Mahashivratri 2022: ಶಿವ ಪೂಜೆಯ ವಿಷಯದಲ್ಲಿ ನೆನಪಿಟ್ಟುಕೊಳ್ಳಲೇಬೇಕಾದ 18 ನಿಯಮಗಳಿವು..

By Suvarna NewsFirst Published Feb 28, 2022, 3:43 PM IST
Highlights

ಮಹಾಶಿವರಾತ್ರಿಯ ದಿನ ಶಿವನನ್ನು ಆರಾಧಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ 18 ನಿಯಮಗಳನ್ನು ಇಲ್ಲಿ ಕೊಡಲಾಗಿದೆ. 

ಮಹಾಶಿವರಾತ್ರಿ ಬಂದೇಬಿಟ್ಟಿತು. ಭಕ್ತರು ಆಹೋರಾತ್ರಿ ಶಿವಪೂಜೆಯಲ್ಲಿ ತೊಡಗುತ್ತಾರೆ. ಎಲ್ಲ ದೇವರ ಪೂಜೆಗೂ ಅದರದೇ ಆದ ಕೆಲ ನಿಯಮಗಳಿರುತ್ತವೆ. ಅಂತೆಯೇ ಶಿವನನ್ನು ಪೂಜಿಸುವಾಗಲೂ ಕೆಲ ನಿಯಮಗಳು, ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಾಡುವ ಪೂಜೆಯಲ್ಲಿ ತಪ್ಪಾಗಬಾರದು. ಆಗ ಮಾತ್ರ ದೇವರ ದೇವನನ್ನು ಮೆಚ್ಚಿಸಲು ಸಾಧ್ಯ. ಶಿವಪೂಜೆಯ ಸಂದರ್ಭದಲ್ಲಿ ಭಕ್ತರು ಗಮನಿಸಬೇಕಾದ 18 ವಿಷಯಗಳಿವು. 

  • ಶಿವನು ಯಾವಾಗಲೂ ಶುದ್ಧ ಭಕ್ತಿ(devotion)ಯನ್ನು ಬಯಸುವವನು. ನೀವು ಪೂಜೆ ಮಾಡುವಾಗ, ಜಪತಪಗಳನ್ನು ಮಾಡುವಾಗ ಕಾಟಾಚಾರಕ್ಕೆ ಬಾಯಲ್ಲಿ ಮಂತ್ರ ಹೇಳುತ್ತಾ ಮನಸ್ಸು ಮತ್ತೆಲ್ಲೋ ಇದ್ದರೆ ಪ್ರಯೋಜನವಿಲ್ಲ. ಕಾಯಾ, ವಾಚಾ, ಮನಸಾ ಭಕ್ತಿಯಿಂದ ಶಿವನನ್ನು ಆರಾಧಿಸಬೇಕು. ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನೊಳಗೆ ಅಹಂಕಾರ, ಕೋಪತಾಪ, ಹೊಟ್ಟೆಕಿಚ್ಚು ಮುಂತಾದ ವಿಷಭಾವಗಳು ಇರಕೂಡದು. 
  • ಶಿವರಾತ್ರಿಯ ದಿನ ಕಪ್ಪು ಬಟ್ಟೆ(black clothes)ಯನ್ನು ಧರಿಸಕೂಡದು. ಶಿವನನ್ನು ಪೂಜಿಸುವಾಗ ಬಿಳಿ, ಕೆಂಪು, ಹಳದಿ, ಕೇಸರಿ ಇಲ್ಲವೇ ನೀಲಿ ಬಣ್ಣಗಳ ಬಟ್ಟೆ ಧರಿಸುವುದು ಉತ್ತಮ. 
  • ಶಿವನನ್ನು ಪೂಜಿಸುವಾಗ ನಿಮ್ಮ ಮುಖ ಯಾವಾಗಲೂ ಉತ್ತರ(North) ಇಲ್ಲವೇ ಪೂರ್ವ(East)ಕ್ಕಿರಬೇಕು. ಜೊತೆಗೆ, ಮಣೆಯ ಮೇಲೆ ಕುಳಿತು ಪೂಜಿಸಬೇಕು. 
  • ಶಿವನಿಗೆ ತಾಮ್ರದ ಪಾತ್ರೆಯಲ್ಲಿ ಎಂದಿಗೂ ಹಾಲನ್ನು ಅಭಿಷೇಕ ಮಾಡಬಾರದು. ಸ್ಟೀಲ್, ಹಿತ್ತಾಳೆ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿಯೇ ಹಾಲಿನ ಅಭಿಷೇಕ ಇಲ್ಲವೇ ನೈವೇದ್ಯಕ್ಕೆ ಬಳಸಬೇಕು. 
  • ಶಿವಲಿಂಗಕ್ಕೆ ಹಾಲು, ಮೊಸರು, ಜೇನುತುಪ್ಪ, ತುಪ್ಪ, ಸಕ್ಕರೆ ಹಾಕಿದ ಬಳಿಕ ಗಂಗಾಜಲ(Gangajal) ಇಲ್ಲವೇ ಶುದ್ಧ ನೀರನ್ನು ಅಭಿಷೇಕ ಮಾಡಲು ಮರೆಯಬಾರದು. 
  • ಶಿವನಿಗೆ ಇಷ್ಟವೆಂದು ಬಿಲ್ಪತ್ರೆ(Belpatra) ಅಥವಾ ಶಮಿ ಪತ್ರೆಯನ್ನು ನೀಡುವ ಮೊದಲು, ಅದರ ಬುಡದ ದಪ್ಪ ಭಾಗವನ್ನು ತೆಗೆದು ಕೊಡಬೇಕು. 

    Mahashivratri 2022: ಶಿವನಿಗೆ ಇಷ್ಟದ ವಸ್ತುಗಳನ್ನು ಅರ್ಪಿಸಿ, ನಿಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಿ
     
  • ಶಿವನಿಗೆ ಕಾಯಿಯನ್ನು ಅರ್ಪಿಸಬಹುದು. ಆದರೆ, ಎಳನೀರ(coconut water) ಅಭಿಷೇಕ ಮಾಡಲು ಮರೆಯಬಾರದು. 
  • ಶಿವನನ್ನು ಪೂಜಿಸುವಾಗ ನಾಗಕೇಸರಿ, ಕುತಜ್, ಚಂಪಾ, ಮಲ್ಲಿಗೆ, ಕೇದಗೆ, ಬಿಲ್ಪತ್ರೆ, ದತುರಾ ಹೂಗಳನ್ನು ಬಳಸಿ. 
  • ಶಿವನಿಗೆ ಪೂಜಿಸುವಾಗ ತುಳಸಿ ಎಲೆಗಳನ್ನು ಬಳಸಬಾರದು. 
  • ಶಿವನಿಗೆ ಉಳಿದ ದೇವರಿಗೆ ಮಾಡಿದ ಹಾಗೆ ಶಂಖ(conch shell)ದಿಂದ ಜಲಾಭಿಷೇಕ ಮಾಡಬಾರದು. 
  • ಶಿವನಿಗೆ ನುಚ್ಚಕ್ಕಿ(broken rice)ಯಿಂದ ಅಕ್ಷತೆ ತಯಾರಿಸಿ ಬಳಸಬೇಡಿ. ಹಾಗೆಯೇ ಅರಿಶಿನ, ಕುಂಕುಮ ಬಳಕೆ ಅಷ್ಟು ಶ್ರೇಷ್ಠವಲ್ಲದ ಕಾರಣ ಬಳಸಬೇಡಿ. ಆತನಿಗೇನಿದ್ದರೂ ಗಂಧ, ವಿಭೂತಿಯೇ ಶ್ರೇಷ್ಠ.
  • ಶಿವನನ್ನು ಪೂಜಿಸುವಾಗ ಆತನಿಗೆ ಗಾಂಜಾ ಅರ್ಪಿಸುವುದರಿಂದ ಒಳಿತಾಗುವುದು. 

    Mahashivratri 2022: ಈ ದಿನ ನಡೆಯಲಿದೆ ಪವಾಡ, ಪಂಚಗ್ರಾಹಿ ಯೋಗದಿಂದ ಬದಲಾಗಲಿದೆ ಕೆಲ ರಾಶಿಯವರ ಅದೃಷ್ಟ
     
  • ಶಿವಲಿಂಗಕ್ಕೆ ತಾಕಿಸಿದ ನೈವೇದ್ಯವನ್ನು ಬಳಸಬಾರದು. ಉಳಿದ ನೈವೇದ್ಯ, ಪ್ರಸಾದವನ್ನು ಹಂಚಿ ತಿನ್ನಬಹುದು. 
  • ಶಿವನನ್ನು ಶಿವರಾತ್ರಿಯಂದು ಉಪವಾಸವಿದ್ದು ಪೂಜಿಸುವವರು ಹಣೆಯಲ್ಲಿ ಚಂದನದ ತಿಲಕ(red sandalwood) ಇಟ್ಟುಕೊಂಡಿರಬೇಕು ಹಾಗೂ ಕೈಗಳ ಮೇಲೆ ವಿಭೂತಿ ಬಳಿದುಕೊಂಡಿರಬೇಕು. 
  • ಶಿವನ ಆರಾಧನೆಗೆ ಸಾಕಷ್ಟು ಮಂತ್ರವಿದೆ. ಯಾವುದೂ ಬರುವುದಿಲ್ಲವೆಂದರೆ ನಿರಂತರವಾಗಿ 'ಓಂ ನಮಃ ಶಿವಾಯ' ಜಪ ಮಾಡುತ್ತಾ ಪೂಜೆ ಮಾಡಬಹುದು. 
  • ಶಿವ ಜಪ ಮಾಡುವಾಗ ಒಳ್ಳೆಯ ರುದ್ರಾಕ್ಷಿ ಮಾಲೆ ಹಿಡಿದು ಪಠಿಸುವುದು ಉತ್ತಮ. 
  • ಶಿವರಾತ್ರಿ ಜಾಗರಣೆಯ ಸಂದರ್ಭದಲ್ಲಿ ಶಿವನ ಕತೆಗಳ ಶ್ರವಣ ಮಾಡುವುದು, ಓದುವುದು ಜೊತೆಗೆ ಭಜನೆ, ಕೀರ್ತನೆಗಳನ್ನು ಹಾಡುವುದರಲ್ಲಿ ತೊಡಗಿಕೊಳ್ಳಬೇಕು. 
  • ಶಿವರಾತ್ರಿಯಲ್ಲಿ ರಾತ್ರಿ ಜಾಗರಣೆ ಮಾಡಬೇಕೆಂದು ಹಗಲು ಹೊತ್ತಿನಲ್ಲಿ ಮಲಗಕೂಡದು. ಈ ನಿಯಮ ಅನಾರೋಗ್ಯದಲ್ಲಿರುವವರಿಗೆ, ವಯಸ್ಸಾದವರಿಗೆ, ಮಕ್ಕಳಿಗೆ ಅನ್ವಯವಾಗುವುದಿಲ್ಲ. 

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
click me!