ಇಂದು ಮಹಾಲಯ ಅಮವಾಸ್ಯೆ; ಪಿತೃತರ್ಪಣ ಕೈಗೊಳ್ಳಲು‌ ಮಲ್ಪೆಗೆ ಬಂದ ಸಾವಿರಾರು ಜನ

By Ravi JanekalFirst Published Sep 25, 2022, 3:23 PM IST
Highlights

ಇಂದು ಮಹಾಲಯ ಅಮವಾಸ್ಯೆ, ಇದು ಪಿತೃಗಳನ್ನು ನೆನೆಯುವ ದಿನ. ಕಡಲ ತೀರಕ್ಕೆ ತೆರಳಿ ಸಮುದ್ರ ಸ್ನಾನ ಕೈಗೊಂಡು, ತರ್ಪಣೆ ಬಿಟ್ಟರೆ ನಮ್ಮನ್ನಗಲಿದ ಆತ್ಮಗಳಿಗೆ ಮೋಕ್ಷ ದೊರೆಯುತ್ತೆ ಅನ್ನೋದು ನಂಬಿಕೆ. ಹಾಗಾಗಿ ಕರಾವಳಿಯ ಕಡಲ ತೀರದಲ್ಲಿ ಸಾವಿರಾರು ಜನರು ಈ ಪುಣ್ಯಕಾರ್ಯ ಕೈಗೊಂಡರು.

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.25) : ಇಂದು ಮಹಾಲಯ ಅಮವಾಸ್ಯೆ, ಇದು ಪಿತೃಗಳನ್ನು ನೆನೆಯುವ ದಿನ. ಕಡಲ ತೀರಕ್ಕೆ ತೆರಳಿ ಸಮುದ್ರ ಸ್ನಾನ ಕೈಗೊಂಡು, ತರ್ಪಣೆ ಬಿಟ್ಟರೆ ನಮ್ಮನ್ನಗಲಿದ ಆತ್ಮಗಳಿಗೆ ಮೋಕ್ಷ ದೊರೆಯುತ್ತೆ ಅನ್ನೋದು ನಂಬಿಕೆ. ಹಾಗಾಗಿ ಕರಾವಳಿಯ ಕಡಲ ತೀರದಲ್ಲಿ ಸಾವಿರಾರು ಜನರು ಈ ಪುಣ್ಯಕಾರ್ಯ ಕೈಗೊಂಡರು. ಅದರಲ್ಲೂ ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಸಾವಿರಾರು ಶ್ರದ್ಧಾಳು ಪಿತೃಗಳಿಗೆ ತರ್ಪಣ ಬಿಟ್ಟರು.

Mahalaya Amavasya: ಸಾಯುವಾಗ ಈ ವಸ್ತುಗಳು ಜೊತೆಗಿದ್ದರೆ ಸೀದಾ ಸ್ವರ್ಗಕ್ಕೇ ಪ್ರಯಾಣ!

ದೇವರಿಗೆ ನಿವೇಧಿಸುವ ಹರಕೆಗಳಲ್ಲಿ ವಿಳಂಬವಾದರೂ ತೊಂದರೆಯಿಲ್ಲ, ಆದರೆ ಪಿತೃಗಳಿಗೆ ನಿಗದಿಯಾದ ದಿನವೇ ತರ್ಪಣ ನೀಡಬೇಕು ಅನ್ನೋದು ಜನರ ನಂಬಿಕೆ. ಹಾಗಾಗಿ ಮಹಾಲಯ ಅಮವಾಸ್ಯೆ(Mahalaya amavashye)ಯ ದಿನ ಬಹುತೇಕ ಜನರು ಶೃದ್ಧೆಯಿಂದ ಈ ಕಾರ್ಯ ಕೈಗೊಳ್ತಾರೆ. ವಡಬಾಂಡೇಶ್ವರ ಕ್ಷೇತ್ರ ಇರುವ ಮಲ್ಪೆ(Malpe) ಕಡಲ ತೀರವು ಪಿತೃಕಾರ್ಯಗಳಿಗೆ ಅತ್ಯಂತ ಶ್ರೇಷ್ಠ ಸ್ಥಳ ಎಂಬ ನಂಬಿಕೆ ಇದೆ. ಇಂದು  ಮುಂಜಾನೆಯಿಂದಲೇ ಸಾವಿರಾರು ಜನರು ಇಲ್ಲಿ ಪಿತೃಕಾರ್ಯ ಕೈಗೊಂಡರು. ಮೊದಲು ಸಮುದ್ರದಲ್ಲಿ ಮಿಂದು ಬಳಿಕ ತಿಲಾ ಹೋಮ ನಡೆಸಿ, ತರ್ಪಣ ಬಿಟ್ಟರು.

ಅಮವಾಸ್ಯೆಯ ದಿನ ಕೈಗೊಳ್ಳುವ ಸಮುದ್ರ ಸ್ನಾನಕ್ಕೆ ವಿಶೇಷ ಮಹತ್ವ ಇದೆ.  ಈ ಬಾರಿ ಮಳೆ ಕಡಿಮೆ ಇದ್ದುದರಿಂದ ಪೂಜೆಯಲ್ಲಿ ಭಾಗವಹಿಸಿದವರ ಸಂಖ್ಯೆಯೂ ಹೆಚ್ಚಾಗಿತ್ತು. ಪಿತೃ ಕಾರ್ಯ ನೆರವೇರಿಸಲು ನೂರಾರು ವೈದಿಕರು ಕಡಲ ತೀರದಲ್ಲಿ ಬಂದಿದ್ದರು. ಮರಳುರಾಶಿಯ ತೆರೆದ ಬಯಲು ಪ್ರದೇಶದಲ್ಲಿ, ವೈದಿಕರ ಮೂಲಕ ವಿಧಿ ವಿಧಾನಗಳನ್ನು ನಡೆಸಲಾಯಿತು.  

Mahalaya Amavasya 2022: ಪೂರ್ವಜರಿಗೆ ಹೀಗೆ ವಿದಾಯ ಹೇಳಿ

ಪಿತೃ ತರ್ಪಣದಿಂದ ಕುಟುಂಬಕ್ಕೆ ಏಳಿಗೆ ಆಗುತ್ತೆ, ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ ಅನ್ನೋದು ಈ ಭಾಗದ ಜನರ ನಂಬಿಕೆ, ಇಂದು ಪಿತೃ ತರ್ಪಣ ಬಿಟ್ಟರೆ ಹಿರಿಯರ ಆತ್ಮಗಳಿಗೆ ಮೋಕ್ಷ ದೊರಕುತ್ತಂತೆ, ಮಲ್ಪೆ ಮಾತ್ರವಲ್ಲದೆ ಕರಾವಳಿ ತೀರದುದ್ದಕ್ಕೂ ವೈದಿಕರ ಮೂಲಕ ಈ ಧಾರ್ಮಿಕ ಕಾರ್ಯ ಸಂಪನ್ನಗೊಂಡಿತು. ಬದುಕಿರುವ ಹಿರಿಯರನ್ನೇ ಗೌರವಿಸದ ಕಾಲ ಇದು, ಆದರೆ ನಮ್ಮನ್ನಗಲಿದ ಪೂರ್ವಿಕರನ್ನು ಪ್ರತಿವರ್ಷ ಸ್ಮರಿಸುವುದು ಅಪರೂಪದ ಸಂಸ್ಕೃತಿ. ಕರಾವಳಿ ತೀರದಲ್ಲಿ ಇಂದಿಗೂ ಈ ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ.

click me!