ಮಂಗಳವಾರದಂದು ಹನುಮಂತನನ್ನು ಆರಾಧಿಸಿದರೆ ಹನುಮನ ಕೃಪೆಯ ಜೊತೆಗೆ ಶನಿ ದೇವರ ಅನುಗ್ರಹವು ಪ್ರಾಪ್ತವಾಗುತ್ತದೆ. ಹಾಗಾಗಿ ಮಂಗಳವಾರ ಕೆಲವು ಅರ್ಚನೆ, ಆರಾಧನೆಗಳನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಿದಲ್ಲಿ ಸಕಲ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ. ಮಂಗಳವಾರದ ದಿನ ಮಾಡಬೇಕಾದ ಕೆಲವು ದೇವತಾ ಕಾರ್ಯಗಳ ಬಗ್ಗೆ ತಿಳಿಯೋಣ..
ಮಂಗಳವಾರ ಅನೇಕ ದೇವತೆಗಳನ್ನು ಆರಾಧಿಸಲಾಗುತ್ತದೆ. ಈ ದಿನದಂದು ದೇವಿ ಶ್ರೀಗೌರಿಯನ್ನು ಆರಾಧಿಸುತ್ತಾರೆ, ಹನುಮನನ್ನು ಪೂಜಿಸುತ್ತಾರೆ. ಹನುಮಂತನ ಜನ್ಮವಾದದ್ದು ಸಹ ಇದೇ ಮಂಗಳವಾರವೇ ಆಗಿದೆ. ಹಾಗಾಗಿ ಈ ದಿನ ಆಂಜನೇಯನನ್ನು ಆರಾಧನೆ ಮಾಡುವುದರಿಂದ ವಿಶೇಷ ಕೃಪೆ ಪ್ರಾಪ್ತವಾಗುತ್ತದೆ ಎಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಹನುಮಂತನನ್ನು ಸಂಕಟ ವಿಮೋಚಕ ಎಂದೂ ಕರೆಯುತ್ತಾರೆ. ಮಂಗಳವಾರ ಹನುಮಂತನ ಪೂಜೆ ಮತ್ತು ಅರ್ಚನೆಗಳನ್ನು ಮಾಡಬೇಕು. ಈ ದಿನದಂದು ಹೀಗೆ ಮಾಡುವುದರಿಂದ ಸಕಲ ಕಷ್ಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಪ್ರತಿ ಮಂಗಳವಾರ ಆಂಜನೇಯ ದೇವಸ್ಥಾನಕ್ಕೆ ಹೋಗಿ ಪೂಜೆ, ಆರಾಧನೆಗಳನ್ನು ಮಾಡುವುದರಿಂದ ಸರ್ವ ರೋಗ ಮತ್ತು ದೋಷಗಳಿಂದ ಮುಕ್ತಿ ಪಡೆಯಬಹುದಾಗಿದೆ. ಮಂಗಳವಾರ ಕೆಲವು ಕಾರ್ಯಗಳನ್ನು ಮಾಡುವುದರಿಂದ ಹನುಮಂತನ ವಿಶೇಷ ಕೃಪೆಗೆ ಪಾತ್ರರಾಗಬಹುದಾಗಿದೆ. ಹಾಗಾದರೆ ಅವುಗಳ ಬಗ್ಗೆ ತಿಳಿಯೋಣ...
ಮಂಗಳವಾರ ಹನುಮಂತನ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾವನ್ನು ಪಠಣೆ ಮಾಡಬೇಕು. ಹೀಗೆ ಮಾಡುವುದರಿಂದ ಹನುಮಂತನ ಕೃಪೆಗೆ ಪ್ರಾಪ್ತವಾಗುವುದಲ್ಲದೆ, ಸಕಲ ಕಷ್ಟಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಭಜರಂಗಬಾಣವನ್ನು ಪಠಣೆ ಮಾಡುವುದರಿಂದ ಶುಭ ಫಲವು ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ 21 ಮಂಗಳವಾರ ಭಜರಂಗಬಾಣವನ್ನು ಪಠಿಸಬೇಕು. ಈ ರೀತಿಯಾಗಿ ಅನುಷ್ಠಾನವನ್ನು ಕೈಗೊಳ್ಳುವುದರಿಂದ ಶತ್ರು ನಾಶವೂ ಆಗುತ್ತದೆ ಮತ್ತು ವಿಜಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಮಂಗಳವಾರ ಅಶ್ವತ್ಥ ವೃಕ್ಷವನ್ನು ಪೂಜಿಸಿ, ಪ್ರದಕ್ಷಿಣೆಯನ್ನು ಹಾಕುವುದರಿಂದ ವಿಶೇಷ ಫಲವು ಪ್ರಾಪ್ತವಾಗುತ್ತದೆ. ಅಷ್ಟೇ ಅಲ್ಲದೆ ಮಂಗಳವಾರದಂದು ಅಶ್ವತ್ಥ ವೃಕ್ಷಕ್ಕೆ ಜಲವನ್ನು ಅರ್ಪಣೆ ಮಾಡುವುದರಿಂದ ಮಂಗಳ ಗ್ರಹದ ದೋಷಗಳಿದ್ದರೆ ಸಹ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.
ಮಂಗಳವಾರದಂದು ಶನಿ ದೇವರನ್ನು ಆರಾಧನೆ ಮಾಡಬೇಕು. ಹೀಗೆ ಮಾಡುವುದರಿಂದ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಶನಿ ದೇವನನ್ನು ಭಕ್ತಿಯಿಂದ ಆರಾಧನೆ ಮಾಡಬೇಕು. ಹೀಗೆ ಮಾಡಿದರೆ ಶನಿದೋಷವು ನಿವಾರಣೆ ಆಗುತ್ತದೆ.
ಹನುಮಂತನ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಅಥವಾ ಸುಂದರ ಕಾಂಡವನ್ನು ಪಠಣೆ ಮಾಡಬೇಕು. ಈ ರೀತಿಯ ಅನುಷ್ಠಾನ ಮಾಡುವುದರಿಂದ ಶನಿ ದೋಷದಿಂದ ಮುಕ್ತಿಯನ್ನು ಪಡೆಯಬಹುದಾಗಿದೆ ಎಂದು ಹೇಳಲಾಗುತ್ತದೆ.
ಮಂಗಳವಾರ ಕೆಂಪು ಬಣ್ಣದ ವಸ್ತುಗಳಾದ ಕೆಂಪು ಕಲ್ಲು, ಕೆಂಪು ಪುಷ್ಪ, ಕುಂಕುಮ ಸೇರಿದಂತೆ ಇತರ ವಸ್ತುಗಳಾದ ಬಂಗಾರ, ತಾಮ್ರ ಇತ್ಯಾದಿಗಳನ್ನು ಅಗತ್ಯ ಇರುವವರಿಗೆ ದಾನವಾಗಿ ನೀಡಬೇಕು. ಇದು ಅತ್ಯಂತ ಪುಣ್ಯದಾಯಕ ಕೆಲಸವಾಗಿದ್ದು, ಹೀಗೆ ಮಾಡುವುದರಿಂದ ಸ್ವಾಮಿ ಹನುಮಂತನ ವಿಶೇಷ ಕೃಪೆಗೆ ಪ್ರಾಪ್ತರಾಗಬಹುದಾಗಿದೆ.
ಹನುಮಂತನ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಕುಂಕುಮ, ಮಲ್ಲಿಗೆ ಎಣ್ಣೆ, ಸುಗಂಧ ದ್ರವ್ಯ ಸೇರಿದಂತೆ ಸಿಹಿ ತಿನಿಸುಗಳನ್ನು ಹನುಮಂತ ದೇವನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಹನುಮಂತನು ಪ್ರಸನ್ನವಾಗುತ್ತಾನೆ. ಅಲ್ಲದೆ, ಜೀವನದಲ್ಲಿ ಸಹ ಸುಖ – ಸಮೃದ್ಧಿಯು ನೆಲೆಸುತ್ತದೆ.
ಆಂಜನೇಯ ದೇವಸ್ಥಾನಕ್ಕೆ ಮಂಗಳವಾರ ತೆರಳು ಮೂಲಕ ಬೆಲ್ಲ ಹಾಗೂ ಬೇಳೆಯನ್ನು ಅರ್ಪಣೆ ಮಾಡಬೇಕು. ಈ ರೀತಿಯಾಗಿ ತಪ್ಪಿಸದೇ 21 ಮಂಗಳವಾರ ದಿನದಂದು ಆಚರಣೆ ಮಾಡಬೇಕು. ಇಂಥ ಅನುಷ್ಠಾನದಲ್ಲಿ ಮನೆಯಲ್ಲಿ ದಾರಿದ್ರ್ಯ ದೂರವಾಗಲಿದೆ. ಜೊತೆಗೆ ಧನ ಸಂಪತ್ತು ನಿಮ್ಮದಾಗುತ್ತದೆ. ಆರ್ಥಿಕ ಸಂಕಷ್ಟಗಳೂ ಸಹ ಎದುರಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಧೈರ್ಯವಾಗಿ ಕೆಲಸವನ್ನು ಮಾಡುವ ಚೈತನ್ಯ ಸಿಗುವುದಲ್ಲದೆ, ಮಾನಸಿಕ ಬಲ, ನೆಮ್ಮದಿಯು ಪ್ರಾಪ್ತವಾಗಲಿದೆ. ಈ ಎಲ್ಲ ಕ್ರಮಗಳ ಜೊತೆಗೆ ಮಂಗಳವಾರದು ದೇವಿಯನ್ನು ಪೂಜಿಸಿ, ಆರಾಧನೆ ಮಾಡುವುದರಿಂದ ಶುಭ ಫಲವು ಪ್ರಾಪ್ತವಾಗುತ್ತದೆ.