ವಿಜಯಪುರ: ಕೊಲ್ಹಾರದಲ್ಲಿ ಅದ್ಧೂರಿಯಾಗಿ ನಡೆದ ತರಪಿ ಯಲ್ಲಮ್ಮದೇವಿ ಜಾತ್ರೆ

By Kannadaprabha NewsFirst Published Feb 8, 2023, 7:31 AM IST
Highlights

ಇಡೀ ಓಕುಳಿ ಸ್ಪರ್ಧೆಯಲ್ಲಿ ಗಮನ ಸೆಳೆದದ್ದು, ಯಲ್ಲಪ್ಪ ಕೊಠಾರಿ. ಎಲ್ಲ ಅಡೆತಡೆಗಳನ್ನ ಮೀರಿ  ಕೊನೆಗೂ ಹರಸಾಹಸಪಟ್ಟು ಕಂಬದ ತುದಿ ತಲುಪಿದ ಸ್ಪರ್ಧಾಳು ಕೊಲ್ಹಾರದ ಯಲ್ಲಪ್ಪ ಬಾಬು ಕೊಠಾರಿ ಕೈಗೆ ಅರ್ಚಕ ಸಂಗಪ್ಪ ಬಾಟಿ ಹಾಗೂ ಹಿರಿಯರು ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದರು.

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್‌

ವಿಜಯಪುರ(ಫೆ.08): ಉತ್ತರ ಕರ್ನಾಟಕ ಭಾಗದ ಕೆಲ ಜಾತ್ರೆಗಳಲ್ಲಿ ಓಕುಳಿ ಆಡುವುದು ಸಂಪ್ರದಾಯ. ಧಾರ್ಮಿಕ ಆಚರಣೆಯ ಜೊತೆ ಜೊತೆಗೆ ಜನರಲ್ಲಿ ಉತ್ಸಾಹ ತಂಬಲು, ಯುವಕರಲ್ಲಿ ಕ್ರೀಡಾಸ್ಪೂರ್ತಿ ತುಂಬಲು ಜಾತ್ರೆಗಳಲ್ಲಿ ಓಕುಳಿ ನಡೆಸಲಾಗುತ್ತೆ.  ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಐದು ದಿನಗಳ ಕಾಲ ಜರುಗುವ ಶಕ್ತಿದೇವತೆ ತರಪಿ ಯಲ್ಲಮ್ಮದೇವಿ ಜಾತ್ರೆಯಲ್ಲಿ ಅದ್ಧೂರಿಯಾಗಿ ಓಕುಳಿ ನಡೆಯಿತು.

Latest Videos

ಜಿದ್ದಾಜಿದ್ದಿನ ಹಾಲ ಓಕುಳಿ..!

ಕಳೆದ ಮೂರು ದಿನಗಳಿಂದ ಅತಿ ವಿಜೃಂಭಣೆಯಿಂದ ನಡೆಯುತ್ತಿದ್ದು ಸೋಮವಾರ ಬೆಳಿಗ್ಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ನಂತರ ಸಂಜೆ ಜಿದ್ದಾಜಿದ್ದಿನ ಹಾಲೋಕುಳಿ ಸ್ಪರ್ಧೆಯೂ ಸಂಭ್ರಮದಿಂದ ಜರುಗಿತು. ತೆರಪಿ ಯಲ್ಲಮ್ಮದೇವಿಯ ಅರ್ಚಕ ಸಂಗಪ್ಪ ಬಾಟಿಯವರ ನೇತೃತ್ವದಲ್ಲಿ ಹಾಲೋಕುಳಿ ಸ್ಪರ್ಧೆಗಾಗಿ ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಯಲ್ಲಮ್ಮದೇವಿ ಭಾವಚಿತ್ರ ಹಾಗೂ ಹಾಲುತುಪ್ಪವನ್ನು ದೇವಸ್ಥಾನ ಮುಂಭಾಗದ ಹಾಲೋಕುಳಿ ಸ್ಥಳಕ್ಕೆ ತರಲಾಯಿತು. ದೇವಿಗೆ ಪೂಜೆ ನೆರವೇರಿಸಿ ಹಾಲುತುಪ್ಪವನ್ನು ಜಾರುವ ಕಂಬದ ತುದ್ದಿಗೆ ತಲುಪಿಸಿದ ನಂತರ ಜಿದ್ದಾಜಿದ್ದಿನ ಹಾಲೋಕುಳಿ ಸ್ಪರ್ಧೆ ಆರಂಭವಾಯಿತು. 

ದೇವರು ನೀಡಿದ ಶಿಕ್ಷೆಯನ್ನೇ ಉತ್ಸವವಾಗಿಸಿದ ಜನ: ಲಕ್ಷ್ಮಿ ರಂಗನಾಥಸ್ವಾಮಿಯ ಅನ್ನದಕೋಟೆ ಉತ್ಸವ ಇದು

ಓಕುಳು ಕಂಬಕ್ಕೆ ಜಾರುವ ದ್ರವ ಸವರಿ ಸ್ಪರ್ಧೆ..!

ಸ್ಪರ್ಧೆಗೂ ಮುನ್ನ ಕಂಬಕ್ಕೆ ಜಾರುವಂತಹ ದ್ರವವನ್ನು ಲೇಪಿಸಿರಲಾಗಿರುತ್ತದೆ. ಅಲ್ಲದೇ ಸ್ಪರ್ಧೆಯಲ್ಲಿ ಕಂಬ ಏರಲೆತ್ನಿಸುವ ಸಾಹಸಿ ಸ್ಪರ್ಧಾಳುಗಳು ತುದಿಗೆ ತಲುಪದಂತೆ ಮೇಲಿನಿಂದ ಹಾಲುತುಪ್ಪವನ್ನು ಸುರಿಯಲಾಗುತ್ತದೆ. ಎಲ್ಲಾ ಅಡೆತಡೆಗಳ ಮಧ್ಯೆ ಕಂಬಕ್ಕೆ ಉದ್ದನೆಯ ಬಟ್ಟೆಗಳನ್ನು ಕಟ್ಟಿಕೊಂಡು ಅದೇ ಬಟ್ಟೆಯಲ್ಲಿ ಕಾಲಿಡಲು ಮತ್ತೊಂದು ಬಟ್ಟೆ ಗಂಟು ಹಾಕಿ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲಕ್ಕೆ ಏರಬೇಕಾಗುತ್ತೆ. ಹೀಗೆ ಜಾರುವ ಕಂಬ, ಎದುರು ಪಾಳಯದ ಸ್ಪರ್ಧಾಳುಗಳ ಅಡೆತಡೆಯ ನಡುವೆ ಓಕುಳಿ ಕಂಬ ಹತ್ತಿ ಮೇಲೆ ತಲುಪುದು ಸಾಹಸದ ಕೆಲಸವಾಗಿರುತ್ತೆ.

ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್: ಮೈಲಾರ ಕಾರ್ಣಿಕೋತ್ಸವ

ಹರಸಾಹಸಪಟ್ಟು ಕಂಬ ಏರಿದ ಯಲ್ಲಪ್ಪ ಕೊಠಾರಿಗೆ ಬೆಳ್ಳಿ ಕಡಗ..!

ಇಡೀ ಓಕುಳಿ ಸ್ಪರ್ಧೆಯಲ್ಲಿ ಗಮನ ಸೆಳೆದದ್ದು, ಯಲ್ಲಪ್ಪ ಕೊಠಾರಿ. ಎಲ್ಲ ಅಡೆತಡೆಗಳನ್ನ ಮೀರಿ  ಕೊನೆಗೂ ಹರಸಾಹಸಪಟ್ಟು ಕಂಬದ ತುದಿ ತಲುಪಿದ ಸ್ಪರ್ಧಾಳು ಕೊಲ್ಹಾರದ ಯಲ್ಲಪ್ಪ ಬಾಬು ಕೊಠಾರಿ ಕೈಗೆ ಅರ್ಚಕ ಸಂಗಪ್ಪ ಬಾಟಿ ಹಾಗೂ ಹಿರಿಯರು ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದರು.

5 ದಿನಗಳ ಅದ್ದೂರಿ ಜಾತ್ರೆ..!

ಜಾತ್ರೆಯ ಮೊದಲ ದಿನವಾದ ಶನಿವಾರ ಸಂಜೆ ಭಕ್ತರು ಟೆಂಗಿನ ಗರಿ, ನೀರಲ, ಬೋಚಿ, ಬಾಳೆಗಳಂತಹ ಹಂದರತಪ್ಪಲಗಳನ್ನು 110 ಕ್ಕೂ ಅಧಿಕ ಎತ್ತಿನಬಂಡಿಗಳಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಅರ್ಪಿಸಿದರು. ರಾತ್ರಿ ಯಲ್ಲಮ್ಮದೇವಿ ಬಯಲಾಟ ಜರುಗಿತು. ಎರಡನೇ ದಿನ ಕುಂಭಮೇಳದೊಂದಿಗೆ ಯಲ್ಲಮ್ಮದೇವಿಯ ಪಲ್ಲಕ್ಕಿ ಉತ್ಸವ ಮತ್ತು ಕಳಸದ ಮೆರವಣಿಗೆ ಸಂಭ್ರದಿಂದ ಜರುಗಿತು. ನಂತರ ಜೋಗತಿಯ ನೃತ್ಯದೊಂದಿಗೆ ನಡೆದ ಭಂಡಾರ ಜಾತ್ರೆಯಲ್ಲಿ ಭಕ್ತರು ಭಕ್ತಿ ಭಂಡಾರದಲ್ಲಿ ಮಿಂದೆದ್ದರು. ರಾತ್ರಿ ಯಲ್ಲಮ್ಮದೇವಿ ನಾಟ್ಯ ಸಂಘದಿಂದ ಸಾಮಾಜಿ ನಾಟಕ ಪ್ರದರ್ಶನಗೊಂಡಿತು. ಈ ವೇಳೆ ಹಿರಿಯರಾದ ಹಣಮಂತ ಕೆ. ಬೆಳ್ಳುಬ್ಬಿ, ಬಸವರಾಜ ಗಾಜಿ, ಮಳೇಪ್ಪ ಬರಗಿ, ಬಸಪ್ಪ ಕೊಠಾರಿ ಮಲ್ಲಪ್ಪ ಬಾಟಿ, ವಿರೂಪಾಕ್ಷಿ ಕೊಲಕಾರ ಹಾಗೂ ಹಲವರಿದ್ದರು.

click me!