ಶಂಖದ ಮಹಿಮೆಯಿಂದ ನಿಮ್ಮ ಮನೆಯಾಗಬಹುದು ಲಕ್ಷ್ಮೀ ನಿವಾಸ!

By Suvarna NewsFirst Published Jul 14, 2021, 3:16 PM IST
Highlights

ಮಾತಾ ಲಕ್ಷ್ಮಿ ಶಂಖದ ಧ್ವನಿಯನ್ನು ತುಂಬಾ ಇಷ್ಟಪಡುತ್ತಾಳೆ. ಆದರೆ ಅವಳು ವಿಶೇಷವಾಗಿ ದಕ್ಷಿಣವರ್ತಿ ಶಂಖವನ್ನು ಇಷ್ಟಪಡುತ್ತಾಳೆ. ದಕ್ಷಿಣವರ್ತಿ ಶಂಖ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ.

ದೂಗಳೆನಿಸಿಕೊಂಡವರ ಎಲ್ಲರ ಮನೆಯಲ್ಲೂ ಒಂದೊಂದು ಶಂಖ ಇರುವುದು ರೂಢಿ. ಕೆಲವರ ಮನೆಯಲ್ಲಿ ಪರಂಪರೆಯಿಂದ ಬಂದ, ಹಿರಿಯರು ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆ ಊದುತ್ತ ಬಂದ ಶಂಖವಿರುತ್ತದೆ. ಕೆಲವರು ತಲೆತಲಾಂತರಗಳಿಂದಲೂ ಶ್ರೀಮಂತರಾಗಿಯೇ ಉಳಿಯುತ್ತಾರೆ. ಆದರೆ ಇದಕ್ಕೆ ಕಾರಣ ತಿಳಿದಿರುವುದಿಲ್ಲ. ಇವರು ಪರಿಶ್ರಮದಿಂದ ಹಣ ಮಾಡಿದ್ದಾರೆ ಎಂದು ನೀವು ಅಂದುಕೊಂಡರೆ, ಕೆಲವೊಮ್ಮೆ ಅದಕ್ಕೂ ಮೀರಿ, ಅಗೋಚರ ಕಾರಣಗಳೂ ಇರುತ್ತದೆ. ಶಂಖದ ವೈವಿಧ್ಯ ಹಾಗೂ ಆದರಿಂದ ಬರುವ ಅದೃಷ್ಟ ಅವುಗಳಲ್ಲಿ ಒಂದು.

ದೇವತೆಗಳು ಮತ್ತು ಅಸುರರು ಒಟ್ಟಾಗಿ ಕ್ಷೀರಸಾಗರವನ್ನು ಮಥಿಸಿದಾಗ, ಅದರಿಂದ ಹೊರಬಂದ 14 ರತ್ನಗಳಲ್ಲಿ ಶಂಖವೂ ಒಂದು. ಸನಾತನ ಧರ್ಮದಲ್ಲಿ, ಬಹುತೇಕ ಎಲ್ಲ ದೇವತೆಗಳನ್ನು ಪೂಜಿಸುವಾಗ ಶಂಖ ಊದಲಾಗುತ್ತದೆ. ಶಂಖದ ಶಬ್ದವು ಇಡೀ ವಾತಾವರಣವನ್ನು ಸಕಾರಾತ್ಮಕತೆಯಿಂದ ತುಂಬುತ್ತದೆ. ಮಾತಾ ಲಕ್ಷ್ಮಿ ಶಂಖದ ಧ್ವನಿಯನ್ನು ತುಂಬಾ ಇಷ್ಟಪಡುತ್ತಾಳೆ. ಆದರೆ ಅವಳು ವಿಶೇಷವಾಗಿ ದಕ್ಷಿಣವರ್ತಿ ಶಂಖವನ್ನು ಇಷ್ಟಪಡುತ್ತಾಳೆ. ದಕ್ಷಿಣವರ್ತಿ ಶಂಖ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ.

ಇದರಿಂದ ಮನೆಯಲ್ಲಿ ಎಂದಿಗೂ ಹಣ ದಾರಿದ್ರ್ಯ ಬರದು. ಅನ್ನಕ್ಕೆ ಕೊರತೆಯಾಗದು. ಮನೆಮಂದಿಯ ಬದುಕಿನಲ್ಲಿ ಸಂತೋಷ, ಸಂಭ್ರಮ ನೆಲೆಗೊಂಡಿರುತ್ತದೆ ಎಂಬುದು ಪುರಾತನ ಶಾಸ್ತ್ರಗಳು ಹೇಳುವ ಮಾತುಗಳು. ಮನೆಯ ದಾರಿದ್ರ್ಯವನ್ನು ನಿವಾರಿಸುವ ಶಂಖವನ್ನು ಇಟ್ಟುಕೊಳ್ಳುವುದಕ್ಕೂ ಒಂದು ಕ್ರಮವಿದೆ. ಆ ಕ್ರಮದಲ್ಲಿ ಅದನ್ನು ಇಟ್ಟು ಪೂಜಿಸದಿದ್ದರೆ, ಕಾಪಾಡಿಕೊಳ್ಳದಿದ್ದರೆ ಇಚ್ಛಿತ ಫಲ ಸಿದ್ಧಿಸುವುದಿಲ್ಲ ಎಂಬ ನಂಬಿಕೆಯೂ ಇದೆ. ಹೀಗಾಗಿ ಕೆಳಗಿನ ಕ್ರಮದಲ್ಲಿ ಶಂಖವನ್ನು ನಿತ್ಯವೂ ಬಳಸುವುದು ಉತ್ತಮ. ಇದುವೇ ಶಾಸ್ತ್ರ ಸಮ್ಮತವೂ ಹೌದು. 

ಶಂಖವನ್ನು ಇಡುವ ರೀತಿ 
ಬಡತನವನ್ನು ತೊಡೆದುಹಾಕಲು ಅಥವಾ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು, ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಶಂಖವನ್ನು ಇರಿಸುವಂತೆ ಸೂಚಿಸಲಾಗುತ್ತದೆ. ಇದರಿಂದಾಗಿ ಸಂಪತ್ತಿನ ದೇವಿಯ ಅನುಗ್ರಹ ಸದಾ ನಿಮ್ಮ ಮನೆಯ ಮೇಲೆ ಇರಲಿದೆ. ಈ ದಕ್ಷಿಣವರ್ತಿ ಶಂಖವನ್ನು ಮನೆಯಲ್ಲಿ ಇಡುವ ಮೊದಲು ಅದನ್ನು ಶುದ್ಧೀಕರಿಸಿ. ನಂತರ ಅದನ್ನು ನಿಯಮಗಳ ಪ್ರಕಾರ ಪೂಜಿಸಿ ಪೂಜಾ ಮನೆಯಲ್ಲಿ ಸ್ಥಾಪಿಸಿ. ಪ್ರತಿದಿನ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ಶಂಖವನ್ನು ಸಹ ಪೂಜಿಸಬೇಕು. ದಿನಕ್ಕೆ ಒಂದು ಬಾರಿ ಅದನ್ನು ಸಂಜೆಯ ವೇಳೆಯಲ್ಲಿ ಊದಬೇಕು. ಇದು ಮನೆಗೆ ಮನೆಮಂದಿಗೆ ಶುಭವನ್ನು ತರುತ್ತದೆ. 


ದಕ್ಷಿಣವರ್ತಿ ಶಂಖದ ಲಾಭ
ವ್ಯವಹಾರದಲ್ಲಿ ಯಶಸ್ಸು- ವ್ಯವಹಾರದಲ್ಲಿ ತೊಂದರೆ ಇದ್ದರೆ, ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ಉಳಿಯದಿದ್ದರೆ ನಿಮ್ಮ ಕೆಲಸದ ಸ್ಥಳದಲ್ಲಿ ಭಗವಾನ್ ವಿಷ್ಣುವಿನ ಫೋಟೋದ ಜೊತೆಗೆ ಶಂಖವನ್ನು ಇರಿಸಿ. ದೇವರು ಮತ್ತು ಶಂಖವನ್ನು ಪ್ರತಿದಿನ ಪೂಜಿಸಿ, ನಂತರ ಗಂಗಾಜಲವನ್ನು ಶಂಖದಲ್ಲಿ ತುಂಬಿಸಿ ಇಡೀ ಅಂಗಡಿ ಅಥವಾ ಕಚೇರಿಯಲ್ಲಿ ಸಿಂಪಡಿಸಿ.

ದಂಪತಿಗಳ ಬದುಕು ರಸಭರಿತವಾಗುತ್ತೆ!
ವೈವಾಹಿಕ ಜೀವನದಲ್ಲಿನ ಯಾವುದೇ ರೀತಿಯ ಸಮಸ್ಯೆಗಳನ್ನು ನಿವಾರಿಸಲು ನಿಮ್ಮ ಹಾಸಿಗೆಯ ಬಳಿ ಸೀಸದಿಂದ ಮಾಡಿದ ಬಟ್ಟಲಿನಲ್ಲಿ ಸಣ್ಣ ಶಂಖವನ್ನು ಇರಿಸಿ. ಹೀಗೆ ಮಾಡುವುದರಿಂದ ಈ ಕೋಣೆಯಲ್ಲಿನ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಮತ್ತು ಸಂಬಂಧದಲ್ಲಿ ಮಾಧುರ್ಯ ಬರುತ್ತದೆ. ಜೊತೆಗೆ ಸಂತಾನ ಫಲ ಪ್ರಾಪ್ತಿಯಾಗುತ್ತದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರದೇ ದಂಪತಿಗಳು ಕೊನೆಯವರೆಗೂ ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಇರುತ್ತಾರೆ ಎಂಬ ನಂಬಿಕೆ ಇದೆ

ಮನೆಮಂದಿ ಆರೋಗ್ಯವಂತರಾಗಿರಲು ಸಹಕಾರಿ
ಮನೆಯ ಸದಸ್ಯರು ಸದಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಮನೆಯಲ್ಲಿ ಅನಗತ್ಯ ಜಗಳ ನಡೆಯುತ್ತಿದ್ದರೆ, ಶಂಖವನ್ನು ಪೂಜಿಸಿ ಅದರಿಂದ ತುಳಸಿಗೆ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮನೆಯ ಸಮಸ್ಯೆ ನಿವಾರಣೆಯಾಗುತ್ತದೆ.

click me!