ಊರ್ವಶಿ ಕರೆದರೂ ಅರ್ಜುನ ಆಕೆಯ ಜೊತೆಗೆ ಸರಸವಾಡಲಿಲ್ಲ ಯಾಕೆ?

By Suvarna NewsFirst Published Jul 13, 2021, 4:45 PM IST
Highlights

ಸ್ವರ್ಗದ ಪ್ರವಾಸದಲ್ಲಿದ್ದ ಅರ್ಜುನ, ಅಲ್ಲಿನ ಅಪ್ಸರೆಯರಲ್ಲಿ ಒಬ್ಬಳಾದ ಊರ್ವಶಿ ಸರಸಕ್ಕೆ ಕರೆದರೂ ಹೋಗದೆ, ಆಕೆಯಿಂದ ಶಾಪ ಪಡೆಯುತ್ತಾನೆ. ಅದು ಯಾಕೆ ನಿಮಗೆ ಗೊತ್ತೆ?

ಸ್ವರ್ಗದ ಪ್ರವಾಸದಲ್ಲಿದ್ದ ಅರ್ಜುನ, ಅಲ್ಲಿನ ಅಪ್ಸರೆಯರಲ್ಲಿ ಒಬ್ಬಳಾದ ಊರ್ವಶಿ ಸರಸಕ್ಕೆ ಕರೆದರೂ ಹೋಗದೆ, ಆಕೆಯಿಂದ ಶಾಪ ಪಡೆಯುತ್ತಾನೆ. ಅದು ಯಾಕೆ ನಿಮಗೆ ಗೊತ್ತೆ?

ಪಾಂಡವರು ಹನ್ನೆರಡು ವರ್ಷಗಳ ವನವಾಸಕ್ಕೆಂದು ಬಂದವರು ಅರಣ್ಯದಲ್ಲಿ ಇದ್ದಾರೆ. ಅವರು ನಾರದರ ಉಪದೇಶದಂತೆ, ದ್ರೌಪದಿಯ ಜೊತೆ ಇರಲು ಒಂದು ಒಪ್ಪಂದ ಮಾಡಿಕೊಂಡಿದ್ದಾರೆ. ಅದೇನೆಂದರೆ, ಪಾಂಡವರು ಐವರಲ್ಲಿ ದ್ರೌಪದಿಯ ಜೊತೆಗೆ ಒಬ್ಬಾತ ಒಂದು ವರ್ಷ ಇರಬೇಕು. ಆ ಸಮಯದಲ್ಲಿ ಇನ್ನೊಬ್ಬ ಬಂದು ಅವರ ಏಕಾಂತವನ್ನು ಕೆಡಿಸಿದರೆ, ಹಾಗೆ ಕೆಡಿಸಿದಾತ ಒಂದು ವರ್ಷ ತೀರ್ಥಯಾತ್ರೆಗೆ ಹೋಗಬೇಕು.

ಒಂದು ಸಂದರ್ಭದಲ್ಲಿ ಅಗ್ರಹಾರಕ್ಕೆ ಕಳ್ಳರು ನುಗ್ಗಿದಾಗ, ಅವರನ್ನು ಓಡಿಸಲು ಅಣ್ಣನ ಅಂತಃಪುರದಲ್ಲಿದ್ದ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಬರಲೆಂದು ಅರ್ಜುನ ಅಲ್ಲಿಗೆ ಹೋಗುತ್ತಾನೆ. ಅಲ್ಲಿ ಧರ್ಮರಾಯ- ದ್ರೌಪದಿ ಏಕಾಂತದಲ್ಲಿರುತ್ತಾರೆ. ಅವರ ಏಕಾಂತವನ್ನು ಉಲ್ಲಂಘಿಸಿದ್ದಕ್ಕಾಗಿ ಅರ್ಜುನ ಒಂದು ವರ್ಷ ತೀರ್ಥಾಟನೆ ಮಾಡಬೇಕಾಗಿ ಬರುತ್ತದೆ. ಹಾಗೆ ಹೋದವನು, ಶಿವನನ್ನು ಉದ್ದೇಶಿಸಿ ಘೋರ ತಪಸ್ಸು ಮಾಡಿ, ಅವನಿಂದ ಮಂತ್ರಾಸ್ತ್ರಗಳನ್ನು ಪಡೆಯುತ್ತಾನೆ. ನಂತರ ಅರ್ಜುನನ ಬಳಿಗೆ ಅವನ ತಂದೆ ದೇವೇಂದ್ರ ಇಳಿದು ಬಂದು, ಆತನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾನೆ.

ಸ್ವರ್ಗದಲ್ಲಿ ಅರ್ಜುನನನ್ನು ಭರ್ಜರಿಯಾಗಿ ಸ್ವಾಗತಿಸಲಾಗುತ್ತದೆ. ದೇವತೆಗಳು ಅವನನ್ನು ಹಾಡಿ ಹೊಗಳುತ್ತಾರೆ. ಇಂದ್ರನ ನೇತೃತ್ವದಲ್ಲಿ ವಿಶೇಷ ಸ್ವರ್ಗಸಭೆ ಏರ್ಪಡುತ್ತದೆ. ಅಲ್ಲಿ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆ, ಘೃತಾಚಿ ಮುಂತಾದ ಅಪ್ಸರೆಯರು ನೃತ್ಯ ಮಾಡುತ್ತಾರೆ. ಅದನ್ನು ನೋಡಿ ಅರ್ಜುನನ ಚಿತ್ತ ಸೂರೆ ಹೋಗುತ್ತದೆ. ಊರ್ವಶಿಯನ್ನು ಅರ್ಜುನ ನೆಟ್ಟನೋಟದಿಂದ ನೋಡುತ್ತಿರುವುದನ್ನು ಕಂಡ ಇಂದ್ರ, ಆಕೆಯ ಮೇಲೆ ಅರ್ಜುನನಿಗೆ ಮನಸ್ಸಾಗಿದೆ ಎಂದು ಭಾವಿಸಿ, ಆಕೆಯನ್ನು ರಾತ್ರಿ ಅರ್ಜುನ ಉಳಿದುಕೊಂಡಿದ್ದ ಮನೆಗೆ ಕಳಿಸುತ್ತಾನೆ. ಊರ್ವಶಿ ಚೆನ್ನಾಗಿ ಅಲಂಕರಿಸಿಕೊಂಡು, ಮಾದಕವಾದ ಸೌಂದರ್ಯವನ್ನು ಸೂಸುತ್ತಾ ಅರ್ಜುನನ ಬಳಿಗೆ ಬರುತ್ತಾಳೆ. ಅರ್ಜುನ ಆಕೆಯನ್ನು ಕಂಡು ಬೆಕ್ಕಸ ಬೆರಗಾಗುತ್ತಾನೆ.

ಆಗ ಊರ್ವಶಿ ತಾನು ಬಂದ ಕಾರಣವನ್ನು ಹೇಳುತ್ತಾಳೆ. ಅರ್ಜುನನಲ್ಲಿ ಪ್ರಣಯ ಭಿಕ್ಷೆಯನ್ನು ಯಾಚಿಸುತ್ತಾಳೆ. ಆದರೆ ಅರ್ಜುನ ಅದಕ್ಕೆ ಒಪ್ಪುವುದಿಲ್ಲ. ಅವರ ಮಾತುಕತೆ ಹೀಗೆ ಸಾಗುತ್ತದೆ.

ಈ ಕನಸುಗಳು ಬ್ರಹ್ಮ ಮುಹೂರ್ತದಲ್ಲಿ ಬಂದರೆ ಸೂಪರ್ ಲಕ್ ...

ಅರ್ಜುನ: ನೀವು ನಮ್ಮ ತಂದೆಯ ಸುಖಕ್ಕಾಗಿ ಇರುವವರು. ನಾನು ಅವರ ಮಗ. ಆದ್ದರಿಂದ ನೀವು ನನ್ನ ತಾಯಿಗೆ ಸಮಾನ. ಆದ್ದರಿಂದ ನಾನು ನಿಮ್ಮನ್ನು ಕೂಡಲಾರೆ.

ಊರ್ವಶಿ: ನಿನ್ನ ತಂದೆಯೇ ನನ್ನನ್ನು ನಿನ್ನಲ್ಲಿಗೆ ಕಳಿಸಿದ್ದಾನೆ. ಭೂಮಿಯ ಅಪ್ಪ- ಮಗ ಸಂಬಂಧ ಇಲ್ಲಿಗೆ ಅನ್ವಯಿಸುವುದಿಲ್ಲ. 
ಅರ್ಜುನ: ಆದರೆ ಆ ಸಂಬಂಧದ ಬಂಧ ನನಗಿದೆ ತಾಯೀ. ನೀನು ನನ್ನ ವಂಶದ ಇನ್ನೊಬ್ಬ ಮಹಾಪುರುಷ ಪುರೂರವನಿಗೂ ಬಹುಕಾಲ ಹೆಂಡತಿಯಾಗಿ ಇದ್ದವಳು. ಆದ್ದರಿಂದ ನೀನು ನನಗೆ ಪಿತಾಮಹಳಾಗಬೇಕು. ಹಾಗಾಗಿ ನಾನು ನಿನಗೆ ಒಲಿಯೆನು.

ಮಹಾಭಾರತ ಯುದ್ಧದಲ್ಲಿ ಹೋರಾಡಿದ ರಾಕ್ಷಸರ ಬಗ್ಗೆ ನಿಮಗೆ ಗೊತ್ತೆ? ...

ಊರ್ವಶಿ: ಹಾಗೆ ನೋಡಿದರೆ ನಿನ್ನ ಕುಲದಲ್ಲಿ ಈ ಹಿಂದೆ ಹುಟ್ಟಿ ಸ್ವರ್ಗವನ್ನು ಸೇರಿದ ಎಲ್ಲರೂ ನನ್ನನ್ನು ಭೋಗಿಸಿದ್ದಾರೆ. ಪುರೂರವನ ತಂದೆಯೂ, ಮಗನೂ ನನ್ನೊಡನೆ ಸೇರಿದ್ದಾರೆ. ನೀನೂ ಸೇರು ಬಾ. ಇಲ್ಲಿಗೆ ಭೂಮಿಯ ನಿಯಮಗಳ್ಯಾವುದೂ ಅನ್ವಯಿಸುವುದಿಲ್ಲ. 
ಆದರೆ ಅರ್ಜುನ ಈ ವಾದವನ್ನು ಒಪ್ಪದೆ, ತನ್ನ ಭೂಮಿಯ ನಿಯಮಗಳಿಗೇ ಅಂಟಿಕೊಳ್ಳುತ್ತಾನೆ. ಊರ್ವಶಿ ಇದರಿಂದ ಸಿಟ್ಟಿಗೆದ್ದು, 'ನೀನು ನಪುಂಸಕನಾಗು' ಎಂದು ಶಾಪ ಕೊಡುತ್ತಾಳೆ. ದೇವೇಂದ್ರ ಅಲ್ಲಿಗೆ ಬಂದು, ಈ ಶಾಪ ಒಂದು ವರ್ಷದ ಮಟ್ಟಿಗೆ ಮಾತ್ರ ನಿಜವಾಗಲಿ ಎಂದು ಸಮಾಧಾನ ಮಾಡುತ್ತಾನೆ. ಈ ಒಂದು ವರ್ಷ ನಪುಂಸಕತ್ವವನ್ನು ಅರ್ಜುನ ಅಜ್ಞಾತವಾಸದ ಅವಧಿಯಲ್ಲಿ ಬಳಸಿಕೊಳ್ಳುತ್ತಾನೆ. ಹೀಗೆ ಅರ್ಜುನನಿಗೆ ಶಾಪವೇ ವರವಾಗುತ್ತದೆ.

click me!