Chamarajanagar: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ

By Kannadaprabha NewsFirst Published Oct 24, 2022, 9:57 PM IST
Highlights

ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನಿಗೆ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ನಡೆಯಿತು. ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಧಾರ್ಮಿಕವಾಗಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. 

ಹನೂರು (ಅ.24): ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನಿಗೆ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ನಡೆಯಿತು. ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಧಾರ್ಮಿಕವಾಗಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ 3 ಗಂಟೆಯಿಂದ 6ರ ವರೆಗೆ ಪ್ರಥಮ ಹಾಗೂ ದ್ವಿತೀಯ ಪೂಜೆ ನಡೆಯಿತು. ಇದರೊಂದಿಗೆ ಮಾದಪ್ಪನಿಗೆ ಬಿಲ್ವಾರ್ಚನೆ ನೈವೇದ್ಯ,ದಿವಟ್ಟಿಗೆ ಸೇವೆ, ದೀಪಾವಳಿ ಮಹಾ ನೈವೇದ್ಯ ಹಾಗೂ ಮಹಾಮಂಗಳಾರತಿಯೊಂದಿಗೆ ಉತ್ಸವಗಳು ನಡೆಯಿತು.

ಮಲೆ ಮಹದೇಶ್ವರನಿಗೆ ಹರಕೆ ಹೊತ್ತ ಭಕ್ತಾದಿಗಳಿಂದ ಹುಲಿವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬಸವ ಹಾಗೂ ದೇವಾಲಯದ ಮುಂಭಾಗ ಭಕ್ತರು ದೂಪ ಹಾಕಿ ಉರುಳು ಸೇವೆ ಮಾಡಿ ಇಷ್ಟಾರ್ಥ ಸಿದ್ಧಿಯನ್ನು ಕರುಣಿಸುವಂತೆ ಮಾದಪ್ಪನಿಗೆ ಹರಕೆ ತೀರಿಸಿ, ಉಘೇಉಘೇ ಎಂದು ಜೈಕಾರ ಘೋಷಣೆಗಳನ್ನು ಕೂಗಿದರು. ದೀಪಾವಳಿ ಜಾತ್ರಾ ಮಹೋತ್ಸವದ ಕಾರಣದಿಂದ ಮಾದಪ್ಪನ ಬೆಟ್ಟಕ್ಕೆ ಬರುವ ಭಕ್ತರು ಶಂಕಮ್ಮನ ನಿಲಯ, ನಾಗಮಲೆ, ಪ್ರಿಯದರ್ಶಿನಿ ಭವನ, ಗಿರಿ ದರ್ಶಿನಿ ಎಲ್ಲಾ ನಿಲಯಗಳಲ್ಲಿ ತುಂಬಿದ್ದಾರೆ. ಭಕ್ತ ಜನಸಾಗರವರೇ ಹರಿದು ಬರುತ್ತಿದ್ದಾರೆ.

ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಲು ಹರಕೆ: ಮುಜರಾಯಿ ಇಲಾಖೆ ಅನುಮತಿ ಪತ್ರ ನೀಡಲು ಮೀನಾಮೇಷ

ನಾಲ್ಕು ದಿನಗಳು ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ತಮಿಳುನಾಡಿನಿಂದ ಭಕ್ತ ವೃಂದವೇ ಹರಿದುಬರುವುದರಿಂದ ಬೆಟ್ಟದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಇಲಾಖೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡುವ ಮೂಲಕ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದ ಭಕ್ತರು ಮಾದಪ್ಪನ ದರ್ಶನ ಪಡೆದು ನಾಗಮಲೆಗೆ ತೆರಳಲು ಇಂಡಿನತ್ತದವರೆಗೆ ಖಾಸಗಿ ವಾಹನದಲ್ಲಿ ತೆರಳಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ಹೋಗುವ ಭಕ್ತರು ನಾಗಮಲೆ ನಾಗ ಮಲ್ಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಾದಪ್ಪನ ದರ್ಶನ ಪಡೆದರು.

ಭಕ್ತಾದಿಗಳ ಅನುಕೂಲಕ್ಕಾಗಿ ಪ್ರಾಧಿಕಾರದ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಸರ್ಕಾರಿ ಸಾರಿಗೆ ವಾಹನಗಳಿಗಾಗಿ ಹಳೆ ದಾಸೋಹ ಭವನದ ಬಳಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಜೊತೆಗೆ ಭಕ್ತಾದಿಗಳು ಬರುವ ಖಾಸಗಿ ವಾಹನಗಳಿಗೆ ಆಸ್ಪತ್ರೆ ಮುಂಭಾಗ ಪಿ ಡಬ್ಲ್ಯೂಡಿ ಗೆಸ್ಟ್‌ ಹೌಸ್‌ ಮುಂಭಾಗ ಹಾಗೂ ಮಠದ ಬಳಿ ಸಹ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಧಿಕಾರಿಗಳು ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಸಕಲ ರೀತಿಯಲ್ಲಿಯೂ ವ್ಯವಸ್ಥೆ ಕಲ್ಪಿಸುವುದರ ಮೂಲಕ ಸಂಜೆ ನಡೆಯುವ ಎಣ್ಣೆಮಜ್ಜನ ಸೇವೆಗೆ ತಯಾರಿ ನಡೆಸಿದ್ದಾರೆ.

ಆರ್‌ಟಿಒ ಕಚೇರಿಗಿಲ್ಲ ಸಮರ್ಪಕ ರಸ್ತೆ ವ್ಯವಸ್ಥೆ: ಗುಂಡಿ ಬಿದ್ದ ರಸ್ತೆಯಿಂದ ನಡೆದಿದೆ ಅವಘಡ

ದೇವಾಲಯದಲ್ಲಿ ರುದ್ರಾಭಿಷೇಕ, ಪುಷ್ಪಾಭಿಷೇಕ: ಸಮೀಪದ ಅತ್ತಿಗೋಡು ಗ್ರಾಮದಲ್ಲಿ ಸೋಮವಾರ ನರಕ ಚತುರ್ದಶಿಯ ಅಂಗವಾಗಿ ಶ್ರೀ ಮಲೆ ಮಹದೇಶ್ವರ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಹಾಗೂ ಸಾವಿರ ಪುಷ್ಪಾಭಿಷೇಕ ಕಾರ್ಯಕ್ರಮ ನಡೆಯಿತು. ಗ್ರಾಮದ ಮುಖಂಡರಾದ ಸುರೇಶ್‌ಶೆಟ್ಟಿಹಾಗೂ ಎಜಿಟಿ ವಿರುಪಾಕ್ಷ ಅವರ ನೇತೃತ್ವ ವಹಿಸಿದ್ದರು. ಎಲ್ಲ ಸಮಾಜದ ಮಹಿಳೆಯರು ಹಾಗೂ ಅಕ್ಕಪಕ್ಕದ ಗ್ರಾಮಗಳ ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತ. ಮುಖಂಡರಾದ ಸುರೇಶ್‌, ವಿರುಪಾಕ್ಷ, ಫಣೀಶ್‌, ರಾಜೇಂದ್ರ, ಮಹೇಶ, ಮಹದೇವ, ಗಿರೀಶ್‌, ಸುಕನ್ಯಾ, ಲೀಲಾವತಿ, ತನುಶ್ರೀ, ಮಂಜುಳಾ ಗ್ರಾಮದ ಮಹಿಳೆಯರು ಹಾಗೂ ಅಕ್ಕಪಕ್ಕದ ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಹದೇಶ್ವರರ ಪೂಜೆ ನೆರವೇರಿಸಿದರು.

click me!