'ಯಾರ್‌ಮಗ ಅಂದ್ರೆ ನಿರ್ಮಾಪಕರ ಮಗ'!

By Web DeskFirst Published May 17, 2019, 10:10 AM IST
Highlights

ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದವರು ಚಿತ್ರರಂಗಕ್ಕೆ ಬರುತ್ತಾರೆ. ರಂಗಭೂಮಿಯಿಂದ ಕಿರುತೆರೆಗೆ ಬರುತ್ತಾರೆ. ಅಲ್ಲಿಂದ ಹಿರಿತೆರೆಗೆ ಬರುವುದನ್ನು ನೋಡಿದ್ದೇವೆ. ಅದೇ ರೀತಿ ಕಿರುಚಿತ್ರ, ಆಲ್ಬಂಗಳನ್ನು ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ ಮುಂದೆ ಸಿನಿಮಾ ಮಾಡುತ್ತಿರುವುದು ಈಗ ಹೊಸ ಟ್ರೆಂಡ್‌. 

ಹೊಸ ಸೇರ್ಪಡೆ ‘ಹೇ ಸೋನಾ’ ಎನ್ನುವ ಒಂದು ಆಲ್ಬಂ ಗೀತೆ. ಇಬ್ಬರು ಹುಡುಗರು, ಒಬ್ಬ ಹುಡುಗಿ. ಈ ತ್ರಿಕೋನ ಪ್ರೇಮ ಕತೆಯನ್ನು ಹೇಳುವ ಈ ಗೀತೆಯನ್ನು ಮಾಡಿದವರು ರಘು ಪಡುಕೋಟೆ ಹಾಗೂ ಸುನೀಲ್‌. ಇವರಿಗೆ ನಾಯಕಿಯಾಗಿ ನಟಿಸಿದವರು ಶಾಲಿನಿ ಗೌಡ. ಇದೇ ಹಾಡಿನ ಉತ್ಸಾಹದಿಂದ ರಘು ಪಡುಕೋಟೆ ಅವರನ್ನು ಒಂದು ಚಿತ್ರಕ್ಕೆ ನಾಯಕನ್ನಾಗಿಸಿದೆ. ಅದರ ಹೆಸರು ‘ಯಾರ್‌ ಮಗ’. ಇದಕ್ಕೆ ರಘು ಅವರದ್ದೇ ಕತೆ. ಇವರ ತಂದೆ ಕನ್ನಡ ರಕ್ಷಣಾ ವೇದಿಕೆಯ ಶಿವಾಜಿನಗರ ಪ್ರಾಂತ್ಯದ ಅಧ್ಯಕ್ಷ ಎಂ.ಬಸವರಾಜ್‌ ಪಡುಕೋಟೆ ಅವರೇ ಚಿತ್ರದ ನಿರ್ಮಾಪಕರು. ಇತ್ತೀಚೆಗೆ ಈ ಚಿತ್ರದ ಪೋಸ್ಟರ್‌ ಬಿಡುಗಡೆ ನಡೆಯಿತು.

ಆ ಪಾರ್ವತಮ್ಮ ಬೇರೆ ಈ ಪಾರ್ವತಮ್ಮನೇ ಬೇರೆ!

ಗಣ್ಯರು ಹಾಗೂ ಮಾಧ್ಯಮಗಳ ಮುಂದೆ ನಡೆದ ಈ ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಲಹರಿ ವೇಲು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ ಮುಂತಾದವರು ಆಗಮಿಸಿದ್ದರು. ಲಹರಿ ವೇಲು ಚಿತ್ರದ ಪೋಸ್ಟರ್‌ ಲಾಂಚ್‌ ಮಾಡಿದರು. ಜಾವಾ ಕಂಪನಿಯ ಯಜ್ಡಿ ಬೈಕ್‌, ಬೈಕು, ಲಾಂಗು ಇರುವ ಪೋಸ್ಟರ್‌ ಅದು.ಅಂದಹಾಗೆ ಈ ಚಿತ್ರದ ನಿರ್ದೇಶಕರು ಸುರೇಶ್‌ ರಾಜ್‌. ಅವರಿಗೆ ಇದು ಮೊದಲ ಸಿನಿಮಾ. ‘ನನ್ನ ಮಗ ಮಾಡಿದ ಆಲ್ಬಂ ಹಾಡು ನೋಡಿದೆ. ಅವನ ಪ್ರತಿಭೆ ಗೊತ್ತಾಯಿತು. ಹೀಗಾಗಿ ಅವನಿಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ಒಳ್ಳೆಯ ಕತೆ ಬರೆದಿದ್ದಾನೆ. ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಇದಾಗುತ್ತದೆಂಬ ನಂಬಿಕೆ ಇದೆ’ ಎಂದಿದ್ದು ನಿರ್ಮಾಪಕರು. ‘ಇದೊಂದು ರೌಡಿಸಂ ಹಿನ್ನೆಲೆಯನ್ನು ಹೇಳುವ ಸಿನಿಮಾ. ಎಲ್ಲರಿಗೂ ಇಷ್ಟವಾಗುವಂತೆ ಈ ಸಿನಿಮಾ ಮೂಡಿಬರಲಿದೆ’ ಎಂದರು ನಿರ್ದೇಶಕ ಸುರೇಶ್‌ ರಾಜ್‌.

ಚಿತ್ರದ ನಾಯಕಿಯಾಗಿ ನಟಿಸುತ್ತಿರುವುದು ವಿದ್ಯಾ ಪ್ರಭು. ಇವರು ಹೊಸಬರು. ಉಳಿದಂತೆ ಕೆಜಿಎಫ್‌ ಖ್ಯಾತಿಯ ಗರುಡ, ಗಣೇಶ್‌ರಾವ್‌, ಅಶ್ವಿನಿಗೌಡ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರತಂಡದ ಮಾತಿನ ಜತೆಗೆ ಹಾಡಿನ ಪ್ರದರ್ಶನ ಕೂಡ ನಡೆಯಿತು.

click me!