
ಬೆಂಗಳೂರು(ಏ.06): ಕನ್ನಡ ವಿರೋಧಿ ಹೇಳಿಕೆ ನೀಡಿರುವ ತಮಿಳು ನಟ ಸತ್ಯರಾಜ್ (ಕಟ್ಟಪ್ಪ) ಅಭಿನಯಿಸಿರುವ ಬಾಹುಬಲಿ-2 ಚಲನಚಿತ್ರ ರಾಜ್ಯದಾದ್ಯಂತ ಬಿಡುಗಡೆ ನಿಷೇಧಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸುವುದರ ಜೊತೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯು ಹೆಣ್ಣೂರು ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಕಮ್ಮನಹಳ್ಳಿ ಮುಖ್ಯರಸ್ತೆಯ ಮೂಲಕ ಸಾಗಿ ಬಂದು ಬಾಣಸವಾಡಿ ಸಹಾಯಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು. ಬಾಣಸವಾಡಿಯ ಓರಿಯನ್ ಮಾಲ್'ನಲ್ಲಿ ಬಾಹುಬಲಿ 1 ಹಿಂದಿ ಅವತರಣಿಕೆ ಸಿನಿಮಾ ಪ್ರದರ್ಶನವಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕರವೇ ಅಧ್ಯಕ್ಷ ಪ್ರವೀಣ್ ಶಟ್ಟಿ ನೇತೃತ್ವದಲ್ಲಿ ಮಾಲ್'ಗೆ ನುಗ್ಗಿ ಪ್ರತಿಭಟನೆ ನಡೆಸಲು ಯತ್ನಿಸಿದರು.
ಈ ಸಂದರ್ಭದಲ್ಲಿ ಹೊರಬಂದ ಮಾಲ್ ಸಿಬ್ಬಂದಿ ನಾಳೆ ಬಾಹುಬಲಿ-1 ಸಿನಿಮಾ ಪ್ರದರ್ಶನಕ್ಕೆ ಮುಂಗಡ ಟಿಕೆಟ್ ನೀಡಲಾಗಿತ್ತು. ಆದರೆ, ಪ್ರತಿಭಟನೆ ಹಿನ್ನೆಲೆಯಲ್ಲಿ ನಾವು ಪ್ರದರ್ಶನ ಸ್ಥಗಿತಗೊಳಿಸುತ್ತೇವೆ. ಮುಂಗಡ ಟಿಕೆಟ್ ಹಣವನ್ನು ಗ್ರಾಹಕರಿಗೆ ವಾಪಸ್ ನೀಡುವುದಾಗಿ ಹೇಳಿದರು. ಇದಾದ ನಂತರ ಬಾಹುಬಲಿ 2 ಸಿನಿಮಾವನ್ನು ಯಾವುದೇ ಕಾರಣಕ್ಕೂ ರಾಜ್ಯದಾದ್ಯಂತ ಹಂಚಿಕೆ ಮಾಡದಂತೆ ಒಎಫ್ಒ ಸಂಸ್ಥೆಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್, ಬಾಹುಬಲಿ 2 ಚಿತ್ರ ಬಿಡುಗಡೆ ಮಾಡಿದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಈ ಹೋರಾಟದಲ್ಲಿ ಕಾನೂನು ಸುವ್ಯವಸ್ಥೆ ಹಾಳದರೆ ಸರ್ಕಾರವೇ ಹೊಣೆ. ಹೀಗಾಗಿ ರಾಜ್ಯ ಸರ್ಕಾರ ಈ ಚಲನಚಿತ್ರ ಬಿಡುಗಡೆ ಮೇಲೆ ನಿಷೇಧ ಹೇರಬೇಕು ಎಂದರು.
ಕರವೇ ಹೋರಾಟಗಾರ ಪ್ರವೀಣ್ ಶಟ್ಟಿ ಮಾತನಾಡಿ, ಕನ್ನಡಿಗರು ನಾಯಿಗಳೆಂದು ತಮಿಳು ನಟ ಕನ್ನಡ ನಾಡು-ನುಡಿಗೆ ಅವಮಾನ ಮಾಡಿದ್ದಾನೆ. ಅವರು ಕ್ಷಮೆ ಕೇಳುವ ವರೆಗೂ ಕರ್ನಾಟಕದಲ್ಲಿ ಅವರ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.