ಪತಿಯ ಆಯಸ್ಸು ಹೆಚ್ಚಿಸೋ ವಟ ಸಾವಿತ್ರಿ ವ್ರತ; ಆಚರಣೆ ಹೇಗೆ?

By Suvarna NewsFirst Published May 19, 2022, 9:51 AM IST
Highlights

ಈ ವ್ರತವನ್ನು ಪಾತಿವ್ರತ್ಯಕ್ಕೆ ಹೆಸರಾಗಿರುವ ಸತಿ ಸಾವಿತ್ರಿಯ ಪತಿವ್ರತಾ ಧರ್ಮ ಪಾಲನೆ ಮತ್ತು ಪತಿ ಸತ್ಯವಾನ್‌ನ ಪ್ರಾಣ ರಕ್ಷಣೆ ಮಾಡಿದ ದಿನವಾದ ಜ್ಯೇಷ್ಠ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ಸೌಭಾಗ್ಯ ಸ್ಥಿರವಾಗಿರಲು ಮಾಡುವ ಪೂಜೆಯೇ ವಟ ಸಾವಿತ್ರಿ ವ್ರತವಾಗಿದೆ. ಈ ವ್ರತದ ಬಗ್ಗೆ ತಿಳಿಯೋಣ...
 

ವಿವಾಹಿತ (Married)  ಮಹಿಳೆಯರಿಗೆ ವಿಶೇಷವಾಗಿರುವ ಹಬ್ಬಗಳಲ್ಲಿ ವಟ ಸಾವಿತ್ರಿ ವ್ರತವೂ (Vrath) ಒಂದಾಗಿದೆ. ಈ ವ್ರತವನ್ನು ಎಲ್ಲಾ ವಿವಾಹಿತ ಮಹಿಳೆಯರು ಪತಿಯ ದೀರ್ಘಾಯುಷ್ಯಕ್ಕಾಗಿ (Long life) ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ವ್ರತ ಮತ್ತು ಉಪವಾಸದ ಆಚರಣೆಯು ಶುಭಫಲವನ್ನು ತಂದುಕೊಡುತ್ತದೆ. ಪ್ರತಿ ಹಬ್ಬಗಳು ಮತ್ತು ವ್ರತಗಳಿಗೆ ಅದರದ್ದೇ ಆದ ಮಹತ್ವವಿರುತ್ತದೆ. ಹಾಗೆಯೇ ವಟ ಸಾವಿತ್ರಿ ವ್ರತಕ್ಕೂ ಪುರಾಣದ ನಂಟಿದೆ. 
ವಟ ಸಾವಿತ್ರಿ ವ್ರತದ ಸಮಯದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳಿದ್ದು, ಇದನ್ನು ಮಹಿಳೆಯರು (Women) ಹೇಗೆ ಆಚರಿಸುತ್ತಾರೆ ಎಂಬ ಬಗ್ಗೆ ತಿಳಿಯುವುದು ಮುಖ್ಯವಾಗುತ್ತದೆ. ಇದು ವಿವಾಹಿತ ಹಿಂದೂ ಮಹಿಳೆಯರ ಪ್ರಮುಖ ಆಚರಣೆಯಲ್ಲೊಂದು ವ್ರತವಾಗಿದೆ. ಹಿಂದೂ ಸಂಪ್ರದಾಯದಂತೆ ಪ್ರತಿ ವರ್ಷ 'ಜ್ಯೇಷ್ಠ' ಮಾಸದಲ್ಲಿನ 'ಹುಣ್ಣಿಮೆ' ಇಲ್ಲವೇ 'ಅಮಾವಾಸ್ಯೆ' ದಿನದಂದು ಆಚರಿಸಲ್ಪಡುತ್ತದೆ. ಇದರಲ್ಲಿ ಉಪವಾಸದ (Fasting) ಆಚರಣೆ ಸಹ ಇದ್ದು, 'ತ್ರಯೋದಶಿ' (13 ನೇ ದಿನ) ದಿನದಂದು ಪ್ರಾರಂಭವಾಗುತ್ತದೆ. ಬಳಿಕ ಪೌರ್ಣಿಮೆ ಇಲ್ಲವೇ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ.

ಈ ವರ್ಷ ವಟ ಸಾವಿತ್ರಿ ವ್ರತವು 2022 ಮೇ 30ರ ಸೋಮವಾರದಂದು ಬಂದಿದೆ. 'ಜ್ಯೇಷ್ಠ ಅಮಾವಾಸ್ಯೆ'ಯಂದು ಈ ವ್ರತವನ್ನು ಆಚರಿಸಲಾಗುತ್ತದೆ. ಜೊತೆಗೆ ಇದನ್ನು 'ಶನಿ ಜಯಂತಿ' ಎಂದೂ ಆಚರಿಸಲಾಗುತ್ತದೆ. ಅಲ್ಲದೆ, ಇದನ್ನು 'ವಟ ಪೂರ್ಣಿಮಾ ವ್ರತ' ಎಂದೂ ಕರೆಯಲ್ಪಡುತ್ತದೆ. ಇದನ್ನು ಜ್ಯೇಷ್ಠ ಮಾಸದ  ಪೂರ್ಣಿಮೆಯಂದು ಕರ್ನಾಟಕದ (Karnataka) ಹಲವು ಕಡೆ ಆಚರಿಸಲಾಗುತ್ತದೆ. ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಮಹಾರಾಷ್ಟ್ರ, ಉತ್ತರ ಪ್ರದೇಶಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ. ಈ ವ್ರತವನ್ನು ವಿವಾಹಿತ ಮಹಿಳೆಯರು ಪತಿಯ ಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಕೈಗೊಳ್ಳುತ್ತಾರೆ. 

ಇದನ್ನು ಓದಿ : ಜಾಬ್ ಪ್ರಾಬ್ಲಂ ಆಗ್ತಿದ್ರೆ ಅದಕ್ಕೆ ಈ ಗ್ರಹಗಳೇ ಕಾರಣ..

ಧಾರ್ಮಿಕ ವಿಧಿವಿಧಾನ ಹೀಗಿದೆ ನೋಡಿ (Procedure)
ಈ ಬಾರಿ ಮೇ 29ರ ಮಧ್ಯಾಹ್ನ 2 ಗಂಟೆ 54 ನಿಮಿಷಕ್ಕೆ ಅಮಾವಾಸ್ಯೆ ತಿಥಿ ಆರಂಭವಾಗಿ ಮರುದಿನ ಅಂದರೆ ಮೇ 30ರ ಸಂಜೆ 4 ಗಂಟೆ 59 ನಿಮಿಷಕ್ಕೆ ಅಂತ್ಯವಾಗಲಿದೆ. ಹಾಗಾಗಿ ಈ ವ್ರತವನ್ನು ಮೇ 30ರ ಬೆಳಗ್ಗೆ ಆಚರಿಸಲಾಗುತ್ತದೆ. ವಟ ಅಮಾವಾಸ್ಯೆ ಅಥವಾ ಪೌರ್ಣಿಮೆ ದಿನದಂದು ವಿವಾಹಿತ ಮಹಿಳೆಯರು ಪ್ರಾತಃಕಾಲದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿದ ನಂತರ ವ್ರತದ ಸಂಕಲ್ಪವನ್ನು ಮಾಡಬೇಕು. ಅಲ್ಲದೇ ಅಂದು ಆಲದ ಮರವನ್ನು (Banyan tree) ಪೂಜಿಸಲಾಗುತ್ತದೆ. ಆಲದ ಮರದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿರುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಅಮಾವಾಸ್ಯೆಯ ದಿನ ಸತಿ ಸಾವಿತ್ರಿಯು, ಪತಿ ಸತ್ಯವಾನ್‌ನ (Satyavaan) ಶವವನ್ನು ಆಲದ ಮರದಡಿಯಲ್ಲಿಯೇ ಇಟ್ಟು ಕಾದಿದ್ದರಿಂದ, ಈ ದಿನ ಆಲದ ಮರವನ್ನು ಪೂಜಿಸುವ ಸಂಪ್ರದಾಯವಿದೆ.
 
ವಟ ಸಾವಿತ್ರಿ ವ್ರತದಂದು ಆಲದಮರಕ್ಕೆ ನೀರೆರೆದು, ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಿದ ಬಳಿಕ ರಕ್ಷಾ ದಾರವನ್ನು ಮರಕ್ಕೆ ಕಟ್ಟುತ್ತಾರೆ. ವಿಧಿ-ವಿಧಾನಗಳಿಂದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅದಾದ ನಂತರ ಆಲದ ಮರಕ್ಕೆ ಏಳು (Seven) ಪ್ರದಕ್ಷಿಣೆಗಳನ್ನು ಹಾಕುವ ಮೂಲಕ ಸೌಭಾಗ್ಯ ಸ್ಥಿರವಾಗಿ ಇರುವಂತೆ ಮಾಡೆಂದು ಬೇಡಿಕೊಳ್ಳಬೇಕು. ನಂತರ ವಟ ಸಾವಿತ್ರಿ ವ್ರತ ಕತೆಯ ಶ್ರವಣದಿಂದ ಮುತ್ತೈದೆ ಭಾಗ್ಯ ಸ್ಥಿರವಾಗಿರುತ್ತದೆ ಎಂಬ ನಂಬಿಕೆ ಇದೆ. ಸೌಭಾಗ್ಯಕ್ಕಾಗಿ ಮಾಡುವ ವಟ ಸಾವಿತ್ರಿ ಪೂಜೆಯನ್ನು ರೋಹಿಣಿ (Rohini) ನಕ್ಷತ್ರದಲ್ಲಿ ಆಚರಿಸುವುದು ಹೆಚ್ಚು ಶ್ರೇಷ್ಠವೆಂದು ಹೇಳಲಾಗುತ್ತದೆ. 
 
ಇದನ್ನು ಓದಿ : ಮದುವೆಯಲ್ಲಿ ಕನ್ಯಾದಾನ ಮಾಡುವುದೇಕೆ? ನಿಮಗಿದು ಗೊತ್ತೆ..?

ವಟ ಸಾವಿತ್ರಿ ಕತೆ ಹೀಗಿದೆ 
ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಿಂದ, ಅಮಾವಾಸ್ಯೆಯ ತನಕ ಮೂರು ದಿನಗಳ ಕಾಲ ವಟ ಸಾವಿತ್ರಿ ವ್ರತವನ್ನು ಆಚರಿಸುವ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ದಕ್ಷಿಣ ಭಾರತದಲ್ಲಿ ವಟ ಪೂರ್ಣಿಮಾ ಅಂದರೆ ಹುಣ್ಣಿಮೆಯಂದು ಈ ವ್ರತವನ್ನು ಆಚರಿಸಲಾಗುತ್ತದೆ. ಪತಿವ್ರತೆ ಸಾವಿತ್ರಿಯ ಪತಿ ಸತ್ಯವಾನ್‌ನ ಪ್ರಾಣವನ್ನು ಸ್ವತಃ ಯಮ ಧರ್ಮರಾಜನು (Yama) ಪಾಶದಿಂದ ಹರಣ ಮಾಡಿದ ದಿನ ಇದಾಗಿದೆ. ಆದರೆ, ಸಾವಿತ್ರಿಯು ತನ್ನ ಪಾತಿವ್ರತ್ಯದ ಪ್ರಭಾವದಿಂದ ಯಮರಾಜನಿಂದಲೇ ಪತಿಯ ಪ್ರಾಣ ಭಿಕ್ಷೆಯನ್ನು ಪಡೆಯುತ್ತಾಳೆ. ಈ ಮೂಲಕ ಪಾತಿವ್ರತ್ಯದ ಶಕ್ತಿಯನ್ನು ಜಗತ್ತಿಗೆ ಸಾರುತ್ತಾಳೆ. ಹೀಗಾಗಿ ಸತಿ ಸಾವಿತ್ರಿಯ (Savithri) ರೂಪದಲ್ಲಿ ಸೌಭಾಗ್ಯ, ಮುತ್ತೈದೆತನವನ್ನು ಸ್ಥಿರವಾಗಿರಿಸೆಂದು ಬೇಡಿಕೊಳ್ಳುವ ಪೂಜೆ ಇದಾಗಿದೆ.

click me!