ಶ್ರೀ ಮಹಾವಿಷ್ಣುವಿನ ವಿಶೇಷ ಕೃಪೆ ಹೊಂದಿದವರ ಹಸ್ತದಲ್ಲಿರುತ್ತೆ ಈ ಐದು ಚಿಹ್ನೆ!

By Suvarna NewsFirst Published Jun 2, 2020, 3:08 PM IST
Highlights

ಹಸ್ತದಲ್ಲಿರುವ ರೇಖೆಗಳಂತೆಯೇ, ಹಲವು ಅರ್ಥವಾಗದ ಚಿಹ್ನೆಗಳಿರುತ್ತವೆ. ಅವುಗಳಿಂದಲೂ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ತಿಳಿಯಲು ಸಾಧ್ಯವಿದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ರೇಖೆಗಳನ್ನು ನೋಡಿ ಭೂತ-ಭವಿಷ್ಯತ್‌ ಅನ್ನು ಹೇಳುತ್ತಾರೆ. ಹಾಗೆಯೇ ಚಿಹ್ನೆಗಳನ್ನು ನೋಡಿಯೂ  ಜೀವನದ ಅದೃಷ್ಟ ಬಗ್ಗೆ, ಸಂಪತ್ತು, ಆರ್ಥಿಕಸ್ಥಿತಿಯ ವಿಚಾರಗಳನ್ನು ತಿಳಿಯಬಹುದಾಗಿದೆ.

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೇವಲ ರೇಖೆಗಳಿಂದ ಅಷ್ಟೇ ಅಲ್ಲ ಹಸ್ತದಲ್ಲಿರುವ ಚಿಹ್ನೆಗಳಿಂದಲೂ ಭವಿಷ್ಯದ ಕೆಲವು ಪ್ರಧಾನ ಅಂಶಗಳ ತಿಳಿವಳಿಕೆ ಸಾಧ್ಯ. ಜ್ಯೋತಿಷ್ಯ ಶಾಸ್ತ್ರದಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಹಾಗೆಯೇ ಹಸ್ತವನ್ನು ನೋಡಿಯೂ ಭವಿಷ್ಯದ ಬಗ್ಗೆ ಅರಿಯಬಹುದು. ಹಸ್ತರೇಖೆಯು ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮಾನವನ ಶರೀರದ ಮೇಲಿರುವ ಹಲವು ಚಿಹ್ನೆಗಳು ಜೀವನದ ಹಲವು ವಿಷಯವನ್ನು ತಿಳಿಸುತ್ತದೆ. ಪುರಾಣ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖವಿರುವಂತೆ ಶರೀರದ ಮೇಲಿರುವ ಚಿಹ್ನೆಗಳನ್ನು ಗಮನಿಸಿಯೇ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ಹಲವು ವಿಷಯಗಳನ್ನು ತಿಳಿಯಬಹುದೆಂದು. 



ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಹಸ್ತದಲ್ಲಿರುವ ಕೆಲವು ವಿಶೇಷ ಚಿಹ್ನೆಗಳು ಭವಿಷ್ಯ ಮತ್ತು ಭಾಗ್ಯದ ಬಗ್ಗೆ ತಿಳಿಸುವಲ್ಲಿ ಸಹಾಯಕವಾಗುತ್ತವೆ. ಭವಿಷ್ಯದಲ್ಲಿ ಬರುವ ಸುಖ-ದುಃಖಗಳ ಬಗ್ಗೆ ತಿಳಿಯಬಹುದಾಗಿದೆ. ಹಸ್ತದಲ್ಲಿರುವ ಈ ವಿಶೇಷ ರೇಖೆ ಅಥವಾ ಚಿಹ್ನೆಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಭವಿಷ್ಯದ ಬಗೆಗಿನ ಕೆಲವು ವಿಷಯಗಳನ್ನು ಅರಿಯುವುದು ಸರಳವಾಗುತ್ತದೆ.

ಇದನ್ನು ಓದಿ: ನೌಕರಿ ಖಾತರಿ-ಕಿರಿಕಿರಿ ಎಲ್ಲವಕ್ಕೂ ಇಲ್ಲಿ ಉತ್ತರ ಸಿಗುತ್ತೆ ಕಣ್ರೀ!

ಬೆರಳಿನಲ್ಲಿರುವ ಚಕ್ರ ಚಿಹ್ನೆಯ ಮಹತ್ವ
ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಕೈ ಬೆರಳುಗಳಲ್ಲಿ ಚಕ್ರ ಆಕಾರದ ಚಿಹ್ನೆಯಿರುವವರು ಜೀವನದಲ್ಲಿ ಎಲ್ಲವನ್ನು ಪಡೆಯುವ ಕ್ಷಮತೆಯನ್ನು ಹೊಂದಿರುತ್ತಾರೆ. ಯಾರ ಹತ್ತೂ ಕೈ ಬೆರಳುಗಳ ಮೇಲಿನ ಭಾಗದಲ್ಲಿ ಚಕ್ರದ ಚಿಹ್ನೆ ಇರುತ್ತದೆಯೋ ಅಂತಹವರ ರಾಜರಾಗುತ್ತಾರೆ. ಅಂದರೆ ವರ್ತಮಾನದಲ್ಲಿ ಇಂಥ ವ್ಯಕ್ತಿಗಳು ಪ್ರಸಿದ್ಧಿ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ಮತ್ತು ಅವರ ಮನೋಭಿಲಾಷೆಗಳೆಲ್ಲ ಪೂರ್ಣವಾಗುತ್ತವೆ. ಈ ವ್ಯಕ್ತಿಗಳಿಗೆ ಸರ್ಕಾರದಿಂದ ಗೌರವ ಸನ್ಮಾನಗಳು ಪ್ರಾಪ್ತವಾಗುವುದಲ್ಲದೇ, ದೇಶ-ವಿದೇಶಗಳಲ್ಲೂ ಸಹ ಪ್ರಸಿದ್ಧಿ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಕೈ ಬೆರಳುಗಳಲ್ಲಿ ಚಕ್ರದ ಚಿಹ್ನೆ ಹೊಂದಿದವರು ಬುದ್ಧಿವಂತರು ಮತ್ತು ವಿವೇಕವುಳ್ಳವರಾಗಿರುತ್ತಾರೆ.



ಕೈಯಲ್ಲಿ ಮೀನಿನ ಚಿಹ್ನೆಯ ಮಹತ್ವ
ಕೈಯಲ್ಲಿ ಮತ್ಸ್ಯದ ಚಿಹ್ನೆ ಹೊಂದಿದ್ದೀರೆಂದರೆ ಅಂಥವರ ಭಾಗ್ಯದ ಬಾಗಿಲು ತೆರೆದಿದೆ ಎಂದೇ ಅರ್ಥ. ಹಸ್ತದ ಭಾಗ್ಯ ರೇಖೆಯಲ್ಲಿ ಮೀನಿನ ಚಿಹ್ನೆ ಇದ್ದರೆ ಅಂಥವರ ಜೀವನಕ್ಕೆ ಭಾಗ್ಯದಾಯಕ ಮತ್ತು ಹಲವು ರೀತಿಯಲ್ಲಿ ಸಹಾಯಕವೂ ಆಗಿತ್ತದೆ. ಮತ್ಸ್ಯಾವತಾರವು ವಿಷ್ಣುವಿನ ಅವತಾರಗಳಲ್ಲೊಂದು ಆದ್ದರಿಂದ ಇದನ್ನು ಹಸ್ತದಲ್ಲಿ ಹೊಂದಿದ್ದರೆ ಅಂಥವರ ಮೇಲೆ ವಿಷ್ಣುವಿನ ಕೃಪೆಯಿದೆ ಎಂದೇ ಹೇಳಬಹುದು. ಜೀವನದಲ್ಲಿ ಸಫಲತೆಯನ್ನು ಹೊಂದುವುದಲ್ಲದೇ ಹೆಚ್ಚು ಭಾಗ್ಯಶಾಲಿಗಳಾಗಿರುತ್ತಾರೆ.

ಇದನ್ನು ಓದಿ: ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ.

ಕಮಲದ ಹೂವಿನ ಚಿಹ್ನೆ ಶುಭದ ಸಂಕೇತ
ವಿಷ್ಣುವಿನ ಪ್ರಿಯವಾದ ಪುಷ್ಪ ಕಮಲ ಹಾಗಾಗಿ ಕಮಲದ ಹೂವಿನ ಚಿಹ್ನೆಯನ್ನು ಹಸ್ತದಲ್ಲಿ ಹೊಂದಿದ್ದರೆ ಅಂಥವರು ಭಾಗ್ಯವಂತರಾಗುತ್ತಾರೆ. ಇಂಥವರು ಪರಿಶ್ರಮಿಗಳಾಗಿರುತ್ತಾರೆ, ಇಂಥ ವ್ಯಕ್ತಿಗಳು ಮನೆ-ಧನ ಸಂಪತ್ತುಗಳನ್ನು ಹೇರಳವಾಗಿ ಹೊಂದಿರುತ್ತಾರೆ. ಜ್ಯೋತಿಷ್ಯದ ಅನುಸಾರ ಭಾಗ್ಯ ರೇಖೆ, ಶನಿ ಪರ್ವತ, ಗುರು ಪರ್ವತ, ಜೀವನ ರೇಖೆಯ ಜೊತೆಗೆ ಶುಕ್ರ ಪರ್ವತದ ಮೇಲೆ ಕಮಲದ ಹೂವಿನ ಚಿಹ್ನೆ ಇದ್ದರೆ ಅದನ್ನು ಹೆಚ್ಚು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರಿಂದ ಹೆಚ್ಚೆಚ್ಚು ಯಶಸ್ಸನ್ನು,ಖ್ಯಾತಿಯನ್ನು ಪಡೆಯುತ್ತಾರೆ.

ಶಂಖದ ಚಿಹ್ನೆ ಬುದ್ಧಿವಂತರು ಮತ್ತು ಜ್ಞಾನಿಗಳಾಗಿರುತ್ತಾರೆ
ಬೆರಳಲ್ಲಿ ಶಂಖದ ಚಿಹ್ನೆ ಇರುವ ವ್ಯಕ್ತಿಗಳು ಬುದ್ಧಿವಂತಿಕೆ, ಭಾಗ್ಯವಂತರು, ಅದೃಷ್ಟ, ಧನ-ಧಾನ್ಯ, ಯಶಸ್ಸು ಪಡೆಯುತ್ತಾರೆ. ಕೈ ಬೆರಳಿನ ಮೇಲ್ಭಾಗದಲ್ಲಿ ಶಂಖದ ಚಿಹ್ನೆ ಇದ್ದರೆ ಅದು ಬುದ್ಧಿವಂತಿಕೆ ಮತ್ತು ಜ್ಞಾನದ ಸಂಕೇತವಾಗಿದೆ. ಇಂಥವರು ಅದೃಷ್ಟವಂತರಾಗಿರುತ್ತಾರೆ ಮತ್ತು ಹೆಚ್ಚು ಹಣ ಮತ್ತು ಯಶಸ್ಸನ್ನು ಸಂಪಾದಿಸುತ್ತಾರೆ.

ಇದನ್ನು ಓದಿ: ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!

ವಿಷ್ಣು ಚಿಹ್ನೆ ಇದ್ದವರಿಗೆ ಸೋಲೇ ಇರುವುದಿಲ್ಲ
ಈ ರೇಖೆಯು ಎರಡು ಭಾಗವಾಗಿರುತ್ತದೆ. ರೇಖೆಯು ಮಧ್ಯ ಮತ್ತು ತೋರು ಬೆರಳನ್ನು ಸೇರಿಸಿದರೆ “V” ಆಕಾರದಲ್ಲಿ ಚಿಹ್ನೆ ಕಾಣುತ್ತದೆ. ಇದು ವಿಷ್ಣುವಿನ ಸಂಕೇತವಾಗಿದೆ. ಹಸ್ತದ ಮೇಲಿನ ಭಾಗದಲ್ಲಿರುವ ಹೃದಯ ರೇಖೆಯು ಗುರು ಪರ್ವತದ ಹತ್ತಿರದಿಂದ ಎರಡು ಭಾಗವಾಗಿ ವಿಭಜನೆಗೊಂಡಾಗ “V” ಆಕಾರವಾದರೆ ಅಂತವರು ಜೀವನದಲ್ಲಿ ಎಂದೂ ಸೋಲನ್ನು ಅನುಭವಿಸುವುದಿಲ್ಲವೆಂದು ಹೇಳಲಾಗುತ್ತದೆ. ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸಫಲತೆಯನ್ನು ಕಾಣುತ್ತಾರೆ. ಇನ್ನೂ ಹೀಗೆ ಹಲವಾರು ಚಿಹ್ನೆಗಳು ಶ್ರೀ ವಿಷ್ಣುಗೆ ಸಂಬಂಧಿಸಿದ್ದಾಗಿರುತ್ತದೆ.

click me!