ಜಾತಕದಲ್ಲಿ ಪಿತೃ ದೋಷವಿದ್ದರೆ ಅದರಿಂದ ಬದುಕಿನ ಮೇಲಾಗುವ ಪರಿಣಾಮಗಳು ಹಲವು. ಹಾಗಾದರೆ ಪಿತೃ ದೋಷ ಎಂದರೇನು, ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ನೋಡೋಣ.
ಪ್ರತೀ ತಿಂಗಳೂ ಅಮಾವಾಸ್ಯೆ ಬರುತ್ತದೆ. ಅದು ಪಿತೃಗಳಿಗಾಗಿ ಮೀಸಲಾದ ದಿನ. ಅದರಲ್ಲೂ ಶನಿವಾರ ಅಮಾವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎನ್ನುತ್ತೇವೆ. ಪರಲೋಕದಲ್ಲಿರುವ ಪೂರ್ವಜರು, ಪಿತೃಗಳು ಕುಟುಂಬದವರ ಮೇಲೆ ಸಿಟ್ಟಾದಾಗ ಅವರ ಅಪಕೃಪೆಯಿಂದ ಹಲವಾರು ಏಳು ಬೀಳುಗಳನ್ನು ಕಾಣಬೇಕಾಗುತ್ತದೆ. ಹಣಕಾಸಿನ ಕೊರತೆ, ಕೈ ಹಾಕಿದಲ್ಲೆಲ್ಲ ನಷ್ಟ, ಸೋಲು, ಅಭಿವೃದ್ಧಿ ಇಲ್ಲದಿರುವುದು, ಮಕ್ಕಳಾಗದಿರುವುದು- ಹೀಗೆ ಸಮಸ್ಯೆಗಳು ಸಾಲುಸಾಲಾಗಿ ಕಾಡುತ್ತವೆ. ಒಟ್ಟಾರೆ ಜೀವನವೇ ದುಸ್ತರವೆನಿಸುವಂತಾಗುತ್ತದೆ. ಹೀಗೆ ನಿಮ್ಮ ಜೀವನದಲ್ಲೂ ಆಗುತ್ತಿದ್ದರೆ ಅದಕ್ಕೆ ಪಿತೃ ದೋಷ ಕಾರಣವಿರಬಹುದು. ಹಾಗಿದ್ದಾಗ ಅಮವಾಸ್ಯೆಯ ದಿನ ಪಿತೃಗಳ ಆಶೀರ್ವಾದ(blessings) ಪಡೆಯಲು ಕೆಲ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ.
ಪಿತೃ ದೋಷಕ್ಕೆ ಕಾರಣಗಳೇನು?
ಪಿತೃಗಳು ನಮ್ಮ ಮೇಲೆ ಮುನಿಸಿಕೊಳ್ಳಲು ಕಾರಣಗಳೇನು?
ಅಂತ್ಯಕ್ರಿಯೆ, ಶ್ರಾದ್ಧ, ವಾರ್ಷಿಕ ತಿಥಿಗಳನ್ನು ಸರಿಯಾಗಿ ನಡೆಸದಿರುವುದು.
ಹಿರಿಯರಿಗೆ ಬೈಯ್ಯುವುದು, ಅವರ ಮಾತನ್ನು ಕೇಳದಿರುವುದು, ಅವರನ್ನು ನಿಂದಿಸುವುದು ಮಾಡಿದಾಗ ದೇವರು ನಮ್ಮ ರಾಶಿಯ ಗೃಹದಲ್ಲಿ ಪಿತೃ ದೋಷ ತಂದಿಡುತ್ತಾನೆ.
ಉತ್ತಮವಾದ, ಪವಿತ್ರವಾದ ಮರವನ್ನು ಕಡಿದಾಗ ಅದರ ದೋಷವು ನಮ್ಮನ್ನಷ್ಟೇ ಅಲ್ಲದೇ ಪಿತೃಗಳಿಗೂ ಅಂಟುವುದು. ಇದರಿಂದಲೂ ಪಿತೃಗಳ ಕೋಪ ಎದುರಿಸಬೇಕಾಗುವುದು.
ಧಾರ್ಮಿಕ ಕಾರ್ಯಗಳನ್ನು ಹಂಗಿಸುವುದು, ತೊಂದರೆ ಮಾಡುವುದರಿಂದಲೂ ಪಿತೃದೋಷ ಉಂಟಾಗುತ್ತದೆ.
ವಿವಾಹವಾಗಿ ಕೈ ಹಿಡಿದ ಸಂಗಾತಿಯ ಹೊರತಾಗಿ ಬೇರೊಬ್ಬರೊಂದಿಗೆ ಸಂಬಂಧ ಹೊಂದುವುದು, ಹಸು, ಭಿಕ್ಷುಕ ಇವರನ್ನು ನಿಂದಿಸುವುದು, ನೋವು ಮಾಡುವುದು ಮಾಡಿದಾಗಲೂ ಪಿತೃ ದೋಷ ಉಂಟಾಗುತ್ತದೆ.
ಅಶ್ವತ್ಥ ವೃಕ್ಷ(peepal tree)ವಿರುವ ದೇವಾಲಯಕ್ಕೆ ಹೋಗಿ ಮರಕ್ಕೆ ನೀರು ಹಾಗೂ ಹಾಲೆರೆಯಬೇಕು. ಸಂಜೆ ಹೊತ್ತಿನಲ್ಲಿ ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚಬೇಕು. ನಂತರ ಮರಕ್ಕೆ ಏಳು ಸುತ್ತು ಬರಬೇಕು. ಬಳಿಕ ಪಿತೃಗಳನ್ನು ನೆನಸಿಕೊಂಡು ಅವರಲ್ಲಿ ಕ್ಷಮೆ ಯಾಚಿಸಬೇಕು. ಪ್ರತಿ ಅಮಾವಾಸ್ಯೆ(no moon day)ಗೂ ಹೀಗೆ ಮಾಡುವುದರಿಂದ ಪಿತೃಗಳ ಆಶೀರ್ವಾದ ದೊರೆಯುವುದು.
ಪಿತೃಗಳನ್ನು ಸಂತುಷ್ಠಗೊಳಿಸಲು ಅಮಾವಾಸ್ಯೆಯಂದು ಅವರಿಗೆ ಪಿಂಡ ಪ್ರಧಾನ ಮಾಡಬಹುದು. ಈ ಸಂದರ್ಭದಲ್ಲಿ ಬ್ರಾಹ್ಮಣರಿಗೆ ಊಟ ಹಾಕಿ ಸಾಮರ್ಥ್ಯಾನುಸಾರ ದಾನ(donate) ನೀಡಬೇಕು. ನಾಯಿ, ಕಾಗೆ, ಹಸು, ಇರುವೆಗಳಿಗೆ ಆಹಾರ ಹಾಕಿ, ಒಂದಿಷ್ಟು ನೆಂಟರಿಷ್ಟರಿಗೂ ಊಟ ಹಾಕಬೇಕು.
ಪ್ರತಿ ಅಮಾವಾಸ್ಯೆಯಂದು ಹಸುವಿಗೆ 5 ವಿಧದ ಹಣ್ಣುಗಳನ್ನು ತಿನ್ನಿಸಬೇಕು. ಸಂಜೆ ಹೊತ್ತು ಅಕೇಶಿಯಾ ಮರ(acacia tree)ದ ಕೆಳಗೆ ಊಟವಿಡಬೇಕು.
ಶಿವನ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಹಾಲು ಹಾಗೂ ಗಂಗಾ ತೀರ್ಥದಿಂದ ಅಭಿಷೇಕ ಮಾಡಿಸಿ. ನಿಮ್ಮ ಕೈಯ್ಯಾರೆ ಒಂದು ಅಶ್ವತ್ಥ ಗಿಡ ನೆಡಿ. ಈ ಗಿಡಕ್ಕೆ ಹಸುವಿನ ಹಾಲು ಹಾಗೂ ನೀರನ್ನು ನೀಡಿ. ದೀಪ ಹಚ್ಚಿ. ಪ್ರತಿ ದಿನ ಈ ಗಿಡಕ್ಕೆ ನೀರು, ಗೊಬ್ಬರ ಉಣಿಸಿ. ಅದು ಬೆಳೆದಂತೆಲ್ಲ ಪಿತೃಗಳ ಮನಸ್ಸಿಗೆ ನೆಮ್ಮದಿಯಾಗುವುದು.