Eid Ul-Fitr 2023: ಪ್ರಾರ್ಥನೆ ಬಳಿಕ ಮಂತ್ರಾಲಯ ರಾಯರ ದರ್ಶನ ಪಡೆದ ಮುಸ್ಲಿಂ ಬಾಂಧವರು!

By Ravi JanekalFirst Published Apr 22, 2023, 3:02 PM IST
Highlights

ಜಿಲ್ಲೆಯಾದ್ಯಂತ ಹಿಂದು-ಮುಸ್ಲಿಂ ಬಾಂಧವರಿಂದ ಸಂಭ್ರಮ, ಸಡಗರದಿಂದ ರಂಜಾನ್ ಆಚರಿಸಲಾಯಿತು. ಈ ವೇಳೆ ರಂಜಾನ್ ನಿಮಿತ್ತ ಮುಸ್ಲಿಮರು ಸಾಮೂಹಿಕವಾಗಿ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯುವ ಮೂಲಕ ಭಾವೈಕ್ಯತೆ ಮೆರೆದರು.

ರಾಯಚೂರು (ಏ.22) : ಜಿಲ್ಲೆಯಾದ್ಯಂತ ಹಿಂದು-ಮುಸ್ಲಿಂ ಬಾಂಧವರಿಂದ ಸಂಭ್ರಮ, ಸಡಗರದಿಂದ ರಂಜಾನ್ ಆಚರಿಸಲಾಯಿತು. ಈ ವೇಳೆ ರಂಜಾನ್ ನಿಮಿತ್ತ ಮುಸ್ಲಿಮರು ಸಾಮೂಹಿಕವಾಗಿ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯುವ ಮೂಲಕ ಭಾವೈಕ್ಯತೆ ಮೆರೆದರು.

ರಂಜಾನ್ ಹಬ್ಬದ ದಿನದಂದು ಮಂತ್ರಾಲಯ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಮುಸ್ಲಿಮರು ಸಾಮೂಹಿಕವಾಗಿ ಶ್ರೀ ರಾಘವೇಂದ್ರ ಸ್ವಾಮಿ(Sri raghavendra swami mutt mantralaya)ಗಳ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು. ರಾಯರ ದರ್ಶನ ಬಳಿಕ ಮಠದ ಪ್ರಕಾರದಲ್ಲಿ ಕುಳಿತಿದ್ದ ಮುಸ್ಲಿಂ ಭಕ್ತರಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು(subudhendra teertharu) ಮಂತ್ರಾಕ್ಷತೆ ಹಾಗೂ ಪರಿಮಳ ಪ್ರಸಾದವನ್ನು ವಿತರಿಸಿದರು.

ನಮಾಜ್‌ಗೆ ಹೋಗುತ್ತಿದ್ದ ಬಾಲಕನ ಮೇಲೆ 15 ನಾಯಿಗಳು ದಾಳಿ: ಸಾವು ಬುದುಕಿನ ನಡುವೆ ಹೋರಾಟ

'ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡು ನಿಮ್ಮ ಧರ್ಮ ಪಾಲನೆ ಮಾಡುವುದರ ಜೊತೆಯಲ್ಲಿಯೇ ಎಲ್ಲರೊಂದಿಗೆ ಒಂದಾಗಿ ಬದುಕಿ. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ' ಎಂದು ಶ್ರೀಗಳು ಸಂದೇಶ ನೀಡಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಡಾ.ಕೆ.ಸುಧಾಕರ್ ಭಾಗಿ:

ಮುಸ್ಲಿಂ ಬಾಂಧವರ ಪವಿತ್ರವಾದ  ರಂಜಾನ್ ಹಬ್ಬ(Ramzan festival)ದ ಪ್ರಯುಕ್ತ  ಮುಸ್ಲಿಂ ಬಾಂಧವರು ನಗರದ ಬಿಬಿ ರಸ್ತೆ ಯಲ್ಲಿರುವ   ಮಜೀದೆ ಕುರ್ದ್ ಮಸೀದಿಯಿಂದ ಸಾಮೂಹಿಕವಾಗಿ ಮೆರವಣಿಗೆಯಲ್ಲಿ ಸಾಗಿ ಬಿಬಿ ರಸ್ತೆ, ಸರ್ ಎಂ.ವಿ ರಸ್ತೆ, ಗಂಗಮ್ಮನ ಗುಡಿ ರಸ್ತೆ ಮೂಲಕ ಎಂ ಜಿ ರಸ್ತೆ ತಲುಪಿ ಅಲ್ಲಿಂದ ಪ್ರಶಾಂತ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ನಡೆದ ಪ್ರಾರ್ಥನೆಯಲ್ಲಿ ವೃದ್ಧರೂ ಮತ್ತು ಮಕ್ಕಳು ಪಾಲ್ಗೊಂಡರು.

Eid-ul-Fitr 2023: ಮುಸ್ಲಿಂ ಬಾಂಧವರೊಂದಿಗೆ ರಂಜಾನ್ ಪ್ರಾರ್ಥನೆಯಲ್ಲಿ ಭಾಗಿಯಾದ ಸಚಿವ ಶ್ರೀರಾಮುಲು

ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಡಾ.ಕೆ.ಸುಧಾಕರ್ (Dr K sudhakar), ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಪಿ .ಬಚ್ಚೇಗೌಡ  ಪಾಲ್ಗೊಂಡು,ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.

click me!