Guru Purnima 2023: ಶಿಕ್ಷಣ ಕಲಿಸುವವರು ಮಾತ್ರ ಗುರುವಲ್ಲ, ದಾರಿ ತೋರುವವರೆಲ್ಲರೂ ಗುರು, ಅವರಿಗೆ ನಮಿಸೋಣ

By Kannadaprabha NewsFirst Published Jul 3, 2023, 10:18 AM IST
Highlights

ಗುರು-ಶಿಷ್ಯ ಪರಂಪರೆಯು ಮಠ ಅಥವಾ ಆಶ್ರಮಗಳನ್ನು ಮಾತ್ರ ಸ್ಥಾಪಿಸಿಲ್ಲ, ಸಮಾಜದಲ್ಲಿ ಧರ್ಮ, ಅಧ್ಯಾತ್ಮ, ಹಾಗೂ ಭಕ್ತಿಯನ್ನು ಹರಡುವ ಮೂಲಕ, ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವ ಅಂದರೆ ಧರ್ಮವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಜೀವನವನ್ನು ಉನ್ನತಗೊಳಿಸುವ ಕಾರ್ಯ ಮಾಡಿದೆ.

ಮೋಹನ್‌ ಗೌಡ

ಹಿಂದೂ ಜನಜಾಗೃತಿ ಸಮಿತಿ

Latest Videos

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳು. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. ಯುಗಯುಗಗಳಿಂದ ಧರ್ಮಸಂಸ್ಥಾಪನೆ ಕಾರ್ಯದಲ್ಲಿ ಗುರು-ಶಿಷ್ಯ ಪರಂಪರೆಯು ಮಹತ್ವಪೂರ್ಣ ಪಾತ್ರ ವಹಿಸಿದೆ.

ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ವ್ಯಾಸಪೂಜೆಯನ್ನು ಜ್ಯೇಷ್ಠ ಪೂರ್ಣಿಮೆಯಂದು ಮಾಡುತ್ತಾರೆ.

ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ.

ಗುರು ಪೂರ್ಣಿಮಾ ಕುರಿತಾದ ಈ ವಿಶೇಷ ಕತೆಯನ್ನು ನೀವು ಕೇಳಲೇಬೇಕು!

ಗುರು ಪೂರ್ಣಿಮೆಯ ಮಹತ್ವ

ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ 1 ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಮಾಡಿದ ಅರ್ಪಣೆ) ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ 1 ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.

‘ಗುರು-ಶಿಷ್ಯ ಪರಂಪರೆ’ಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ರಜ-ತಮಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಾನ್‌ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದವಕಾಶ ಈ ಉತ್ಸವದಲ್ಲಿ ನಮಗೆ ಲಭಿಸುತ್ತದೆ.

ಧರ್ಮ ರಕ್ಷಣೆಯ ಪರಂಪರೆ

ಈ ದಿವ್ಯ ಗುರು-ಶಿಷ್ಯ ಪರಂಪರೆಯು ಆಶ್ರಮಗಳನ್ನು ಮಾತ್ರ ಸ್ಥಾಪಿಸಿದ್ದಲ್ಲ, ಸಮಾಜದಲ್ಲಿ ಧರ್ಮ-ಅಧ್ಯಾತ್ಮ-ಭಕ್ತಿಯನ್ನು ಹರಡುವ ಮೂಲಕ, ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವ ಅಂದರೆ ಧರ್ಮವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಜೀವನವನ್ನು ಉನ್ನತಗೊಳಿಸುವ ಕಾರ್ಯ ಮಾಡಿದೆ. ಹಾಗೂ ರಾಷ್ಟ್ರ ಮತ್ತು ಧರ್ಮರಕ್ಷಣೆ ಅರ್ಥಾತ್‌ ಧರ್ಮಸಂಸ್ಥಾಪನೆಯ ಕಾರ್ಯವನ್ನು ಸಹ ಮಾಡಿದೆ. ಈ ಪರಂಪರೆಯಿಂದಾಗಿಯೇ ಅನೇಕ ವಿದೇಶಿ ಆಕ್ರಮಣಗಳ ನಡುವೆಯೂ ಹಿಂದೂ ಧರ್ಮ ಇಂದಿಗೂ ಉಳಿದಿದೆ. ಶ್ರೀಕೃಷ್ಣ-ಅರ್ಜುನ, ಆರ್ಯ ಚಾಣಕ್ಯ-ಚಂದ್ರಗುಪ್ತ ಮೌರ್ಯ, ಸಮರ್ಥ ರಾಮದಾಸ ಸ್ವಾಮಿ-ಛತ್ರಪತಿ ಶಿವಾಜಿ ಮಹಾರಾಜರೇ ಇದಕ್ಕೆ ಉದಾಹರಣೆ. ಈ ಎಲ್ಲ ರಾಜ ಮಹಾರಾಜರ ಕಾಲಾವಧಿಯಲ್ಲಿ ರಾಜ್ಯವು ಅವನತಿಯಲ್ಲಿರುವಾಗ ಅಥವಾ ಅಧರ್ಮವು ತಾಂಡವವಾಡುತ್ತಿರುವಾಗ ಗುರುಗಳು ಮಾರ್ಗದರ್ಶನವನ್ನು ಮಾಡಿ ಧರ್ಮದ ಪುನರ್‌ಸ್ಥಾಪನೆ ಮಾಡಿದ್ದಾರೆ.

ಇಂದಿಗೂ ನಮ್ಮ ನೆಲದಲ್ಲಿ ಧರ್ಮ ಸಂಘರ್ಷದ ಅನೇಕ ಸಮಸ್ಯೆಗಳು ಆಗಾಗ ಉಲ್ಬಣಿಸುತ್ತವೆ. ಕೋಮುಘರ್ಷಣೆಗಳು ನಮ್ಮ ದೇಶವನ್ನು ಕಾಡುತ್ತಿವೆ. ಈ ಎಲ್ಲ ಸಮಸ್ಯೆಗಳು ಸರಿಯಾದ ಗುರುವಿನ ಮಾರ್ಗದರ್ಶನದಲ್ಲಿ ನಿವಾರಣೆಯಾಗಬಲ್ಲವು. ಎಲ್ಲ ಧರ್ಮ ಗುರುಗಳೂ ಕೇವಲ ತಮ್ಮ ಧರ್ಮದ ಹಿತವನ್ನು ಮಾತ್ರ ಬಯಸದೆ ಎಲ್ಲರ ಹಿತವನ್ನು ಬಯಸಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ.

ಹಿಂದೂ ರಾಷ್ಟ್ರ ಎಂದರೆ ಕೇವಲ ಹಿಂದೂಗಳಿರುವ ರಾಷ್ಟ್ರ ಎಂದರ್ಥವಲ್ಲ, ‘ಮೇರುತಂತ್ರ ಧರ್ಮಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದುಃ

ಅಂದರೆ ‘ಹೀನ ಅಥವಾ ಕನಿಷ್ಠ ರಜ-ತಮ ಗುಣಗಳನ್ನು ‘ದೂಷಯತಿ, ಅಂದರೆ ನಾಶಪಡಿಸುವವನೇ ಹಿಂದೂ ಎಂದು ‘ಹಿಂದೂ ಶಬ್ದದ ವ್ಯುತ್ಪತ್ತಿಯನ್ನು ಕೊಡಲಾಗಿದೆ. ಯಾರು ರಜ-ತಮಾತ್ಮಕ ಹೀನಗುಣಗಳನ್ನು ಮತ್ತು ಅದರಿಂದಾಗಿ ಘಟಿಸುವ ಕಾಯಾ, ವಾಚಾ ಮತ್ತು ಮಾನಸಿಕ ಸ್ತರದಲ್ಲಿನ ಹೀನ ಕರ್ಮಗಳನ್ನು ತಿರಸ್ಕರಿಸುತ್ತಾನೆಯೋ; ಅಂದರೆ ಸಾತ್ವಿಕ ಆಚರಣೆಯನ್ನು ಮಾಡುತ್ತಾನೆಯೋ ಅವನೇ ಹಿಂದೂ. ಇಂತಹ ಸತ್ತ್ವಗುಣಿ ವ್ಯಕ್ತಿಯು ನಾನು ಮತ್ತು ನನ್ನ ಎಂಬಂತಹ ಸಂಕುಚಿತ ವಿಚಾರಗಳನ್ನು ತ್ಯಜಿಸಿ ವಿಶ್ವಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಾನೆ. ಅಂತಹ ಹಿಂದೂ ರಾಷ್ಟ್ರಕ್ಕೆ ಈಗ ಎಲ್ಲೆಡೆ ಕೂಗು ಕೇಳುತ್ತಿದೆ.

Guru Purnima 2023ಯಂದು 3 ಶುಭಯೋಗಗಳು; ಹೊಸ ಕಾರ್ಯ ಕೈಗೊಳ್ಳಲು ಶುಭ ದಿನ

ಗುರು ಮಾರ್ಗದರ್ಶನ ಬೇಕು

ವಿದ್ಯಾರಣ್ಯರು ದೊಡ್ಡ ಸಂತರು, ತತ್ತ್ವಜ್ಞಾನಿಗಳು, ಚಿಂತಕರು ಹಾಗೂ ವೇದಗಳ ಅಭ್ಯಾಸಕರಾಗಿದ್ದರು. ಮತಾಂತರಗೊಂಡಿದ್ದ ಹರಿಹರ ಮತ್ತು ಬುಕ್ಕರನ್ನು ಅವರು ಶುದ್ಧೀಕರಿಸಿ ಹಿಂದೂ ಧರ್ಮಕ್ಕೆ ಸೇರಿಸಿಕೊಂಡರು. ಅವರಿಗೆ ರಾಜಧರ್ಮದ ಶಿಕ್ಷಣ ನೀಡಿದರು ಮತ್ತು ಅವರ ಮೂಲಕ ವಿಜಯನಗರ ಸಾಮ್ರಾಜ್ಯದ ಅಡಿಪಾಯವನ್ನು ಹಾಕಿದರು. ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹರಿಹರ ಮತ್ತು ಬುಕ್ಕರು ಆದರ್ಶ ಶಿಷ್ಯರಂತೆ ರಾಜ್ಯಭಾರ ನಡೆಸಿದರು. ಇದರಿಂದ ಗುರುತತ್ತ್ವವು ಯಾವಾಗಲೂ ಧರ್ಮವನ್ನು ರಕ್ಷಿಸಲು ತನ್ನ ಶಿಷ್ಯರಿಗೆ ಆಜ್ಞಾಪಿಸಿದೆ ಅಥವಾ ಅವರಿಂದ ಈ ಕಾರ್ಯವನ್ನು ಮಾಡಿಸಿಕೊಂಡಿದೆ ಎಂಬುದು ಗಮನಕ್ಕೆ ಬರುತ್ತದೆ. ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಹೇಗೆ ಮಾಡಿತು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಇಂದು, ಇದೇ ರೀತಿ ಧರ್ಮಸಂಸ್ಥಾಪನೆಯ ಕಾರ್ಯದ ಅವಶ್ಯಕತೆಯಿದೆ. ಹಾಗಾಗಿ ಈ ಧರ್ಮಸಂಸ್ಥಾಪನೆಯ ಕಾರ್ಯವನ್ನು ಕೇವಲ ಶಾರೀರಿಕ ಮತ್ತು ಬೌದ್ಧಿಕ ಸ್ತರದಲ್ಲಿ ಮಾಡಲು ಸಾಧ್ಯವಿಲ್ಲ. ಗುರುಗಳ ಮತ್ತು ಸಂತರ ಮಾರ್ಗದರ್ಶನ ಪಡೆದು ಕಾರ್ಯ ಮಾಡುವುದು ಅಪೇಕ್ಷಿತವಿದೆ.

click me!