ್ಕ ಮಕ್ಕಳು ಇರುವ ಮನೆಯಲ್ಲಿ ಅತ್ಯಂತ ಜಾಗ್ರತೆ ವಹಿಸಬೇಕು ಎನ್ನುತ್ತಾರೆ ಹಿರಿಯರು. ಮಾಟ-ಮಂತ್ರ ಮಾಡುವವರಿಗೂ ಈ ದಿನಗಳು ವರದಾನವಾಗಿರುವ ಹಿನ್ನೆಲೆಯಲ್ಲಿ, ಜನಸಾಮಾನ್ಯರು ಭಾರಿ ಜಾಗರೂಕರಾಗಿರಬೇಕು ಎಂದೂ ಹೇಳಲಾಗುತ್ತದೆ.
26
ಎಂಟು ದಿನಗಳ ಅವಧಿ
ಹೋಲಾಷ್ಟಕವು 'ಶುಕ್ಲ ಪಕ್ಷ'ದ ಅಷ್ಟಮಿಯಿಂದ ಆರಂಭವಾಗಿ, ಹೋಳಿ ಹುಣ್ಣಿಮೆಯವರೆಗೆ ನಡೆಯುತ್ತದೆ. ಇದನ್ನು ಹೆಚ್ಚಾಗಿ ಉತ್ತರ ಭಾರತದ ಬಹುತೇಕ ಹಿಂದೂ ಸಮುದಾಯಗಳು ಆಚರಿಸುತ್ತಾರೆ. ಹೋಲಾಷ್ಟಕದ ಕೊನೆಯ ದಿನ, ಅಂದರೆ ಫಾಲ್ಗುಣ ಪೂರ್ಣಿಮೆಯ ದಿನ ಹೋಲಿಕಾ ದಹನವನ್ನು ಆಚರಿಸುವ ಅರ್ಥಾತ್ ಹೋಳಿ ಹಬ್ಬದ ದಿನವಾಗಿದೆ. ಚಿಕ್ಕ ಮಕ್ಕಳು ಮನೆಯಲ್ಲಿ ಇದ್ದರೆ ಅವರನ್ನು ಹೊರಗೆ ಕಳುಹಿಸುವುದನ್ನು ನಿಷೇಧಿಸಲಾಗಿದೆ. ಅದರಲ್ಲಿಯೂ ಮೂರು ರಸ್ತೆಗಳು ಕೂಡುವ ಜಾಗದಲ್ಲಂತೂ ಮಕ್ಕಳನ್ನು ಕಳುಹಿಸಲೇಬೇಡಿ ಎನ್ನುತ್ತಾರೆ ಹಿರಿಯರು.
36
ಎಲ್ಲ ಗ್ರಹಗಳೂ ಹೀಗಿರುತ್ತೆ
ಈ ಸಮಯದಲ್ಲಿ ಸೂರ್ಯ, ಚಂದ್ರ, ಬುಧ, ಗುರು, ಮಂಗಳ, ಶನಿ, ರಾಹು ಮತ್ತು ಶುಕ್ರ ಮುಂತಾದ ಧಾರ್ಮಿಕ ಪ್ರಾಮುಖ್ಯತೆಯ ಗ್ರಹಗಳು ರೂಪಾಂತರಗಳಿಗೆ ಒಳಗಾಗುತ್ತವೆ ಮತ್ತು ಫಲಿತಾಂಶಗಳ ಅನಿಶ್ಚಿತತೆಯಿಂದಾಗಿ ಇದು ಮಂಗಳಕರ ಚಟುವಟಿಕೆಗಳಿಗೆ ಪ್ರತಿಕೂಲವಾಗಿದೆ ಎಂದು ನಂಬಲಾಗಿದೆ.
ಹೋಲಾಷ್ಟಕ ಎಂಬುದು ಎರಡು ವಿಭಿನ್ನ ಪದಗಳಾದ 'ಹೋಳಿ' ಮತ್ತು 'ಅಷ್ಟಕ್' (8 ನೇ ದಿನ) ನಿಂದ ಬಂದಿದೆ. ಇದು ಹೋಳಿಯ ಎಂಟು ದಿನಗಳನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಮದುವೆಗಳು, ಮಗುವಿನ ನಾಮಕರಣ ಸಂಸ್ಕಾರ, ಗೃಹಪ್ರವೇಶ ಮತ್ತು ಇತರ ಯಾವುದೇ 16 ಹಿಂದೂ ಸಂಸ್ಕಾರಗಳು ಅಥವಾ ಆಚರಣೆಗಳಂತಹ ಶುಭ ಸಮಾರಂಭಗಳನ್ನು ತಪ್ಪಿಸಲಾಗುತ್ತದೆ. ಕೆಲವು ಸಮುದಾಯಗಳಲ್ಲಿ ಜನರು ಈ ಅವಧಿಯಲ್ಲಿ ಹೊಸ ವ್ಯಾಪಾರ ಆರಂಭಿಸುವುದಿಲ್ಲ.
56
ಇದ್ಯಾಕೆ ಆಚರಣೆ?
ಹಿರಣ್ಯಕಶಿಪು ಮತ್ತು ಭಕ್ತ ಪ್ರಹ್ಲಾದ ಕಥೆ ಗೊತ್ತಿದ್ದದ್ದೇ. ವಿಷ್ಣು ಭಕ್ತ ಪ್ರಹ್ಲಾದನನ್ನು ಸಾಯಿಸಲು ಹಿರಣ್ಯಕಶಿಪು ಎಂಟು ದಿನಗಳವರೆಗೆ ಆತನಿಗೆ ಇನ್ನಿಲ್ಲದಂತೆ ಹಿಂಸೆ ನೀಡುತ್ತಾರೆ. ಬೆಂಕಿಯಲ್ಲಿ ದಹಿಸುತ್ತಾನೆ, ವಿಷ ಸರ್ಪಗಳಿಂದ ಕಚ್ಚಿಸುತ್ತಾನೆ, ಬೆಟ್ಟದ ಮೇಲಿನಿಂದ ತಳ್ಳುತ್ತಾನೆ... ಹೀಗೆ ಇದೇ ಎಂಟು ದಿನಗಳ ಅವಧಿಯಲ್ಲಿ ಮಾಡುವ ಕಾರಣ ಇದನ್ನು ಅಶುಭ ಎನ್ನಲಾಗಿದೆ.
66
ನೀವೇನು ಮಾಡಬೇಕು?
ಹೋಲಾಷ್ಟಕ ದಿನಗಳು 'ದಾನ' ಮಾಡಲು ಅಥವಾ ದೇಣಿಗೆ ನೀಡಲು ಸೂಕ್ತವಾಗಿದೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಬಟ್ಟೆ, ಧಾನ್ಯಗಳು, ಹಣ ಮತ್ತು ಇತರ ಅಗತ್ಯ ವಸ್ತುಗಳನ್ನು ಉದಾರವಾಗಿ ದಾನ ಮಾಡಬೇಕು.