
ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ನಟಿಸಿದ ಒಂದು ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಆ ಸಿನಿಮಾ ಅಷ್ಟು ದೊಡ್ಡ ಸಕ್ಸಸ್ ಕಂಡಿದೆ ಅನ್ನೋ ವಿಚಾರ ಸ್ವತಃ ನಿರ್ಮಾಪಕರಿಗೇ ಗೊತ್ತಿರಲಿಲ್ಲವಂತೆ. ಈ ಬಗ್ಗೆ ನಿರ್ಮಾಪಕರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳು ಹಾಗೂ ನೆಗೆಟಿವ್ ಶೇಡ್ಗಳಲ್ಲಿ ನಟಿಸುತ್ತಿದ್ದರು. ಆಮೇಲೆ ಅವರ ಎನರ್ಜಿ, ಡ್ಯಾನ್ಸ್ ಹಾಗೂ ಫೈಟ್ಸ್ ನೋಡಿ ನಿರ್ಮಾಪಕರು ಅವರನ್ನು ಹೀರೋ ಆಗಿ ಆಯ್ಕೆ ಮಾಡಲು ಶುರು ಮಾಡಿದರು. ಚಿರಂಜೀವಿ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದ ಆರಂಭಿಕ ಸಿನಿಮಾಗಳಲ್ಲಿ 'ಕೋತಲ ರಾಯುಡು' ಕೂಡ ಒಂದು. ಇದೇ ಸಿನಿಮಾದ ಮೂಲಕ ತಮ್ಮಾರೆಡ್ಡಿ ಭರದ್ವಾಜ ಅವರು ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾದ ಹಿಂದಿನ ಇಂಟರೆಸ್ಟಿಂಗ್ ಕಥೆಯನ್ನು ತಮ್ಮಾರೆಡ್ಡಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ತಮ್ಮಾರೆಡ್ಡಿ ಭರದ್ವಾಜ ಅವರು ನಿರ್ಮಾಪಕನಾಗಬೇಕು ಅಂದುಕೊಂಡಾಗ ಅವರಿಗೆ 'ಕೋತಲ ರಾಯುಡು' ಕಥೆ ಸಿಕ್ಕಿತು. ಆದರೆ ಅವರಿಗೆ ಸಿನಿಮಾ ರಂಗದ ಬಗ್ಗೆ ಯಾವುದೇ ಅನುಭವ ಇರಲಿಲ್ಲ. ಪರಿಚಯಸ್ಥರನ್ನು ಕೇಳಿದಾಗ, ಕ್ರಾಂತಿ ಕುಮಾರ್ ಅವರನ್ನು ಭೇಟಿಯಾಗಲು ಸಲಹೆ ನೀಡಿದರು. ಅದಕ್ಕೂ ಮುನ್ನ ಮಲಯಾಳಂ ಡ್ಯಾನ್ಸ್ ಮಾಸ್ಟರ್ ತಂಗಪ್ಪ ಅವರು ತಮ್ಮಾರೆಡ್ಡಿಗೆ ಪರಿಚಯವಿದ್ದರು. ಈ ಸಿನಿಮಾದ ಬಗ್ಗೆ ತಂಗಪ್ಪ ಬಳಿ ಹೇಳಿದಾಗ, ಅವರು ಕಮಲ್ ಹಾಸನ್ ಅವರನ್ನು ಹೀರೋ ಆಗಿ ಹಾಕಿಕೊಳ್ಳುವಂತೆ ಸಲಹೆ ನೀಡಿದ್ದರು.
ಆ ಕಾಲಕ್ಕಾಗಲೇ ಕಮಲ್ ಹಾಸನ್ ದೊಡ್ಡ ಸ್ಟಾರ್ ಆಗಿದ್ದರು. ಅವರ ಸಂಭಾವನೆ ಎಷ್ಟು ಅಂತ ತಮ್ಮಾರೆಡ್ಡಿ ಕೇಳಿದಾಗ, 25 ಸಾವಿರ ರೂಪಾಯಿ ಕೊಟ್ರೆ ಸಾಕು ಎಂದಿದ್ದರು. ಆ ಕಾಲದಲ್ಲಿ 25 ಸಾವಿರ ಅಂದರೆ ತುಂಬಾನೇ ದೊಡ್ಡ ಮೊತ್ತ. ಅಷ್ಟು ಹಣ ಹಾಕಲು ಸಾಧ್ಯವಿಲ್ಲ ಎಂದು ತಮ್ಮಾರೆಡ್ಡಿ ಹೇಳಿಬಿಟ್ಟರು. ಆಮೇಲೆ ಅವರು ಕ್ರಾಂತಿ ಕುಮಾರ್ ಅವರ ಆಫೀಸ್ಗೆ ಹೋದರು. ಅಲ್ಲಿ ಹೊರಗಡೆ ಚಿರಂಜೀವಿ ಕುಳಿತಿದ್ದರು. ಆಗಷ್ಟೇ 'ಪುನಾದಿರಾಳ್ಳು' ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾವನ್ನು ನಿಜಾಮ್ ಏರಿಯಾದಲ್ಲಿ ರಿಲೀಸ್ ಮಾಡಿ ತಮ್ಮಾರೆಡ್ಡಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಆದರೆ ಆ ಸಿನಿಮಾದಲ್ಲಿ ಚಿರಂಜೀವಿ ನಟಿಸಿದ್ದಾರೆ ಅನ್ನೋ ವಿಚಾರ ಕೂಡ ಅವರಿಗೆ ಗೊತ್ತಿರಲಿಲ್ಲ.
ಆಫೀಸ್ ಹೊರಗೆ ಕುಳಿತಿದ್ದ ಈತ ಯಾರು ಅಂತ ತಮ್ಮಾರೆಡ್ಡಿ ಕೇಳಿದರು. ಇವರೇ ಚಿರಂಜೀವಿ, 'ಪುನಾದಿರಾಳ್ಳು' ಸಿನಿಮಾದಲ್ಲಿ ನಟಿಸಿದ್ದಾರೆ ಅಂತ ಅಲ್ಲಿದ್ದವರು ಹೇಳಿದರು. ನೋಡಲು ಚೆನ್ನಾಗಿದ್ದಾನಲ್ಲ ಅಂತ ತಮ್ಮಾರೆಡ್ಡಿ ಅಂದುಕೊಂಡರು. ಕ್ರಾಂತಿ ಕುಮಾರ್ ಬಳಿ ಮಾತನಾಡಿದಾಗ, ನಾನೇ ಸಹಾಯ ಮಾಡುತ್ತೇನೆ, ನೀನು ಸಿನಿಮಾ ಮಾಡು ಎಂದರು. ಜೊತೆಗೆ ಚಿರಂಜೀವಿಯನ್ನೇ ಹೀರೋ ಆಗಿ ಹಾಕಿಕೊಳ್ಳೋಣ ಅಂತ ಅವರೇ ಸಲಹೆ ನೀಡಿದರು. ಎಲ್ಲವೂ ಫಿಕ್ಸ್ ಆಯ್ತು. ಜಯಸುಧಾ ಹಾಗೂ ಜಯಮಾಲಿನಿ ಅವರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಲು ಅಂದುಕೊಂಡಿದ್ದರು. ಆದರೆ ಪಾತ್ರ ಇಷ್ಟವಾಗದೆ ಜಯಸುಧಾ ರಿಜೆಕ್ಟ್ ಮಾಡಿದರು. ಕೆಲವು ಕಾರಣಗಳಿಂದ ಜಯಮಾಲಿನಿ ಕೂಡ ನಟಿಸಲಿಲ್ಲ.
ಕೊನೆಗೆ ಮಾಧವಿ ಹಾಗೂ ಮಂಜು ಭಾರ್ಗವಿ ಅವರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಿದರು. ಶೂಟಿಂಗ್ ಸುಗಮವಾಗಿ ಮುಗಿಯಿತು. ಇದು ತಮ್ಮ ಮೊದಲ ಸಿನಿಮಾ ಆಗಿದ್ದರಿಂದ, ರಿಸ್ಕ್ ಬೇಡ ಅಂತ ತಮ್ಮಾರೆಡ್ಡಿ ಕಡಿಮೆ ಲಾಭಕ್ಕೆ ಎಲ್ಲಾ ಜಿಲ್ಲೆಗಳ ವಿತರಕರಿಗೆ ಸಿನಿಮಾವನ್ನು ಮಾರಿಬಿಟ್ಟರು. ಕ್ರಾಂತಿ ಕುಮಾರ್ ಅವರೇ ಎಲ್ಲವನ್ನೂ ನೋಡಿಕೊಂಡರು. ಸಿನಿಮಾ ಮಾರಿ ಖುಷಿಯಿಂದ ಹೊರಬಂದ ತಮ್ಮಾರೆಡ್ಡಿ, ಆಮೇಲೆ ಸಿನಿಮಾದ ರಿಸಲ್ಟ್ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಿನಿಮಾ ಚೆನ್ನಾಗಿ ಓಡುತ್ತಿದೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದುದನ್ನು ಮಾತ್ರ ಕೇಳಿದ್ದರು. ಮೂರ್ನಾಲ್ಕು ತಿಂಗಳ ನಂತರ ಕೆಲಸದ ಮೇಲೆ ಬೆಜವಾಡ (ವಿಜಯವಾಡ)ಗೆ ಹೋದಾಗ, 'ಕೋತಲ ರಾಯುಡು' ಸಿನಿಮಾ ಖರೀದಿಸಿದ್ದ ವಿತರಕರು ಸಿಕ್ಕರು. ಅವರು ಪೇಪರ್ ತೋರಿಸಿ, 'ಕೋತಲ ರಾಯುಡು ಯಶಸ್ವಿ 110ನೇ ದಿನ' ಎಂಬ ದೊಡ್ಡ ಪೋಸ್ಟರ್ ತೋರಿಸಿದರು. ನಮ್ಮ ಸಿನಿಮಾ ಇಷ್ಟು ದಿನ ಓಡಿತಾ, ಇಷ್ಟು ದೊಡ್ಡ ಹಿಟ್ ಆಯ್ತಾ ಅಂತ ತಮ್ಮಾರೆಡ್ಡಿ ಶಾಕ್ ಆಗಿದ್ದರು. ಚಿರಂಜೀವಿ ಜೊತೆಗಿನ ಈ ಸಿನಿಮಾ ತಮಗೆ ಮರೆಯಲಾಗದ ಅನುಭವ ಅಂತ ಅವರು ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.