Garuda Purana: ನೀವ್ ಮಾಡಿರೋ ತಪ್ಪಿಗೆ ನರಕದಲ್ಲೇನ್ ಶಿಕ್ಷೆ ಕಾದಿದೆ ನೋಡಿ..

By Suvarna NewsFirst Published Dec 11, 2021, 4:46 PM IST
Highlights

ಎಲ್ಲ ಧರ್ಮದಲ್ಲೂ ಸಾವಿನ ನಂತರ ಪಾಪಿಗಳಿಗೆ ಶಿಕ್ಷೆ ಕಾದಿದೆ ಎಂಬ ನಂಬಿಕೆ ಇದ್ದೇ ಇದೆ. ನಮ್ಮ ಹಿಂದೂ ಧರ್ಮದ ಗರುಡ ಪುರಾಣದಲ್ಲಿ ಸಾವಿನ ನಂತರ ಪಾಪಿಗಳಿಗೆ ಶಿಕ್ಷೆ ಇರುವುದಷ್ಟೇ ಅಲ್ಲ, ಯಮನು ಯಾವ ಪಾಪಕ್ಕೆ ಯಾವ ಶಿಕ್ಷೆ ಕೊಡುತ್ತಾನೆ ಎಂಬುದನ್ನೂ ವಿವರವಾಗಿ ಹೇಳಲಾಗಿದೆ. 

ವಿಷ್ಣು ಪುರಾಣಗಳಲ್ಲೊಂದು ಗರುಡ ಪುರಾಣ(Garuda Purana). ಇದು ವಿಷ್ಣು ಹಾಗೂ ಆತನ ವಾಹನ ಗರುಡನ ಮಧ್ಯೆ ನಡೆವ ಮಾತುಕತೆ. ಸಾವಿನ ನಂತರದ ಬದುಕು, ಅಂತ್ಯಕ್ರಿಯೆ, ಪುನರ್ಜನ್ಮ ಮುಂತಾದ ವಿಷಯಗಳ ಬಗ್ಗೆ ಗರುಡ ಪುರಾಣ ಹೇಳುತ್ತದೆ. ಹುಟ್ಟು ಹಾಗೂ ಮರುಹುಟ್ಟಿನ ನಡುವೆ ಇರುವುದೇ ಸ್ವರ್ಗ ಹಾಗೂ ನರಕದ ಕಲ್ಪನೆ. ಪಾಪ ಮಾಡಿದವರು ನರಕಕ್ಕೆ ಹೋಗುತ್ತಾರೆ ಎಂಬುದನ್ನು ಎಲ್ಲ ಧರ್ಮಗಳೂ ನಂಬಿವೆ. ಹೀಗೆ ನರಕಕ್ಕೆ ಹೋದಾಗ ಅಲ್ಲಿ ಯಮನಿಂದ 28 ಬಗೆಯ ಶಿಕ್ಷೆ(punishment) ಕಾದಿದೆ ಎಂಬುದನ್ನು ಗರುಡ ಪುರಾಣ ಹೇಳುತ್ತದೆ. ಹಾಗಿದ್ದರೆ ಯಾವ ಪಾಪಕ್ಕೆ ಏನು ಶಿಕ್ಷೆಇಲ್ಲಿದೆ ನೋಡಿ.

  • ಮತ್ತೊಬ್ಬರ ಹಣ, ಆಸ್ತಿ ಕಬಳಿಸಿದವರು, ಸಿಕ್ಕಾಪಟ್ಟೆ ಬಡ್ಡಿ ಎಳೆದವರ ಆತ್ಮವನ್ನು ಸಾವಿನ ನಂತರ ಹಗ್ಗ ಕಟ್ಟಿ ಎಳೆದುಕೊಂಡು ಹೋಗುವ ಯಮನ ಧೂತರು, ಅಲ್ಲಿ ಅವರು ಪ್ರಜ್ಞೆ ತಪ್ಪುವವರೆಗೂ ಹೊಡೆಯುತ್ತಾರೆ. ಮತ್ತೆ ಪ್ರಜ್ಞೆ ಬಂದಾಗ ಹೊಡೆತ ಮುಂದುವರಿಯುತ್ತದೆ. ನರಕದಲ್ಲಿ ಅವರ ಸಮಯ ಮುಗಿವವರೆಗೂ ಈ ಶಿಕ್ಷೆ ನಡೆಯುತ್ತಲೇ ಇರುತ್ತದೆ. ಪತಿ ಅಥವಾ ಪತ್ನಿಗೆ ವಂಚನೆ ಮಾಡುವವರಿಗೆ ಕೂಡಾ ಇದೇ ರೀತಿಯ ಶಿಕ್ಷೆ ನೀಡಲಾಗುತ್ತದೆ. 
  • ರೌರವ ನರಕ ಎಂಬ ಪದ ನಾವೆಲ್ಲ ಕೇಳೇ ಇದ್ದೀವಿ. ಇಲ್ಲಿ ವಿಷಸರ್ಪವು(serpent) ಪಾಪಿ ಆತ್ಮದ ಸಮಯ ಮುಗಿವವರೆಗೂ ಅದಕ್ಕೆ ಹಿಂಸೆ ಮಾಡುತ್ತದೆ. ಇದು ಕೂಡಾ ಇನ್ನೊಬ್ಬರ ಆಸ್ತಿಯನ್ನು ಕಸಿದು ಅನುಭವಿಸುವವರಿಗೆ ನೀಡಲಾಗುತ್ತದೆ. 
  • ಮತ್ತೊಬ್ಬರ ಸಂಗಾತಿಯನ್ನು ಪ್ರೀತಿಸುವುದು, ಅವರನ್ನು ವಿವಾಹವಾಗುವುದು ಮುಂತಾಗಿ ಮಾಡುವವರು, ಆಸ್ತಿ ವಿಷಯದಲ್ಲ ಮೋಸ ಮಾಡುವವರಿಗೆ ಮಹಾರೌರವ ನರಕ ಪ್ರಾಪ್ತಿಯಾಗುವುದು. ಇಲ್ಲಿ ಒಂದಲ್ಲ, ಹಲವಾರು ಸರ್ಪಗಳು ಇವರನ್ನು ಸುತ್ತಿ ಕಚ್ಚುತ್ತಲೇ ಇರುತ್ತವೆ.
  • ಪ್ರಾಣಿಗಳನ್ನು ತಮ್ಮ ಖುಷಿಗಾಗಿ ಕೊಲ್ಲುವವರಿಗೆ ಕಾದಿರುವುದು ಕುಂಭಿಪಾಕಂ(Kumbhipakam). ಇಲ್ಲಿ ಸದಾ ಎಣ್ಣೆಯು ಕೊತ ಕೊತ ಕುದಿಯುತ್ತಲೇ ಇರುತ್ತದೆ. ಅದಕ್ಕೆ ಪಾಪಿಗಳನ್ನು ಹಾಕಿ ಬೋಂಡಾದಂತೆ ಕರಿಯಲಾಗುತ್ತದೆ. 
  • ಹಿರಿಯರು ತಮ್ಮೆಲ್ಲ ಕರ್ತವ್ಯ ಸರಿಯಾಗಿ ನಿಭಾಯಿಸಿದ್ದರೂ, ಕಿರಿಯರು ಅವರನ್ನು ಕಡೆಗಣಿಸಿದರೆ, ಕೆಟ್ಟದಾಗಿ ನಡೆಸಿಕೊಂಡರೆ ಅಂಥವರಿಗೆ ಕಾದಿರುವುದು ಕಾಳಸೂತ್ರಮ್. ಈ ನರಕ ಬೆಂಕಿಯಂತೆ ಸುಡುತ್ತಲೇ ಇರುತ್ತದೆ. ಇಲ್ಲಿ ಬಂದ ಪಾಪಿಗಳು ಗುರಿ ಇಲ್ಲದೆ ಓಡುತ್ತಲೇ ಇರಬೇಕು. ಬಿದ್ದರೂ ಯಮಧೂತರು ಬಿಡಲಾರರು. 
  • ತಮ್ಮ ಕರ್ತವ್ಯಗಳಿಂದ ನುಣುಚಿಕೊಂಡವರನ್ನು ಅಸಿತಪಾತ್ರಂಗೆ ಹಾಕಲಾಗುತ್ತದೆ. ಈ ನರಕದಲ್ಲಿ ಚೂಪಾದ ಆಯುಧಕ್ಕೆ ಪಾಪಿಯನ್ನು ತಲೆ ಕೆಳಗಾಗಿ ನೇತು ಹಾಕಿ, ಅವರನ್ನು ಕಲ್ಲಿನಿಂದ ಹೊಡೆಯುವುದು, ಚಾಕುವಿನಿಂದ ನಿರಂತರ ಚುಚ್ಚುವುದು ಮಾಡಲಾಗುತ್ತದೆ. 
  • ಆಡಳಿತದಲ್ಲಿರುವವರು ತಮ್ಮ ಜನರನ್ನು ಸರಿಯಾಗಿ ನಡೆಸಿಕೊಳ್ಳದೆ ಭ್ರಷ್ಟಾಚಾರ(corruption)ದಲ್ಲಿ ತೊಡಗಿದ್ದರೆ ಅವರನ್ನು ಸುಕರಮುಖಂಗೆ ಕಳಿಸಲಾಗುತ್ತದೆ. ಈ ನರಕದಲ್ಲಿ ಪಾಪಿಯನ್ನು ಪ್ರಾಣಿಯ ಚೂಪಾದ ಹಲ್ಲಿನಲ್ಲಿ ಅಗೆಸಲಾಗುತ್ತದೆ, ಕೋಲಿನಲ್ಲಿ ನಿರಂತರ ಬಾರಿಸಲಾಗುತ್ತದೆ. 

    Story of Ravana: ಸಂಜೆ ಸಮಯದಲ್ಲಿ ಸಂಭೋಗಿಸಿದರೆ ಮಕ್ಕಳು ರಾಕ್ಷಸರಾಗುತ್ತಾರಾ?
     
  • ಒಳ್ಳೆಯವರು ಸಹಾಯ ಕೇಳಿದಾಗ ಸಹಾಯ ಮಾಡುವ ಶಕ್ತಿಯಿದ್ದೂ ಮಾಡಲಿಲ್ಲವೆಂದರೆ ಅಂಥ ಪಾಪಿಗಳನ್ನಿ ಅಂಧಕೂಪಂಗೆ ತಳ್ಳಲಾಗುತ್ತದೆ. ಇಲ್ಲಿ ಸಿಂಹ, ಹುಲಿ, ರಣಹದ್ದು, ವಿಷಸರ್ಪಗಳು ನಿರಂತರವಾಗಿ ಪಾಪಿಯ(sinner) ಮೇಲೆ ದಾಳಿ ನಡೆಸುತ್ತಲೇ ಇರುತ್ತವೆ. 
  • ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ನಡೆಸಿಕೊಳ್ಳದೆ, ಅವರನ್ನು ಬೇಕಾದಾಗ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಸ್ವಾರ್ಥಿ(selfish)ಗಳಿಗೆ ಕಾದಿದೆ ಕ್ರಿಮಿಭೋಜನಂ. ಇಲ್ಲಿ ಕ್ರಿಮಿಕೀಟಗಳು, ಹಾವುಗಳಿಗೆ ಅವರು ಆಹಾರವಾಗಲಿದ್ದಾರೆ. ಯಪ್ಪಾ ಮುಗಿಯಿತು ನರಕ ಎನ್ನುವಾಗ ಮತ್ತೆ ದೇಹವನ್ನು ನೀಡಿ ಇದೇ ರೀತಿ ಹಿಂಸಿಸಲಾಗುತ್ತದೆ. ಶಿಕ್ಷೆಯ ಅವಧಿ ಮುಗಿವವರೆಗೂ ಕ್ರಿಮಿಕೀಟಗಳಿಗೆ ಆಹಾರವಾಗುವುದೇ ಕೆಲಸ!
  • ವ್ಯಭಿಚಾರಿಗಳಿಗೆ ಸಲ್ಮಾಲಿ ಶಿಕ್ಷೆ ನೀಡಲಾಗುತ್ತದೆ. ಕಾದ ಕಬ್ಬಿಣ(hot iron)ವನ್ನು ಹಿಡಿದೇ ನಿಲ್ಲಬೇಕು. ಮಧ್ಯೆ ಮಧ್ಯೆ ಯಮಧೂತರು ಆಯುಧಗಳಿಂದ ದೇಹವನ್ನು ತಿವಿಯುವುದನ್ನೂ ತಡೆದುಕೊಳ್ಳಬೇಕು. 

    No Haircut on Tuesday: ಮಂಗಳವಾರ ಕೂದಲು ಕತ್ತರಿಸೋಲ್ಲ, ಯಾಕೆ ಗೊತ್ತಾ?
     
  • ಪ್ರಾಣಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದವರಿಗೆ ವಜ್ರದ ಸೂಜಿಯಿಂದ ಮೈಯ್ಯೆಲ್ಲ ಚುಚ್ಚಲಾಗುತ್ತದೆ. 
  • ಅಧಿಕಾರ ದುರುಪಯೋಗ ಪಡಿಸಿಕೊಂಡವರಿಗೆ ವೈತರಣಿ(Vaitarani) ನದಿಗೆಸೆಯಲಾಗುತ್ತದೆ. ಈ ನದಿಯು ಮನುಷ್ಯರ ಮಲ, ರಕ್ತ, ಕೂದಲು, ಉಗುರು, ಮಾಂಸಗಳಿಂದ ತುಂಬಿ ಹರಿಯುತ್ತಿರುತ್ತದೆ. ಅಲ್ಲದೆ ಇದರಲ್ಲಿ ಹಲವು ಭಯಾನಕ ಜೀವಿಗಳೂ ಇರುತ್ತವೆ. ಪಾಪಿಗಳು ತಮ್ಮ ಶಿಕ್ಷೆ ಅವಧಿ ಮುಗಿವವರೆಗೂ ಇದರಲ್ಲೇ ಈಜಾಡಬೇಕು. 
  • ಜವಾಬ್ದಾರಿ ಮರೆತು ಓಡಾಡುವವರನ್ನು ಹಾಗೂ ಹುಡುಗಿಯನ್ನು ನಂಬಿಸಿ ವಂಚಿಸುವ ಗಂಡಸರನ್ನು ಮಲ, ಮೂತ್ರ, ಕಫಗಳಿಂದ ತುಂಬಿದ ಪುಯೋದಕಮ್ ಎಂಬ ಬಾವಿಗೆ ತಳ್ಳಲಾಗುತ್ತದೆ. 
  • ಅತಿ ಕಾಮಿಯಾದ ಮನುಷ್ಯನಿಗೆ ವೀರ್ಯ(semen)ದ ಸಮುದ್ರದಲ್ಲೇ ತಳ್ಳಲಾಗುತ್ತದೆ.
  • ದುಷ್ಕೃತ್ಯಗಳಲ್ಲಿ ತೊಡಗಿದ, ದೇಶವಿರೋಧಿಕಾರ್ಯಗಳಲ್ಲಿ ತೊಡಗಿದವರನ್ನು ನಾಯಿ(dog)ಗಳಿಂದಲೇ ತುಂಬಿದ ನರಕಕ್ಕೆ ಕಳಿಸಲಾಗುತ್ತದೆ. ಅಲ್ಲಿ ನಾಯಿಗಳು ಅವರ ದೇಹವನ್ನು ಕಚ್ಚಿ ಹರಿಯುತ್ತವೆ. 
  • ಸುಳ್ಳು ಸಾಕ್ಷಿ, ಸುಳ್ಳು ಪ್ರಮಾಣ ಮಾಡಿದವರನ್ನು ಬಹಳ ಎತ್ತರದಿಂದ ಕೆಳಕ್ಕೆ ತಳ್ಳುವುದು. ಹಾಗೆ ಬಿದ್ದು ಮಣ್ಣಾದವರಿಗೆ ಮತ್ತೆ ಜೀವ ಕೊಟ್ಟು ತಳ್ಳುವುದು ಮುಂದುವರಿಯುತ್ತಲೇ ಇರುತ್ತದೆ. 
  • ಮದ್ಯಸೇವನೆ, ಡ್ರಗ್ಸ್ ಸೇವನೆಯಂಥ ಚಟದಲ್ಲಿ ತೊಡಗಿದವರಿಗೆ ಬಾಯಿಗೆ ಕಾದ ಕಬ್ಬಿಣದ ದ್ರವ ಹಾಗೂ ಜ್ವಾಲಾರಸವನ್ನು ಹೊಯ್ಯಲಾಗುತ್ತದೆ. 
  • ಕೊಂದವರು, ಬಲಿ ನೀಡಿದವರು, ಮೋಸ ಮಾಡಿದವರು, ಒಳ್ಳೆಯವರನ್ನು ಹಂಗಿಸಿದವರು , ಹಸಿದವರಿಗೆ ಅನ್ನ ಕೊಡದವರು ಎಲ್ಲರಿಗೂ ಇನ್ನೂ ಹಲವು ವಿಭಿನ್ನ ಶಿಕ್ಷೆಗಳನ್ನು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. 
     
click me!