ಕಾಶಿ ಯಾರಿಗೆ ತಾನೇ ಗೊತ್ತಿಲ್ಲ? ಕಾಶಿ ಎಂದರೆ ಗಂಗೆ, ಕಾಶಿ ಎಂದರೆ ಮೋಕ್ಷ, ಕಾಶಿ ಎಂದರೆ ವಿಶ್ವನಾಥ, ಕಾಶಿ ಹಿಂದೂಗಳ ಹೆಮ್ಮೆ. ಇದರ ಹೊರತಾಗಿ ಕಾಶಿಯ ಇತಿಹಾಸ, ವಿಶೇಷಗಳು ನಿಮಗೆಷ್ಟು ಗೊತ್ತು?
ಕಾಶಿ ಎಂದರೆ ಹಿಂದೂಗಳ ಆಧ್ಯಾತ್ಮ ಕೇಂದ್ರ, ಮೋಕ್ಷದ ಹಾದಿ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದು ಎಂಬ ಮಾತೇ ಇದೆ. ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ(Kashi Vishwanath Temple)ವು ಉತ್ತರ ಪ್ರದೇಶದ ವಾರಣಾಸಿ(Varanasi)ಯಲ್ಲಿದೆ. ಪಾಪಗಳನ್ನೆಲ್ಲ ಕಳೆವ ಪವಿತ್ರ ಗಂಗಾನದಿ ಇಲ್ಲಿ ವಿಶ್ವನಾಥನ ಸನ್ನಿಧಿಯ ಸಖ್ಯದಲ್ಲಿ ತೇಲುತ್ತಾಳೆ. ಇಂಥ ಈ ಕಾಶಿಯ ಬಗ್ಗೆ ನಿಮಗೆಷ್ಟು ಗೊತ್ತು?
ಕಾಶಿ ವಿಶ್ವನಾಥ ದೇವಾಲಯವು ಮೊಘಲರ ಆಳ್ವಿಕೆಯಲ್ಲಿ ಹಲವಾರು ಬಾರಿ ದಾಳಿಗೊಳಗಾಗಿದೆ. ಅಕ್ಬರ್(Akbar) ಚಕ್ರವರ್ತಿಯು ರಾಜಾ ಮಾನ್ಸಿಂಗ್(Raja Maan Singh)ಗೆ ಈ ದೇವಾಲಯ ಕಟ್ಟಲು ಅನುಮತಿ ನೀಡಿದ್ದ. ಆದರೆ, ಆತನ ಮರಿ ಮಗ ಔರಂಗಜೇಬ್(Aurangzeb) ಮಾತ್ರ ತನ್ನ ಆಳ್ವಿಕೆ ಕಾಲದಲ್ಲಿ ಈ ದೇವಾಲಯ ಉರುಳಿಸಲು ಆದೇಶ ನೀಡಿದ್ದಷ್ಟೇ ಅಲ್ಲ, ಈ ಸ್ಥಳದಲ್ಲಿ ಗ್ಯಾನವಾಪಿ ಮಸೀದಿಯನ್ನೂ ನಿರ್ಮಿಸಿದ.
ಕಡೆಯ ಬಾರಿಗೆ ಮತ್ತೆ ಕಾಶಿ ದೇವಾಲಯ ಪುನರ್ನಿರ್ಮಿಸಿದಾಕೆ ಇಂಧೋರ್ನ ರಾಣಿ ಅಹಲ್ಯಾ ಬಾಯಿ ಹೋಲ್ಕರ್(Rani Ahalya Bai Holkar). ಶಿವನು ರಾಣಿಯ ಕನಸಿನಲ್ಲಿ ಬಂದು ಸೂಚನೆ ಕೊಟ್ಟ ಎಂಬ ಪ್ರತೀತಿ ಇದೆ. ಅಧನ್ನು ಗಂಭೀರವಾಗಿ ಪರಿಗಣಿಸಿದ ರಾಣಿ, ಕಾಶಿಗೆ ಮುಂಚಿನ ವೈಭವವನ್ನು ಮರಳಿಸಬೇಕೆಂದು ನಿರ್ಧರಿಸಿ ಅದರ ಪುನರ್ನಿರ್ಮಾಣಕ್ಕೆ ದೇಣಿಗೆ ನೀಡಿದಳು. ನಂತರ ಇಂಧೋರ್ನ ಮಹಾರಾಜ ರಂಜಿತ್ ಸಿಂಗ್ ಕೂಡಾ ಈ ದೇವಾಲಯದ 4 ಚಿನ್ನದ ಕಂಬಗಳಿಗಾಗಿ ಸುಮಾರು 10 ಟನ್ನಷ್ಟು ಬಂಗಾರವನ್ನು ನೀಡಿದರು.
ಈಗಲೂ ಕೂಡಾ ಮಸೀದಿಯ ಅವಶೇಷಗಳು ದೇವಾಲಯದ ಬಳಿ ಇವೆ. ಯಾವಾಗ ಔರಂಗಜೇಬ ದೇವಾಲಯ ಉರುಳಿಸಲು ಆದೇಶ ನೀಡಿದನೋ, ಆಗ ದೇವಾಲಯದ ಮುಖ್ಯ ಅರ್ಚಕರು ಶಿವಲಿಂಗವನ್ನು ಉಳಿಸುವ ಸಲುವಾಗಿ ಬಚ್ಚಿಡಲು ಶಿವಲಿಂಗದೊಂದಿಗೆ ಬಾವಿಗೆ ಹಾರಿದರು. ಈಗ ಕೂಡಾ ಈ ಬಾವಿಯು ದೇವಾಲಯ ಹಾಗೂ ಮಸೀದಿಯ ಅವಶೇಷಗಳ ನಡುವೆ ಇದೆ. ಇದನ್ನು ಗ್ಯಾನವಪಿ(GyaanVapi) ಬಾವಿ ಎಂದೇ ಕರೆಯಲಾಗುತ್ತದೆ.
ಹಲವಾರು ಬಾರಿ ಮೊಘಲರ ದಾಳಿಯಿಂದ ಕಾಶಿ ವಿಶ್ವನಾಥ ದೇವಾಲಯ ಘಾಸಿಯಾಗಿದೆ. ಮೊಹಮ್ಮದ್ ಗೋರಿ(Mohammad Ghori)ಯ ಆದೇಶ ಹಿಡಿದು ಸರಣಿ ದಾಳಿ ಆರಂಭಿಸಿದವನು ಕುತುಬುದ್ದೀನ್ ಐಬಕ್.
ಆ ನಂತರದಲ್ಲಿ ದೇವಾಲಯ ಹಲವು ಬಾರಿ ನೆಲಸಮ, ಪುನರ್ನಿರ್ಮಾಣ ಕಂಡಿದೆ.
ಭೂಮಿಯು ರೂಪುಗೊಂಡಾದ ಮೇಲೆ ಸೂರ್ಯನ ಮೊದಲ ಕಿರಣ ಬಿದ್ದಿದ್ದು ಕಾಶಿಯ ಮೇಲೆ ಎಂಬ ನಂಬಿಕೆ ಇದೆ. ಶಿವನು ಈ ದೇವಾಲಯದಲ್ಲಿ ಕೆಲ ಕಾಲ ನೆಲೆಸಿದ್ದ ಎನ್ನಲಾಗುತ್ತದೆ. ಇಡೀ ನಗರದ ಕಾವಲಾಗಿ ಈಗಲೂ ಶಿವ ನಿಂತಿದ್ದಾನೆ ಎಂಬ ನಂಬಿಕೆಯಿಂದಲೇ ಕಾಶಿಯನ್ನು ಶಿವ್ ಕಿ ನಗ್ರಿ ಎನ್ನಲಾಗುತ್ತದೆ.
ದೇವಾಲಯದ ಮೇಲ್ಭಾಗದಲ್ಲಿ ಚಿನ್ನದ ಛಾತ್ರಾ ಇದೆ. ಇದರ ಸೌಂದರ್ಯದ ಹೊರತಾಗಿಯೂ ಛಾತ್ರಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ಈ ದೇವಾಲಯದಲ್ಲಿ ಮಾಡಿಕೊಂಡ ಯಾವುದೇ ಪ್ರಾರ್ಥನೆಯು ಛಾತ್ರವನ್ನು ನೋಡಿದ ನಂತರ ಈಡೇರುತ್ತದೆ ಎನ್ನಲಾಗುತ್ತದೆ. ಛಾತ್ರವು ದೇವಾಲಯದಷ್ಟೇ ಪವಿತ್ರ ಎಂದು ಪರಿಗಣಿತವಾಗಿದೆ.
ಇಲ್ಲಿರುವ ವಿಶ್ವನಾಥನು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದಾನೆ. ಇಲ್ಲಿ ವಿಶ್ವೇಶ್ವರ ಜ್ಯೋತಿರ್ಲಿಂಗವಿದ್ದು, ಇದು ಸ್ವತಃ ಶಿವನ ಅಂತಿಮ ರೂಪದ ಪ್ರತಿನಿಧಿ ಎನ್ನಲಾಗುತ್ತದೆ. ಇದನ್ನು ಕಾಶಿ ದೇವಾಲಯದ ಗರ್ಭಗುಡಿ((Sanctum Sanctorum))ಯಲ್ಲಿ ಬೆಳ್ಳಿಯ ಅಂಕಣದ ಮೇಲಿರಿಸಲಾಗಿದೆ. ಈ ಜ್ಯೋತಿರ್ಲಿಂಗ ದರ್ಶನ ಮಾತ್ರದಿಂದ ಮೋಕ್ಷ ಲಭಿಸಲಿದೆ ಎಂಬ ಮಾತಿದೆ.
ಕಾಶಿಯು ಅತಿ ಪುರಾತನ ನಗರಗಳಲ್ಲೊಂದು. ಇಡೀ ವಿಶ್ವ ಪ್ರಳಯದಿಂದ ಮುಳುಗಿದಾಗ ಶಿವನು ತನ್ನ ತ್ರಿಶೂಲದ ತುದಿಯಲ್ಲಿ ಕಾಶಿಯನ್ನು ಎತ್ತಿ ಹಿಡಿದು ರಕ್ಷಿಸಿದನಂತೆ. ಶಿವನ ಈ ಕ್ರಿಯೆ ಊರ್ಧ್ವಾಮ್ನಾಯ ಎಂದು ಹಿಂದೂ ಪುರಾಣ(Hindu mythology)ಗಳಲ್ಲಿ ಕರೆಸಿಕೊಂಡಿದೆ. ಹಾಗಾಗಿಯೇ ಕಾಶಿ ಅತಿ ಹಳೆಯ ನಗರವಾಗಿರುವುದು. ಇಲ್ಲಿನ ಪ್ರತಿಯೊಂದು ಕಲ್ಲು ಕೂಡಾ ವಿಶ್ವನಾಥನಷ್ಟೇ ಪವಿತ್ರ ಎನ್ನಲಾಗುತ್ತದೆ.