Indian Mythology: ಅಪರಿಚಿತರಾಗೇ ಉಳಿದ ಪುರಾಣದ ದೇವತೆಗಳಿವರು..

By Suvarna NewsFirst Published Dec 10, 2021, 2:36 PM IST
Highlights

ಹಿಂದೂ ಧರ್ಮದಲ್ಲಿ ಹಗಲು, ಇರುಳು, ಉಸಿರು, ಪರಿಸರ ಪ್ರತಿಯೊಂದನ್ನೂ ದೇವರೆಂದು ಪರಿಗಣಿಸುತ್ತೇವೆ. ಹಾಗಿದ್ದೂ ಈ ಸಮಸ್ತಕ್ಕೂ ಅದರದೇ ಆದ ದೇವತೆಗಳಿರುವುದು, ಅವರು ಯಾರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. 

ನಮ್ಮ ಪುರಾಣ ಪುಣ್ಯ ಕತೆಗಳ ತುಂಬಾ ದೇವರೇ ತುಂಬಿ ಹೋಗಿದ್ದಾರೆ. ಅದರಲ್ಲಿ ರಾಮ, ಕೃಷ್ಣ, ಶಿವ, ಪಾರ್ವತಿ ಮುಂತಾದ ದೇವರು ಹಾಗೂ ದೇವತೆಗಳ ಕತೆಗಳು ಎಲ್ಲರಿಗೂ ಗೊತ್ತು. ಆದರೆ, ಕೆಲ ದೇವತೆಗಳು ಮಾತ್ರ ರೋಚಕ ಕತೆ ಹೊಂದಿದ್ದರೂ ಬಹುತೇಕರಿಗೆ ಅಪರಿಚಿತರಾಗಿಯೇ ಉಳಿದಿದ್ದಾರೆ. ಈ ಅಪರೂಪದ ದೇವತೆಗಳು ಯಾರು, ಅವರ ಕತೆಯೇನು ಇಲ್ಲಿದೆ ನೋಡಿ. 

ಉಷಾ(Usha)
ಉಷಾ ಎಂದರೆ ಬೆಳಗಿನ ದೇವತೆ. ಪ್ರತಿ ದಿನ ಜೀವನ ಹಾಗೂ ಜಗತ್ತಿಗೆ ಬೆಳಕು ತರುವವಳು. ಕತ್ತಲನ್ನು ಹಾಗೂ ದುಷ್ಟ ಶಕ್ತಿಗಳನ್ನು ಓಡಿಸುವ ಶಕ್ತಿವಂತೆ. ಎಲ್ಲ ಜೀವಿಗಳಲ್ಲಿರುವ ಜೀವ. 

ರಾತ್ರಿ(Ratri)
ರಾತ್ರಿಯು ಉಷಾಳ ಸಹೋದರಿ. ರಾತ್ರಿ ಹೊತ್ತಿಗೆ ಅಧಿದೇವತೆ. ನಕ್ಷತ್ರಗಳನ್ನು ನೀಡಿ ಕತ್ತಲೆಯಲ್ಲೂ ಧೈರ್ಯ ತುಂಬುವವಳು. ಕತ್ತಲೆಯ ಅಪಾಯಗಳಿಂದ ಜೀವಿಗಳನ್ನು ಕಾಪಾಡುವವಳು. 

Astrological remedies: ತಡ ವಿವಾಹಕ್ಕೆ ಕೆಲ ಪರಿಹಾರಗಳು

ವಾಕ್(Vac)
ಈಕೆ ಮಾತಿಗೆ ಅಧಿದೇವಿ. ಜನರ ನಡುವೆ ಸಂಪರ್ಕ ಏರ್ಪಡಿಸುವಲ್ಲಿ, ಕಡಿಸುವಲ್ಲಿ, ಜನರ ಬಾಯಲ್ಲಿ ಯೋಚನೆಗಳನ್ನು ಹೊರ ಹಾಕುವಂತೆ ಸಹಾಯ ಮಾಡುವಲ್ಲಿ ಇವಳ ಪಾತ್ರ ಇರುತ್ತದೆ. 

ಕರ್ಣಿ(Karni)
ಕರ್ಣಿಯು ಒಮ್ಮೆ ತನ್ನ ಭಕ್ತೆಯ ಮಗನಿಗೆ ಹೋದ ಜೀವವನ್ನು ಪುನಾ ನೀಡುವಂತೆ ಯಮನಲ್ಲಿ ಕೇಳುತ್ತಾಳೆ. ಅದಕ್ಕೆ ಯಮ ಒಪ್ಪದಿದ್ದಾಗ ತನ್ನ ಭಕ್ತರನ್ನು ಸಾಯಲು ಬಿಡುವುದಿಲ್ಲ ಎಂದು ಶಪಥಗೈಯ್ಯುತ್ತಾಳೆ ಕರ್ಣಿ. ರಾಜಸ್ಥಾನ(Rajastan)ದಲ್ಲಿರುವ ತನ್ನ ದೇವಾಲಯದಲ್ಲಿ ಭಕ್ತರ ಮರಣದ ಬಳಿಕ ಇಲಿಯಾಗಿ ಹುಟ್ಟುವಂತೆ ನೋಡಿಕೊಳ್ಳುತ್ತಾಳೆ. ಈ ಇಲಿಗಳು ಮತ್ತೆ ಮುಂದಿನ ಜನ್ಮದಲ್ಲಿ ಕರ್ಣಿಯ ಭಕ್ತರಾಗಿ ಹುಟ್ಟುತ್ತವೆ. 

Anagha Devi: ದತ್ತಾತ್ರೇಯ ಸ್ವಾಮಿಯ ಹೆಣ್ಣು ರೂಪ ಅನಘಾ ದೇವಿ

ಕೊಟ್ರಾವೈ(Kotravai)
ಈಕೆ ಯುದ್ಧ ಹಾಗೂ ಗೆಲುವಿನ ದೇವತೆ. ಕ್ರೂರ, ಕಠೋರ ದೇವತೆಯಾದ ಈಕೆ ಯುದ್ಧಭೂಮಿಯಲ್ಲಿ ತನ್ನ ಮೆಚ್ಚಿನವರಿಗೆ ಗೆಲುವು ಕರುಣಿಸುತ್ತಾಳೆ. ಯುದ್ಧಕ್ಕೆ ಹೋಗುವ ಮುನ್ನ ಈಕೆಗೆ ಪೂಜಿಸುವುದು ರೂಢಿ.

ಮೇರಿಯಮ್ಮನ್(Mariamman)
ತಮಿಳು ನಾಡಿ(Tamil Nadu)ನ ಹಳ್ಳಿಗಳಲ್ಲಿ ಬಹಳ ಜನಪ್ರಿಯವಾದ ದೇವತೆ ಮೇರಿಯಮ್ಮನ್. ಈಕೆ ಮಳೆಯ ದೇವತೆಯಾಗಿದ್ದು, ಪ್ರತಿ ವರ್ಷ ಮುಂಗಾರಿಗೆ ಮುನ್ನ ಇವಳಲ್ಲಿ ತಮಿಳಿಗರು ಬೇಡಿಕೆ ಇಡುತ್ತಾರೆ. ಆಕೆಯನ್ನು ಖುಷಿಯಾಗಿಡಲು ಭಕ್ತರು ಸರ್ವಪ್ರಯತ್ನವನ್ನೂ ಮಾಡುತ್ತಾರೆ. ಆಕೆ ಮುನಿದರೆ ಇಸಬು, ಅಮ್ಮ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಬರುತ್ತವೆಂಬ ಭಯ ಭಕ್ತರದು. 

ಅಲಕ್ಷ್ಮಿ(Alakshmi)
ದೌರ್ಭಾಗ್ಯಲಕ್ಷ್ಮೀ ಎಂದೂ ಕರೆಯಲ್ಪಡುವ ಅಲಕ್ಷ್ಮೀಯು ದೌರ್ಭಾಗ್ಯ ಹಾಗೂ ಅಹಿತದ ದೇವತೆ. ಲಕ್ಷ್ಮಿಯ ಸಹೋದರಿಯಾಗಿದ್ದು, ಲಕ್ಷ್ಮಿಗೆ ಸಂಪೂರ್ಣ ವಿರೋಧ ಗುಣದವಳೀಕೆ. ಸಂಪತ್ತು ಹಾಗೂ ಸಮೃದ್ಧಿಯ ಒಡತಿ ಲಕ್ಷ್ಮೀ ಇದ್ದಲ್ಲಿ ಇವಳಿರುವುದಿಲ್ಲ. ಹಾಗಾಗಿಯೇ ಜನರು ಲಕ್ಷ್ಮೀಯನ್ನು ಕರೆವ ಮುನ್ನ ಅಲಕ್ಷ್ಮೀಯನ್ನು ತಮ್ಮ ಮನೆಯಿಂದ ಹೊರ ಹೋಗುವಂತೆ ಬೇಡಿಕೊಳ್ಳುತ್ತಾರೆ. 

ಅರಣ್ಯಾನಿ(Aranyani)
ಈಕೆ ಕಾಡಿನ ಹಾಗೂ ಪ್ರಾಣಿಗಳ ದೇವತೆ. ಈಕೆ ನಗರದ ಜಂಜಾಟಗಳಿಂದ ದೂರವಿದ್ದರೂ, ತನ್ನ ಬಳಿ ಬಂದವರಿಗೆ ನೀರು, ನೆರಳು ಕೊಡುವ ಕರುಣಾಮಯಿ. ಮನುಷ್ಯರು ಹಾಗೂ ಪ್ರಾಣಿಗಳಿಗೆ ಆಹಾರ ಕರುಣಿಸುವವಳು. ಋಗ್ವೇದದಲ್ಲಿ ಅರಣ್ಯಾನಿ ಸೂಕ್ತಮ್ ಈಕೆಯನ್ನು ವಿವರಿಸುತ್ತದೆ. ಅದರಂತೆ ಈಕೆ ಎಂಥ ಕಠಿಣ ಜಾಗಕ್ಕೂ ಹೆದರದವಳು, ಒಬ್ಬಂಟಿಯಾಗಿ ಓಡಾಡುವವಳು. ಅವಳು ಕಣ್ಣಿಗೆ ಕಾಣಿಸದಿದ್ದರೂ ಅವಳು ಹೆಜ್ಜೆ ಇಟ್ಟಾಗ ಗೆಜ್ಜೆಯ ಸದ್ದು ಕೇಳಿಸುತ್ತದೆ ಎಂಬ ಮಾತಿದೆ. 

ಮಾನಸ(Manasa)
ಈಕೆ ಹಾವುಗಳ ದೇವತೆ. ತನ್ನ ಭಕ್ತರನ್ನು ಹಾವು ಕಡಿತದಿಂದ ರಕ್ಷಿಸುವವಳು. ಹಾವು ಕಡಿಯದಂತೆಯೂ, ಕಡಿದರೆ ಸಾಯದಂತೆಯೂ ನೋಡಿಕೊಳ್ಳುವವಳು. ಭಕ್ತರಿಗೆ ಫಲವತ್ತತೆ ಹಾಗೂ ಸಮೃದ್ಧಿಯನ್ನೂ ಕರುಣಿಸುವವಳು. ಜಾರ್ಖಂಡ್, ಉತ್ತರಾಖಂಡ್ ಹಾಗೂ ಬಂಗಾಳ(Bengal)ದಲ್ಲಿ ಈಕೆಯನ್ನು ಮಳೆಗಾಲದಲ್ಲಿ ಪೂಜಿಸಲಾಗುತ್ತದೆ. ಈಕೆ ಸರ್ಪಗಳ ರಾಜ ವಾಸುಕಿಯ ಸಹೋದರಿಯಾಗಿದ್ದು, ಋಷಿ ಜರತ್ಕಾರುವನ್ನು ವಿವಾಹವಾಗಿದ್ದಾಳೆ. 

click me!