ಫುಡ್‌ ಜಿಹಾದ್‌ ಚಿತ್ರ 'ಅನ್ನಪೂರ್ಣಿ' ನಟಿ ನಯನತಾರಾ ಮೇಲೂ ಬಿತ್ತು ಕೇಸ್‌!

By Santosh NaikFirst Published Jan 11, 2024, 5:46 PM IST
Highlights


ನಯನತಾರಾ ಮಾತ್ರವಲ್ಲದೆ, ಅನ್ನಪೂರ್ಣಿ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹಾಗೂ ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ಹೆಡ್‌ ಅವರನ್ನೂ ಈ ಕೇಸ್‌ನಲ್ಲಿ ದಾಖಲಿಸಲಾಗಿದೆ.
 

ಭೋಪಾಲ್‌ (ಜ.11): ಹಿಂದು ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವಂಥ ದೃಶ್ಯಗಳಿರುವ ತಮಿಳು ಸಿನಿಮಾ ಅನ್ನಪೂರ್ಣಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಈ ಚಿತ್ರ ನಿರ್ಮಾಣ ಮಾಡಿದ್ದ ಜೀ ಸ್ಟುಡಿಯೋಸ್‌ ಇದರ ಬಗ್ಗೆ ಕ್ಷಮೆ ಯಾಚಿಸಿದೆ. ನೆಟ್‌ಫ್ಲಿಕ್ಸ್ ಇಂಡಿಯಾ ತನ್ನ ವೇದಿಕೆಗಳಿಂದ ಅನ್ನಪೂರ್ಣಿ ಸಿನಿಮಾಕ್ಕೆ ಗೇಟ್‌ ಪಾಸ್‌ ನೀಡಲಾಗಿದೆ. ಇದರ ನಡುವೆ ಅನ್ನಪೂರ್ಣಿ ಎನ್ನುವುದು ಬರೀ ಸಿನಿಮಾವಲ್ಲ, ಫುಡ್‌ ಜಿಹಾದ್‌ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಆಹಾರದ ಮೂಲಕ ಇಸ್ಲಾಂ ಅನ್ನು ಹೇರುವ ಅಂಶವನ್ನು ಸಿನಿಮಾದಲ್ಲಿ ಬಿತ್ತರಿಸಲಾಗಿದೆ ಎನ್ನುವ ಆರೋಪಗಳಿವೆ. ಇದರ ನಡುವೆ ಅನ್ನಪೂರ್ಣಿ ಸಿನಿಮಾದ ನಟಿ ನಯನತಾರಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅದರೊಂದಿಗೆ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹಾಗೂ ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ಹೆಡ್‌ ಮೋನಿಕಾ ಶೆರ್ಗಿಲ್‌ ವಿರುದ್ಧವೂ ಕೇಸ್‌ ಬಿದ್ದಿದೆ.  ಮಧ್ಯಪ್ರದೇಶದ ಜಬಲ್ಪುರದ ಹಿಂದೂಪರ ಸಂಘಟನೆಯ ದೂರಿನ ಅನ್ವಯ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಈ ಸಿನಿಮಾ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವುದು ಮಾತ್ರವಲ್ಲ, ಭಗವಾನ್‌ ರಾಮನಿಗೆ ಅಗೌರವ ತೋರಲಾಗಿದೆ. ಈ ಸಿನಿಮಾದ ಮೂಲಕ ಲವ್‌ ಜಿಹಾದ್‌ಗೆ ಪ್ರೋತ್ಸಾಹ ನೀಡಲಾಗಿದೆ ಎಂದು ದೂರಲಾಗಿದೆ.

ಹಿಂದೂ ಸೇವಾ ಪರಿಷದ್‌ ಜಬಲ್ಪುರದ ಓಮ್ತಿ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲು ಮಾಡಿದೆ. ಇದರಲ್ಲಿ ನಯನತಾರಾ ಮಾತ್ರವಲ್ಲದೆ, ನಿರ್ದೇಶಕ ನೀಲೇಶ್‌ ಕೃಷ್ಣ, ನಿರ್ಮಾಪಕರಾದ ಜತಿನ ಸೇಥಿ ಮತ್ತು ಆರ್‌ ರವೀಂದ್ರನ್‌ ಹಾಗೂ ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ಹೆಡ್‌ ಮೋನಿಕಾ ಶೇರ್ಗಿಲ್‌ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲು ಮಾಡಲಾಗಿದೆ.

ಡಿಸೆಂಬರ್‌ 1 ರಂದು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದರೆ, ಡಿಸೆಂಬರ್‌ 29 ರಿಂದ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಈ ಸಿನಿಮಾದ ಕುರಿತಾಗಿ ಆಕ್ರೋಶ ಹಾಗೂ ಸಾಲು ಸಾಲು ಪೊಲೀಸ್‌ ದೂರು ದಾಖಲಾದ ಬಳಿಕ ಚಿತ್ರವನ್ನು ಒಟಿಟಿ ವೇದಿಕೆಯಿಂದ ಕೈಬಿಡಲಾಗಿದೆ. ಹಿಂದೂ ಪರ ಸಂಘಟನೆಯಾಗಿರುವ ಭಜರಂಗ ದಳ ಹಾಗೂ ಹಿಂದು ಐಟಿ ಸೆಲ್‌, ನಯನತಾರಾ ಹಾಗೂ ಇತರರ ವಿರುದ್ಧ ಎರಡು ದೂರುಗಳನ್ನು ಈಗಾಗಲೇ ಮುಂಬೈನಲ್ಲಿ ದಾಖಲು ಮಾಡಿದೆ.

ಜಬಲ್ಪುರ್ ಕೇಸ್‌ನಲ್ಲಿ ಹಿಂದೂ ಸೇವಾ ಪರಿಷದ್‌ ಸಂಘಟನೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಅತುಲ್ ಜೇಸ್ವಾನಿ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾಮಾನ್ಯ ಉದ್ದೇಶದ ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ.

ದೂರಿನ ಮಾಹಿತಿ: ಅನ್ನಪೂರ್ಣಿ ಸಿನಿಮಾ ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುವಂಥ ಸಿನಿಮಾವಾಗಿದೆ. ಇದರಲ್ಲಿ ಸನಾತನ ಧರ್ಮಕ್ಕೆ ಅವಮಾನ ಮಾಡಲಾಗಿದೆ. ಅದಲ್ಲದೆ, ಭಗವಾನ್‌ ಶ್ರೀರಾಮನ ವಿರುದ್ಧ ಆಧಾರರಹಿತ ಅರೋಪಗಳನ್ನು ಮಾಡಲಾಗಿದೆ. ಅದರೊಂದಿಗೆ ಸಿನಿಮಾದ ಕೆಲವೊಂದು ದೃಶ್ಯಗಳನ್ನೂ ಎಫ್‌ಐಅರ್‌ನಲ್ಲಿ ಉಲ್ಲೇಖಿಸಲಾಗಿದೆ. ಚಿತ್ರದಲ್ಲಿ ನಯನತಾರಾ ದೇವಸ್ಥಾನದ ಪೂಜಾರಿಯೊಬ್ಬಳ ಮಗಳಾಗಿರುತ್ತಾರೆ. ಆದರೆ, ಬಿರಿಯಾನಿ ಮಾಡುವ ಮುನ್ನ ಆಕೆ ಹಿಜಾಬ್‌ ಧರಿಸಿ ನಮಾಜ್‌ ಮಾಡುತ್ತಾರೆ.  ಅದಲ್ಲದೆ, ಇನ್ನೊಂದು ದೃಶ್ಯದಲ್ಲಿ ನಯನತಾರಾ ಗೆಳತಿಯಾಗಿರುವ ಮಹಿಳೆಯೊಬ್ಬಳು, ನಯನತಾರಾ ಅವರ ಕೈಯಲ್ಲಿ ಮಾಂಸವನ್ನು ಕಟ್‌ ಮಾಡಲು ಬ್ರೇನ್‌ವಾಷ್‌ ಮಾಡುವ ದೃಶ್ಯವೂ ಇದೆ. ಇದರಲ್ಲಿ ಆಕೆ, ಭಗವಾನ್‌ ರಾಮ ಹಾಗೂ ದೇವಮಾತೆ ಸೀತೆ ಕೂಡ ಮಾಂಸ ತಿಂದಿದ್ದರು ಎಂದು ಹೇಳುತ್ತಾಳೆ.

ರಾಮನೇ ಮಾಂಸ ತಿಂದ, ಬ್ರಾಹ್ಮಣ ಹುಡುಗಿ ಚಿಕನ್​ ತಿಂದರೆ ತಪ್ಪೇನು? ಹಿಂದುತ್ವವನ್ನೇ ಪಣಕ್ಕಿಟ್ಟ ಅನ್ನಪೂರ್ಣಿ!

ಅದಲ್ಲದೆ, ಈ ಸಿನಿಮಾ ಲವ್‌ ಜಿಹಾದ್‌ಗೆ ಪ್ರೋತ್ಸಾಹ ನೀಡುವ ಅಂಶಗಳನ್ನು ಹೊಂದಿದೆ ಎಂದು ಜೇಶ್ವಾನಿ ದೂರಿದಿದ್ದಾರೆ. ಹಿಂದೂ ಹುಡುಗಿಯರನ್ನು ಮುಸ್ಲಿಂ ಹುಡುಗರು ಪ್‌ರೀತಿಯ ಬಲೆಯಲ್ಲಿ ಬೀಳಿಸಿ ಮತಾಂತರ ಮಾಡುವ ವಿಧಾನವನ್ನು  ಲವ್‌ ಜಿಹಾದ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ಅಪ್ಪಟ ಬ್ರಾಹ್ಮಣ ಹುಡುಗಿ ಪುಸ್ತಕದಲ್ಲಿ ಕದ್ದುಮುಚ್ಚಿ ನೋಡ್ತಿರೋದೇನು? ನಯನತಾರಾ ವಿಡಿಯೋ ರಿಲೀಸ್​

click me!