
ಸಂತ್ರಸ್ತರಿಗೆ ಸಮಾಧಾನ ಹೇಳುವ ಬದಲು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ!
ಇತ್ತೀಚೆಗೆ ಕುಲು-ಮನಾಲಿ ಪ್ರವಾಹದಿಂದಾಗಿ ಸಂತ್ರಸ್ತರಾದ ಜನರಿಗೆ ಕಂಗನಾ ರಣಾವತ್ (Kangana Ranaut) ಅವರು ಕೊಟ್ಟ ಪ್ರತಿಕ್ರಿಯೆ ಬಹಳಷ್ಟು ಟೀಕೆಗೆ ಗುರಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಅವರು ಸಂತ್ರಸ್ತರಿಗೆ ಸಮಾಧಾನ ಹೇಳುವ ಬದಲು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ತಮ್ಮ ಸ್ವಂತ ವ್ಯಾಪಾರದಲ್ಲಿನ ನಷ್ಟ-ಕಷ್ಟದ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ವಿವಾದ ಸೃಷ್ಟಿಸಿದೆ. ಜುಲೈನಲ್ಲಿಯೂ ಇದೇ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಂಗನಾ ಪೇಚಿಗೆ ಸಿಲುಕಿದ್ದರು.
ಕುಲು ಮನಾಲಿ ಭಾಗದಲ್ಲಿ ಮಳೆಯಿಂದ ಬಹಳಷ್ಟು ಅವಾಂತರಗಳು ನಡೆದಿವೆ. ಆ ಭಾಗದ ನದಿಗಳೆಲ್ಲಾ ಉಕ್ಕಿ ಹರಿದಿದ್ದು, ನದಿ ತಟದ ಮನೆಗಳು ನಾಶವಾಗಿವೆ. ಜನರು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಸಮಯದಲ್ಲಿ ಬಿಜೆಪಿ ಪಕ್ಷದ ಮಂಡಿ ಸಂಸದೆ ಕಂಗನಾ, ಜನರಿಂದ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಅವರು ಪ್ರವಾಹ ಪೀಡಿತ ಭಾಗ ಆಗಮಿಸುತ್ತಿದ್ದಂತೆ ‘ಹೊರಟು ಹೋಗಿ’ ಎಂಬ ಕೂಗನ್ನು ಕೇಳಬೇಕಾಯಿತು. ಈ ವೇಳೆ 'ನನಗೂ ನಷ್ಟ ಆಗಿದೆ' ಎಂದು ಕಂಗನಾ ವಿವರಿಸಿದರು.
ಕಂಗನಾ ಬಳಿ ಮಾಧ್ಯಮದವರು ಸ್ವಲ್ಪ ಏರು ಧ್ವನಿಯಲ್ಲೇ ಪ್ರಶ್ನೆ ಮಾಡಿದರು. ಇದರಿಂದ ಕಂಗನಾ ಭಯಗೊಂಡರು. ಮೀಡಿಯಾದವರಿಗೆ ‘ನೀವು ನನ್ನ ಮೇಲೆ ಅಟ್ಯಾಕ್ ಮಾಡೋಕೆ ಬಂದಿದ್ದೀರಾ ಅಥವಾ ಪ್ರಶ್ನೆ ಮಾಡುತ್ತಿದ್ದೀರಾ’ ಎಂದು ಕಂಗನಾ ಅವರು ಪ್ರಶ್ನಿಸಿದರು. ಆ ಬಳಿಕ ಅವರು ಮಾಧ್ಯಮಗಳ ಬಳಿ ತಮ್ಮ ಕಷ್ಟ ಹೇಳಿಕೊಂಡರು.
ಕಂಗನಾ ತಮ್ಮ ಸದ್ಯದ ಪರಸ್ಥಿತಿ ಬಗ್ಗೆ ‘ನೀವು ನನ್ನ ನೋವನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಕೂಡ ಮನುಷ್ಯಳೇ. ನನಗೂ ಇಲ್ಲಿ ಮನೆ ಇದೆ, ರೆಸ್ಟೋರೆಂಟ್ ಇದೆ. ನಿನ್ನೆ ನನ್ನ ರೆಸ್ಟೋರೆಂಟ್ 50 ರೂಪಾಯಿ ಬಿಸ್ನೆಸ್ ಮಾಡಿದೆ. ನಾನು ತಿಂಗಳಿಗೆ ಸಿಬ್ಬಂದಿಗೆ 15 ಲಕ್ಷ ಸಂಬಳ ಕೊಡಬೇಕು. ನಾನು ಒಂಟಿ ಮಹಿಳೆ’ ಎಂದು ಕಂಗನಾ ಬೇಸರದಿಂದ ಹೇಳಿಕೊಂಡರು.
‘ನಾನು ಇಂಗ್ಲೆಂಡ್ನ ಕ್ವೀನ್, ಇಲ್ಲಿನ ಸಂತ್ರಸ್ತರಿಗೆ ಏನೂ ಮಾಡುತ್ತಿಲ್ಲ ಎಂಬ ರೀತಿಯಲ್ಲಿ ನನ್ನ ಮೇಲೆ ಅಟ್ಯಾಕ್ ಮಾಡಬೇಡಿ. ನಾನು ಕೂಡ ನಿಮ್ಮಂತೆಯೇ, ನಾನು ಕೂಡ ಸಂತ್ರಸ್ಥಳೇ ಆಗಿದ್ದೇನೆ...’ ಎಂದು ಕಂಗನಾ ಅವರು ಹೇಳಿದರು. ಇದು ಅಲ್ಲಿನ ಜನರನ್ನು ಮತ್ತಷ್ಟು ಕೆರಳಿಸಿದೆ, ಅವರು ಕಂಗನಾ ಮೇಲೆ ಸಿಟ್ಟಾಗಿದ್ದಾರೆ.
ಜುಲೈ ತಿಂಗಳಲ್ಲೂ ಕಂಗನಾ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಸಹಾಯಕ್ಕಾಗಿ ಜನರು ಇವರ ಬಳಿ ಬಂದಾಗ, ‘ನನಗೆ ಹಣ ಬಿಡುಗಡೆ ಮಾಡಲು ಮಂತ್ರಿ ಹುದ್ದೆ ಇಲ್ಲ, ನಾನು ಸಂಸದೆ ಮಾತ್ರ..' ಎಂದು ಹೇಳಿದ್ದರು. ಅಲ್ಲದೆ, ನಾನು ರಾಜಕೀಯ ಅಂದರೆ ಅಂದುಕೊಂಡಿದ್ದೇ ಬೇರೆ, ಮತ್ತು ಇಲ್ಲಾಗುತ್ತಿರುವುದೇ ಬೇರೆ ಎಂಬ ಪರಿಸ್ಥಿತಿ ಇದೆ..' ಎಂದು ಕಂಗನಾ ಅವರು ಹೇಳಿಕೆ ನೀಡಿದ್ದರು. ಮುಂದೇನಾಗಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.