ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಆ.11) : ಕಲಿಯುಗದ ಕಾಮಧೇನು ನೆಲೆಸಿರುವ ಪುಣ್ಯ ಕ್ಷೇತ್ರ ಮಂತ್ರಾಲಯ ಈಗ ಸಂಪೂರ್ಣ ಬದಲಾಗಿದೆ. ರಾಯರ ದರ್ಶನಕ್ಕೂ ಮುನ್ನವೇ ಶ್ರೀಮಠಕ್ಕೆ ಬರುವ ಭಕ್ತರಲ್ಲಿ ಭಕ್ತಿಯ ಅನಾವರಣ ಆಗುವಂತೆ ಮಂತ್ರಾಲಯ ಮಠವನ್ನು ಅಲಂಕಾರಗೊಳಿಸಲಾಗಿದೆ. ಶ್ರೀ ರಾಘವೇಂದ್ರ ಸ್ವಾಮೀಜಿಗಳ ದರ್ಶನಕ್ಕಾಗಿ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಬರುತ್ತಾರೆ. ಬರುವ ಭಕ್ತರಿಗಾಗಿ ಶ್ರೀಮಠದ ವಸತಿ ನೂರಾರು ವಸತಿ ಗೃಹಗಳ ವ್ಯವಸ್ಥೆ ಇದೆ. ಅದೇ ರೀತಿಯಲ್ಲಿ ಶ್ರೀಮಠಕ್ಕೆ ಬರುವ ಭಕ್ತರ ಓಡಾಟಕ್ಕೆ ಯಾವುದೇ ರೀತಿಯ ಅಡಚಣೆ ಆಗಬಾರದು ಎಂದು ಮಂತ್ರಾಲಯ ಮಠ ಈ ವರ್ಷದ ರಾಯರ 351ನೇ ಆರಾಧನಾ ಮಹೋತ್ಸವ ನಿಮಿತ್ಯ ಇಡೀ ಮಂತ್ರಾಲಯ ಚಿತ್ರಣವೇ ಬದಲಾಗುವಂತೆ ಮಾಡಿದ್ದಾರೆ.
ರಾಯರ 351ನೇ ಆರಾಧನೆಗೆ ವಿದ್ಯುಕ್ತ ಚಾಲನೆ: ವಿದ್ಯುದ್ದೀಪ, ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿದೆ ಮಂತ್ರಾಲಯ
ಮಂತ್ರಾಲಯ ಮಠದ ಹೊರಭಾಗದಲ್ಲಿ ವಿಶಾಲ ಕಾರಿಡಾರ್ ನಿರ್ಮಾಣ:
ಮಂತ್ರಾಲಯ(Mantralaya) ಮಠಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಮಂತ್ರಾಲಯಕ್ಕೆ ಭಕ್ತರು ಬಂದಿರಲಿಲ್ಲ. ಹೀಗಾಗಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಮಂತ್ರಾಲಯ ಮಠವೂ ಸಹ ಅಭಿವೃದ್ಧಿ ಆಗುತ್ತಿದೆ. ಅದರಲ್ಲೂ ರಾಯರ ಉತ್ತರಾಧನೆ ರಥೋತ್ಸವ ವೇಳೆಯಲ್ಲಿ ಸಾವಿರಾರು ಜನರು ಬರುತ್ತಾರೆ. ಆ ವೇಳೆ ಭಕ್ತರು ಓಡಾಟಕ್ಕೆ ಅಡಚಣೆ ಆಗುತ್ತಿತ್ತು. ಇದನ್ನ ಗಮನಿಸಿದ ಮಂತ್ರಾಲಯ ಮಠವೂ ವಿಶಾಲ ಪ್ರದೇಶದ ಕಾರಿಡಾರ್ ನಿರ್ಮಾಣ ಮಾಡಿದೆ. 140 ಅಡಿ ಅಗಲ ಇರುವ ಕಾರಿಡಾರ್ ನಿರ್ಮಾಣವಾಗಿದ್ದು, ಸಾವಿರಾರು ಭಕ್ತರು ಕಾರಿಡಾರ್ ನಲ್ಲಿ ಓಡಾಟ ಮಾಡಬಹುದಾಗಿದೆ.
ಕಾರಿಡಾರ್ ಗೋಡೆಗಳ ಮೇಲೆ ಉಬ್ಬು ಚಿತ್ರಗಳ ಅನಾವರಣ:
ಮಂತ್ರಾಲಯದ ಚಿತ್ರಣ ಈಗ ಸಂಪೂರ್ಣ ಬದಲಾಗಿ ಹೋಗಿದೆ. ಈ ಹಿಂದೆ ಶ್ರೀಮಠದ ಹೊರಗಡೆ ಇದ್ದ ರಾಯರ ಮೂರ್ತಿಯನ್ನು ತೆರವು ಮಾಡಲಾಗಿದೆ. ಸುಮಾರು 140 ಅಡಿ ಅಗಲದ ವಿಶಾಲ ಕಾರಿಡಾರ್ ನಿರ್ಮಾಣ ಮಾಡಿದ್ದಾರೆ. ಕಾರಿಡಾರ್ ನ ಎರಡು ಬದಿಯ ಗೋಡೆಗಳ ಮೇಲೆ ಬಣ್ಣ- ಬಣ್ಣದ ಚಿತ್ರಗಳನ್ನು ನೋಡಬಹುದಾಗಿದೆ. ಎರಡು ಕಡೆಯ ಗೋಡೆಗಳ ಮೇಲೆ ತಮಿಳುನಾಡಿನ ಚಿತ್ರಕಲೆಯಾದ ಉಬ್ಬು ಚಿತ್ರಗಳು ಬಿಡಿಸಲಾಗಿದೆ. ಅಷ್ಟೇ ಅಲ್ಲದೆ ಉಬ್ಬು ಚಿತ್ರಗಳಲ್ಲಿ ಮಹಾಭಾರತ, ರಾಮಾಯಣ ಹಾಗೂ ಶ್ರೀಕೃಷ್ಣ ನ ಪವಾಡಗಳು ಮತ್ತು ಶ್ರೀರಾಘವೇಂದ್ರ ಸ್ವಾಮೀಜಿಗಳ ಜೀವನ ಚರಿತ್ರೆ ಸಾರುವ ಹತ್ತಾರು ಚಿತ್ರಗಳು ಶ್ರೀಮಠದ ಮುಖ್ಯದ್ವಾರದಲ್ಲಿ ಕಾಣಬಹುದಾಗಿದೆ.
ಶ್ರೀಮಠ ಸಂಪೂರ್ಣ ದೀಪಾಂಲಕಾರ:
ಮಂತ್ರಾಲಯ ಮಠದಲ್ಲಿ ಈಗ ರಾಯರ ಆರಾಧನಾ ಮಹೋತ್ಸವ ಸಂಭ್ರಮೋತ್ಸವ ನಡೆಯುತ್ತಿದೆ. ಈ ಸಂಭ್ರಮದಲ್ಲಿ ಭಾಗವಹಿಸಲು ದೇಶದ ನಾನಾ ಕಡೆಗಳಿಂದ ಲಕ್ಷಾಂತರ ಭಕ್ತರು ಶ್ರೀಮಠಕ್ಕೆ ಬರುತ್ತಿದ್ದಾರೆ. ಹೀಗಾಗಿ ಇಡೀ ಶ್ರೀಮಠದಲ್ಲಿ ಈಗ ಬಣ್ಣ ಬಣ್ಣದ ದೀಪಾಂಲಕಾರ ಭಕ್ತರಲ್ಲಿ ರಾಯರ ಮೇಲಿನ ಭಕ್ತಿ ಇಮ್ಮಡಿಗೊಳಿಸುವಂತೆ ಅಲಂಕಾರ ಮಾಡಲಾಗಿದೆ.
ಮಂತ್ರಾಲಯ: ಇಂದಿನಿಂದ ರಾಯರ 351ನೇ ಆರಾಧಾನಾ ಮಹೋತ್ಸವ
ಒಟ್ಟಿನಲ್ಲಿ ಕಲಿಯುಗದ ಕಾಮಧೇನು ನೆಲೆಸಿರುವ ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ ಅದ್ಧೂರಿ ಆಗಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಮಂತ್ರಾಲಯ ಆರಾಧನಾ ಮಹೋತ್ಸವಕ್ಕೆ ಹೋಗಿಲ್ಲ ಎಂಬ ಭಕ್ತರು ಈ ವರ್ಷ ಖುಷಿಯಿಂದ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆದು ಪುನೀತರಾಗಬಹುದು.