’ಜೊತೆ ಜೊತೆಯಲಿ’ ನೋಡಲು ರೆಡಿಯಾಗಿ!

By Kannadaprabha NewsFirst Published Sep 9, 2019, 11:21 AM IST
Highlights

ಈ ಹಿಂದೆ ಝೀ ಕನ್ನಡದಲ್ಲಿ ಪ್ರಸಿದ್ಧವಾಗಿದ್ದ ‘ಜೊತೆ ಜೊತೆಯಲಿ’ ಸೀರಿಯಲ್ ಹೊಸ ಕತೆಯೊಂದಿಗೆ ತೆರೆಗೆ ಬದಲು ಸಿದ್ಧವಾಗಿದೆ. ಈ ಧಾರಾವಾಹಿಯ ಮೂಲಕ ಸಾಹಸ ಸಿಂಹ ವಿಷ್ಣುವರ್ಧನ ಅವರ ಅಳಿಯ ಅನಿರುದ್ಧ್ ನಾಯಕನಾಗಿ ಕಿರುತೆರೆ ಪ್ರವೇಶಿಸಿದ್ದಾರೆ.

ಈ ಹಿಂದೆ ಝೀ ಕನ್ನಡದಲ್ಲಿ ಪ್ರಸಿದ್ಧವಾಗಿದ್ದ ‘ಜೊತೆ ಜೊತೆಯಲಿ’ ಸೀರಿಯಲ್ ಹೊಸ ಕತೆಯೊಂದಿಗೆ ತೆರೆಗೆ ಬದಲು ಸಿದ್ಧವಾಗಿದೆ. ಇಂದಿನಿಂದ ರಾತ್ರಿ 8.30  ಕ್ಕೆ ಝೀ ಕನ್ನಡದಲ್ಲಿ ಈ ಸೀರಿಯಲ್ ನೋಡಬಹುದು.

ಈ ಧಾರಾವಾಹಿಯ ಮೂಲಕ ಸಾಹಸ ಸಿಂಹ ವಿಷ್ಣುವರ್ಧನ ಅವರ ಅಳಿಯ ಅನಿರುದ್ಧ್ ನಾಯಕನಾಗಿ ಕಿರುತೆರೆ ಪ್ರವೇಶಿಸಿದ್ದಾರೆ. ಆರ್ಯವರ್ಧನ್ ಎಂಬ ಉದ್ಯಮಿಯ ಪಾತ್ರಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಶೆಟ್ಟಿ ನಾಯಕಿ. ಪ್ರತೀ ಸೋಮವಾರದಿಂದ ಶುಕ್ರವಾರದವರೆಗೆ ‘ಜೊತೆ ಜೊತೆಯಲಿ’ ಪ್ರಸಾರವಾಗಲಿದೆ.

 

45 ವರ್ಷದ ಅನಿರುದ್ಧ್‌ಗೆ ಒಲಿಯಲಿದ್ದಾಳಾ 20ರ ಹುಡುಗಿ?

ಮದ್ವೆಯಾಗೋ ಹುಡುಗ ಹುಡುಗಿ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದರೆ ಏನೆಲ್ಲ ಸನ್ನಿವೇಶ ಎದುರಾಗಬಹುದು ಅನ್ನುವ ಕತೆ ಹಿಂದಿನ ‘ಜೊತೆ ಜೊತೆಯಲಿ’ ಸೀರಿಯಲ್‌ಗಿತ್ತು. ಈ ಬಾರಿಯೂ 45 ವರ್ಷದ ಉದ್ಯಮಿ ಹಾಗೂ 20 ವರ್ಷದ ಮಧ್ಯಮವರ್ಗದ ಯುವತಿ ನಡುವೆ ನಡೆಯುವ ಪ್ರೇಮದ ಚಿತ್ರಣವಿದೆ. 

ಶುಭ ವಿವಾಹ, ಜೋಡಿಹಕ್ಕಿಯಂತಹ ಯಶಸ್ವಿ ಧಾರವಾಹಿಗಳನ್ನು ನಿರ್ದೇಶಿಸಿದ್ದ ಆರೂರು ಜಗದೀಶ್ ಈ ಸೀರಿಯಲ್ ಸಾರಥ್ಯ ವಹಿಸಿಕೊಂಡಿದ್ದಾರೆ. ಝೀ ಕನ್ನಡ ತಂಡದ ಕಥೆಯಿದ್ದು, ಸುಧೀಂದ್ರ ಭಾರದ್ವಾಜ್, ಪವನ್ ಶ್ರೀವತ್ಸ ಚಿತ್ರಕಥೆ, ಸತ್ಯ ಕೆ ಸಂಭಾಷಣೆ ರಚಿಸಿದ್ದಾರೆ. ‘ಈಗಾಗಲೇ ತನ್ನ ಪ್ರೋಮೋ ಮೂಲಕವೇ ವೀಕ್ಷಕರಲ್ಲಿ ಕುತೂಹಲವನ್ನು ಈ ಧಾರಾವಾಹಿ ಕ್ರಿಯೇಟ್ ಮಾಡಿದ್ದು, ನಿರೀಕ್ಷೆಗಿಂತ
ಹೆಚ್ಚಿನದನ್ನು ಪ್ರಯತ್ನಿಸಿದ್ದೇವೆ’ ಎಂದು ನಿರ್ದೇಶಕ ಆರೂರು ಜಗದೀಶ್ ಹೇಳಿದ್ದಾರೆ.

‘ಕಿರುತೆರೆಯಲ್ಲಿ ಜೊತೆ ಜೊತೆಯಲಿ ಒಂದು ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎಂದು ಝೀ ಕನ್ನಡದ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ಅಪೂರ್ವ, ಶಿವಾಜಿರಾವ್, ಜಾದವ್, ಸುಂದರಶ್ರೀ, ಮಾನಸ ಮನೋಹರ್, ಮುರಳಿ, ಶ್ರೀದೇವಿ ಮೊದಲಾದ ಕಲಾವಿದರಿದ್ದಾರೆ. ಸಂತೋಷ್ ಖಾರ್ವಿ ಛಾಯಾಗ್ರಹಣ ಈ ಧಾರವಾಹಿಗಿದೆ.

click me!