ಕಲ್ಪನಾ ವಿಲಾಸ ಸಿನಿಮಾ ನೋಡಲಿದ್ದಾರೆ ಡಾ. ವೀರೇಂದ್ರ ಹೆಗ್ಗಡೆ!

By Web DeskFirst Published Aug 1, 2019, 9:27 AM IST
Highlights

ಹಾರರ್‌ ಚಿತ್ರಗಳ ಸಾಲಿನಲ್ಲಿ ಸದ್ಯಕ್ಕೆ ಗಮನ ಸೆಳೆಯುತ್ತಿರುವ ‘ಕಲ್ಪನಾ ವಿಲಾಸ’ ಚಿತ್ರತಂಡಕ್ಕೊಂದು ಸಂಭ್ರಮದ ಕ್ಷಣ. ಆ.9ರಂದು ರಾಜ್ಯಾದ್ಯಾಂತ ತೆರೆ ಕಾಣುತ್ತಿರುವ ಈ ಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ನೋಡಲಿದ್ದಾರೆ. ಅವರಿಗಾಗಿಯೇ ಚಿತ್ರತಂಡ ವಿಶೇಷ ಪ್ರದರ್ಶನ ಆಯೋಜಿಸಲಿದೆ.

ದೆವ್ವದ ಚಿತ್ರಕ್ಕೂ ವೀರೇಂದ್ರ ಹೆಗ್ಗಡೆ ಅವರಿಗೂ ಏನು ನಂಟು ಎಂದರೆ ಅದಕ್ಕೆ ಕಾರಣ ಈ ಚಿತ್ರದ ನಿರ್ಮಾಪಕ ಅಶೋಕ್‌ ಭಾರದ್ವಾಜ್‌. ಡಾ ಡಿ ವೀರೇಂದ್ರ ಹೆಗ್ಗಡೆ ಅವರು ಅಶೋಕ್‌ ಭಾರದ್ವಾಜ್‌ ಅವರ ಗುರುಗಳು. ಈ ಕಾರಣಕ್ಕೆ ಚಿತ್ರವನ್ನು ತಮ್ಮ ಗುರುಗಳ ಆಶೀರ್ವಾದದಿಂದಲೇ ಶುರು ಮಾಡಿದ್ದು, ಈಗ ಅವರಿಗಾಗಿಯೇ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿದ್ದಾರೆ. ‘ನಾನು ತುಂಬಾ ನಂಬಿರುವುದು ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನ. ಇದರ ಧರ್ಮಾಧಿಕಾರಿಗಳಾದ ಡಾ ವೀರೇಂದ್ರ ಹೆಗ್ಗಡೆ ಅವರು ನನ್ನ ಗುರುಗಳು. ಸಿನಿಮಾ ಮಾಡುವಾಗ ಅವರ ಆಶೀರ್ವಾದ ಪಡೆದುಕೊಂಡಿದ್ದೆ. ಈ ಕಾರಣಕ್ಕೆ ಚಿತ್ರದ ಪೋಸ್ಟರ್‌ಗಳಲ್ಲೂ ಅವರ ಹೆಸರನ್ನೇ ಹಾಕಿರುವೆ. ನಮ್ಮ ಸಿನಿಮಾ ನೋಡುವಂತೆ ಅವರಲ್ಲಿ ಕೇಳಿಕೊಂಡಾಗ ಒಪ್ಪಿದ್ದಾರೆ. ಚಿತ್ರದ ಕತೆಯನ್ನು ಇಷ್ಟಪಟ್ಟು ಸಿನಿಮಾ ನೋಡಲು ಬರುತ್ತಿದ್ದಾರೆ’ ಎನ್ನುತ್ತಾರೆ ನಿರ್ಮಾಪಕರು.

ತೆರೆ ಮೇಲೆ ನಟಿ ಕಲ್ಪನಾ ಆತ್ಮ-ಕಥೆ!

ಈ ಚಿತ್ರವನ್ನು ನಿರ್ದೇಶಿಸಿರುವುದು ವಿಶ್ವ ಜಿ ಕಡೂರ್‌. ವಿಜಯ್‌ ರಾಮ್‌, ವೇದಾ ಹಾಗೂ ಆಶಿತ್‌ ಚಿತ್ರದ ಮುಖ್ಯ ಪಾತ್ರದಾರಿಗಳು. ಪ್ರಸ್ತುತ ಚಿತ್ರದ ಮ್ಯೂಸಿಕಲ್‌ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಕನ್ನಡದಲ್ಲಿ ಇದು ಮೊದಲ ಪ್ರಯೋಗ. ಈ ಟ್ರೇಲರ್‌ನಲ್ಲಿ ದೃಶ್ಯಗಳಿವೆ. ಆದರೆ, ಸಂಭಾಷಣೆ ಇಲ್ಲ. ಹಿನ್ನೆಲೆ ಸಂಗೀತದ ಮೂಲದ ಮೂಲಕವೇ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಲಾಗಿದೆ. ವೈ ಜೆ ಕೆ ಸಂಗೀತ ಸಂಯೋಜಿಸಿದ್ದಾರೆ. ಮನು ದಾಸಪ್ಪ ಕ್ಯಾಮೆರಾ, ಶಿವು ಶರಣಪ್ಪ ಸಂಭಾಷಣೆ ಈ ಚಿತ್ರಕ್ಕಿದೆ.

click me!