Bengaluru: ಕರಗ ಕಣ್ತುಂಬಿಕೊಂಡ 14 ಲಕ್ಷ ಭಕ್ತರು: 22 ಕಿ.ಮೀ. ಸಂಚರಿಸಿದ ಶಕ್ತ್ಯುತ್ಸವ

By Kannadaprabha NewsFirst Published Apr 8, 2023, 9:06 AM IST
Highlights

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಬರೋಬ್ಬರಿ 14 ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡಿದ್ದಾರೆ. ಐತಿಹಾಸಿಕ ಹಬ್ಬ ಕರಗ ಶಕ್ತ್ಯುತ್ಸವ ಗುರುವಾರ ಮಧ್ಯರಾತ್ರಿ ಅತ್ಯಂತ ಸಾಂಗವಾಗಿ ನೆರವೇರಿದೆ. 

ಬೆಂಗಳೂರು (ಏ.08): ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಬರೋಬ್ಬರಿ 14 ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡಿದ್ದಾರೆ. ಐತಿಹಾಸಿಕ ಹಬ್ಬ ಕರಗ ಶಕ್ತ್ಯುತ್ಸವ ಗುರುವಾರ ಮಧ್ಯರಾತ್ರಿ ಅತ್ಯಂತ ಸಾಂಗವಾಗಿ ನೆರವೇರಿದೆ. ಕಳೆದ ಎರಡ್ಮೂರು ವರ್ಷ ಕರಗ ಮಹೋತ್ಸವಕ್ಕೆ ಕೊರೋನಾ ಸೋಂಕಿನಿಂದ ಅದ್ಧೂರಿ ಆಚರಣೆಗೆ ಅಡ್ಡಿ ಉಂಟಾಗಿತ್ತು. ಜತೆಗೆ, ಆರೋಗ್ಯ ಇಲಾಖೆ ಮತ್ತು ಸರ್ಕಾರದ ಹಲವು ನಿಬಂಧನೆಗಳ ನಡುವೆ ನಡಸಬೇಕಾಗಿತ್ತು. 

ಆದರೆ, ಈ ಬಾರಿ ಯಾವುದೇ ಅಡೆತಡೆಗಳಿಲ್ಲದ ಕಾರಣಕ್ಕೆ ಅತಿ ಹೆಚ್ಚು ಭಕ್ತರು ಪಾಲ್ಗೊಂಡು ದ್ರೌಪದಿ ದೇವಿ ಕರಗ ಶಕ್ತ್ಯುತ್ಸವವನ್ನು ಕಣ್ತುಂಬಿಕೊಂಡರು. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಜನರು ಸೇರಿದ್ದರು. ಇದರಿಂದ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಅಕ್ಕ-ಪಕ್ಕದ ರಸ್ತೆಗಳು, ಸಿಟಿ ಮಾರುಕಟ್ಟೆಸೇರಿದಂತೆ ವಿವಿಧ ಕಡೆ ಗುರುವಾರ ಮಧ್ಯರಾತ್ರಿ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗಿತ್ತು.

Latest Videos

ಗೋವಿಂದನ ನಾಮಸ್ಮರಣೆಯೊಂದಿಗೆ ಕರಗ ವೈಭವ: ಭಕ್ತರ ಸಮ್ಮುಖದಲ್ಲಿ ಶಕ್ತ್ಯುತ್ಸವ ಸಂಭ್ರಮ

2.50ಕ್ಕೆ ಹೊರಟ ಕರಗ: ಗುರುವಾರ ರಾತ್ರಿ 12.30ಕ್ಕೆ ಕರಗ ಹೊರಡಬೇಕಿತ್ತು. ಕಣ ಪೂಜೆ, ಇತರೆ ವಿಧಿವಿಧಾನಗಳು ತಡವಾದ ಹಿನ್ನಲೆಯಲ್ಲಿ ತಡರಾತ್ರಿ ಸುಮಾರು 2.50ಕ್ಕೆ ಹೊರಟ ಕರಗವು ನಗರದ ನಾನಾ ಭಾಗಗಳಲ್ಲಿ ಸಂಚರಿಸಿ, ಶುಕ್ರವಾರ ಬೆಳಗ್ಗೆ ಸುಮಾರು 9.45ಕ್ಕೆ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ತಲುಪಿತ್ತು. ಎಷ್ಟೇ ತಡವಾದರೂ ಭಕ್ತರ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ. ಇಡೀ ರಾತ್ರಿ ಭಕ್ತರು ಅತ್ಯಂತ ಸಂಭ್ರಮದಿಂದ ಹಬ್ಬದಲ್ಲಿ ಭಾಗಿಯಾದರು.

22 ಕಿ.ಮೀ ಸಂಚಾರ: ಕರಗ ಮೆರಣಿಗೆ ಸುಮಾರು 22 ಕಿ.ಮೀ. ಸಂಚಾರ ನಡೆಸಿತ್ತು. ಅರ್ಚಕ ವಿ.ಜ್ಞಾನೇಂದ್ರ ಕರಗ ಹೊತ್ತು ಸಾಗಿದರು. ವೀರಕುಮಾರರಾದಿಯಾಗಿ ಕತ್ತಿಗಳನ್ನು ಹಿಡಿದು ಹೊರಟ ಉತ್ಸವ, ಅಲ್ಲಲ್ಲಿ ಪೂಜೆ ಸ್ವೀಕರಿಸಲಾಯಿತು. ಸಂಚಾರಿದ ಮಾರ್ಗ ಉದ್ದಕ್ಕೂ ಜನ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದರು. ಸಾಲುಗಟ್ಟಿನಿಂತಿದ್ದ ಭಕ್ತರು ಗೋವಿಂದ ಗೋವಿಂದ ಎನ್ನುತ್ತಾ ಜಪಿಸಿದರು. ರಸ್ತೆಯುದ್ದಕ್ಕೂ ಝಗಮಗಿಸುವ ದೀಪಗಳ ಅಲಂಕಾರ ಮಾಡಲಾಗಿತ್ತು. ಬೆಂಗಳೂರು ನಗರದ ಕೆಲ ಭಾಗಗಳ ದೇವಾಲಯಗಳಿಗೆ ವಾಡಿಕೆಯಂತೆ ತೆರಳಿ ಪೂಜೆ ಸಲ್ಲಿಸಲಾಗಿದೆ. ಈ ವರ್ಷವು ಮಸ್ತಾನ್‌ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.

ಕರಗದ ಜತೆಗೆ ಪಲ್ಲಕ್ಕಿ ಉತ್ಸವ: ಚೈತ್ರ ಹುಣ್ಣಿಮೆಯ ದಿನವಾದ ಗುರುವಾರ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ನಡೆಯುವ ದ್ರೌಪದಿ ದೇವಿ ಕರಗ ಉತ್ಸವ ಮಾತ್ರವಲ್ಲದೆ, ಕೆಂಗೇರಿ, ಹೆಬ್ಬಾಳ ಸೇರಿದಂತೆ ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಕರಗ ನಡೆಯಿತು. ಜತೆಗೆ ಆಯಾ ಬಡಾವಣೆಗಳಲ್ಲಿ ಶಕ್ತಿ ದೇವತೆಗಳ ಮೆರವಣಿಗೆ, ರಥೋತ್ಸವಗಳು, ನಾನಾ ದೇವರುಗಳ ಪಲ್ಲಕ್ಕಿ ಉತ್ಸವಗಳು ಕೂಡ ಅದ್ಧೂರಿಯಾಗಿ ನಡೆದವು.

Bengaluru: ಇಂದು ಮಧ್ಯರಾತ್ರಿ ಐತಿಹಾಸಿಕ ಅದ್ಧೂರಿ ಕರಗ ಶಕ್ತ್ಯೋತ್ಸವ

ನಾಳೆ ಕರಗ ಮಹೋತ್ಸವಕ್ಕೆ ತೆರೆ: ಮಾ.29ರಂದು ಧ್ವಜಾರೋಹಣ ಆರಂಭಗೊಂಡ ಕರಗ ಉತ್ಸವವು ಏ.8ರಂದು ಮಧ್ಯಾಹ್ನ ರಾತ್ರಿ 12ಕ್ಕೆ ಧ್ವಜಾರೋಹಣದ ಮೂಲಕ ಸಮಾಪ್ತಿಯಾಗಲಿದೆ. ಶುಕ್ರವಾರ ಗಾವು ಶಾಂತಿ, ಭಾರತ ಕಥಾಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

click me!