ಬೆಂಗಳೂರೆಂಬ ಮಹಾನಗರಿಯನ್ನು ವೇದಿಕೆ ಮೇಲೆ ಕಟ್ಟಿ ಕೊಟ್ಟ ಬೆಂದ ಕಾಳು ಆನ್ ಟೋಸ್ಟ್!

By Ravi JanekalFirst Published Mar 26, 2024, 5:58 PM IST
Highlights

ನಾಲ್ಕು ವರ್ಷದ ನಂತರ ಮತ್ತೆ ರಂಗಶಂಕರದ ವೇದಿಕೆ ಏರಿದ ಬೆಂದ ಕಾಳು ಆನ್​ ಟೋಸ್ಟ್​​. ಗಿರೀಶ್​ ಕಾರ್ನಾಡರು ಬರೆದ, ಸುರೇಂದ್ರನಾಥ್​​ ನಿರ್ದೇಶನದ ನಾಟಕವಿದು.

- ರಜನಿ ಎಂ.ಜಿ. ಮೆಟ್ರೋ ಬ್ಯುರೋ ಹೆಡ್. ಸುವರ್ಣ ನ್ಯೂಸ್

ಕಾರ್ನಾಡ್​ ಹಾಗೂ ಸುರೇಂದ್ರ ನಾಥರ ಕಾಂಬಿನೇಶನ್​​ ಎಂಥದ್ದೆಂದು ತೊಘಲಕ್​ ನಾಟಕ ನೋಡಿದದವರಿಗೆ ಗೊತ್ತೇ ಇರತ್ತದೆ. ಅದೇ ಗ್ಯಾರಂಟಿ ಮೇಲೆ ಬೆಂದ ಕಾಳು ಆನ್​ ಟೋಸ್ಟ್​​ ನೋಡಿದೆ. ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಬರೆದ ಕಾರ್ನಾಡ್​ ಇಂದಿನ ಬೆಂಗಳೂರನ್ನು ಹೇಗೆ ಕಟ್ಟಿಕೊಟ್ಟಿರಬಹುದೆಂಬ ಕುತೂಹಲವೂ ಇತ್ತು. ಏಕೆಂದರೆ ಒಂದು ಮುಷ್ಟಿಯಲ್ಲಿ ಹಿಡಿದಿಡಲಾಗದ ಆಕಾಶ ಬೆಂಗಳೂರು. ಮಹಾನಗರವೊಂದರ ಗಲ್ಲಿಗಲ್ಲಿಯಲ್ಲೂ ಇರುವ ಮೋಸ, ವಂಚನೆ, ಮೋಹ, ಮುಗ್ದತೆಯನ್ನು ಒಟ್ಟಿಗೇ ಜೋಡಿಸಿ ಇಟ್ಟಿದ್ದಾರೆ ಕಾರ್ನಾಡರು. 

ಕುದುರೇ ರೇಸ್​​ನಲ್ಲೇ  ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ವೃದ್ಧೆ, ಬೇರೆಯವರ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡುವ ಸುಳ್ಳು ಹೇಳುವುದರಲ್ಲೇ ಸುಖಪಡುವ​​ ಪಾಪ್ಸ್​​​ ,  ಪ್ರೀತಿ ಇಲ್ಲದೆ ಹಾಡುವುದನ್ನೇ ಮರೆತ ಗೃಹಿಣಿ, ಬ್ಯಸಿನೆಸ್​​ಗಾಗಿ ದೂರದ ಊರಿನಲ್ಲಿ ಕೆಲಸ ಮಾಡುತ್ತಾ ಫೋನಿನಲ್ಲೇ ಸಂಸಾರ ನಿರ್ವಹಿಸುವನ ಯಜಮಾನನ ಅಸಹಾಯಕತೆ, ಅಡುಗೆಯಾಕೆಯ ತಣ್ಣನೆಯ ಕ್ರೌರ್ಯ, ಬೆಂಗಳೂರಿನಿಂದ ಮರಳಿ ಹಳ್ಳಿಗಳಿಗೆ ಹೋಗಿ ವಾಸಿಸುವುದಕ್ಕೆ ಬೆಚ್ಚಿಬೀಳುವ ಗೃಹಿಣಿಯರು.. ಎಲ್ಲವೂ ಬೆಂಗಳೂರೆಂಬ ಟೋಸ್ಟಿನ ಮೇಲೆ ಬಿದ್ದಿರುವ ಬೆಂದಕಾಳುಗಳೇ. 

Sirf Ek Bandaa Kaafi Hai Review: ಚಲನಚಿತ್ರದಲ್ಲಲ್ಲ, ನಿಜ ಜೀವನದಲ್ಲೂ ನ್ಯಾಯ ಸಾಮಾನ್ಯರಿಗೆ ಲಭ್ಯ!

ಸಿಂಗಾಪುರದ ಕೆಲಸದ ಆಸೆಗೆ ಬಿದ್ದು ಇರುವ ಕೆಲಸ ಕಳೆದುಕೊಳ್ಳುವ ಪ್ರಭಾಕರ ನಮ್ಮೆಲ್ಲರ ಪ್ರತಿನಿಧಿಯಂತೆ ಕಾಣುತ್ತಾನೆ. ಮೋಸಕ್ಕೆ ಒಳಗಾದರೂ ಮತ್ತೆ ಕೆಲಸ ಹುಡುಕಿಕೊಳ್ಳುವ, ಮತ್ತೆ ಎದ್ದು ನಿಲ್ಲುವ ಆತನ ಭರವಸೆಯೇ ಬೆಂಗಳೂರಿನ ಜೀವಾಳ. ಅದೇ ನಾಟಕದ ಪ್ರಮುಖ ಆಶಯ. ಇಂದಿನ ಬೆಂಗಳೂರು ಯುವಕರ ಪ್ರತಿನಿಧಿ ಕುನಾಲ್​ಗೆ ಹಣದ ಬಗ್ಗೆ, ಹಣ ಸಂಪಾದಿಸಲು ಸಂಸಾರ ಬಿಟ್ಟು ದೂರವಿರುವ ತಂದೆಯ ಬಗ್ಗೆ ಗೌರವವಿಲ್ಲ. ಗಿಟಾರಿನ ಬೆನ್ನುಹತ್ತಿದವ. ಅಮ್ಮನ ಹಾಡಿನ ಪ್ರೀತಿ, ಅಜ್ಜಿಯ ರೇಸಿನ ಹುಚ್ಚು ಎರಡನ್ನೂ ಅರ್ಥ ಮಾಡಿಕೊಳ್ಳಬಲ್ಲವ. ಹೊಸ ಸಂಗೀತದ ಸೃಷ್ಟಿಕರ್ತನಾಗುವ ಕನಸುಗಾರ. ಇದೇ ಭರವಸೆಯೊಂದಿಗೆ ನಾಟಕ ಕೊನೆಯಾಗುತ್ತದೆ.

ನಾಟಕದ ಮೊದಲ ಸೀನ್​​ನಲ್ಲಿ ಬೆಂಗಳೂರೆಂಬ ಮಹಾನಗರಿಯ ಬಗ್ಗೆ ನಾನಾ ರೀತಿಯ ವ್ಯಾಖ್ಯಾನ , ಹಾಗೂ ಅದನ್ನು ಹೇಳ ಹೇಳುತ್ತಲೇ ವೇದಿಕೆಯ ಮೇಲೆಯೇ ಟ್ರಾಫಿಕ್​ ಜಾಮ್​​ ಸೃಷ್ಟಿಸುವ ತಂತ್ರ ಇಷ್ಟವಾಯಿತು.  ​​ ನಾಟಕದ ಮಧ್ಯದಲ್ಲಿ ಆಗಾಗ ಕೇಳುವ ಕಟ್ಟಡ ಕಟ್ಟುವ ಸದ್ದು, ಮೆಟ್ರೋ ರೈಲಿನ ಶಬ್ಧ, ಜಾಝ್​​ ಸಂಗೀತ, ಮೊಬೈಲ್​​ ಕಾಲರ್​​ ಟ್ಯೂನ್​​​, ದಾಸರ ಪದಗಳು ಬೆಂಗಳೂರನ್ನು ಮತ್ತಷ್ಟು ಮನಸಿಗಿಳಿಸುತ್ತದೆ

click me!