Fact Check: ಧಾರ್ಮಿಕ ಉಡುಗೆ ತೊಟ್ಟು KSRTC ಬಸ್‌ ಓಡಿಸಿದ ಚಾಲಕ? ವೈರಲ್‌ ಚಿತ್ರದ ಹಿಂದಿನ ಸತ್ಯವೇನು?‌

By Suvarna NewsFirst Published May 26, 2022, 6:42 PM IST
Highlights

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಚಿತ್ರ ತಿರುವನಂತಪುರಂನ ತಂಪನೂರ್‌ನಿಂದ ಮಾವೆಲಿಕ್ಕಾರಕ್ಕೆ ಬಸ್ ಸಂಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ತೆಗೆದ ಚಿತ್ರ ಎಂದು ಹೇಳಲಾಗಿದೆ. 

Fact Check: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚಾಲಕ ಸಮವಸ್ತ್ರದ ಬದಲು ಧಾರ್ಮಿಕ ಉಡುಗೆ ತೊಟ್ಟಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ವೈರಲ್‌ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಚಿತ್ರ ತಿರುವನಂತಪುರಂನ ತಂಪನೂರ್‌ನಿಂದ ಮಾವೆಲಿಕ್ಕಾರಕ್ಕೆ ಬಸ್ ಸಂಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ತೆಗೆದ ಚಿತ್ರ ಎಂದು ಹೇಳಲಾಗಿದೆ. 

Claim: ಚಾಲಕನ ಉಡುಪು ಮುಸ್ಲಿಂ ಪುರುಷರು ಸಾಂಪ್ರದಾಯಿಕವಾಗಿ ಧರಿಸುವ ಉಡುಪಿನಂತೆ ಕಾಣುತ್ತದೆ. ಅವರು ಇಸ್ಲಾಮಿಕ್ ನಂಬಿಕೆಯ ಪುರುಷರು ಧರಿಸಿರುವ ಕ್ಯಾಪ್ ಸಹ ಧರಿಸಿದ್ದಾರೆ. ಈ ಆಧಾರದ ಮೇಲೆ ಅವರು ಧಾರ್ಮಿಕ ಉಡುಗೆಯಲ್ಲಿ ಬಸ್ ಓಡಿಸುತ್ತಿದ್ದರು ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಸ್ಟ್‌ ಮಾಡಲಾಗಿದೆ. 

Fact Check: ಕನ್ನಡ ಏಷ್ಯಾನೆಟ್ ನ್ಯೂಸ್‌ನ ಕೇರಳದ ಮೂಲಗಳು ಕೆಎಸ್‌ಆರ್‌ಟಿಸಿ ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದೆ. ಈ ಫೋಟೋ ತಮ್ಮ ಗಮನಕ್ಕೆ ಬಂದಿದ್ದು, ಬಸ್ ಮಾವೇಲಿಕ್ಕರ ಡಿಪೋಗೆ ಸೇರಿದ್ದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಚಾಲಕ ಡಿಪೋದಲ್ಲಿ ಉದ್ಯೋಗಿಯಾಗಿದ್ದು, ಆತನ ಮೇಲಿನ ಆರೋಪ ನಿರಾಧಾರ ಎಂದು ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ. 

ಚಾಲಕ ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ನೇವಿ ಬ್ಲೂ ಪ್ಯಾಂಟ್ ಧರಿಸಿದ್ದಾನೆ. ಚಿತ್ರದ ಕಳಪೆ ಗುಣಮಟ್ಟದಿಂದಾಗಿ ಅಥವಾ ಬಟ್ಟೆಯನ್ನು ಒಗೆಯುವುದರಿಂದ ಅಥವಾ ಫೋಟೋವನ್ನು ಎಡಿಟ್‌ ಮಾಡಿದ ಕಾರಣದಿಂದ ಶರ್ಟ್ ಬಿಳಿಯಾಗಿ ಕಾಣುತ್ತಿದೆ. ಚಾಲಕ ಫುಲ್ ಸ್ಲೀವ್ ಶರ್ಟ್ ಧರಿಸಿದ್ದ ಮತ್ತು ತೊಡೆಯ ಮೇಲೆ ಬಟ್ಟೆಯೊಂದನ್ನು ಹಾಕಿದ್ದಾನೆ, ಅದು ಚಾಲಕ ಬಟ್ಟೆ ತೊಟ್ಟಿರುವಂತೆ ತೋರುತ್ತಿದೆ. 

ಕೆಎಸ್‌ಆರ್‌ಟಿಸಿ ಚಾಲಕರ ಸಮವಸ್ತ್ರದ ಸುತ್ತೋಲೆ ಪ್ರಕಾರ ಆಕಾಶ ನೀಲಿ ಬಣ್ಣದ ಶರ್ಟ್ ಕಡ್ಡಾಯ. ಉದ್ಯೋಗಿಗಳು ಪೂರ್ಣ ಅಥವಾ ಅರ್ಧ ತೋಳುಗಳನ್ನು ಧರಿಸಲು ಅನುಮತಿಸಲಾಗಿದೆ ಮತ್ತು ಕ್ಯಾಪ್‌ನಂತಹ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಯಾವುದೇ ನಿರ್ಬಂಧವಿಲ್ಲ.

ಇನ್ನು ಈ ಬಗ್ಗೆ 'Aanavandi Travel Blog' ವರದಿ ಮಾಡಿದೆ. "ಎಟಿಎ 181 ಬಸ್ ಚಾಲಕ ಅಶ್ರಫ್, ಕೆಎಸ್ಆರ್ಟಿಸಿ ಮಾವೇಲಿಕ್ಕರ ಡಿಪೋದ ಚಾಲಕ. ಇವರು ಹಾಕಿರುವುದು ಬಿಳಿ ಜುಬ್ಬಾ ಅಲ್ಲ ಕೆಸ್‌ಎಸ್‌ಆರ್‌ಟಿಸಿಯ ಸಮವಸ್ತ್ರವಾದ ಸ್ಕೈಬ್ಲೂ ಶರ್ಟ್. ಫುಲ್ ತೋಳಿನ ಶರ್ಟ್ ಮಡಚಿಲ್ಲ. ಮಡಿಲಿನಲ್ಲಿ ಟವೆಲ್ ಕೂಡ ಹಾಕಿಕೊಂಡಿದ್ದಾರೆ. ಮೊದಲ ನೋಟದಲ್ಲಿ ಬಿಳಿ ಜುಬ್ಬಾ ತೊಟ್ಟ ಹಾಗೆ ಕಾಣುತ್ತದೆ.  ಗಡ್ಡ ಮತ್ತು ಟೋಪಿ ಗಮನಿಸಿ ಕೆಎಸ್ಆರ್ಟಿಸಿ ಬಸ್ ಓಡಿಸುತ್ತಿರುವ ಚಾಲಕನನ್ನು, ಭಯೋತ್ಪಾದಕನಂತೆ ಬಿಂಬಿಸಿ ಪ್ರಚಾರ ಮಾಡಲಾಗಿತ್ತು. ನನ್ನ ಭೂಮಿ ಕೂಡ ನಿಮ್ಮದೇ. ಒಬ್ಬರಿಗೊಬ್ಬರು ಧರ್ಮದ ವಿಷಕ್ಕಾಗಿ ಜಗಳವಾಡಬೇಡಿ..ಎಲ್ಲರೂ ಮನುಷ್ಯರೇ, ಮತೀಯ ಗಲಭೆ ಎಬ್ಬಿಸುವುದು ಸುಲಭ. ನಮ್ಮ ನಾಡು ಇಂತಹ ಸಂಘರ್ಷಗಳಿಗೆ ವೇದಿಕೆಯಾಗಬಾರದು" ಎಂದು ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ

Aanavandi Travel Blog ಹಂಚಿಕೊಂಡಿರುವ ಫೋಟೋಗಳಲ್ಲಿ ಬಸ್‌ ಚಾಲಕ ಸರ್ಕಾರ ಕಡ್ಡಾಯ ಗೊಳಿಸಿರುವ ಸಮವಸ್ತ್ರ ಧರಿಸಿರುವುದು ಕಾಣಬಹುದು. ಇನ್ನು ಸರ್ಕಾರ ಸಮವಸ್ತ್ರ ಬದಲಾವಣೆ ಮಾಡಿದ  ಬಗ್ಗೆ 2015ರಲಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ (Link) ಮಾಡಿದೆ. "ಸಾರಿಗೆ ಆಯುಕ್ತ ಟೋಮಿನ್ ಜೆ ಥಚ್ಚಂಕರಿ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಚಾಲಕರು ಮತ್ತು ಕಂಡಕ್ಟರ್‌ಗಳ ಖಾಖಿ ಸಮವಸ್ತ್ರವನ್ನು ನೇವಿ ಬ್ಲೂ ಪ್ಯಾಂಟ್ ಮತ್ತು ಸ್ಕೈ ಬ್ಲೂ ಶರ್ಟ್ ಅಥವಾ ಚೂಡಿದಾರ್‌ಗೆ ಬದಲಾಯಿಸಲಾಗಿದೆʼ ಎಂದು ವರದಿಯಲ್ಲಿ ಹೇಳಲಾಗಿದೆ

ಹೀಗಾಗಿ ಕೆಎಸ್‌ಆರ್‌ಟಿಸಿ ಚಾಲಕ ಬಸ್ ಚಾಲನೆ ಮಾಡುವಾಗ ಸಮವಸ್ತ್ರದ ಬದಲು ಧಾರ್ಮಿಕ ಉಡುಗೆ ತೊಟ್ಟಿದ್ದ ಎಂಬ ಆರೋಪ ನಿರಾಧಾರ. ಚಾಲಕ ತೊಡೆಯ ಮೇಲೆ ಹಾಕಿದ ಬಟ್ಟೆಯು ಅವನು ತೊಟ್ಟಿರುವ ಬಟ್ಟೆಯಂತೆ ತೋರುತ್ತಿತ್ತು, ಹೀಗಾಗಿ ಈ ಚಿತ್ರ ಚರ್ಚೆಗೆ ಕಾರಣವಾಗಿದೆ.

click me!