Vaikuntha Ekadashi: ಬಯಸಿದ್ದು ಈಡೇರಬೇಕು ಎಂದಾದ್ರೆ ಇಂದು ವಿಷ್ಣುವನ್ನು ಈ ರೀತಿ ಪೂಜಿಸಿ

By Suvarna NewsFirst Published Jan 2, 2023, 10:57 AM IST
Highlights

ಇಂದು ವೈಕುಂಠ ಏಕಾದಶಿ. ಪವಿತ್ರವಾದ ಈ ದಿನದಂದು ವಿಷ್ಣುವಿನ ಪೂಜೆ ಮಾಡಿ ಕೃತಾರ್ಥರಾಗಬೇಕು. ಹಳದಿ ವಸ್ತ್ರ ಧರಿಸಿ, ಹಳದಿ ಹೂವುಗಳಿಂದ ವಿಷ್ಣು ದೇವರನ್ನು ಪೂಜಿಸಿ, ಹಳದಿ ಬಣ್ಣದ ಬೇಳೆ-ಕಾಳುಗಳನ್ನು ದಾನ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ.  
 

ಇಂದು ವೈಕುಂಠ ಏಕಾದಶಿಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ವಿಷ್ಣುವಿನ ಶ್ರದ್ಧಾವಂತ ಭಕ್ತರು ಇಂದು ಉಪವಾಸ ವ್ರತ, ಪೂಜೆ, ವಿಷ್ಣುವಿನ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಏಕಾದಶಿಯನ್ನು ಭಕ್ತಿಯಿಂದ ಆಚರಿಸುತ್ತಿದ್ದಾರೆ. ಪುಷ್ಯ ಮಾಸದ ಶುಕ್ಲಪಕ್ಷದ ಏಕಾದಶಿಯನ್ನು ವಿಷ್ಣುವಿನ ಪರಮ ಪಾವನ ದಿನವನ್ನಾಗಿ ಪರಿಗಣಿಸಲಾಗಿದೆ. ಇದನ್ನು ಮುಕ್ಕೋಟಿ ಏಕಾದಶಿ, ಭೀಷ್ಮ ಏಕಾದಶಿ ಎಂದೂ ಕರೆಯಲಾಗುತ್ತದೆ. ಹಿಂದುಗಳ ಪಾಲಿಗೆ ಪ್ರತಿ ತಿಂಗಳ ಏಕಾದಶಿಯೂ ಪವಿತ್ರ ದಿನ. ಪ್ರತಿ ಏಕಾದಶಿಯಂದು  ಉಪವಾಸ ವ್ರತ ಆಚರಿಸುವವರು ಇದ್ದಾರೆ. ಆದರೆ, ಇಂದು ಇನ್ನಷ್ಟು ಮಹತ್ವದ ದಿನ. ಏಕೆಂದರೆ, ಇಂದು ಕಡಲನ್ನು ಮಥಿಸಿದ ದಿನ. ಈ ಪವಿತ್ರ ದಿನದಂದೇ ಸಾಗರ ಮಂಥನ ನಡೆದದ್ದು. ಕ್ಷೀರ ಸಾಗರದಿಂದ ದೈವಿಕ ಅಮೃತ ಹೊಮ್ಮಿದ್ದುದು ಸಹ ಇದೇ ದಿನ. ಹೀಗಾಗಿ, ಈ ದಿನವನ್ನು ಮಂಗಳಕರ ದಿನವೆಂದು ಪರಿಭಾವಿಸಿ ಭಕ್ತಿಭಾವದಿಂದ ವಿಷ್ಣುವಿನ ಪೂಜೆ ಮಾಡಲಾಗುತ್ತದೆ. ಇಂದು ಸಾವನ್ನಪ್ಪುವ ಜನರಿಗೆ ಮುಕ್ತಿ ಅಥವಾ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆಯೂ ಇದೆ. ಅಂದರೆ, ಅವರು ಜನನ-ಮರಣಗಳಿಂದ ಮುಕ್ತರಾಗುತ್ತಾರೆ. ಭಗವಾನ್‌ ವಿಷ್ಣು ವಾಸಿಸುವ ವೈಕುಂಠವನ್ನು ತಲುಪುತ್ತಾರೆ ಎಂದು ನಂಬಲಾಗುತ್ತದೆ.

ಸುಪ್ರಸನ್ನ ವಿಷ್ಣುವಿನ (Lord Vishnu) ಕೃಪೆಗೆ ಪಾತ್ರರಾಗೋದು ಹೇಗೆ?
ವಿಷ್ಣು ಭಗವಂತನ ವಿಶೇಷತೆ ಎಂದರೆ, ಆತ ಸಾಮಾನ್ಯರಿಗೂ (Common People) ನಿಲುಕುವಂಥ ದೇವ. ಅತಿಯಾದ ಮಡಿ, ಮೈಲಿಗೆಗಳ ಹಂಗಿಲ್ಲದೆ ವಿಷ್ಣುವನ್ನು ಯಾರು ಬೇಕಾದರೂ ಧ್ಯಾನಿಸಬಹುದು. ಸಂಸಾರದ (Life) ಸುಖಕ್ಕಾಗಿ, ಆರ್ಥಿಕ (Wealth) ಸಿರಿಸಂಪತ್ತಿನ ಲಕ್ಷೀ ದೇವಿ (Goddess Lakshmi) ನೆಲೆ ನಿಲ್ಲಬೇಕಾದರೆ ವಿಷ್ಣುವಿನ ನಾಮಸ್ಮರಣೆ ಪ್ರತಿ ಮನೆಯಲ್ಲಿ ಪ್ರತಿದಿನವೂ ನಡೆಯಬೇಕು ಎಂದು ಹೇಳಲಾಗುತ್ತದೆ. ವಿಷ್ಣುವಿನ ಆರಾಧನೆಯಿಂದ ಮನೆಯಲ್ಲಿ ಶಾಂತಿ (Peace), ನೆಮ್ಮದಿ ಸೃಷ್ಟಿಯಾಗುತ್ತದೆ. ಪ್ರತಿದಿನ ಮನೆಯಲ್ಲಿ ತುಳಸಿ (Tulsi) ಪೂಜೆ, ಅರಳಿ ಮರಕ್ಕೆ ನೀರೆರೆದು ನಮಸ್ಕಾರ ಮಾಡುವುದರಿಂದ ವಿಷ್ಣು ಭಕ್ತರು ಬಯಸುವುದನ್ನು ಈಡೇರಿಸುತ್ತಾನೆ. ಇಂದಂತೂ ವಿಷ್ಣುವಿನ ದಿನ. ಎಷ್ಟು ಸಾಧ್ಯವೋ ಅಷ್ಟು, ನಮ್ಮ ನಮ್ಮ ಭಾವ-ಭಕುತಿಗೆ ತಕ್ಕಂತೆ ವಿಷ್ಣುವಿನ ಪೂಜೆ ಮಾಡಿ ಕೃತಾರ್ಥರಾಗಬೇಕಾದ ದಿನ. ಸ್ನಾನದ ಬಳಿಕ ಧೂಪ, ದೀಪ, ನೈವೇದ್ಯಗಳಿಂದ ಪೂಜಿಸಬೇಕು. ಈ ದಿನ ಹಳದಿ (Yellow) ಬಟ್ಟೆಯನ್ನು ಧರಿಸಿದರೆ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆಯೂ ಇದೆ. ಹಳದಿ ಬಣ್ಣ (Colour) ವಿಷ್ಣುವಿಗೆ ಪ್ರೀತಿಯಾಗಿರುವುದರಿಂದ ಈ ಬಣ್ಣಕ್ಕೆ ವಿಶೇಷ ಸ್ಥಾನ. ಹಾಗೆಯೇ, ಹಳದಿ ಹೂವುಗಳನ್ನು ವಿಷ್ಣುವಿಗೆ ಅರ್ಪಣೆ ಮಾಡಿದರೆ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಹೂವಿನ ಜತೆಗೆ ವಿಷ್ಣುವಿನ ಪ್ರೀತಿಪಾತ್ರ ತುಳಸಿಯನ್ನು ಅರ್ಪಿಸಲು ಮರೆಯಬಾರದು. ಅರಳಿ ಮರ ವಿಷ್ಣುವಿನ ಸ್ವರೂಪ. ಇಂದು ಅರಳಿ ಮರಕ್ಕೆ ನೀರೆರೆಯುವ ಸಂಪ್ರದಾಯವೂ ಕೆಲವೆಡೆ ಇದೆ. ಇದರಿಂದ ವಿಷ್ಣು ಸಂಪ್ರೀತಿ ಹೊಂದುತ್ತಾನೆ. ಈ ದಿನ ಹಳದಿ ವಸ್ತ್ರ, ಹಳದಿ ಬೇಳೆ-ಕಾಳುಗಳನ್ನು ದಾನ ಮಾಡುವುದು ಉತ್ತಮ. ಹಾಗೆಯೇ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಬೇಕು. 

ವೈಕುಂಠ ಏಕಾದಶಿ: ಈ ದಿವಸ ಮಾಡಲೇಬೇಕಾದ ಆಚರಣೆಗಳು ಯಾವುವು?

ಶ್ರೀಹರಿ ಸ್ತೋತ್ರ, ವಿಷ್ಣು ಸಹಸ್ರನಾಮ (Vishnu Sahasranama) ಪಠಣ ಮಾಡುವುದು, ಪ್ರಾರ್ಥನೆ (Pray) ಸಲ್ಲಿಸುವುದರಿಂದ ವಿಷ್ಣು ದೇವರು ಪ್ರಸನ್ನಗೊಳ್ಳುತ್ತಾನೆ. ಇಂದು ಅನ್ನದ ಊಟ ಮಾಡುವುದು ನಿಷಿದ್ಧವೆಂದು ಹೇಳಲಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿಯಂತಹ ತಾಮಸ ಆಹಾರದಿಂದಲೂ ದೂರವಿರಬೇಕು. ಕೈಲಾದಷ್ಟು ದಾನ ಮಾಡಬೇಕು. 

ಭೀಷ್ಮ ಏಕಾದಶಿ (Bhishma Ekadashi) ಎಂದೇಕೆ ಹೇಳುತ್ತಾರೆ? 
ಎಲ್ಲರಿಗೂ ಗೊತ್ತೇ ಇದೆ. ದ್ವಾಪರ ಯುಗದ ಮಹಾನ್‌ ಚೇತನವಾಗಿದ್ದ ಭೀಷ್ಮರು ಮಹಾಭಾರತ ಯುದ್ಧವನ್ನು ಮರಣಶಯ್ಯೆಯಲ್ಲಿದ್ದು ವೀಕ್ಷಿಸಿದರು. ಅವರು ಇಚ್ಛಾಮರಣಿಯಾಗಿದ್ದರಿಂದ ವೈಕುಂಠ ಏಕಾದಶಿಯ ಶುಭ ದಿನಕ್ಕಾಗಿ ಕಾದು ಮರಣವನ್ನು ಹೊಂದಿದರು. ಹೀಗಾಗಿ, ನಮ್ಮ ದೇಶದ ಹಲವು ಭಾಗಗಳಲ್ಲಿ ಇಂದು ಭೀಷ್ಮ ಏಕಾದಶಿ ಎನ್ನುವ ಹೆಸರಿನಲ್ಲೂ ಆಚರಿಸಲಾಗುತ್ತದೆ.  
 

ವೈಕುಂಠ ಏಕಾದಶಿಯಂದು ವ್ರತ ಕಥೆ ಕೇಳಿದರೆ ಇಷ್ಟಾರ್ಥ ಸಿದ್ಧಿ!

click me!