ಕೌರವನ ಪತ್ನಿ ಭಾನುಮತಿಗೂ ಕರ್ಣನಿಗೂ ಇದ್ದ ಸಂಬಂಧವೇನು?

By Suvarna NewsFirst Published Jul 17, 2021, 1:27 PM IST
Highlights

ಭಾನುಮತಿಯನ್ನು ಗೆದ್ದು ಕೌರವನಿಗೆ ಮದುವೆ ಮಾಡಿಸಿದವನು ಕರ್ಣ. ಆಕೆಯ ಜೊತೆಗೆ ಅಂತಃಪುರದಲ್ಲಿ ಪಗಡೆ ಆಡುತ್ತಿದ್ದವನು ಕರ್ಣ. ಇಂಥ ಕರ್ಣನಿಗೂ ಭಾನುಮತಿಗೂ ಇದ್ದ ಆತ್ಮೀಯತೆ ಎಂಥದ್ದು?

ಮಹಾಭಾರತದಲ್ಲಿ ಮುಖ್ಯ ಪಾತ್ರವೇ ಆಗಿದ್ದರೂ, ಎಲ್ಲಿಯೂ ಹೆಚ್ಚಾಗಿ ಮುನ್ನೆಲೆಗೆ ಬಾರದ ಪಾತ್ರ ಎಂದರೆ ಭಾನುಮತಿ. ಈಕೆ, ಕುರುಕ್ಷೇತ್ರ ಯುದ್ಧಕ್ಕೆ ಕಾರಣನಾದ ಕೌರವನ ಮಡದಿ. ಕೌರವ ರಾಜನಾಗಿದ್ದ ಎಂದರೆ, ಈಕೆ ಹಸ್ತಿನಾಪುರದ ರಾಣಿಯಾಗಿದ್ದಳು ಎಂದೇ ಹೇಳಬಹುದು. ಆದರೆ ಗಾಂಧಾರಿಯಂತೆಯೇ ಈಕೆ ಕೂಡ ಒಂದು ಮೂಲೆಯಲ್ಲಿ ಅಂತಃಪುರದಲ್ಲಿ ಇದ್ದು, ನಲುಗಿದ ಹೆಣ್ಣು ಮಗಳು. ಗಂಡ ಕೌರವನ ಮೊಂಡುತನವನ್ನು ಸಹಿಸುತ್ತಾ, ಆತನಿಗೆ ಸದಾಕಾಲ ಬುದ್ಧಿ ಹೇಳುತ್ತಾ ಇದ್ದವಳು.

ಇಂಥ ಭಾನುಮತಿಗೆ ಕೌರವನ ಆಪ್ತ ಗೆಳೆಯ ಕರ್ಣನ ಜೊತೆಗೆ ಆತ್ಮೀಯ ಸಂಬಂಧ ಇತ್ತು ಎಂದು ಊಹಿಸುವುದಕ್ಕೆ ಕಾರಣವಿದೆ. ಮಹಾಭಾರತದಲ್ಲಿ ಇರುವ ಘಟನೆಗಳ ಮೂಲಕ ಈ ಸಂಬಂಧವನ್ನು ಈಗ ಅವಲೋಕಿಸೋಣ.

ಇವಳು ಕಳಿಂಗ ದೇಶದ ರಾಜ ಚಿತ್ರಾಂಗದನ ಮಗಳು. ಇವಳು ಅಪ್ರತಿಮ ಸುಂದರಿಯಾದ ಕನ್ಯೆ. ಇವಳ ನೀಳವಾದ ಕೇಶರಾಶಿ ಹಾಗೂ ಬಲಿಷ್ಟ ದೇಹ ಸೌಂದರ್ಯ ಯಾರನ್ನೂ ಮರುಳು ಮಾಡಿ ಬಿಡುತ್ತಿತ್ತು. ಇವಳ ತಂದೆ ಈಕೆಗೆ ಸ್ವಯಂವರ ಏರ್ಪಡಿಸಿದ. ಸ್ವಯಂವರ ಏರ್ಪಡಿಸಿದಾಗ ಆಗಿನ ಬಹುತೇಕ ರಾಜರು, ರಾಜಕುಮಾರರು ನೆರೆದಿದ್ದರು. ದುರ್ಯೋಧನ ಅವಳನ್ನು ವರಿಸುವ ಇಚ್ಚೆಯಿಂದ ಸ್ವಯಂವರದಲ್ಲಿ ಪಾಲ್ಗೊಂಡ.

ರಾಮನ ವಂಶಜರು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲೂ ಭಾಗವಹಿಸಿದ್ದರು!

ಅವನ ಜೊತೆಗೆ ಅವನ ಪ್ರಾಣಮಿತ್ರ ಕರ್ಣನೂ ಹೋಗಿದ್ದ. ಶಿಶುಪಾಲ, ಜರಾಸಂಧ, ರುಕ್ಮಿ ಮೊದಲಾದವರು ನೆರೆದಿದ್ದರು. ತನ್ನನ್ನು ಮದುವೆಯಾಗುವ ಇಚ್ಚೆಯನ್ನು ಇಟ್ಟು ಬಂದ ಎಲ್ಲಾ ವರರ ಬಗ್ಗೆ ಭಾನುಮತಿಗೆ ತಿಳಿದಿತ್ತು. ಭಾನುಮತಿ ವಿವಾಹದ ಮಾಲೆಯನ್ನು ಹಿಡಿದು ಒಬ್ಬೊಬ್ಬರನ್ನು ದಾಟಿ ಬರುವಾಗ ದುರ್ಯೋಧನನ ಮನಸ್ಸಿನಲ್ಲಿ ಇವಳು ಖಂಡಿತವಾಗಿಯೂ ತನ್ನನ್ನು ವರಿಸುತ್ತಾಳೆ ಎಂಬ ನಂಬಿಕೆ ಇತ್ತು. ಆದರೆ ದುರ್ಯೋಧನನನ್ನು ದಾಟಿ ಮುಂದೆ ಹೋದಾಗ ಅವನ ಅಭಿಮಾನ ಭಂಗವಾಯಿತು. ಅವನು ಭಾನುಮತಿಯನ್ನು ಬಲವಂತವಾಗಿ ಎಳೆದು ತನ್ನ ರಥದಲ್ಲಿ ಕುಳ್ಳಿರಿಸಿ ಹಸ್ತಿನಾಪುರಕ್ಕೆ ಕರೆದೊಯ್ಯಲು ಮುಂದಾದ. ಉಳಿದ ರಾಜರು ವಿರೋಧ ವ್ಯಕ್ತಪಡಿಸಿ ಯುದ್ಧಕ್ಕೆ ಮುಂದಾದರು. ಅಂದು ಆತನ ಮಿತ್ರ ಕರ್ಣ ಸಹಕರಿಸದೇ ಇದ್ದರೆ ಖಂಡಿತವಾಗಿಯೂ ದುರ್ಯೋಧನ ಗೆಲ್ಲಲು ಆಗುತ್ತಿರಲಿಲ್ಲ. ದುರ್ಯೋಧನನ ಪರವಾಗಿ ಅವನ ಪ್ರಾಣ ಮಿತ್ರ ಕರ್ಣ, ಪಂಥ ಸ್ವೀಕರಿಸಿ ಬಂದ ರಾಜರನ್ನೆಲ್ಲಾ ಪರಾಜಯಗೊಳಿಸುತ್ತಾನೆ. ಭಾನುಮತಿಯನ್ನು ಹಸ್ತಿನಾಪುರಕ್ಕೆ ಕರೆತಂದ ಕೌರವ, ಆಕೆಯನ್ನು ಮದುವೆಯಾಗುತ್ತಾನೆ. ಅಂದು ಕ್ಷತ್ರಿಯರಲ್ಲಿ ಕನ್ಯೆಯನ್ನು ಅಪಹರಿಸಿ ಮಾಡಿಸಿಕೊಳ್ಳುವ ರಾಕ್ಷಸ ವಿವಾಹ ಸರ್ವಸಮ್ಮತವಾಗಿತ್ತು.
 
ಭಾನುಮತಿ- ದುರ್ಯೋಧನರಿಗೆ ಒಬ್ಬ ಗಂಡು ಮಗು ಹುಟ್ಟುತ್ತಾನೆ. ಈತನಿಗೆ ಲಕ್ಷಣಕುಮಾರ ಎಂದು ಹೆಸರಿಡುತ್ತಾರೆ. ಈತ ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯವಿನ ಜೊತೆಗೆ ಹೋರಾಡಿ ಸಾಯುತ್ತಾನೆ. 

ಶಂಖದ ಮಹಿಮೆಯಿಂದ ನಿಮ್ಮ ಮನೆಯಾಗಬಹುದು ಲಕ್ಷ್ಮೀ ನಿವಾಸ!

ಇನ್ನೊಂದು ಕತೆ ನಮಗೆ ಪಂಪಭಾರತದಲ್ಲಿ ಸಿಗುತ್ತದೆ. ಇದನ್ನು ಕರ್ಣನೇ ಕೃಷ್ಣನಿಗೆ ಹೇಳುತ್ತಾನೆ. ಒಮ್ಮೆ ಭಾನುಮತಿಯು ಕರ್ಣನೊಡನೆ ಅಂತಃಪುರದಲ್ಲಿ ಪಗಡೆಯಾಡುತ್ತಾ ಇರುತ್ತಾಳೆ. ಕರ್ಣನು ಪಗಡೆಯಾಟದಲ್ಲಿ ಭಾನುಮತಿ ಮುತ್ತಿನ ಸರವನ್ನು  ಪಣಕ್ಕಿಡುವಂತೆ ಹೇಳುತ್ತಾನೆ. ಹಾಗೆಯೇ ಮಾಡುವ ಭಾನುಮತಿ ಅದನ್ನು ಸೋಲುತ್ತಾಳೆ. ಆದರೆ ಕೊಡಲು ನಿರಾಕರಿಸಿದಾಗ ಕರ್ಣನು ಅದನ್ನು ಅವಳ ಕತ್ತಿನಿಂದ ಕಸಿಯಲು ಹೋದಾಗ ಅದು ತುಂಡಾಗಿ ಮುತ್ತುಗಳು ನೆಲದಲ್ಲಿ ಚೆಲ್ಲಿ ಹೋಗುತ್ತವೆ. ಅದನ್ನು ಹೆಕ್ಕುತ್ತಿರುವಾಗ ದುರ್ಯೋಧನನು ಅಂತಃಪುರಕ್ಕೆ ಪ್ರವೇಶ ಮಾಡುತ್ತಾನೆ. ಅವನು ಕರ್ಣನಲ್ಲಿ ಕೇಳುತ್ತಾನೆ 'ನಾನು ಮುತ್ತನ್ನು ಹೆಕ್ಕಲು ಸಹಾಯ ಮಾಡಲೇ ಮಿತ್ರಾ’ ಎಂದು. ಇದು ದುರ್ಯೋಧನನಿಗೆ ತನ್ನ ಹೆಂಡತಿ ಭಾನುಮತಿ ಹಾಗೂ ಮಿತ್ರ ಕರ್ಣನ ಮೇಲಿದ್ದ ನಂಬಿಕೆ. ಇದೇ ವಿಷಯವನ್ನು ಮುಂದೆ ಕರ್ಣ ಶ್ರೀಕೃಷ್ಣನಿಗೆ ಹೇಳಿ, ತಾನು ಕುಂತೀ ಪುತ್ರನಾದರೂ ದುರ್ಯೋಧನನನ್ನು ಯಾಕೆ ಬಿಟ್ಟು ಬರುವುದಿಲ್ಲ ಎಂದು ಮನವರಿಕೆ ಮಾಡಿ ಕೊಡುತ್ತಾನೆ. ತನ್ನ ಮಿತ್ರ ದುರ್ಯೋಧನ ಅವನ ಹೆಂಡತಿಯ ಮುತ್ತಿನ ಸರಕ್ಕೆ ಕೈ ಹಾಕಿದರೂ, ನನ್ನ ಮೇಲೆ ಅವನಿಗೆ ಅಪನಂಬಿಕೆ ಮೂಡಿ ಬರುವುದಿಲ್ಲ. ಅವನ ಪತ್ನಿ ಭಾನುಮತಿಯನ್ನೂ ಅಪನಂಬಿಕೆಯಿಂದ ನೋಡುವುದಿಲ್ಲ. ಅಂತಹ ಮಿತ್ರನನ್ನು ಹೇಗೆ ಬಿಟ್ಟು ಬರಲಿ ಕೃಷ್ಣಾ? ಎನ್ನುತ್ತಾನೆ.
 


ಇಂಥ ಕರ್ಣನಲ್ಲಿ ಭಾನುಮತಿಗೆ ಆತ್ಮೀಯತೆ, ಪ್ರೀತಿ ಇದ್ದರೆ ಅದು ಸಹಜವೇ. ಆದರೆ ಅದು ಎಂದೂ ಔಚಿತ್ಯದ ಗಡಿಯನ್ನು ದಾಟುವುದಿಲ್ಲ ಎಂಬುದು ಮುಖ್ಯ. ಮುಂದೆ ಶಾಂತಿ ಪರ್ವದಲ್ಲಿ ಭಾನುಮತಿ ಕೂಡ ಕುಂತಿ, ಗಾಂಧಾರಿಯರ ಜೊತೆಗೆ ಕಾಡಿಗೆ ಹೋಗಿ ವೈರಾಗ್ಯದಿಂದ ಬದುಕುತ್ತಾಳೆ.  

click me!