ವಿಷ್ಣುವಿನ ಆರಾಧನೆ ಮಾಡುವ ಭಕ್ತರ ಸಂಖ್ಯೆ ಹೆಚ್ಚಿದೆ. ಕೆಲವರು ಪ್ರತಿ ದಿನ ವಿಷ್ಣು ಸಹಸ್ರನಾಮವನ್ನು ಪಠಿಸ್ತಾರೆ. ಆದ್ರೆ ಅದನ್ನು ಜಪಿಸುವಾಗ ಯಾವೆಲ್ಲ ನಿಯಮ ಪಾಲನೆ ಮಾಡ್ಬೇಕು ಎಂಬುದು ತಿಳಿಯೋದಿಲ್ಲ. ತಪ್ಪಾದ ಕೆಲಸ ಫಲ ನೀಡೋದಿಲ್ಲ ಎಂಬುದು ನೆನಪಿರಲಿ.
ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಾತ್ರವಲ್ಲ ಮಂತ್ರ ಪಠಣೆಗೂ ಪ್ರಾಮುಖ್ಯತೆ ನೀಡಲಾಗಿದೆ. ಮಂತ್ರ ಪಠಿಸುವುದ್ರಿಂದ ದೇವರು ಕೃಪೆ ತೋರುತ್ತಾನೆ ಎಂಬುದು ಮಾತ್ರವಲ್ಲ ಮಂತ್ರದಲ್ಲಿ ಮಾನಸಿಕ ಆರೋಗ್ಯ ವೃದ್ಧಿಸುವ ಶಕ್ತಿಯಿದೆ ಎಂದು ನಂಬಲಾಗಿದೆ. ಮಂತ್ರ ಜಪಿಸುವುದ್ರಿಂದ ಮನಸ್ಸು ಮತ್ತು ಮೆದುಳಿಗೆ ಶಕ್ತಿಯ ಸಂವಹನವಾಗುತ್ತದೆ. ವಿಭಿನ್ನ ಮಂತ್ರಗಳು ನಿಮ್ಮ ಜೀವನದಲ್ಲಿ ವಿಶೇಷ ಪರಿಣಾಮವನ್ನು ಬೀರುತ್ತವೆ ಎಂದು ನಂಬಲಾಗಿದೆ.
ಹಿಂದೂ (Hindu) ಧರ್ಮದಲ್ಲಿ ಲಕ್ಷಾಂತರ ಮಂತ್ರಗಳಿವೆ. ಅದ್ರಲ್ಲಿ ವಿಷ್ಣು ಸಹಸ್ರನಾಮ ಕೂಡ ಒಂದು. ಭಕ್ತರು ಭಕ್ತಿಯಿಂದ ವಿಷ್ಣು ಸಹಸ್ರನಾಮ (Vishnu Sahasranama) ವನ್ನು ಜಪಿಸುತ್ತಾರೆ. ಈ ಸ್ತೋತ್ರ ಪಠಣೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಆರೋಗ್ಯ ಪ್ರಯೋಜನಗಳು ಇದ್ರಿಂದ ಲಭಿಸುತ್ತವೆ. ಮಲಗುವ ಸಮಯದಲ್ಲಿ ಕೆಟ್ಟ ಕನಸುಗಳು ಬೀಳದಂತೆ, ಯಾವುದೇ ಭಯವಿಲ್ಲದೆ ನಿದ್ರೆ ಮಾಡಬೇಕೆಂದ್ರೆ ವಿಷ್ಣು ಸಹಸ್ರನಾಮವನ್ನು ಪಠಿಸುವಂತೆ ಸಲಹೆ ನೀಡಲಾಗುತ್ತದೆ. ಈ ಸ್ತೋತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಸುಖ (Happiness), ಶಾಂತಿ ನೆಲೆಸುವ ಜೊತೆಗೆ ಆರ್ಥಿಕ ವೃದ್ಧಿಯನ್ನು ಕಾಣಬಹುದಾಗಿದೆ. ವಿಷ್ಣು ಸಹಸ್ರನಾಮವನ್ನು ಪ್ರತಿ ದಿನ ಜಪಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಈ ಮಂತ್ರ ಪಠಿಸುವ ವೇಳೆ ಕೆಲ ಸಣ್ಣಪುಟ್ಟ ತಪ್ಪುಗಳನ್ನು ನಾವು ಮಾಡಿರ್ತೇವೆ. ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಾವು ಮಂತ್ರ ಪಠಿಸಿದ ಸಂಪೂರ್ಣ ಫಲ ನಮಗೆ ಪ್ರಾಪ್ತಿಯಾಗುವುದಿಲ್ಲ. ವಿಷ್ಣು ಸಹಸ್ರನಾಮವನ್ನು ಪಠಿಸುವಾಗ ಏನೇನು ಮಾಡಬಾರದು ಎಂಬುದನ್ನು ನಾವು ತಿಳಿದಿರಬೇಕು.
7 ವರ್ಷ ನಡೆಯಲಿದೆ ಕೇತು ಮಹಾದಶಾ; ಪರಿಣಾಮ, ಪರಿಹಾರವೇನು?
ವಿಷ್ಣು ಸಹಸ್ರನಾಮ ಪಠಿಸುವ ವೇಳೆ ಈ ತಪ್ಪು ಮಾಡ್ಬೇಡಿ :
ಅಶುದ್ಧ ದೇಹ : ಅಶುದ್ಧ ದೇಹ ಮತ್ತು ಮನಸ್ಸಿನಲ್ಲಿ ವಿಷ್ಣು ಸಹಸ್ರನಾಮವನ್ನು ಜಪಿಸಬಾರದು. ಇದು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಬೆಳಿಗ್ಗೆ ಎದ್ದು, ಸ್ನಾನ ಮಾಡಿ, ಶುದ್ಧ ಬಟ್ಟೆಯನ್ನು ಧರಿಸಿ, ದೇವರ ಮನೆಯಲ್ಲಿ ಕುಳಿತು ಈ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡಿದ್ರೆ ವಿಷ್ಣುವಿನ ಸಂಪೂರ್ಣ ಕೃಪೆ ನಿಮ್ಮ ಮೇಲಿರುತ್ತದೆ.
ಕೆಟ್ಟ ಆಲೋಚನೆ ಬರದಂತೆ ನೋಡಿಕೊಳ್ಳಿ : ಅನೇಕರು ಕಾಟಾಚಾರಕ್ಕೆ ವಿಷ್ಣು ಸಹಸ್ರನಾಮವನ್ನು ಪಠಿಸುತ್ತಿರುತ್ತಾರೆ. ಅವರು ವಿಷ್ಣು ಸಹಸ್ರನಾಮ ಜಪಿಸುವಾಗ ಕೂಡ ಬೇರೆ ಆಲೋಚನೆ ಮಾಡ್ತಿರುತ್ತಾರೆ. ಕೆಲವರು ಕೆಟ್ಟ ಆಲೋಚನೆಯಲ್ಲಿಯೇ ಈ ಸ್ತೋತ್ರ ಹೇಳ್ತಾರೆ. ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಬಂದಾಗ ಈ ಮಂತ್ರ ಹೇಳಿದ್ರೆ ಯಾವುದೇ ಫಲ ಸಿಗುವುದಿಲ್ಲ. ವಿಷ್ಣು ಸಹಸ್ರನಾಮ ಪಠಿಸುವ ವೇಳೆ ಮನಸ್ಸು ಒಂದೆಡೆ ಕೇಂದ್ರೀಕೃತವಾಗಿರಬೇಕು. ಮನಸ್ಸು ಶುದ್ಧವಾಗಿರಬೇಕು.
ಈ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಠಿಸಬೇಡಿ : ಮನೆಯಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಲು ಸಮಯವಿದೆ. ಯಾವುದು ಒಳ್ಳೆಯ ಸಮಯ ಎಂಬುದನ್ನು ತಿಳಿದಿರಬೇಕು. ಸೂರ್ಯೋದಯವಾದ ತಕ್ಷಣ ಈ ಮಂತ್ರ ಜಪಿಸುವುದು ಅಂದ್ರೆ ಮುಂಜಾನೆ ವಿಷ್ಣು ಸಹಸ್ರನಾಮ ಹೇಳುವುದು ಒಳ್ಳೆಯದು. ಇದು ಸಾಧ್ಯವಿಲ್ಲ ಎನ್ನುವವರು ಸಂಜೆ ಸ್ನಾನ ಇತ್ಯಾದಿ ಮಾಡಿದ ನಂತರ ಪಠಿಸಬೇಕು. ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಮಧ್ಯಾಹ್ನ ಪಠಿಸಬಾರದು. ಮಧ್ಯಾಹ್ನದ ಸಮಯ ದೇವರ ವಿಶ್ರಾಂತಿಯ ಸಮಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ಸಮಯದಲ್ಲಿ ಪೂಜೆ ಸಲ್ಲದು.
ಅಪ್ಪಿ ತಪ್ಪಿಯೂ ಈ ರಾಶಿಯವರು ಸಾಲ ಕೊಟ್ಟು ಕೋಡಂಗಿ ಆಗ್ಬೇಡಿ
ಆಹಾರ ಸೇವನೆ ಹೀಗಿರಲಿ : ವಿಷ್ಣು ಸಹಸ್ರನಾಮ ಪಠಿಸುವವರು ಆಹಾರದ ಬಗ್ಗೆಯೂ ಗಮನ ನೀಡಬೇಕು. ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವ ಮೊದಲು ಅಥವಾ ನಂತರ ಮಾಂಸ, ಮದ್ಯ ಮುಂತಾದ ತಾಮಸಿಕ ಆಹಾರವನ್ನು ಸೇವಿಸಬಾರದು. ಇದ್ರಿಂದ ಸಕಾರಾತ್ಮಕ ಫಲಿತಾಂಶ ಸಿಗುವುದಿಲ್ಲ.
ಈ ಬಟ್ಟೆ ಧರಿಸಿ ಹೇಳಿ ವಿಷ್ಣು ಸಹಸ್ರನಾಮ : ಕಪ್ಪು ಅಥವಾ ಕೊಳಕು ಬಟ್ಟೆಗಳನ್ನು ಧರಿಸಿ ವಿಷ್ಣು ಸಹಸ್ರನಾಮವನ್ನು ಪಠಿಸಬಾರದು. ಹಳದಿ ಬಣ್ಣದ ಬಟ್ಟೆ ಧರಿಸಿ ಸ್ತೋತ್ರವನ್ನು ಪಠಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹಳದಿ ಬಣ್ಣ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ಹಾಗಾಗಿ ಆತನಿಗೆ ಇಷ್ಟವಾದ ಬಟ್ಟೆ ಧರಿಸಿ ಮಂತ್ರ ಪಠಿಸಿ.