ಯುಗಯುಗಾಂತರಗಳಷ್ಟು ಹಿರಿಯಾಕೆಯನ್ನು ಬಲರಾಮ ಮದುವೆಯಾಗಿದ್ದೇಕೆ?

By Suvarna NewsFirst Published Aug 2, 2021, 4:27 PM IST
Highlights

ಶ್ರೀಕೃಷ್ಣನ ಅಣ್ಣ ಬಲರಾಮ ಮದುವೆಯಾದದ್ದು ತನಗಿಂತ ಯುಗಯುಗಗಳಷ್ಟು ಹಿಂದಿನ ಹೆಣ್ಣನ್ನು. ಅದೊಂದು ಕುತೂಹಲಕಾರಿಯಾದ ಕತೆ.

ಕೃಷ್ಣ- ಬಲರಾಮರಿಗೆ ಆಗ ಮದುವೆ ಪ್ರಾಯ. ಇದ್ದಕ್ಕಿದ್ದಂತೆ ಒಬ್ಬ ತಂದೆ- ಮಗಳು ಆತನನ್ನು ನೋಡಲು ಬರುತ್ತಾರೆ. ತಂದೆಯ ಹೆಸರು ರೈವತ. ಮಗಳು ರೇವತಿ, ತನ್ನ ಮಗಳನ್ನು ಮದುವೆಯಾಗಬೇಕು ಎಂದು ಬಲರಾಮನಿಗೆ ರೈವತ ಹೇಳುತ್ತಾನೆ. ನಾನೇಕೆ ನಿಮ್ಮ ಮಗಳನ್ನು ಮದುವೆಯಾಗಬೇಕು ಎಂದು ಬಲರಾಮ ಪ್ರಶ್ನಿಸಿದಾಗ ರೈವತ ಹೇಳುವ ಕತೆ ಕುತೂಹಲಕರವಾಗಿದೆ:

ಯುಗಯುಗಗಳ ಹಿಂದೆ, ಈಗಿನ ದ್ವಾರಕೆ ಆಗ ಕುಶಸ್ಥಲಿ ಎಂಭ ಹೆಸರಿನ ರಾಜ್ಯವಾಗಿತ್ತು. ಕಕುದ್ಮಿ (ರೈವತ) ಅಲ್ಲಿನ ರಾಜನಾಗಿದ್ದ. ಅವನಿಗೆ ಸುಂದರಿ ಮತ್ತು ಬುದ್ಧಿವಂತೆಯಾದ ರೇವತಿ ಎಂಬ ಮಗಳು. ಎಲ್ಲ ಅಪ್ಪಂದಿರಂತೆ ರೈವತನಿಗೂ ಮಗಳನ್ನು ಸಾಮಾನ್ಯರಿಗೆ ಕೊಡಲು ಮನಸ್ಸಿಲ್ಲ. ಹಾಗಾಗಿ, ಯಾವ ರಾಜಕುಮಾರರೂ ಅವನಿಗೆ ಇಷ್ಟ ಆಗಲಿಲ್ಲ. ಮಗಳ ಮದುವೆ ವಯಸ್ಸು ಮೀರುತ್ತಾ ವರ್ಷಗಳೇ ಉರುಳಿದರೂ ಸರಿಯಾದ ಗಂಡು ಸಿಗಲಿಲ್ಲ. ಆಗ ಅವನಿಗೆ ಚಿಂತೆ ಆಗಿ, ಸರಿ ಬ್ರಹ್ಮನನ್ನೇ ಕೇಳೋಣ ಅಂತ ನಿರ್ಧಾರ ಮಾಡ್ತಾನೆ. ರೇವತಿಯ ಜೊತೆ ಬ್ರಹ್ಮಲೋಕಕ್ಕೆ ಹೋದ.

ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

ಬ್ರಹ್ಮಲೋಕದಲ್ಲಿ ಗಂಧರ್ವರ ಗಾಯನ, ನೃತ್ಯ ನಡೀತಾ ಇತ್ತು.  ಅದನ್ನು ನೋಡ್ತಾ, ಕೇಳ್ತಾ ಅಪ್ಪ, ಮಗಳಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಸುಮಾರು ಹತ್ತಾರು ಕ್ಷಣ ಅದನ್ನು ನೋಡಿದ ಬಳಿಕ ಬ್ರಹ್ಮನನ್ನು ಭೇಟಿ ಮಾಡಿ, ರೇವತಿಗೆ ಸರಿಹೊಂಡುವ ವರ ಯಾರು ಅಂತ ಕೇಳಿದಾಗ, ಬಹ್ಮ ನಕ್ಕು ಹೇಳಿದ, 'ನಿಮ್ಮ ಭೂಮಿಯ ಕಾಲದ ಲೆಕ್ಕಾಚಾರವೇ ಬೇರೆ, ಬ್ರಹ್ಮಲೋಕದ ಲೆಕ್ಕಾಚಾರವೇ ಬೇರೆ. ಇಲ್ಲಿನ ಒಂದು ಕ್ಷಣ ಎಂದರೆ ಭೂಮಿಯ ಮೇಲಿನ ನಾಲ್ಕು ಯುಗಗಳಿಗೆ ಸಮಾನ. ಒಂದು ನೀವು ಸಂಗೀತ, ನೃತ್ಯ ನೋಡಿದ ಸಮಯದಲ್ಲಿ ಭೂಮಿಯಲ್ಲಿ 27 ಚತುರ್ಯುಗಗಳು ಕಳೆದು ಹೋಗಿದೆ. ಆಗ ಇದ್ದ ಯಾರೂ ಈಗ ಭೂಮಿಯ ಮೇಲೆ ಉಳಿದಿಲ್ಲ. ಆದರೆ ಚಿಂತೆ ಮಾಡಬೇಡ, ಈಗ ನಿನ್ನ ರಾಜ್ಯ ದ್ವಾರಕೆ ಎಂದು ಬದಲಾಗಿದೆ. ಅಲ್ಲಿ ಈಗ ಬಲರಾಮ ಎಂಬವನಿದ್ದಾನೆ. ಆತನ ಆದಿಶೇಷನ ಅವತಾರ. ಮಹಾವಿಷ್ಣು ಶ್ರೀಕೃಷ್ಣನಾಗಿ ಅವತಾರ ಎತ್ತಿದ್ದು, ಆತನಿಗೆ ಸಹಾಯಕನಾಗಿ ಇದ್ದಾನೆ. ಬಲರಾಮನಿಗೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡು.'
ಸರಿ, ಎಂದು ರೈವತ ಮತ್ತು ರೇವತಿ ವಾಪಾಸ್ ಭೂಲೋಕಕ್ಕೆ ಬಂದರು. ತಮ್ಮ ಕಾಲದ ಜನರು ಇಲ್ಲದ್ದನ್ನು ಮತ್ತು ನಗರ ಪೂರ್ತಿ ಬದಲಾಗಿದ್ದನ್ನು ಕಂಡು ಆಶ್ಚರ್ಯಪಟ್ಟರು. ಬ್ರಹ್ಮನ ಮಾತಿನಂತೆ, ಬಲರಾಮ, ಕೃಷ್ಣರನ್ನು ಭೇಟಿಯಾಗಿ, ತಮ್ಮ ಕಥೆ ಹೇಳಿದರು. ಬ್ರಹ್ಮನ ಮಾತು ಎಂಬ ಕಾರಣದಿಂದ ಬಲರಾಮ ಮದುವೆಗೆ ಒಪ್ಪುತ್ತಾನೆ. ಆದರೆ ಒಂದು ಸಮಸ್ಯೆ ಏನಂದರೆ, ಕಾಲದ ಬದಲಾವಣೆಯಿಂದ, ರೇವತಿ ಬಲರಾಮನಿಗಿಂತ ತುಂಬಾ ಉದ್ದ ಇರ್ತಾಳೆ. ಆಗ ತೀಕ್ಷ್ಣಬುದ್ದಿಯ ಕೃಷ್ಣ, ಬಲರಾಮನಿಗೆ ಒಂದು ಸಲಹೆ ಕೊಡ್ತಾನೆ. ಅದರಂತೆ ಬಲರಾಮ ತನ್ನ ಆಯುಧ ನೇಗಿಲನ್ನು ಪ್ರಯೋಗಿಸಿ, ರೇವತಿಯನ್ನು ತಗ್ಗಿಸುತ್ತಾನೆ. ಮದುವೆ ಮುಗಿದ ನಂತರ, ರಾಜ ರೈವತ ತಪಸ್ಸಿಗೆ ಹೋಗುತ್ತಾನೆ.

ಯಾವ ವಾರ, ಯಾವ ದೇವರಿಗೆ ಹೇಗೆ ಪೂಜೆ ಸಲ್ಲಿಸಬೇಕು?

ಇದರಿಂದ ತಿಳಿಯುವುದು ಏನೆಂದರೆ, ಬ್ರಹ್ಮಲೋಕ ಎನ್ನುವುದು ಭೂಮಿಯಂತೆ ಇರುವ ಯಾವುದೋ ಗ್ರಹ ಇದ್ದಿರಬೇಕು. ರಾಜರು ಮತ್ತು ಋಷಿಗಳು ಭೂಮಿ ಮತ್ತು ಬ್ರಹ್ಮಲೋಕದ ನಡುವೆ ಹೋಗಿ ಬರುತ್ತಿದ್ದರು. ಉದಾಹರಣೆಗೆ, ರಾಮಾಯಣದಲ್ಲಿ .ಸೂರ್ಯ ವಂಶದ ಕುಲಗುರುಗಳಾದ ವಸಿಷ್ಠರು ಯಾವುದೋ ಕಾರ್ಯದ ಮೇಲೆ ಬ್ರಹ್ಮಲೋಕಕ್ಕೆ ಹೋಗಿದ್ದನ್ನು ಕನಿಷ್ಠ ಪಕ್ಷ 2 ಬಾರಿ ಆದರೂ ಹೇಳಲಾಗಿದೆ. ಅರ್ಜುನ ವನವಾಸದ ಸಮಯದಲ್ಲಿ ದೇವಲೋಕಕ್ಕೆ ವಿಮಾನದಲ್ಲಿ ಹೋಗಿದ್ದ. ಹಾಗೇ ಪಾತಾಳಕ್ಕೂ ಹೋಗಿ ಅಲ್ಲಿ ಉಲೂಪಿ ಎಂಬ ನಾಗಕನ್ಯೆಯ ಜೊತೆಗೆ ಸಂಸಾರ ನಡೆಸಿ ಇರಾವಾನ್ ಎಂಬ ಪುತ್ರನನ್ನು ಹೊಂದಿದ್ದ. ಆದರೆ ಅವನು ಮರಳೀ ಭೂಮಿಗೆ ಬಂದಾಗ ಕಾಲವೇನೂ ಹೆಚ್ಚು ವ್ಯತ್ಯಾಸ ಆಗಿರಲಿಲ್ಲ. ಆ ಕಾಲದಲ್ಲಿ ಬೆಳಕಿನ ವೇಗವನ್ನು ಮೀರಿ ಪ್ರಯಾಣಿಸುವಂತ ಟೆಕ್ನಾಲಜಿ ಇದ್ದಿರಬಹುದು. ಭೂಮಿಯಿಂದ ಬ್ರಹ್ಮಲೋಕ ಪ್ರಯಾಣ ಸಾಧ್ಯವಿತ್ತು. ರೈವತನ ಲೆಕ್ಕಾಚಾರ ತಪ್ಪಿದ್ದು ಬ್ರಹ್ಮಲೋಕದಲ್ಲಿ, ಗಾಯನ, ನೃತ್ಯ ನೋಡಿ ಮೈ ಮರೆತದ್ದರಿಂದ. ಭೂಮಿ ಮತ್ತು ಬ್ರಹ್ಮಲೋಕದಲ್ಲಿ, ಕಾಲ ಬೇರೆ ಬೇರೆಯಾಗಿದೆ ಎಂಬುದನ್ನು ಅವನು ಮರೆತು ಬಿಟ್ಟ. ಕಾಲ ಬೇರೆ ಬೇರೆ ಗ್ರಹ ನಕ್ಷತ್ರಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತದೆಂದು ಭಾರತೀಯರಿಗೆ ತಿಳಿದಿತ್ತು. 

ನಿಮಗೆ ಗೊತ್ತೇ, ಶ್ರೀಕೃಷ್ಣನ ಮೈಬಣ್ಣವೇಕೆ ನೀಲಿ?

click me!