ಬಿಗ್'ಬಾಸ್'ನಲ್ಲಿ ಮತ್ತೆ ಹುಚ್ಚ ವೆಂಕಟ್!

By Internet DeskFirst Published Sep 24, 2016, 9:00 AM IST
Highlights

ಕಿರುತೆರೆಯಲ್ಲಿ ಬಿಗ್‌ಬಾಸ್ ಹವಾ ಜೋರಾಗಿದೆ. ಸೀಸನ್ 4ರಲ್ಲಿ ಇರಬಹುದಾದ ಸೆಲಿಬ್ರಿಟಿಗಳ ಕುತೂಹಲ ಎಲ್ಲರನ್ನು ತುದಿಗಾಲ ಮೇಲೆ ನಿಲ್ಲಿಸಿದೆ. ಅಧಿಕೃತವೋ, ಅನಧಿಕೃತವೋ ಈಗಾಗಲೇ ಸಾಕಷ್ಟು ಹೆಸರು ಚಾಲ್ತಿ ಪಡೆದುಕೊಂಡಿವೆ. ಈ ನಡುವೆಯೇ ನಟ ಹುಚ್ಚು ವೆಂಕಟ್ ಕೂಡ ಸೀಸನ್ 4ರಲ್ಲೂ ಇರಲಿದ್ದಾರೆನ್ನುವ ಸುದ್ದಿ ಹಬ್ಬಿದೆ. ಹಾಗಂತ ಇದು ಕಲರ್ಸ್ ಕನ್ನಡದ ಕಡೆಯಿಂದ ಬಂದ ಮಾಹಿತಿ ಖಂಡಿತವಾಗಿಯೂ ಅಲ್ಲ, ಖುದ್ದು ಹುಚ್ಚ ವೆಂಕಟ್ ಅವರೇ ಹೇಳಿದ್ದು. ‘ಬಿಗ್‌ಬಾಸ್‌ಗೆ ಹೋಗುವುದಿಕ್ಕೆ ನಂಗೂ ಆಹ್ವಾನ ಬಂದಿದೆ. ಕಲರ್ಸ್ ಕನ್ನಡದವರು ಸಂಪರ್ಕ ಮಾಡಿದ್ದಾರೆ. ಪೇಮೆಂಟ್ ವಿಚಾರದಲ್ಲಿ ಇನ್ನು ಫೈನಲ್ ಆಗಬೇಕಿದೆ' ಎಂದಿದ್ದಾರೆ ಹುಚ್ಚ ವೆಂಕಟ್.

ಅಂದ ಹಾಗೆ, ಹುಚ್ಚ ವೆಂಕಟ್ ಈ ಬಾರಿ ‘ಬಿಗ್‌ಬಾಸ್'ಗೆ ಹೋಗುತ್ತಿರುವುದು ಕಂಟೆಸ್ಟೆಡ್ ಆಗಿ ಅಲ್ಲ. ಪ್ರತಿವಾರ ಟೆಲಿಕಾಸ್ಟ್ ಆಗುವ ಎಪಿಸೋಡ್‌ಗೆ ಕಾಮೆಂಟ್ ಕೊಡುತ್ತಾರಂತೆ ವೆಂಕಟ್. ಈ ಬಾರಿ ‘ಬಿಗ್‌ಬಾಸ್'ನಲ್ಲಿರುವ ವಿಶೇಷತೆಗಳ ಈ ಪೈಕಿ ಇದು ಒಂದಂತೆ. ಈ ನೆಪದಲ್ಲಿ ತಾನೂ ಕೂಡ ‘ಬಿಗ್‌ಬಾಸ್'ಗೆ ಹೋಗುತ್ತಿದ್ದೇನೆ ಎನ್ನುವುದು ವೆಂಕಟ್ ಹೇಳುವ ಮಾತು. ಕಲರ್ಸ್ ಕನ್ನಡದ ಕಡೆಯಿಂದ ಇದು ಎಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ಅಸಲಿಗೆ ವಾಹಿನಿ ಇದುವರೆಗೂ ಯಾವುದೇ ಸೆಲೆಬ್ರಿಟಿಗಳ ಬಗ್ಗೆ ಮಾತನಾಡಿಲ್ಲ. ಇಷ್ಟಾಗಿಯೂ ಕಾಮೆಂಟ್ ಪಡೆಯುವ ನೆಪದಲ್ಲಿ ‘ಕಲರ್ಸ್ ಕನ್ನಡ’ಬಿಗ್‌ಬಾಸ್ ಸೀಸನ್ 4ಕ್ಕೂ ಹುಚ್ಚು ವೆಂಕಟ್ ಅವರ ಮೇಲೆ ಕಣ್ಣು ಹಾಕಿರುವುದಕ್ಕೆ ಕಾರಣವೇ ಇಲ್ಲ ಅಂತಲ್ಲ.

Latest Videos

ಬಿಗ್‌ಬಾಸ್ ಸೀಸನ್ 3ನಲ್ಲಿ ಗೆದ್ದಿದ್ದು ಯಾರೇ ಆದ್ರೂ, ಆ ಸೀಸನ್‌ನಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗಿದ್ದು ಮಾತ್ರ ಹುಚ್ಚು ವೆಂಕಟ್. ಯಾಕೆಂದ್ರೆ ಅಲ್ಲಿನ ಕಿರಿಕ್‌ಗಳಿಗೆ ಅವರೇ ಕೇಂದ್ರ ಬಿಂದು ಆಗಿದ್ದರು. ಮೊದಲೇ ತನ್ನನ್ನು ತಾನು ಹುಚ್ಚ ಅಂತಲೇ ಕರೆದುಕೊಂಡಿದ್ದ ವೆಂಕಟ್, ಬಿಗ್‌ಬಾಸ್‌ಗೆ ಕಾಲಿಡುತ್ತಿದ್ದಂತೆ ಉಳಿದ ಕಂಟೆಸ್ಟೆಡ್‌ಗಳು ಬಾಯ್ಮೇಲೆ ಬೆರಳು ಇಟ್ಟುಕೊಂಡಿದ್ದರು. ಹುಚ್ಚ ವೆಂಕಟ್ ಜತೆಗೆ ತಾವೂ ಸೇರಿ ಎಲ್ಲಿ ಅವರಂತೆಯೇ ಆಗಿಬಿಡುತ್ತೇವೆಂಬ ಭಯ ಅಲ್ಲಿದ್ದವರಿಗೆ ಆವರಿಸಿತ್ತು. ಅವರು ಅಂದುಕೊಂಡಂತೆ ಹುಚ್ಚು ವೆಂಕಟ್ ಅಲ್ಲಿದ್ದವರ ತಲೆ ತಿಂದು ಬಿಸಾಡುವಷ್ಟು, ಕಿರಿಕ್ ಕೊಟ್ಟರು. ಮೊದಲು ಅಲ್ಲಿಗೆ ಕಾಲಿಡುತ್ತಿದ್ದಂತೆ ಹುಚ್ಚು ವೆಂಕಟ್ ಕಿರಿಕ್ ನಟಿಯರ ಬಟ್ಟೆ ಮೇಲೆ ಶುರುವಾಯಿತು.

ಆನಂತರ ನಿತ್ಯ ಒಬ್ಬರ ಜತೆಗೆ ಜಗಳ. ಆನಂತರ ರವಿ ಮರೂರು ಅವರ ಮೇಲಿನ ಹಲ್ಲೆ ಆರೋಪ. ನೋಡುಗರಿಗೆ ಇದೊಂದಷ್ಟು ಕಿರಿ ಕಿರಿ ತರಿಸಿದ್ದರೂ, ಬಾರ್ಕ್ ರೇಟಿಂಗ್‌ನಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ಒಂದಷ್ಟು ಹೈಪ್ ಆಗಿದ್ದಕ್ಕೆ ವೆಂಕಟ್‌ನ ಕಿರಿಕ್‌ಗಳೇ ಕಾರಣವಾಗಿದ್ದವು. ಅಂತಹ ಕಟು ವಾಸ್ತವ ಗೊತ್ತಿರುವುದರಿಂದ ಕಲರ್ಸ್ ಕನ್ನಡ ಹುಟ್ಟ ವೆಂಕಟ್ ಅವರನ್ನು ಸಂಪರ್ಕಿಸಿರುವ ಸಾಧ್ಯತೆಗಳೂ ಇವೆ ಎನ್ನುವುದರನ್ನು ತಳ್ಳಿ ಹಾಕುವಂತಿಲ್ಲ. ಉಳಿದಂತೆ, ಬಿಗ್‌ಬಾಸ್‌ಗೆ ಹೋಗುವ ಸ್ಪರ್ಧಿಗಳು, ವಾಹಿನಿ ವಿಧಿಸುವ ಕಂಡಿಷನ್‌ಗಳನ್ನು ತಪ್ಪದೇ ಪಾಲಿಸಬೇಕೆನ್ನುವ ಯಾವುದೇ ಷರತ್ತು ವೆಂಕಟ್‌ಗೆ ಲೆಕ್ಕಕ್ಕಿಲ್ಲ. ಫೈನಲ್ ಆಗುವ ಮುನ್ನವೇ ಕಲರ್ಸ್ ಕನ್ನಡ ತಮ್ಮನ್ನು ಭೇಟಿ ಮಾಡಿ ಮಾತನಾಡಿದ್ದನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಕಲರ್ಸ್ ಕನ್ನಡ ಹೇಗೆ ತೆಗೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ.

click me!