ಬಾಹುಬಲಿಯ ಸೆಟ್ನೊಳಗೆ ಯಾರೂ ಮೊಬೈಲ್ ಒಯ್ಯುವಂತಿಲ್ಲ. ಸಿನಿಮಾ ಕ್ಯಾಮೆರಾ ಬಿಟ್ಟು ಬೇರೆ ಕ್ಯಾಮೆರಾಗಳಿಗೆ ಅವಕಾಶವಿಲ್ಲವೆಂದ ರಾಜಮೌಳಿ
ಹೈದ್ರಾಬಾದ್(ಸೆ.24): ಸಾಮಾಜಿಕ ಜಾಲತಾಣಗಳಲ್ಲಿ ‘ಬಾಹುಬಲಿ ೨’ ಸೆಟ್ನ ಫೋಟೋಗಳು ವೈರಲ್ ಆಗಿದ್ದನ್ನು ಕಂಡು ನಿರ್ದೇಶಕ ರಾಜಮೌಳಿ ಗರಂ ಆಗಿದ್ದಾರೆ. ಚಿತ್ರತಂಡದವರನ್ನು ಸೇರಿಸಿಕೊಂಡು ಈ ಬಗ್ಗೆ ಸಭೆಯನ್ನೂ ನಡೆಸಿದ್ದಾರಂತೆ. ಇನ್ನು ಮುಂದೆ ಬಾಹುಬಲಿಯ ಸೆಟ್ನೊಳಗೆ ಯಾರೂ ಮೊಬೈಲ್ ಒಯ್ಯುವಂತಿಲ್ಲ. ಸಿನಿಮಾ ಕ್ಯಾಮೆರಾ ಬಿಟ್ಟು ಬೇರೆ ಕ್ಯಾಮೆರಾಗಳಿಗೆ ಅವಕಾಶವಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆಯಂತೆ.
ಚಿತ್ರೀಕರಣ ಸ್ಥಳದ ಫೋಟೋಗಳು ಲೀಕ್ ಆದಂತೆ, ಕತೆಯ ಮುಂದಿನ ಹಾದಿಯನ್ನು ಎಲ್ಲೂ ಚರ್ಚಿಸದಂತೆ ಸೂಚಿಸಲಾಗಿದೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ. ಆಂಧ್ರಪ್ರದೇಶದ ರಾಯಲಸೀಮಾ ವಲಯದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಸ್ಥಳೀಯರಿಂದ ಫೋಟೋಗಳು ಸೋರಿಕೆಯಾಗಿದೆಯೆಂಬ ಪ್ರಾಥಮಿಕ ಮಾಹಿತಿಗಳೂ ಸಿಕ್ಕಿವೆಯಂತೆ.
ಈಗ ಬಾಹುಬಲಿಯ ಶೇ.೮೦ ಭಾಗ ಚಿತ್ರೀಕರಣ ಮುಗಿದಿದೆ. ಯುದ್ಧದ ಸನ್ನಿವೇಶದ ಒಂದು ಸ್ಟಂಟ್ಗೆ ಪ್ರಭಾಸ್ ೩೦ ದಿನಗಳಿಂದ ಅಭ್ಯಾಸ ನಡೆಸುತ್ತಿದ್ದಾರೆ. ಅಂದಹಾಗೆ, ೨೦೧೭ರ ಏಪ್ರಿಲ್ ೨೮ರಂದು ‘ಬಾಹುಬಲಿ ೨’ ತೆರೆಗೆ ಬರಲಿದೆ.