ಜಾಗ್ವಾರ್ ಹೀರೋ ಹೊಸ ಚಿತ್ರಕ್ಕೆ ಬರ್ತಾಳಾ ಉತ್ತರ ಕನ್ನಡದ ಬೆಡಗಿ

By Suvarna Web DeskFirst Published Apr 4, 2017, 1:03 AM IST
Highlights

ಭಾನುವಾರವಷ್ಟೇ ಸ್ಕ್ರಿಪ್ಟ್ ಮುಹೂರ್ತ ಕಂಡ, ಮಾಜಿ ಸಿಎಂ ಕುಮಾರ ಸ್ವಾಮಿ ಪುತ್ರ ನಿಖಿಲ್‌ ಕುಮಾರ್‌ ಅಭಿನಯದ ಹೊಸ ಚಿತ್ರದ ನಾಯಕಿ ಯಾರು ಅನ್ನುವ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದ ಹಾಗಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡದ ಬೆಡಗಿ ಲತಾ ಹೆಗಡೆ ಹೆಸರು ನಾಯಕಿ ಸ್ಥಾನಕ್ಕೆ ಚಾಲ್ತಿ ಪಡೆದಿದೆ.

ಭಾನುವಾರವಷ್ಟೇ ಸ್ಕ್ರಿಪ್ಟ್ ಮುಹೂರ್ತ ಕಂಡ, ಮಾಜಿ ಸಿಎಂ ಕುಮಾರ ಸ್ವಾಮಿ ಪುತ್ರ ನಿಖಿಲ್‌ ಕುಮಾರ್‌ ಅಭಿನಯದ ಹೊಸ ಚಿತ್ರದ ನಾಯಕಿ ಯಾರು ಅನ್ನುವ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದ ಹಾಗಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡದ ಬೆಡಗಿ ಲತಾ ಹೆಗಡೆ ಹೆಸರು ನಾಯಕಿ ಸ್ಥಾನಕ್ಕೆ ಚಾಲ್ತಿ ಪಡೆದಿದೆ.

‘ಜಾಗ್ವಾರ್‌' ಮೂಲಕ ಪುತ್ರನನ್ನು ಬೆಳ್ಳಿತೆರೆಗೆ ಭರ್ಜರಿಯಾಗಿ ಪರಿಚಯಿಸಲು ತೆಲುಗು ನಿರ್ದೇಶಕರು ಹಾಗೂ ಪರಭಾಷೆ ನಟಿಯನ್ನು ಕರೆ ತಂದಿದ್ದ ಕುಮಾರ ಸ್ವಾಮಿ ಈಗ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. ನಿಖಿಲ್‌ ಅಭಿನಯದ ಎರಡನೇ ಚಿತ್ರವನ್ನು ನಿರ್ದೇಶಿಸಲು ಕನ್ನಡದ ಯುವ ನಿರ್ದೇಶಕರನ್ನೇ ಆಯ್ಕೆ ಮಾಡಿ ಕೊಂಡಿದ್ದಲ್ಲದೆ, ನಾಯಕಿ ಸೇರಿದಂತೆ ಶೇಕಡಾ 95 ರಷ್ಟುಕಲಾವಿದರು ಕನ್ನಡದವರೇ ಆಗಿರುತ್ತಾರೆಂದು ಭರವಸೆ ಕೊಟ್ಟಿದ್ದಾರೆ. ಅದರಲ್ಲೂ ಶುದ್ಧ ಕನ್ನಡದ ನಟಿಯನ್ನೇ ನಾಯಕಿ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ನಡುವೆಯೇ, ಕನ್ನಡದ ಸಾಕಷ್ಟುನವ ನಟಿಯರ ಹೆಸರುಗಳು ನಾಯಕಿ ಆಯ್ಕೆಯ ಸುತ್ತ ತೇಲಿಬಂದಿವೆ. ಅದರಲ್ಲಿ ಲತಾ ಹೆಗೆಡೆ ಮೇಲೆ ಚಿತ್ರ ತಂಡದ ಕಣ್ಣು ಬಿದ್ದಿದೆ ಎನ್ನುವುದನ್ನು ಚಿತ್ರ ತಂಡದ ಮೂಲಗಳು ಹೇಳುತ್ತಿವೆ.

ಹಾಗಾದರೆ ಈ ಮಾಹಿತಿ ಖಚಿತವೇ? ಈ ಬಗ್ಗೆ ‘ಕನ್ನಡಪ್ರಭ' ನಟಿ ಲತಾ ಹೆಗಡೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇತ್ತು ಅವರ ಉತ್ತರ. ‘ನಿಜ, ಅವರು ನನ್ನ ಅಪ್ರೋಚ್‌ ಮಾಡಿದ್ದು ಹೌದು. ಆದ್ರೆ ನಾನು ಈಗಾಗಲೇ ಒಪ್ಪಿಕೊಂಡ ಚಿತ್ರಗಳ ಚಿತ್ರೀಕರಣದ ಶೆಡ್ಯೂಲ್‌ ಸಮಸ್ಯೆ ಆಗಿದೆ. ಅವರು ಮೇ ತಿಂಗಳಲ್ಲಿಯೇ ಚಿತ್ರೀಕರಣಕ್ಕೆ ಬರ​ಬೇಕು ಅಂತ ಹೇಳುತ್ತಿದ್ದಾರೆ. ಆದ್ರೆ ನನಗೆ ಅದು ಸಾಧ್ಯ​ವಾಗದು. ಇನ್ನೇನು ಏಪ್ರಿಲ್‌ ಮುಗಿದರೆ ನನಗೆ ‘ಉತ್ಸ​ವಂ ' ಚಿತ್ರದ ಚಿತ್ರೀಕರಣ ಶುರು​ವಾ​ಗುತ್ತಿದೆ. ಹೀಗಾಗಿ ಗೊಂದಲದಲ್ಲಿದ್ದೇನೆ. ನೋ​ಡ್ಬೇಕು ಏನಾಗುತ್ತದೋ 'ಎಂದರು ನಟಿ ಲತಾ ಹೆಗಡೆ.

ಸದ್ಯ ಮಹೇಶ್‌ ಬಾಬು ನಿರ್ದೇಶನ, ‘ಆ ದಿನಗಳು' ಚೇತನ್‌ ನಾಯಕ​ನಾಗಿರೋ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಮುಗಿಸಿರುವ ನಟಿ ಲತಾ ಹೆಗಡೆ, ಮಲಯಾಳಂನ ‘ಚಾರ್ಲಿ' ರೀಮೇಕ್‌ ಕನ್ನಡದ ‘ಉತ್ಸವ'​ದಲ್ಲಿ ದೂದ್‌ ಪೇಡಾ ದಿಗಂತ್‌ ಜತೆಗೆ ನಾಯಕಿ ಆಗಿ ಫಿಕ್ಸ್‌ ಆಗಿ​​ದ್ದಾರೆ. ಈಗಾಗಲೇ ತೆಲುಗು ಹಾಗೂ ತಮಿಳಿನಲ್ಲೂ ತಲಾ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಹುಡುಗಿಯಾದರೂ, ಅವರ ಫಿಲ್ಮಿ ಜರ್ನಿ ಮಾತ್ರ ಶುರುವಾಗಿದ್ದು ತೆಲುಗಿನ ಮೂಲಕ. ‘ತುಂಟರಿ'ತೆರೆ ಕಂಡ ನಂತರ ತವರೂರು ಕನ್ನಡಕ್ಕೆ ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ಲತಾ ಹೆಗಡೆ, ಹುಟ್ಟಿಬೆಳೆದಿದ್ದೆಲ್ಲ ದೂರದ ನ್ಯೂಜಿಲೆಂಡ್‌ನಲ್ಲಿ. ಉದ್ಯೋ​ಗದ ಸಲುವಾಗಿ ಲತಾ ಹೆಗಡೆ ಅವರ ಪೋಷಕರು ಅಲ್ಲಿಗೆ ಹೋಗಿ ಹಲವು ವರ್ಷಗಳೇ ಆಗಿವೆ. ಅಕ್ಲ್ಯಾಂಡ್‌ ವಿವಿಯ­ದಲ್ಲಿ ಪದವಿ ಪಡೆದಿರುವ ಲತಾ ಮಾಡೆಲಿಂಗ್‌ ಕಡೆ ಮುಖ ಮಾಡಿ, ಆ ಮೂಲಕವೇ ಚಿತ್ರರಂಗ ಪ್ರವೇಶಿಸಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ, ನಿಖಿಲ್‌ ಹೊಸ ಚಿತ್ರಕ್ಕೆ ಅವರೇ ನಾಯಕಿ ಆಗುತ್ತಿದ್ದಾರೆ.

 

ನನ್ನನ್ನು ಅವರು ಸಂಪರ್ಕಿಸಿದ್ದು ನಿಜ. ಆದ್ರೆ ನಾನು ಈಗಾಗಲೇ ಒಪ್ಪಿಕೊಂಡ ಚಿತ್ರಗಳ ಚಿತ್ರೀಕರಣದ ದಿನಾಂಕಗಳ ಸಮಸ್ಯೆಯಿಂದ ಓಕೆ ಅಂತ ಹೇಳಿಲ್ಲ. ಮೇ ತಿಂಗಳಿನಿಂದಲೇ ಚಿತ್ರೀಕರಣಕ್ಕೆ ಅವರು ಸಮಯ ಕೇಳುತ್ತಿದ್ದಾರೆ. ಆದರೆ ನನಗೆ ಆ ಸಮಯಕ್ಕೆ ಉತ್ಸವ ಚಿತ್ರದ ಚಿತ್ರೀಕರಣ ಫಿಕ್ಸ್‌ ಆಗಿದೆ. ಹೀಗಾಗಿ ಗೊಂದಲದಲ್ಲಿದ್ದೇನೆ. ಏನಾಗುತ್ತೋ ನೋಡ್ಬೇಕು- ಲತಾ ಹೆಗ್ಡೆ, ನಟಿ 

 

ವರದಿ: ಕನ್ನಡಪ್ರಭ

click me!