
ನಟಿ ರಿಧಿ ಡೋಗ್ರಾ, ಟ್ವಿಶಾ ಶರ್ಮಾ ಅವರ ದುರಂತ ಸಾವಿನ ಹಿನ್ನೆಲೆಯಲ್ಲಿ ಯುವಜನತೆಗೆ ಮದುವೆಯನ್ನು ರೊಮ್ಯಾಂಟಿಕ್ ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಈಗಿನ ಕಾಲದ ಮಹಿಳೆಯರು ಸ್ವಾವಲಂಬಿಗಳು, ಅವರು ಯಾರ ಆದೇಶವನ್ನೂ ಪಾಲಿಸುವುದಿಲ್ಲ ಎಂದು ಪುರುಷರಿಗೆ ಮತ್ತು ಕಾಲ್ಪನಿಕ ಕಥೆಯನ್ನು ನಿರೀಕ್ಷಿಸಬೇಡಿ ಎಂದು ಮಹಿಳೆಯರಿಗೆ ಅವರು ಸಲಹೆ ನೀಡಿದ್ದಾರೆ.
ನೋಯ್ಡಾ ನಿವಾಸಿ ಟ್ವಿಶಾ ಶರ್ಮಾ ಅವರ ದುರಂತ ಸಾವಿನ ಹಿನ್ನೆಲೆಯಲ್ಲಿ, ಖ್ಯಾತ ನಟಿ ರಿಧಿ ಡೋಗ್ರಾ ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇಂದಿನ ಯುವಕರು "ಮದುವೆಯನ್ನು ರೊಮ್ಯಾಂಟಿಕ್ ಮಾಡಿಕೊಳ್ಳುವುದನ್ನು" ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. 2025ರ ಡಿಸೆಂಬರ್ನಲ್ಲಿ ಭೋಪಾಲ್ ಮೂಲದ ಸಮರ್ಥ್ ಸಿಂಗ್ ಅವರನ್ನು ಮದುವೆಯಾಗಿದ್ದ ಟ್ವಿಶಾ, ಮೇ 12 ರಂದು ನಿಧನರಾದರು. ಅವರ ಅತ್ತೆ-ಮಾವ ತೀವ್ರ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಟ್ವಿಶಾ ಕುಟುಂಬ ಆರೋಪಿಸಿದೆ. ಈ ಸಂಬಂಧ, ಪೊಲೀಸರು ಟ್ವಿಶಾ ಪತಿ ಮತ್ತು ನಿವೃತ್ತ ನ್ಯಾಯಾಧೀಶೆಯಾಗಿರುವ ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.
ಮದುವೆಯನ್ನು ರೊಮ್ಯಾಂಟಿಕ್ ಮಾಡಿಕೊಳ್ಳುವುದನ್ನು ನಿಲ್ಲಿಸಿ
ಈ ಹೃದಯ ವಿದ್ರಾವಕ ಘಟನೆಗೆ ಪ್ರತಿಕ್ರಿಯಿಸಿದ ರಿಧಿ ಡೋಗ್ರಾ, ಇನ್ಸ್ಟಾಗ್ರಾಮ್ನಲ್ಲಿ ಯುವಕ-ಯುವತಿಯರಿಗೆ ಒಂದು ರಿಯಾಲಿಟಿ ಚೆಕ್ ನೀಡಿದ್ದಾರೆ. ತಮ್ಮ ಪೋಷಕರ ಕಾಲಕ್ಕಿಂತ ಇಂದಿನ ಸಂಬಂಧಗಳು, ಸ್ವಾತಂತ್ರ್ಯ ಮತ್ತು ಸಾಮಾಜಿಕ ನಿಯಮಗಳು ಹೇಗೆ ಬದಲಾಗಿವೆ ಎಂಬುದನ್ನು ಅವರು ವಿವರಿಸಿದ್ದಾರೆ. 2026ರಲ್ಲಿ ಮದುವೆ ಎನ್ನುವುದು ಬದುಕುಳಿಯಲು ಅಥವಾ ಕುರುಡು ವಿಧೇಯತೆಗಾಗಿ ಅಲ್ಲ, ಅದು ಪರಸ್ಪರ ತಿಳುವಳಿಕೆಯ ಮೇಲೆ ನಿರ್ಮಾಣವಾಗಬೇಕು ಎಂದು ರಿಧಿ ತಮ್ಮ ಪೋಸ್ಟ್ನಲ್ಲಿ ಒತ್ತಿ ಹೇಳಿದ್ದಾರೆ.
ಯುವಕರಿಗೆ ಸಲಹೆ ನೀಡುತ್ತಾ, "ಯುವತಿಯರೇ ಮತ್ತು ಯುವಕರೇ, ಇದು 2026. ದಯವಿಟ್ಟು ಮದುವೆಯನ್ನು ರೊಮ್ಯಾಂಟಿಕ್ ಮಾಡಿಕೊಳ್ಳುವುದನ್ನು ನಿಲ್ಲಿಸಿ. ನಿಮ್ಮ ಪೋಷಕರ ಕಾಲ ಮತ್ತು ಅವರು ಬೆಳೆದ ಜಗತ್ತು ಈಗಿಲ್ಲ. ಈಗಿನ ಮದುವೆ ಮೊದಲಿನಂತಿಲ್ಲ. ಹುಡುಗರು ಒಂದು ವಿಷಯ ತಿಳಿದುಕೊಳ್ಳಬೇಕು, ಈಗಿನ ಹುಡುಗಿಯರು ನೀವು ಹೇಳಿದ್ದನ್ನೆಲ್ಲಾ ಕುರಿಮರಿಗಳಂತೆ ಕುರುಡಾಗಿ ಪಾಲಿಸುವುದಿಲ್ಲ. ಯಾಕಂದ್ರೆ ಕಾನೂನುಗಳು ಅವರಿಗೆ ಆ ಶಕ್ತಿ ನೀಡಿವೆ. ಇಂದು ಅವರು ಉದ್ಯೋಗ, ವಾಸಕ್ಕೆ ಜಾಗ, ಆದಾಯ ಗಳಿಸಿ ಸಮಾಜದಲ್ಲಿ ಶಾಂತಿಯಿಂದ ಬದುಕಬಲ್ಲರು. ಹಾಗಾಗಿ ನಿಮ್ಮ ಆದೇಶಗಳನ್ನು ಪಾಲಿಸಬೇಕಾದ ಅವಶ್ಯಕತೆ ಅವರಿಗಿಲ್ಲ. ಹುಡುಗಿಯರಿಗೆ ಬದುಕಲು ಮದುವೆ ಬೇಕಿಲ್ಲ. ಒಡನಾಟಕ್ಕೆ ಬೇಕು, ಹೌದು. ಆದರೆ ಅವಲಂಬನೆಗಲ್ಲ," ಎಂದು ಬರೆದಿದ್ದಾರೆ.
ರಿಧಿ ಯುವತಿಯರಿಗೂ ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಾರೆ. ತಮ್ಮ ಸಂಗಾತಿಯ ಮೇಲೆ ಅವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ, ಸ್ವಾವಲಂಬನೆಗೆ ಆದ್ಯತೆ ನೀಡುವಂತೆ ಹೇಳಿದ್ದಾರೆ. ಸಮಾಜದ ಈ ಬದಲಾವಣೆಯ ಹಂತದಲ್ಲಿ ಪುರುಷರೂ ಗೊಂದಲದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. "ಹುಡುಗಿಯರೇ, ದಯವಿಟ್ಟು ಮದುವೆಯ ನಂತರ ನಿಮ್ಮ ಬಾಯ್ಫ್ರೆಂಡ್ಗಳು 'ಪ್ರಿನ್ಸ್ ಚಾರ್ಮಿಂಗ್' ಆಗುತ್ತಾರೆ ಎಂದು ನಿರೀಕ್ಷಿಸಬೇಡಿ. ಅವರೂ ಮನುಷ್ಯರೇ ಮತ್ತು ಈ ಹೊಸ ಜಗತ್ತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಇದು ಹೆಚ್ಚು ಹೊಸದು, ಯಾಕಂದ್ರೆ ಅವರು ಗಂಡಸರನ್ನು ಗಂಡಸರಾಗಿಯೇ ನೋಡಿದ್ದಾರೆ. ಆದರೆ ಸಮಾಜದ ನಿಯಮಗಳು ಬದಲಾಗಿವೆ. ದಯವಿಟ್ಟು ಯಾವುದೇ ಕಾಲ್ಪನಿಕ ಕಥೆಯನ್ನು ನಿರೀಕ್ಷಿಸಬೇಡಿ. ಶಿಕ್ಷಣ ಪಡೆಯಿರಿ. ನಿಮಗಾಗಿ ಬದುಕಿ. ಮತ್ತು ದಯವಿಟ್ಟು ನಿಮಗಾಗಿ ನೀವೇ ನಿಲ್ಲಿ. ಬೇರೆ ಯಾರೋ ಬಂದು ನಿಮಗಾಗಿ ನಿಲ್ಲುತ್ತಾರೆ ಎಂದು ನಿರೀಕ್ಷಿಸಬೇಡಿ," ಎಂದು ಅವರು ಸೇರಿಸಿದ್ದಾರೆ.
ತಮ್ಮ ಇನ್ನೊಂದು ಪೋಸ್ಟ್ನಲ್ಲಿ, ನಟಿ ಫೆಮಿನಿಸಂ ಕುರಿತ ಆಧುನಿಕ ತಪ್ಪು ಕಲ್ಪನೆಗಳ ಬಗ್ಗೆ ಮಾತನಾಡಿದ್ದಾರೆ. ಈ ಚಳುವಳಿ ಪುರುಷರನ್ನು ಅವಮಾನಿಸಲು ಹುಟ್ಟಿದ್ದಲ್ಲ, ಬದಲಿಗೆ ಸಮಾನತೆಯನ್ನು ಸ್ಥಾಪಿಸಲು ಬಂದಿದ್ದು ಎಂದು ಒತ್ತಿ ಹೇಳಿದ್ದಾರೆ. "'ಫೆಮಿನಿಸಂ' ಎಂಬ ಪದವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಆದರೆ ನಿಜವಾದ ಫೆಮಿನಿಸಂ ಎಂದರೆ ಕೇವಲ ಸಮಾನತೆ. ಅಷ್ಟೇ. ಅದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ. ನಾನು ಹುಡುಗಿಯರ ಪರವಾಗಿ ಮಾತನಾಡುವಾಗ, ಹುಡುಗರ ಪರವಾಗಿಯೂ ಮಾತನಾಡುತ್ತೇನೆ. ನಾನು ಮಾನಸಿಕ ಆರೋಗ್ಯದ ಬಗ್ಗೆ ವಾದಿಸಿದರೆ, ಅದು ಎರಡೂ ಲಿಂಗಗಳಿಗೆ ಅನ್ವಯಿಸುತ್ತದೆ. ಫೆಮಿನಿಸಂ ಎಂದಿಗೂ ಪುರುಷರನ್ನು ಕೀಳಾಗಿಸುವುದರ ಬಗ್ಗೆ ಇರಲಿಲ್ಲ. ಹೌದು, ಪ್ರತಿಯೊಂದು ಕ್ರಾಂತಿಯಂತೆ ಇದೂ ಕೂಡಾ ಜೋರಾಗಿ ಮತ್ತು ಕೋಪದಿಂದಲೇ ಪ್ರಾರಂಭವಾಯಿತು. ಆದರೆ ಇಂದು ಹಾಗಲ್ಲ," ಎಂದಿದ್ದಾರೆ.
ಸಾಂಸ್ಕೃತಿಕ ತತ್ವವನ್ನು ಉಲ್ಲೇಖಿಸಿ, ಆರೋಗ್ಯಕರ ಸಂಬಂಧಗಳಿಗೆ ಬೇಕಾದ ಸಮತೋಲನವನ್ನು ರಿಧಿ ತಮ್ಮ ಫಾಲೋವರ್ಸ್ಗೆ ನೆನಪಿಸಿದ್ದಾರೆ. "ಇಂದು ಮಹಿಳೆಯರಿಗೆ ಅವಕಾಶಗಳಿವೆ. ಕಾಲ ಬದಲಾಗಿದೆ. ಪ್ರತಿಯೊಬ್ಬ ಮಹಿಳೆ ಯಾವುದಕ್ಕಾಗಿ ಹೋರಾಡಿದಳೋ ಅದು ಇಂದು ಆಚರಣೆಯಲ್ಲಿದೆ. ನಾವು ಶಿವ ಮತ್ತು ಶಕ್ತಿಯ ನಾಡಿನವರು ಎಂಬುದನ್ನು ಮರೆಯಬಾರದು. ಇಬ್ಬರೂ ಒಟ್ಟಿಗೆ ಸಾಗುತ್ತಾರೆ. ಮತ್ತು ಅದು ಸಾಧ್ಯವಾಗುವುದು ನಿಮ್ಮ ಮತ್ತು ಇತರರ ಬಗ್ಗೆ ಪ್ರೀತಿ ಮತ್ತು ಗೌರವದಿಂದ ಮಾತ್ರ. ಇಬ್ಬರಿಗೂ ಸಮಾನವಾಗಿ ಘನತೆ ಇರಲಿ," ಎಂದು ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.