Faith And Reason: ಮನೆ, ಅಂಗಡಿ, ವಾಹನಗಳಲ್ಲಿ ಮೆಣಸಿನಕಾಯಿ, ನಿಂಬೆಹಣ್ಣನ್ನು ನೇತು ಹಾಕುವುದೇಕೆ?

By Suvarna NewsFirst Published Jan 23, 2022, 5:51 PM IST
Highlights

ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ಒಟ್ಟಿಗೇ ಗಂಟು ಹಾಕಿ ಎಲ್ಲೆಡೆ ತೂಗು ಹಾಕುತ್ತಾರೆ. ಏನಿದು ಇವೆರಡರ ನಡುವಿನ ಬಾದರಾಯಣ ಸಂಬಂಧ?

ಭಾರತದಲ್ಲಿ ದಕ್ಷಿಣದಿಂದ ಉತ್ತರದ ತುದಿಯವರೆಗೆ ಎಲ್ಲೇ ಹೋಗಿ, ಮನೆಯ ಹೊರಗಿನ ಬಾಗಿಲ ಮೇಲೆ, ಅಂಗಡಿಯ ಹೊರಗೆ, ಕಾರು, ಬಸ್ಸು, ಲಾರಿಗಳಲ್ಲಿ ಕೂಡಾ ನಿಂಬೆಹಣ್ಣು(lemon), ಜೊತೆಗೊಂದಿಷ್ಟು ಮೆಣಸಿನಕಾಯಿ(chilly) ನೇತು ಹಾಕಿರುವ ದೃಶ್ಯ ಸಾಮಾನ್ಯವಾದುದು. ಈ ಆಚರಣೆ ನಮ್ಮಲ್ಲಿ ಶತಶತಮಾನಗಳಿಂದ ಬೆಳೆದು ಬಂದಿದೆ. 

ಸಾಮಾನ್ಯವಾಗಿ ಏಳು ಮೆಣಸಿನಕಾಯಿಯ ಜೊತೆ ಒಂದು ನಿಂಬೆ ಹಣ್ಣು ಇಲ್ಲವೇ 5 ಮೆಣಸಿನ ಜೊತೆ 1 ಲಿಂಬೆಹಣ್ಣನ್ನು ನೇತು ಹಾಕಲಾಗುತ್ತದೆ. ಶನಿವಾರ ಈ ಜೋಡಿಯನ್ನು ನೇತು ಹಾಕಿ, ಶುಕ್ರವಾರ ತೆಗೆಯಲಾಗುತ್ತದೆ. ಈ ಲಿಂಬೆಹಣ್ಣಿಗೂ ಮೆಣಸಿನಕಾಯಿಗೂ ಎಲ್ಲಿಂದೆಲ್ಲಿಯ ಸಂಬಂಧ?  ಇವೆರಡರ ನಂಟೇನು, ಅವನ್ನು ಜೊತೆಯಾಗಿಸಿ ಮನೆಯೆದುರು ನೇತು ಹಾಕುವುದರಿಂದ ಆಗುವ ಪ್ರಯೋಜನಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ?  ಈ ಆಚರಣೆಯ ಹಿಂದಿನ ಧಾರ್ಮಿಕ ನಂಬಿಕೆ ಹಾಗೂ ವೈಜ್ಞಾನಿಕ ನಿಲುವುಗಳೆರಡನ್ನೂ ನಾವಿಲ್ಲಿ ಹೇಳುತ್ತೇವೆ.

ಧಾರ್ಮಿಕ ವಿವರಣೆ(religious description)
ಸಂಪತ್ತಿನ ದೇವತೆಯಾದ ಲಕ್ಷ್ಮೀ(Lakshmi)ಯ ಅವಳಿ ಸಹೋದರಿ ಅಲಕ್ಷ್ಮೀ. ಅವರಿಬ್ಬರೂ ಎಲ್ಲೆಡೆ ಜೊತೆಯಾಗೇ ಹೋಗುವವರು. ಆದರೆ ಅಲಕ್ಷ್ಮಿ ಬಡತನ, ದ್ರರಿದ್ರ ತರುವವಳು. ಹಾಗಾಗಿ, ಜನಕ್ಕೆ ಅಲಕ್ಷ್ಮಿ ತಮ್ಮ ಮನೆಗೆ ಬರುವುದು ಇಷ್ಟವಿರುವುದಿಲ್ಲ. 
ಲಕ್ಷ್ಮಿಗೆ ಸಿಹಿ ತಿನಿಸುಗಳಿಷ್ಟ. ಅದಕ್ಕೇ ನಮ್ಮೆಲ್ಲ ಹಬ್ಬಗಳಲ್ಲಿ ಸಿಹಿಯನ್ನು ಮಾಡುವುದು. ಆದರೆ, ಅಲಕ್ಷ್ಮೀಗೆ ಹುಳಿಯಾದ, ಖಾರದ ತಿನಿಸುಗಳಿಷ್ಟ. ಹಾಗಾಗೇ ಜನ ಮನೆ, ಅಂಗಡಿಯ ಬಾಗಿಲಿಗೆ ನಿಂಬೆಹುಳಿ, ಮೆಣಸಿನಕಾಯಿ ನೇತು ಹಾಕುತ್ತಾರೆ. ಲಕ್ಷ್ಮೀಯ ಜೊತೆಗೆ ಅಲಕ್ಷ್ಮೀ ಬಂದರೆ ಅವನ್ನು ನೋಡಿ ಸಂತುಷ್ಟಳಾಗಿ ಅಲ್ಲಿಯೇ ನಿಲ್ಲಲಿ, ಒಳಗೆ ಬರುವುದು ಬೇಡವೆಂದು. 

ಈ ಬಗ್ಗೆ ಮತ್ತೊಂದು ಜಾನಪದ ಕತೆಯಿದೆ. ಒಮ್ಮೆ ವ್ಯಾಪಾರಿಯೊಬ್ಬನ ಬಳಿ ಲಕ್ಷ್ಮೀ, ಅಲಕ್ಷ್ಮೀ ಇಬ್ಬರೂ ತೆರಳಿ ತಮ್ಮಿಬ್ಬರಲ್ಲಿ ಯಾರು ಹೆಚ್ಚು ಚೆಂದ ಎಂದು ಕೇಳಿದರಂತೆ. ಆಗ ವ್ಯಾಪಾರಿಯು ತನ್ನ ಚಾಣಾಕ್ಷತನ ಬಳಸಿ, ಲಕ್ಷ್ಮಿಯು ಹೊರಗಿಂದ ಒಳ ಬರುವಾಗ ಹೆಚ್ಚು ಸುಂದರಳಾಗಿ ಕಾಣುತ್ತಾಳೆ. ಅಲಕ್ಷ್ಮಿಯು ಒಳಗಿಂದ ಹೊರ ಹೋಗುವಾಗ ಹೆಚ್ಚು ಸುಂದರಳಾಗಿ ಕಾಣುತ್ತಾಳೆ ಎನ್ನುತ್ತಾನೆ. 

ಆಧ್ಯಾತ್ಮಿಕ ವಿವರಣೆ(spiritual description)
ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಮನೆಯನ್ನು ಕೆಟ್ಟ ದೃಷ್ಟಿಯಿಂದ ಕಾಪಾಡುತ್ತದೆ. ಕೆಟ್ಟ ದೃಷ್ಟಿ ಎಂದರೆ ನೆಗೆಟಿವ್ ಎನರ್ಜಿ. ಈ ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ನಿಂಬೆಹಣ್ಣು ಹಾಗೂ ಮೆಣಸಿನಕಾಯಿಗೆ ಸಾಧ್ಯವಿದೆ ಎಂಬ ನಂಬಿಕೆ ಇದೆ. 

Cancer Bad Traits: ನೆಗೆಟಿವ್ ಆಗಿ ಯೋಚಿಸುವುದರಲ್ಲಿ ಕಟಕದವರ ಕೈ ಮೇಲು!

ವೈಜ್ಞಾನಿಕ ವಿವರಣೆ(Scientific description)
ಹಿಂದೆಲ್ಲ ಜನರು ಒಬ್ಬೊಬ್ಬರೇ ಕಾಡಿನಲ್ಲಿ ಸಾಕಷ್ಟು ದೂರ ನಡೆಯಬೇಕಾಗುತ್ತಿತ್ತು. ಆಗ ದಾರಿಯಲ್ಲಿ ಸುಸ್ತಾಗುತ್ತಿತ್ತು. ಅಂಥ ಸಂದರ್ಭದಲ್ಲಿ ವಿಟಮಿನ್ ಸಿಯಿಂದ ಶ್ರೀಮಂತವಾಗಿರುವ ನಿಂಬೆಹಣ್ಣನ್ನು ಹಿಂಡಿ ರಸ ಕುಡಿಯುವುದರಿಂದ ಎನರ್ಜಿ ಬರುತ್ತಿತ್ತು. ಹಾಗಾಗಿ ಎಲ್ಲೇ ಹೋದರೂ ನಿಂಬೆಹಣ್ಣನ್ನು ಜೊತೆಗಿಟ್ಟುಕೊಳ್ಳುತ್ತಿದ್ದರು. ಇನ್ನು ಮೆಣಸಿನಕಾಯಿ ಏಕೆಂದರೆ, ಹಿಂದಿನ ದಟ್ಟಾರಣ್ಯಗಳ ತುಂಬೆಲ್ಲ ಹಾವುಗಳಿರುತ್ತಿದ್ದವು. ಹಾವು ಕಚ್ಚುವುದು ಸಾಮಾನ್ಯವಾಗಿತ್ತು. ಹೀಗೆ ಹಾವು ಕಚ್ಚಿದಾಗ ಮೆಣಸಿನಕಾಯಿ ಜಗಿದರೆ ಅದು ಕಹಿಯಾದರೆ ಹಾವು ವಿಷಕಾರಿಯಾದುದಲ್ಲ ಎಂದುಕೊಂಡು ಆರಾಮಾಗಿ ಮುನ್ನಡೆಯುತ್ತಿದ್ದರು. ಒಂದು ವೇಳೆ ಹಾವು ವಿಷಕಾರಿಯಾಗಿದ್ದರೆ ಅದು ಕಚ್ಚಿದಾಗ ನಾಲಿಗೆ ಮರಗಟ್ಟಿ ಮೆಣಸನ್ನು ಜಗಿದರೂ ರುಚಿ ಗೊತ್ತಾಗುತ್ತಿರಲಿಲ್ಲ. ಈ ಕಾರಣಕ್ಕೆ ಇವೆರಡನ್ನೂ ಒಟ್ಟಿಗೇ ಒಯ್ಯುತ್ತಿದ್ದರು. ಅದೇ ಮುಂದೆ ಕಾರಣ ಗೊತ್ತಿಲ್ಲದ ಆಚರಣೆಯಾಗಿ ಎಲ್ಲೇ ಪ್ರಯಾಣ ಮಾಡುವುದಾದರೂ ವಾಹನಗಳಲ್ಲಿ ನೇತು ಹಾಕುವುದು ರೂಢಿಯಾಯಿತು. 

Vastu Tips : ಈ ರೀತಿಯ ಪೀಠೋಪಕರಣಗಳನ್ನು ಮನೆಯಲ್ಲಿಟ್ಟರೆ ಸಮಸ್ಯೆ ಖಚಿತ!

ಇನ್ನು ಮನೆ ಮುಂದೆ ನೇತು ಹಾಕುವ ವಿಷಯಕ್ಕೆ ಬಂದರೆ, ನಿಂಬೆ ಹಾಗೂ ಮೆಣಸು ಪ್ರಾಕೃತಿಕವಾಗಿಯೇ ಕೀಟನಾಶಕಗಳು. ಅವುಗಳನ್ನು ದಾರದ ಮೂಲಕ ಹೊಲಿದು ಮನೆ ಎದುರು ನೇತು ಹಾಕಿದಾಗ ಮನೆಗೆ ಸೊಳ್ಳೆ, ಕ್ರಿಮಿ ಕೀಟಗಳು ಒಳಬರುವುದಿಲ್ಲ ಎಂಬುದು ಕಾರಣ. 

click me!