ಮಹಾಭಾರತದಲ್ಲಿ ಶ್ರೀಕೃಷ್ಣನ ಎಂಬತ್ತು ಮಕ್ಕಳೆಲ್ಲಾ ಏನಾದರು?

By Suvarna NewsFirst Published Aug 17, 2021, 1:56 PM IST
Highlights

ಮಹಾಭಾರತದಲ್ಲಿ ಪ್ರಖರವಾಗಿ ಕಾಣಿಸಿಕೊಳ್ಳುವವನು ಶ್ರೀಕೃಷ್ಣ. ದೇವನಾಗಿ, ಪಾಂಡವರ ಭಾವನಾಗಿ, ಅರ್ಜುನನ ಸಾರಥಿಯಾಗಿ ಆತ ಕುರುಕ್ಷೇತ್ರ ಯುದ್ಧವನ್ನು ಮುನ್ನಡೆಸುತ್ತಾನೆ. ಆದರೆ ಅವನ ಮಕ್ಕಳು ಮುಂದೆ ಏನಾದರು?

ಮಹಾಭಾರತದಲ್ಲಿ ಪ್ರಖರವಾಗಿ ಕಾಣಿಸಿಕೊಳ್ಳುವವನು ಶ್ರೀಕೃಷ್ಣ. ದೇವನಾಗಿ, ಪಾಂಡವರ ಭಾವನಾಗಿ, ಅರ್ಜುನನ ಸಾರಥಿಯಾಗಿ ಆತ ಕುರುಕ್ಷೇತ್ರ ಯುದ್ಧವನ್ನು ಮುನ್ನಡೆಸುತ್ತಾನೆ. ಆದರೆ ಅವನ ಮಕ್ಕಳು ಮುಂದೆ ಏನಾದರು?

ಶ್ರೀಕೃಷ್ಣನಿಗೆ ರುಕ್ಮಿಣಿ, ಸತ್ಯಭಾಮೆ, ಜಾಂಬವತಿ ಸೇರಿದ ಹಾಗೆ ಎಂಟು ಜನ ಪತ್ನಿಯರು. ಅವರಿಂದ ಎಂಬತ್ತು ಮಂದಿ ಮಕ್ಕಳಾದರು. ಈ ಎಂಬತ್ತು ಮಕ್ಕಳ ಪೈಕಿ ಅತ್ಯಂತ ಬಲಿಷ್ಠ ಹಾಗೂ ಹಿರಿಯ ಮಗ, ರುಕ್ಮಿಣಿಯಲ್ಲಿ ಜನಿಸಿದ ಪ್ರದ್ಯುಮ್ನ. ಈ ಪ್ರದ್ಯುಮ್ನ ಬೇರೆ ಯಾರೂ ಅಲ್ಲ; ಈತ ಮನ್ಮಥನ ಪುನರ್ಜನ್ಮ. ತಪಸ್ಸಿಗೆ ಕೂತ ಶಿವನ ತಪೋಭಂಗಕ್ಕೆ ಯತ್ನಿಸಿ ಮಹಾದೇವನ ಮೂರನೆಯ ಕಣ್ಣಿನ ಜ್ವಾಲೆಗೆ ಬಲಿಯಾದ ಕಾಮದೇವ. ಆತ ಭಸ್ಮವಾದ ನಂತರ ಅವನ ಪತ್ನಿ ರತಿದೇವಿ ಪರಶಿವನ ಪಾದಗಳನ್ನು ಕಣ್ಣಿರಲಿ ತೊಳೆದು ಬಿಡುತ್ತಾಳೆ. ರತೀದೇವಿಗೆ ವರವನ್ನು ಕರುಣಿಸುವ ಶಿವ, ‘‘ನಿನ್ನ ಗಂಡನಿಗೆ ದೇಹವನ್ನು ಮತ್ತೆ ಕೊಡೋದಕ್ಕೆ ಸಾಧ್ಯವಿಲ್ಲ. ಆದ್ರೆ ಮುಂದಿನ ಜನ್ಮದಲ್ಲಿ ಅವನು ಶ್ರೀಕೃಷ್ಣನ ಮಗನಾಗಿ ಹುಟ್ಟುತ್ತಾನೆ. ನೀನು ರುಕ್ಮಿಯ ಮಗಳಾಗಿ ಜನಿಸು. ನೀವಿಬ್ಬರು ಅಲ್ಲಿ ಮತ್ತೆ ಒಂದಾಗಿ,’’ ಎಂದು ವರ ಕೊಟ್ಟ. ಹೀಗೆ ಕಾಮದೇವ ಶ್ರೀಕೃಷ್ಣ ಹಾಗೂ ರುಕ್ಮಿಣಿಯ ಮಗನಾಗಿ ಜನಿಸುತ್ತಾನೆ.

ಈ ಪ್ರದ್ಯುಮ್ನ ಮಗುವಾಗಿದ್ದಾಗ ಶಂಬರ ಎಂಬ ರಕ್ಕಸ ಈ ಮಗುವನ್ನು ಅಪಹರಿಸುತ್ತಾನೆ. ರಾಕ್ಷ ಸನ ಮನೆಯಲ್ಲಿ ಬೆಳೆಯುವ ಮಗುವಿಗೆ ಮುಂದೆ ನಾರದರಿಂದ ತನ್ನ ಜನ್ಮವೃತ್ತಾಂತ ಗೊತ್ತಾಗುತ್ತದೆ. ಅಷ್ಟೊತ್ತಿಗೆ ಬೆಳೆದು ನಿಂತಿದ್ದ ಪ್ರದ್ಯುಮ್ನ ಆ ರಕ್ಕಸನನ್ನು ಕೊಂದು ಅಲ್ಲಿಂದ ಶ್ರೀಕೃಷ್ಣನನ್ನು ಸೇರಿಕೊಳ್ಳುತ್ತಾನೆ. ಈತ ಮಹಾ ಬಲಶಾಲಿ ಹಾಗೂ ಪರಾಕ್ರಮಿಯಾಗಿದ್ದ. ಬಲಿಷ್ಠ ದೇಹ ಹೊಂದಿದ್ದ. ಅಬೇಧ್ಯ ಯುದ್ಧ ಕಲೆಗಳನ್ನು, ವ್ಯೂಹರಚನೆ ಹಾಗೂ ಬೇಧಿಸುವ ವಿದ್ಯೆ ಬಲ್ಲವನಾಗಿದ್ದ. ಮುಂದೆ ಅಭಿಮನ್ಯುವಿಗೆ ಹಾಗೂ ಉಪ ಪಾಂಡವರಿಗೆ ಕೂಡ ಯುದ್ಧ ವಿದ್ಯೆಗಳನ್ನು ಕಲಿಸಿದ್ದು ಇದೇ ಪ್ರದ್ಯುಮ್ನ. ಆದರೆ ಈತ ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸುವುದಿಲ್ಲ. ಅದಕ್ಕೆ ಕಾರಣವಿದೆ.
 


ಕುರುಕ್ಷೇತ್ರ ಯುದ್ಧವಾಗುವಾಗ ಪ್ರದ್ಯುಮ್ನ ತನ್ನ ದೊಡ್ಡಪ್ಪ ಬಲರಾಮನ ಜೊತೆಗೂಡಿ ತೀರ್ಥಯಾತ್ರೆಗೆ ಹೋಗಿದ್ದ. ಇದು ಕೂಡ ಶ್ರೀಕೃಷ್ಣನ ಲೀಲೆ ಆಗಿತ್ತು. ಬಲರಾಮ ಯುದ್ಧದಲ್ಲಿ ಭಾಗವಹಿಸಿದರೆ ಖಂಡಿತ ಅವನು ತನ್ನ ಶಿಷ್ಯ ದುರ್ಯೋಧನನಿಗಾಗಿ ಕಾದಾಡಲಿದ್ದಾನೆ ಎಂಬುದು ಕೃಷ್ಣನಿಗೆ ಗೊತ್ತಿತ್ತು. ವಿನಾಕಾರಣ ಕೃಷ್ಣ ಬಲರಾಮರು ಯುದ್ಧ ಮಾಡುವ ಹಾಗೆ ಆಗುವುದು ಅವನಿಗೆ ಬೇಕಿರಲಿಲ್ಲ. ಹೀಗಾಗಿ ಶ್ರೀಕೃಷ್ಣ, ಬಲರಾಮ ಪ್ರದ್ಯುಮ್ನರು ತೀರ್ಥಯಾತ್ರೆಗೆ ಹೋಗುವಂತೆ ಮಾಡುತ್ತಾನೆ. ಮುಂದೆ ಯುದ್ಧದ ನಂತರ ಪಾಂಡವರು ಮಾಡುವ ಅಶ್ವಮೇಧ ಯಾಗದಲ್ಲಿ ಪ್ರದ್ಯುಮ್ನ ಭಾಗಿಯಾಗಿದ್ದ. ಅವನು ರುಕ್ಮಿಯ ಮಗಳು ರುಕ್ಮವತಿಯನ್ನು ವಿವಾಹವಾಗುತ್ತಾನೆ. ಈ ರುಕ್ಮವತಿ ಹಿಂದಿನ ಜನ್ಮದಲ್ಲಿ ರತಿದೇವಿಯಾಗಿದ್ದಳು. ಈ ದಂಪತಿಯ ಮಗ ಅನಿರುದ್ಧ. ಅನಿರುದ್ಧ ಅಂದ್ರೆ ಯಾರಿಂದಲೂ ನಿಯಂತ್ರಿಸುವುದಕ್ಕೆ ಸಾಧ್ಯವಾಗದವನು ಎಂದರ್ಥ.

ಶನಿವಾರ ಶನಿದೇವರ ಕೃಪೆ ಪಡೆಯಲು ಏನು ಮಾಡಬೇಕು? ಏನು ಮಾಡಬಾರದು?

ಮುಂದೆ ದ್ವಾರಕೆಯಲ್ಲಿ ಮದೋನ್ಮತ್ತರಾಗಿ ಯಾದವರು ಹೊಡೆದಾಡಿಕೊಂಡು ಸಾಯುತ್ತಾರೆ. ಅದಕ್ಕೆ ಒಂದು ಕಾರಣ ಶ್ರೀಕೃಷ್ಣನ ಇನ್ನೊಬ್ಬ ಮಗ, ಜಾಂಬವತಿಯ ಪುತ್ರ ಸಾಂಬ. ಘನ ಮಹಿಮ ತಪಸ್ವಿಗಳೊಬ್ಬರು ಬಂದಾಗ, ಯಾದವರು ಸೇರಿಕೊಂಡು ಈ ಸಾಂಬನಿಗೆ ಸೀರೆ ಉಡಿಸಿ, ಅದರೊಳಗೊಂದು ಒನಕೆ ತೂರಿಸಿ, ಈಕೆ ಗರ್ಭಿಣಿಯೆಂದೂ, ಯಾವ ಮಗುವನ್ನು ಹೆರುತ್ತಾಳೆ ಹೇಳಬೇಕೆಂದೂ ಋುಷಿಗಳನ್ನು ವ್ಯಂಗ್ಯವಾಡಿದರು. ಇವರ ಕುಹಕ ತಿಳಿದ ಅವರು, ಈಕೆ ಒನಕೆಯನ್ನು ಹೆರುತ್ತಾಳೆ ಎಂದು ಶಪಿಸಿದರು. ಇದರಿಂದ ಅಂಜಿದ ಯಾದವರು ಒನಕೆಯನ್ನು ಮುರಿದು ಚೂರು ಚೂರು ಮಾಡಿ ಸಮುದ್ರದಲ್ಲಿ ಚೆಲ್ಲಿಬಿಟ್ಟರು. ಈ ಒನಕೆಯ ಚೂರುಗಳೇ ಕಡಲ ತೀರದಲ್ಲಿ ಜೊಂಡು ಹುಲ್ಲುಗಳಾಗಿ ಹುಟ್ಟಿಕೊಂಡು, ಮುಂದೆ ಇವುಗಳನ್ನೇ ಪಾನಮತ್ತರಾದ ಯಾದವರು ಕಿತ್ತುಕೊಂಡು ಹೊಡೆದಾಡಿ ಸತ್ತರು. ಹೀಗೆ ಸತ್ತ ಮಕ್ಕಳಲ್ಲಿ ಶ್ರೀಕೃಷ್ಣ ಉಳಿದ ಮಕ್ಕಳೂ ಇದ್ದರು. ತನ್ನ ಕಣ್ಣ ಮುಂದೆಯೇ ಮಕ್ಕಳೆಲ್ಲಾ ಸೇರಿ ಯಾದವ ವಂಶ ನಾಶವಾದಾಗ ದುಃಖದಿಂದ ಶ್ರೀಕೃಷ್ಣ ಕಾಡಿಗೆ ಹೋಗಿ, ಅಲ್ಲಿ ಬೇಡನ ಬಾಣದಿಂದ ಪ್ರಾಣ ಬಿಡುತ್ತಾನೆ.

ಯಾವ ರಾಶಿಯವರು ಯಾವ ಗಿಡ ನೆಟ್ಟರೆ ಅದೃಷ್ಟ ಗೊತ್ತೇ?

 

click me!