
ಚಿತ್ರರಂಗ ಎಂಬುದು ಬಣ್ಣದ ಲೋಕ. ಇಲ್ಲಿ ಇಂದು ಸ್ಟಾರ್ ಆಗಿದ್ದವರು ನಾಳೆ ಬೀದಿಗೆ ಬರಬಹುದು, ಬೀದಿಯಲ್ಲಿದ್ದವರು ರಾತ್ರೋರಾತ್ರಿ ಸ್ಟಾರ್ ಆಗಬಹುದು. ಇದಕ್ಕೆ ತಾಜಾ ಉದಾಹರಣೆ ರಾಷ್ಟ್ರಪ್ರಶಸ್ತಿ ವಿಜೇತ 'ತಿಥಿ' (Thithi) ಸಿನಿಮಾದ ನಾಯಕ ನಟ ಅಭಿಷೇಕ್. ಒಂದು ಕಾಲದಲ್ಲಿ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಈ ನಟ, ಇಂದು ಜೀವನೋಪಾಯಕ್ಕಾಗಿ ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವುದು ಕನ್ನಡಿಗರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಕೆಂಪರಾಜ್ ಗೌಡ ಎಂಬವರು ಇತ್ತೀಚೆಗೆ ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲಿ 'ತಿಥಿ' ಚಿತ್ರದ ನಾಯಕ ಅಭಿಷೇಕ್ ಅವರು ಕೃಷಿ ಭೂಮಿಯಲ್ಲಿ ಮರದ ದಿಮ್ಮಿಗಳನ್ನು ಹೊರುವ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. "ಒಂದು ಕಾಲದ ಸ್ಟಾರ್ ನಟ ಇಂದು ನಮ್ಮ ಗದ್ದೆಯ ಬಳಿ ಮರದ ದಿಮ್ಮಿಗಳನ್ನು ತುಂಬಲು ಬಂದಿದ್ದಾರೆ" ಎಂದು ಕೆಂಪರಾಜ್ ನೋವಿನಿಂದಲೇ ಈ ವಿಷಯ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸ್ವತಃ ಅಭಿಷೇಕ್ ಅವರನ್ನೇ ಮಾತನಾಡಿಸಿದಾಗ, ಅವರ ಮಾತುಗಳಲ್ಲಿ ಹತಾಶೆ ಮತ್ತು ಅಸಹಾಯಕತೆ ಎದ್ದು ಕಾಣುತ್ತಿತ್ತು. ‘ಸಿನಿಮಾದಲ್ಲಿ ನಟಿಸಿದ ನಂತರ ಸಾಕಷ್ಟು ಹೆಸರು ಬಂದಿತು ನಿಜ. ಆದರೆ, ಹೊಟ್ಟೆಪಾಡಿಗೆ ಬರಿ ಹೆಸರು ಸಾಕಾಗುವುದಿಲ್ಲ. ಕಳೆದ ಕೆಲವು ವರ್ಷಗಳಿಂದ ಯಾವುದೇ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಮನೆಯಲ್ಲಿ ಸುಮ್ಮನೆ ಕೂರುವ ಬದಲು, ಸ್ವಾಭಿಮಾನದಿಂದ ಸಿಕ್ಕ ಕೆಲಸವನ್ನು ಮಾಡುತ್ತಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.
2015ರಲ್ಲಿ ರಾಮ್ ರೆಡ್ಡಿ ನಿರ್ದೇಶನದಲ್ಲಿ ತೆರೆಕಂಡ 'ತಿಥಿ' ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು. ಹಳ್ಳಿ ಸೊಗಡಿನ ನೈಜ ಕಥೆ ಹೊಂದಿದ್ದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಚಿತ್ರದ ಪಾತ್ರಧಾರಿಗಳಾದ ಸೆಂಚೂರಿ ಗೌಡ, ಗಡ್ಡಪ್ಪ ಮತ್ತು ಅಭಿಯ ಪಾತ್ರಗಳು ಮನೆಮಾತಾಗಿದ್ದವು. ಈ ಚಿತ್ರದ ನಂತರ ಅಭಿಷೇಕ್ ಅವರು 'ತರ್ಲೆ ವಿಲೇಜ್' ಮತ್ತು 'ಹಳ್ಳಿ ಪಂಚಾಯ್ತಿ' ಎಂಬ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಆ ಚಿತ್ರಗಳು ನಿರೀಕ್ಷಿತ ಯಶಸ್ಸು ನೀಡದ ಕಾರಣ ಅಭಿಷೇಕ್ ತೆರೆಯಿಂದ ಮರೆಯಾದರು.
'ತಿಥಿ' ಚಿತ್ರದ ಮತ್ತೊಬ್ಬ ಪ್ರಮುಖ ಆಕರ್ಷಣೆಯಾಗಿದ್ದ ಗಡ್ಡಪ್ಪ ಅವರು ಇತ್ತೀಚೆಗಷ್ಟೇ ವಯೋಸಹಜ ಕಾಯಿಲೆಯಿಂದ ನಿಧನರಾದರು. ಚಿತ್ರದ ನಾಯಕಿ ಪೂಜಾ ಅವರು ಮದುವೆಯಾಗಿ ಸಂಸಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಪ್ರತಿಭಾವಂತ ನಟ ಅಭಿಷೇಕ್ ಅವರಿಗೆ ಸರಿಯಾದ ವೇದಿಕೆ ಸಿಗದೆ ಕೂಲಿ ಕೆಲಸಕ್ಕೆ ಇಳಿದಿರುವುದು ಚಿತ್ರರಂಗದ ಕರಾಳ ಮುಖವನ್ನು ದರ್ಶಿಸುತ್ತದೆ.
ಕೇವಲ ಗ್ಲಾಮರ್ ಬೆನ್ನತ್ತಿ ಹೋಗುವ ಚಿತ್ರರಂಗ, ಇಂತಹ ಮಣ್ಣಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸಬೇಕಿದೆ. ಸದ್ಯ ಅಭಿಷೇಕ್ ಅವರ ಈ ವಿಡಿಯೋ ನೋಡಿರುವ ಅಭಿಮಾನಿಗಳು, ‘ಅಭಿಷೇಕ್ ಅವರಲ್ಲಿ ಉತ್ತಮ ನಟನಾ ಕೌಶಲವಿದೆ, ಯಾರಾದರೂ ಅವರಿಗೆ ಮತ್ತೆ ಸಿನಿಮಾದಲ್ಲಿ ಅವಕಾಶ ನೀಡಿ ಕೈ ಹಿಡಿಯಲಿ’ ಎಂದು ಆಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.