ಭರಾಟೆ ಚಿತ್ರದಲ್ಲಿ ಹೀರೋಗಿಂತ ವಿಲನ್‌ನೇ ಹೆಚ್ಚಾದ್ರಾ?

By Kannadaprabha NewsFirst Published Jan 8, 2019, 1:04 PM IST
Highlights

ಶ್ರೀ ಮುರಳಿ ಅಭಿನಯದ, ಬಹದ್ದೂರ್ ಚೇತನ್ ನಿರ್ದೇಶನದ ‘ಭರಾಟೆ’ ಚಿತ್ರದಲ್ಲಿ ಭರ್ಜರಿ ವಿಲನ್‌ಗಳು ಅಬ್ಬರಿಸಲಿದ್ದಾರೆ. ಅದೂ ಕನ್ನಡದ ಮೂವರು ಭಾರಿ ದನಿಯ ಕಲಾವಿದರು ನಟಿಸುತ್ತಿದ್ದಾರೆ ಅನ್ನುವುದು ವಿಶೇಷ. ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಸಹೋದರರು ಈ ಚಿತ್ರದ ಖಳನಾಯಕರು.

ಸದ್ಯಕ್ಕೆ ಮೂವರು ಸಹೋದರರು ಚಿತ್ರದಲ್ಲಿ ಮುಖಾಮುಖಿ ಆಗಲು ಒಪ್ಪಿಗೆ ಹೇಳಿದ್ದಾಗಿದೆ. ಇದೇ ತಿಂಗಳು 11 ರಿಂದ ಚಿತ್ರಕ್ಕೆ ಕೊನೆ ಹಂತದ ಚಿತ್ರೀಕರಣವೂ ಶುರುವಾಗುತ್ತಿದೆ. ಮೈಸೂರಿನಲ್ಲಿ ಚಿತ್ರತಂಡ ಆ ಮೂವರು ಸಹೋದರರ ಪಾತ್ರಗಳ ಚಿತ್ರೀಕರಣಕ್ಕೆ ಸಿದ್ಧತೆಯೂ ನಡೆಸಿದೆ.

‘ಚಿತ್ರದಲ್ಲಿನ ನೆಗೆಟಿವ್ ಶೇಡ್ ಪಾತ್ರಗಳಿಗೆ ಸೂಕ್ತ ಕಲಾವಿದರನ್ನು ಹುಡುಕುತ್ತಿದ್ದೆವು. ಆಗ ಚಿತ್ರತಂಡಕ್ಕೆ ಹೊಳೆದಿದ್ದು ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಸಹೋದರರು. ಅವರನ್ನೇ ಚಿತ್ರಕ್ಕೆ ಕರೆ ತಂದು ಯಾಕೆ ವಿಲನ್ ಪಾತ್ರಗಳಲ್ಲಿ ತೋರಿಸಬಾರದು ಅಂತ ಡಿಸೈಡ್ ಮಾಡಿದೆವು. ನಾವು ಭೇಟಿಯಾದ ಮೊದಲ ಸಲವೇ ರವಿಶಂಕರ್ ಹಾಗೂ ಅಯ್ಯಪ್ಪ ಒಪ್ಪಿಗೆ ಹೇಳಿದರು. ಅವರಿಗೆ ಪಾತ್ರಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಅವರ ಹಾಗೆಯೇ ಸಾಯಿಕುಮಾರ್ ಅವರನ್ನು ಭೇಟಿ ಮಾಡಿ, ಪಾತ್ರದ ಬಗ್ಗೆ ಹೇಳಿದ್ದೇವೆ. ಜತೆಗೆ ರವಿಶಂಕರ್, ಅಯ್ಯಪ್ಪ ಕಾಂಬಿನೇಷನ್ ಬಗ್ಗೆಯೂ ತಿಳಿಸಿದ್ದೇವೆ. ಕೇಳಿ ಥ್ರಿಲ್ ಆದರು. ಆದರೆ, ತಮ್ಮದೇ ಕೆಲಸಗಳಲ್ಲಿ ಸ್ವಲ್ಪ ಬ್ಯುಸಿ ಆಗಿರುವುದರಿಂದ ಅವರಿನ್ನು ಓಕೆ ಅಂದಿಲ್ಲ. ಆದರೆ ಅವರು ಒಪ್ಪಿಕೊಳ್ಳುತ್ತಾರೆನ್ನುವ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.

‘ಭರಾಟೆ’ ಮೂಲಕ ಸಾಯಿಕುಮಾರ್ ಆಸೆ ಈಡೇರುತ್ತಿದೆ. ರವಿಶಂಕರ್, ಅಯ್ಯಪ್ಪ ಸೇರಿ ಮೂವರು ಸಹೋದರರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆಯಿದೆ ಅಂತ ಕೆಲವು ದಿನಗಳ ಹಿಂದಷ್ಟೇ ಅವರು ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಅದೇ ಖುಷಿಯಲ್ಲಿ ಮೂವರು ಸಹೋದರರು ಒಂದೇ ಚಿತ್ರದಲ್ಲಿ ವಿಲನ್‌ಗಳಾಗಿ ಮುಖಾಮುಖಿ ಆಗಲು ಉತ್ಸುಕರಾಗಿದ್ದಾರೆ.

 

click me!