Temples Of India: ದೋಸೆ, ಚಾಕ್ಲೇಟ್, ನೂಡಲ್ಸ್... ಇವೇ ಇಲ್ಲಿ ದೇವರಿಗೆ ನೈವೇದ್ಯ, ಭಕ್ತರಿಗೆ ಪ್ರಸಾದ! ಎಲ್ಲಿ ಅಂದ್ರಾ?

By Suvarna NewsFirst Published Mar 2, 2022, 4:49 PM IST
Highlights

ಜಾಮ್, ಚಾಕ್ಲೇಟ್, ದೋಸೆ, ನೂಡಲ್ಸ್, ಚಾಪ್ಸಿ... ಇಲ್ಲ, ಮಕ್ಕಳ ಹಟಕ್ಕೆ ಮಣಿದು ಮಾಡಿಕೊಟ್ಟ ತಿಂಡಿತೀರ್ಥಗಳ ಬಗ್ಗೆ ಹೇಳುತ್ತಿಲ್ಲ. ನಮ್ಮ ಕೆಲ ದೇವಾಲಯಗಳ ದೇವರಿಗೆ ನೀಡುವ ನೈವೇದ್ಯದ ಬಗ್ಗೆ ಮಾತಾಡ್ತಿರೋದು ಸ್ವಾಮಿ..

ನಾವು ಸಾಮಾನ್ಯವಾಗಿ ದೇವರಿಗೆ ನೈವೇದ್ಯವಾಗಿ ಕಾಯಿ, ಹಣ್ಣುಗಳು, ಕಲ್ಲುಸಕ್ಕರೆ ಇಡುತ್ತೇವೆ. ವಿಶೇಷ ದಿನವಾದರೆ ವಿಶೇಷವಾಗಿ ತಯಾರಿಸಿದ ಪಾಯಸ, ಪಂಚಭಕ್ಷ್ಯ ಪರಮಾನ್ನವನ್ನಿಡುತ್ತೇವೆ. ಆದರೆ, ನಮ್ಮ ದೇಶದ ಈ ಕೆಲವೊಂದು ದೇವಾಲಯಗಳಲ್ಲಿ ದೇವರಿಗೆ ನೈವೇದ್ಯವಾಗಿ ಈ ಯಾವ ತಿನಿಸುಗಳೂ ರುಚಿಸುವುದಿಲ್ಲವಂತೆ. ಈ ದೇವರ ಪ್ರೀತಿಯ ಭಕ್ಷ್ಯಗಳೇ ಬೇರೆ. ಅವು ಬಹಳ ವಿಶೇಷವಾಗಿವೆ. ಅವೇನೇನು ಎಂದು ಕೇಳಿದರೆ ಇದನ್ನೆಲ್ಲ ನೀಡುವುದೋ ದೇವರಿಗೋ ಅಥವಾ ಪುಟ್ಟ ಮಕ್ಕಳಿಗೋ ಎಂದು ಅನುಮಾನ ಬಾರದಿರದು. ಇನ್ನೂ ಕೆಲ ದೇವರಿಗೆ ಭಕ್ತರು ಪ್ರೀತಿಯಿಂದ ಲಂಚದಂತೆ ನೀಡೋ ಉಡುಗೊರೆಗಳೂ ಈ ತಿನಿಸುಗಳಷ್ಟೇ ವಿಶಿಷ್ಠವಾಗಿವೆ. ಬನ್ನಿ, ಈ ವಿಶೇಷ ದೇವಾಲಯಗಳು ಯಾವುವು, ಅಲ್ಲೇನು ನೀಡಬೇಕು ನೋಡೋಣ. 

ಮಂಚ್ ಮುರುಗನ್, ಕೇರಳ(Munch Murugan in Kerala )
ಮಂಚ್ ಮುರುಗನ್ ಎಂಬುದು ಮಲೆಯಾಳಿ ಹೆಸರು ಎಂದು ನೀವಂದುಕೊಂಡಿರೇನೋ, ಆದರೆ ಅಲ್ಲ, ಮಂಚ್ ಎಂದರೆ ಮಂಚ್ ಚಾಕೋಲೇಟ್. ಕೇರಳದ ಚೆಮ್ಮೋತ್ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಪ್ರಮುಖ ದೇವರಾದ ಮುರುಗನ್‌ಗೆ ಮಂಚ್ ಚಾಕೋಲೇಟ್ ಎಂದರೆ ಬಾಯಲ್ಲಿ ನೀರೂರುತ್ತದೆಯಂತೆ! ಹಾಗಾಗಿ, ನೀವು ಇಲ್ಲಿ ಭೇಟಿ ನೀಡುವುದಾದರೆ ಮಂಚ್ ಚಾಕೋಲೇಟ್ ಬಾಕ್ಸ್ ಮುಂದಿಟ್ಟು ನಂತರ ಬೇಡಿಕೆಗಳ ಪಟ್ಟಿ ತೆಗೆದಿಡಿ. 
ಒಮ್ಮೆ ಇಲ್ಲಿ ಮುಸ್ಲಿಂ ಹುಡುಗನೊಬ್ಬ ಆಟಕ್ಕಾಗಿ ಗಂಟೆ ಬಾರಿಸಿ ಬೈಸಿಕೊಂಡ. ಆ ರಾತ್ರಿ ಕಾಯಿಲೆ ಬಂದು ಮಲಗಿದ ಅವನು ತನಗೆ ಗೊತ್ತಿಲ್ಲದೆಯೇ ಮುರುಗನ್ ಹೆಸರನ್ನು ಜಪ ಮಾಡಲಾರಂಭಿಸಿದನಂತೆ. ಮರುಬೆಳಗ್ಗೆ ಆತನ ಪೋಷಕರು ಮಗನನ್ನು ದೇವಾಲಯಕ್ಕೆ ಕರೆದುಕೊಂಡು ಹೋದರು. ಆಗ ಆತ ಕೊಂಚ ಚೇತರಿಸಿಕೊಂಡನಂತೆ. ದೇವರಿಗೆ ಏನಾದರೂ ಕಾಣಿಕೆ ಸಲ್ಲಿಸುವಂತೆ ಅರ್ಚಕರು ಹೇಳಿದ್ದನ್ನು ಕೇಳಿ ಹುಡುಗ ಜೇಬಿನಿಂದ ಮಂಚ್ ಚಾಕೋಲೇಟ್ ತೆಗೆದುಕೊಟ್ಟನಂತೆ. ಅಂದಿನಿಂದಲೂ ಈ ದೇವಾಲಯಕ್ಕೆ ಬರುವ ಮಕ್ಕಳು ಮಂಚ್ ಚಾಕೋಲೇಟ್ ದೇವರ ಮುಂದಿಟ್ಟು ತಾವು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯ ಮಾಡಲು ಕೋರುತ್ತಾರೆ. 

Latest Videos

Capricorn Personality Traits: ಹಟ, ಛಲ, ಮಹತ್ವಾಕಾಂಕ್ಷೆ.. ಇದು ಮಕರ ರಾಶಿಯವರ ಹುಟ್ಟುಗುಣ

ಅಳಗಾರ್ ದೇವಾಲಯ, ಮಧುರೈ
ಇಲ್ಲಿರುವ ವಿಷ್ಣು(Lord Vishnu) ದೇವರಿಗೆ ವಿಧವಿಧದ ದೋಸೆಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ನಂತರ ಅದನ್ನೇ ಪ್ರಸಾದವಾಗಿ ಭಕ್ತರಿಗೆ ಹಂಚಲಾಗುತ್ತದೆ. ದೇಗುಲಕ್ಕೆ ಬರುವ ಭಕ್ತರು ವಿವಿಧ ಬೇಳೆಕಾಳುಗಳನ್ನು ದಾನ ಕೊಡುತ್ತಾರೆ. ಇವನ್ನೇ ಬಳಸಿ ಬೇರೆ ಬೇರೆ ರೀತಿಯ ದೋಸೆ ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತದೆ. 

ಮುರುಗನ್ ದೇವಾಲಯ(Murugan Temple), ಪಳನಿ ಹಿಲ್ಸ್
ಮುರುಗನ್ ದೇವರು ಸಿಹಿ ಪ್ರಿಯ ಎನಿಸುತ್ತದೆ. ಕೇರಳದಲ್ಲಿ ಮಂಚ್ ಇಷ್ಟಪಡುವ ಮುರುಗ, ತಮಿಳುನಾಡಿ(Tamil Nadu)ನ ಪಳನಿ ಹಿಲ್ಸ್‌ನಲ್ಲಿರುವ ದೇವಾಲಯದಲ್ಲಿ ಹಣ್ಣಿನ ಜಾಮ್ ಬಯಸುತ್ತಾನೆ. ಹೌದು, ಇಲ್ಲಿ 5 ವಿಧದ ಹಣ್ಣುಗಳನ್ನು ಬಳಸಿ ಮಾಡಿದ ಮಿಕ್ಸ್ಡ್ ಫ್ರೂಟ್ ಜಾಮನ್ನು ನೈವೇದ್ಯ ಮಾಡಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಈ ಜಾಮ್ ತಯಾರಿಕೆಗೇ ದೇವಾಲಯವು ದೊಡ್ಡ ಕಾರ್ಖಾನೆಯೊಂದನ್ನು ಹೊಂದಿದೆ. 

ಕಾಳಿ ದೇವಾಲಯ, ಕೋಲ್ಕತ್ತಾ(Kolkata)
ಕೋಲ್ಕತ್ತಾದ ಕಾಳಿ ದೇವಾಲಯ ಇರುವುದು ಚೈನಾ ಟೌನ್‌ನಲ್ಲಿ. ಇಲ್ಲಿನ ಚೈನೀಸ್ ತಿನಿಸುಗಳ ಪರಿಮಳ ಆಸ್ವಾದಿಸಿಯೋ ಏನೋ, ಈ ಕಾಳಿದೇವಿಗೆ ಚೈನೀಸ್ ತಿನಿಸುಗಳೇ ಬೇಕಂತೆ. ಇಲ್ಲಿ ಕಾಳಿಗೆ ಬೇರೆ ಬೇರೆ ರೀತಿಯ ನೂಡಲ್ಸ್, ಚಾಪ್ಸಿಯನ್ನು ನೀಡಲಾಗುತ್ತದೆ. 

Business and black magic: ವ್ಯಾಪಾರಕ್ಕೆ ನಷ್ಟ ತರುವ ವಾಮಾಚಾರ, ರಕ್ಷಣೆ ಹೇಗೆ?

ಪನಕಲ ನರಸಿಂಹ ಸ್ವಾಮಿ, ಆಂಧ್ರ ಪ್ರದೇಶ(Andhra Pradesh)
ಆಂಧ್ರಪ್ರದೇಶದ ಪನಕಲ ನರಸಿಂಹ ಸ್ವಾಮಿ ದೇವಾಲಯದಲ್ಲಿ ದೇವರ ಬಾಯಿಗೆ ಬೆಲ್ಲದ ನೀರ(jaggery water)ನ್ನು ಹೊಯ್ಯಲಾಗುತ್ತದೆ. ದೇವರಿಗೆ ಹೊಟ್ಟೆ ತುಂಬಿದಾಗ ಅರ್ಧದಷ್ಟು ಬೆಲ್ಲದ ನೀರು ವಾಪಸ್ ಬರುತ್ತದೆ ಎಂದು ನಂಬಲಾಗಿದೆ. ಹಾಗೆ ಬಂದ ನೀರನ್ನು ಭಕ್ತರಿಗೆ ಪ್ರಸಾದವಾಗಿ ಹಂಚಲಾಗುತ್ತದೆ. 

click me!