ಪ್ರಿಯ ಮಿತ್ರರೇ, ಇದೇ ಸೋಮವಾರದಿಂದ ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್ನಲ್ಲಿ ಬದಲಾದ ಸಮಯದಲ್ಲಿ ಬೆಳಗ್ಗೆ 7 ಗಂಟೆಗೆ ‘ಜಾತಕ ಫಲ’ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ತಪ್ಪದೇ ನೋಡಿ. ಯಾಕೆ ಈ ಕಾರ್ಯಕ್ರಮ ನೋಡಬೇಕು? ಏನು ಪ್ರಯೋಜನ? ಎಂಬ ನಿಮ್ಮ ಸಹಜ ಪ್ರಶ್ನೆಗೆ ಪುಟ್ಟ ಉತ್ತರ ಇಲ್ಲಿದೆ.
ಪ್ರಿಯ ಮಿತ್ರರೇ, ಇದೇ ಸೋಮವಾರದಿಂದ ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್ನಲ್ಲಿ ಬದಲಾದ ಸಮಯದಲ್ಲಿ ಬೆಳಗ್ಗೆ 7 ಗಂಟೆಗೆ ‘ಜಾತಕ ಫಲ’ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ತಪ್ಪದೇ ನೋಡಿ. ಯಾಕೆ ಈ ಕಾರ್ಯಕ್ರಮ ನೋಡಬೇಕು? ಏನು ಪ್ರಯೋಜನ? ಎಂಬ ನಿಮ್ಮ ಸಹಜ ಪ್ರಶ್ನೆಗೆ ಪುಟ್ಟ ಉತ್ತರ ಇಲ್ಲಿದೆ.
ಭುವಿಗೆ ಮಳೆ ಬಂದು ಹಸಿರಾಗಬೇಕು ಎಂದರೆ ಸೂರ್ಯನ ಕೃಪೆ ಬೇಕು. ಗ್ರೀಷ್ಮ ಋತುವಿನ ಬಿಸಿಲ ಝಳದಿಂದ ಭುವಿಯ ಸಣ್ಣ ಕೊಳದ ನೀರಿನಿಂದ ಹಿಡಿದು ಸಮುದ್ರದವರೆಗೆ ಎಲ್ಲಾ ಕಡೆಯ ನೀರನ್ನೂ ಹೀರಿ ವರ್ಷಾಕಾಲದಲ್ಲಿ ಮಳೆ ಸುರಿವಂತೆ ಮಾಡುತ್ತಾನೆ ಸೂರ್ಯ. ಹೀಗಾಗಿ ಸೂರ್ಯನಿಂದಲೇ ಮಳೆ. ಮಳೆಯಿಂದ ಇಳೆಯಲ್ಲಿ ಬೆಳೆ. ನೆಲದ ಬೆಳೆ ಸಮೃದ್ಧವಾಗಲಿಕ್ಕೆ ಚಂದ್ರನ ಕೃಪೆ ಬೇಕು. ಚಂದ್ರ ಕಿರಣಗಳ ಸ್ಪರ್ಶವಾದಾಗದೆ ಧಾನ್ಯಗಳಲ್ಲಿ ಹಾಲು ತುಂಬುವುದಿಲ್ಲ. ಹಾಲು ತುಂಬಿದ ಧಾನ್ಯದಲ್ಲೇ ಅಡಗಿದೆ ಜೀವ ಶಕ್ತಿ. ಅದರಿಂದಲೇ ಮನುಷ್ಯನ ಚೈತನ್ಯ. ಹೀಗಾಗಿ ನಾವು ತಿನ್ನುವ ಪ್ರತಿ ಅಗುಳಿನಲ್ಲೂ ಸೂರ್ಯ-ಚಂದ್ರರ ಕೃಪೆಯಿದೆ.
ನಾವು ತಿನ್ನುವ ಅನ್ನದಿಂದಲೇ ನಮ್ಮ ಸ್ವಭಾವಗಳು ನಿರ್ಮಾಣವಾಗುತ್ತವೆ. ಈ ಕಾರಣದಿಂದ ಮನುಷ್ಯನ ದೇಹಕ್ಕೂ ಹಾಗೂ ಅವನ ಗುಣಗಳಿಗೂ ಈ ಸೂರ್ಯ-ಚಂದ್ರರೇ ಕಾರಣೀಕರ್ತರು. ವೇದ ಸಾಹಿತ್ಯ ಹೇಳತ್ತೆ ‘ಅಗ್ನಿಸೋಮಾತ್ಮಕಂ ಜಗತ್’ ಅಂತ. ಹಾಗಂದರೆ ಇಡೀ ಜಗತ್ತು ಸಿದ್ಧವಾಗಿರುವುದೇ ಸೂರ್ಯ-ಚಂದ್ರರಿಂದ ಅಂತ. ಹೀಗೆ ಸಕಲ ಜೀವ ಸಂಕುಲವನ್ನೇ ಹುಟ್ಟಿಸಿ, ಬೆಳೆಸಿ, ಅಳಿಸುತ್ತಿರುವ ಈ ಪ್ರಕಾಶ ಗ್ರಹಗಳನ್ನು ಆಧಾರವಾಗಿಟ್ಟುಕೊಂಡೇ ನಿರ್ಮಾಣವಾಗಿರುವುದು ಜ್ಯೋತಿಷ ಶಾಸ್ತ್ರ.
ಈ ಪ್ರಕಾಶ ಗ್ರಹಗಳ ಜೊತೆ ಇನ್ನೂ ಕೆಲ ತಾರಾಗ್ರಹಗಳಿದ್ದಾವೆ. ಅವುಗಳೇ ಕುಜ, ಬುಧ, ಗುರು, ಶುಕ್ರ, ಹಾಗೂ ಶನಿಯರು. ಈ ಗ್ರಹಗಳ ಪ್ರಭಾವದಿಂದಲೂ ನಮ್ಮ ಸ್ವಭಾವ ಹಾಗೂ ವರ್ತನೆಗಳು ಬೆಳೆದು ಬೇರೆಬೇರೆ ರೀತಿ ಪ್ರಕಟವಾಗುತ್ತವೆ. ಉದಾಹರಣೆಗೆ ಕುಜನಿಂದ ಸಾಹಸ ಸ್ವಭಾವ, ಬುಧನಿಂದ ಮಾತಿನ ಕೌಶಲ್ಯ, ಗುರುವಿನಿಂದ ಮೇಧಾಶಕ್ತಿ, ಶುಕ್ರನಿಂದ ಕಾಮ, ಶನಿಯಿಂದ ಭಯ ಹೀಗೆ ಮನುಷ್ಯನ ಸ್ವಭಾವ ನಿರ್ಮಾಣದಲ್ಲಿ ಈ ಗ್ರಹಕಾಯಗಳ ಪ್ರಭಾವ ಹೆಚ್ಚು. ಈ ಗ್ರಹಗಳು ಮನುಷ್ಯನ ಮೇಲೆ ಯಾವಯಾವ ರೀತಿಯಲ್ಲಿ ಪ್ರಭಾವ-ಪರಿಣಾಮ ಬೀರಬಹುದು? ಒಬ್ಬ ಮನುಷ್ಯ ಹುಟ್ಟಿದ ಸಂದರ್ಭದಲ್ಲಿ ಆಕಾಶ ಕಾಯದಲ್ಲಿರುವ ಗ್ರಹಸ್ಥಿತಿಗಳಿಂದ ಆ ಮನುಷ್ಯ ಹೇಗೆ ರೂಪಿತವಾಗಬಹುದು ಎಂಬ ಸೂಕ್ಷ್ಮ ವಿಚಾರವನ್ನೇ ಕೇಂದ್ರವಾಗಿಟ್ಟುಕೊಂಡು ಋಷಿಗಳು ಚಿಂತಿಸಿದ್ದಾರೆ.
ಇಂಥಾ ಶಾಸ್ತ್ರ ಕೆಲವರಿಗೆ ಪೊಳ್ಳು ಎನಿಸಲಿಕ್ಕೆ ಸರಿಯಾದ ಗುರುವಿನ ಅಭಾವ, ಅಧ್ಯಯನ ಕೊರತೆ, ತಪ್ಪು ಕಲ್ಪನೆ, ಮೂರ್ಖರ ಮಾರ್ಗದರ್ಶನ ಹೀಗೆ ಕಾರಣ ಹಲವು. ಆದರೆ ಇಲ್ಲೀತನಕ ಆಕಾಶದ ಸೂರ್ಯ ತನ್ನ ಸ್ವಭಾವ ಬದಲಿಸಿಲ್ಲ, ಚಂದ್ರ ಹಾಗೇ ಇದ್ದಾನೆ. ಗುರು-ಶುಕ್ರರ ಬೆಳಕು, ಶನಿಯ ನೆರಳಿನಲ್ಲಿ ನಾವು ಹುಟ್ಟುವುದು ಬೆಳೆಯುವುದು ಅಳಿಯುವುದು ಯಾವುದೂ ಸುಳ್ಳಾಗಿಲ್ಲ. ಹಾಗೆಯೇ ಇವುಗಳ ಪ್ರಭಾವ ಮನುಷ್ಯನ ಮೇಲೆ ಉಂಟಾಗುವುದೂ ಸುಳ್ಳಲ್ಲ.
ಈ ಐದು ದೇವಾಲಯಗಳಿಗೆ ಭೇಟಿ ಕೊಟ್ಟರೆ ನಿಮ್ಮ ಶನಿದೋಷ ನಿವಾರಣೆ ದೂರವಾಗಲಿದೆ
ಆದರೆ ಇದು ಅರ್ಥವಾಗಲಿಕ್ಕೆ ಒಂದು ಸಂಸ್ಕಾರ ಬೇಕು. ಸಾಮಾನ್ಯವಾಗಿ ಜ್ಯೋತಿಷವೆಂದರೆ ಪರಿಹಾರ ಪುಸ್ತಕ ಅಂದುಕೊಂಡಿದ್ದಾರೆ ಹಾಗಾಗಿ ಶಾಸ್ತ್ರದ ಬಗ್ಗೆ ಕೆಲವರು ಭ್ರಮೆಯಲ್ಲಿದ್ದಾರೆ. ಇದು ಪರಿಹಾರವೂ ಹೌದು. ಅದನ್ನೂ ಮೀರಿ ಇದೊಂದು ಜೀವನ ಮಾರ್ಗ. ಮನುಷ್ಯನ ಭೂತ-ವರ್ತಮಾನ-ಭವಿಷ್ಯಗಳನ್ನು ತಿಳಿಸುವುದಲ್ಲದೆ, ವ್ಯಕ್ತಿಯ ಸ್ವಭಾವ, ಅವನ ವಿದ್ಯೆ, ಅವನ ಮಾತು, ಹಣ, ವೃತ್ತಿ, ವೈವಾಹಿಕ ಜೀವನ, ಸಾವು ಹೀಗೆ ಹಲವು ವಿಚಾರಗಳನ್ನು ಯಥಾವತ್ತಾಗಿ ತಿಳಿಸುವ ಜೀವನ ಕನ್ನಡಿ. ಸಾಮಾನ್ಯವಾಗಿ ನಮ್ಮನ್ನು ನಾವು ಶುಭ್ರಮಾಡಿಕೊಳ್ಳದೇ ಕನ್ನಡಿ ಮುಂದೆ ಬಂದರೆ ಯಾರಾದರೂ ಅವಲಕ್ಷಣವಾಗೇ ಕಾಣುತ್ತಾರೆ. ಕನ್ನಡಿಯಲ್ಲಿ ನಾವು ಹೇಗಿದ್ದೇವೆ ಎಂದು ಗೊತ್ತಾದರೆ ಇದ್ದುದರಲ್ಲಿ ಸ್ವಲ್ಪ ತಲೆ ಬಾಚಿಕೊಂಡು, ಹಣೆಗೆ ತಿಲಕವಿಟ್ಟುಕೊಂಡು ಮುಖಾಲಂಕಾರ ಮಾಡಿಕೊಳ್ಳುವಂತೆ ಈ ಶಾಸ್ತ್ರದಿಂದ ಜೀವನಾಲಂಕಾರ ಮಾಡಿಕೊಳ್ಳಲಿಕ್ಕೆ ಸಾಧ್ಯವಿದೆ.
ಬನ್ನಿ ಶುಭ್ರ ಮನಸ್ಸಿನಿಂದ, ಶುದ್ಧ ಕಣ್ಣಿನಿಂದ ಬದುಕಿನ ಮಾರ್ಗ ತಿಳಿಯೋಣ, ದಾರಿಯಲ್ಲಿ ಕಲ್ಲು-ಮುಳ್ಳುಗಳಿದ್ದರೆ ಎಚ್ಚರದಿಂದ ದಾಟುವ ಪ್ರಯತ್ನ ಮಾಡೋಣ. ಈಗ ನಿಮಗೆ ಕಾರ್ಯಕ್ರಮದ ಉದ್ದೇಶ ಅರ್ಥವಾಗಿದೆ ಎಂದುಕೊಳ್ಳುತ್ತೇನೆ.
ಇದೇ ಸೋಮವಾರದಿಂದ ನಿಮ್ಮ ನೆಚ್ಚಿನ ಸುವರ್ಣ ಸುದ್ದಿವಾಹಿನಿಯಲ್ಲಿ ಬದಲಾದ ಸಮಯದಲ್ಲಿ ಜಾತಕ ಫಲ ಬೆಳಗ್ಗೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಹಾಗೂ ಭಾನುವಾರ ಬೆಳಗ್ಗೆ 8 ಕ್ಕೆ ವಾರ ಭವಿಷ್ಯ ಪ್ರಸಾರವಾಗುತ್ತದೆ.
ತಪ್ಪದೇ ನೋಡಿ. ಬೇರೇನಕ್ಕೂ ಅಲ್ಲ, ಜೀವನಾಲಂಕಾರಕ್ಕೆ.