
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ 300 ಕೋಟಿ ರು. ಕ್ಲಬ್ನತ್ತ ದಾಪುಗಾಲು ಹಾಕುತ್ತಿದೆ. ಮೊದಲ ದಿನವೇ ಪ್ರಿ ರಿಲೀಸ್ ಗಳಿಕೆ ಸೇರಿ ಚಿತ್ರದ ಕಲೆಕ್ಷನ್ 237 ಕೋಟಿ ರು.ಗೂ ಅಧಿಕವಾಗಿದ್ದು, ಭಾರತದಲ್ಲೇ ಈ ಸಿನಿಮಾ 173 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಮೂಲಕ ಓಪನಿಂಗ್ನಲ್ಲಿ ಈ ಮಟ್ಟಿನ ಗಳಿಕೆ ದಾಖಲಿಸಿದ ದೇಶದ ಎರಡನೇ ಅತೀ ದೊಡ್ಡ ಸಿನಿಮಾವಾಗಿ ಹೊರಹೊಮ್ಮಿದೆ.
ಗಳಿಕೆಯ ರೇಸ್ನಲ್ಲಿ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾವನ್ನು ಹಿಂದಿಕ್ಕಿದೆ. ಮೊದಲ ದಿನ ರೂ.275 ಕೋಟಿ ಕಲೆಕ್ಷನ್ ಮಾಡಿದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಮೊದಲ ಸ್ಥಾನದಲ್ಲಿದೆ. ಹಿಂದಿ ಭಾಷೆಯೊಂದರಲ್ಲೇ 105 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅತ್ಯಧಿಕ ಗಳಿಕೆಯ ಬಾಲಿವುಡ್ ಸಿನಿಮಾವೆಂಬ ಗರಿಮೆಯೂ ‘ಧುರಂಧರ್ 2’ ಕಿರೀಟಕ್ಕೆ ಸೇರಿಕೊಂಡಿದೆ. ಈ ಸಿನಿಮಾ ಪ್ರೀಮಿಯರ್ ಶೋನಲ್ಲೇ 45 ಕೋಟಿ ರು.ಗಳಿಕೆ ಮಾಡಿದ್ದು, ಬಿಡುಗಡೆ ಪೂರ್ವದಲ್ಲಿ ಇದು ದಾಖಲೆಯ ಕಲೆಕ್ಷನ್ ಆಗಿದೆ.
‘ಧುರಂಧರ್ 2’ ಗೆ ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೀಘ್ರ 1000 ಕೋಟಿ ರು. ಕ್ಲಬ್ ಸೇರುವ ವಿಶ್ವಾಸವಿದೆ. ಈ ಸಿನಿಮಾದ ಮೊದಲ ಭಾಗ ಗಳಿಕೆಯಲ್ಲಿ 1000 ಕೋಟಿ ರು.ಗಳ ಗಡಿ ದಾಟಿತ್ತು. ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ನಟಿ ರಮ್ಯಾ ಅವರು ‘ಧುರಂಧರ್ 2’ ಚಿತ್ರ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಎರಡು ಪುಟಗಳಷ್ಟು ಉದ್ದದ ವಿಮರ್ಶೆ ಬರೆದಿದ್ದಾರೆ. ರಮ್ಯಾ ಅವರ ಮಾತುಗಳು ಇಲ್ಲಿವೆ:
1. ಈಗಷ್ಟೇ ‘ಧುರಂಧರ್ 2’ ಚಿತ್ರವನ್ನು ನೋಡಿದೆ. ಭರವಸೆಯ ಚಿತ್ರವೊಂದನ್ನು ಹೇಗೆ ನೀರಸಗಿ ರೂಪಿಸಬಹುದು ಎಂಬುದಕ್ಕೆ ಈ ಸಿನಿಮಾ ಒಂದು ಮಾಸ್ಟರ್ ಕ್ಲಾಸ್ ಇದ್ದಂತೆ.
2. ಇದು ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಯಾಕೆಂದರೆ ಅಂತ್ಯವೇ ಇಲ್ಲದೆ ಅಧ್ಯಯಗಳನ್ನು ಒಳಗೊಂಡ, ನೀರಸ ಪುಸ್ತಕವನ್ನು ಓದಿದಂತಾಗುತ್ತದೆ. ಒಂದು ಹಂತದಲ್ಲಿ ನಿಮ್ಮ ಮೆದುಳು ಕೈ ಕೊಟ್ಟು, ತೆರೆ ಮೇಲೆ ನಡೆಯುತ್ತಿರುವುದನ್ನು ನೋಡಿ ನಗುತ್ತೀರಿ.
3. ಮಿತಿಮೀರಿದ ಹಿಂಸಾಚಾರ, ಸಾಧಾರಾಣ ಮೇಕಿಂಗ್ನಿಂದ ಕೂಡಿದ ಈ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಹಣ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ. ಹೀಗಾಗಿ ಓಟಿಟಿಯಲ್ಲಿ ಸಿನಿಮಾ ನೋಡಿ. ಯಾಕೆಂದರೆ ಕೊನೆ ಪಕ್ಷ ಬೋರ್ ಆದಾಗ ಚಿತ್ರವನ್ನು ಪಾಸ್ ಮಾಡಬಹುದು, ಫೋನ್ ಸ್ಕ್ರಾಲ್ ಮಾಡಬಹುದು, ಇಲ್ಲವೇ ಒಂದು ಕ್ಲಿಕ್ ಮೂಲಕ ಸಿನಿಮಾದಿಂದ ತಪ್ಪಿಸಿಕೊಳ್ಳಬಹುದು.
4. ನಿರ್ದೇಶನ, ಡೈಲಾಗ್, ಎಡಿಟಿಂಗ್, ಹಿನ್ನೆಲೆ ಸಂಗೀತ ಹಾಗೂ ಅಭಿನಯ... ಎಲ್ಲವೂ ಅತ್ಯಂತ ಸಾಧಾರಣ ಮತ್ತು ಕಳಪೆ. ಚಿತ್ರದ ಮೊದಲ ಪಾರ್ಟ್ ನೋಡುವಾಗ ಪ್ರೇಕ್ಷಕರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುತ್ತಿದ್ದರು. ಅಲ್ಲಿ ಎನರ್ಜಿ ಇತ್ತು. ಪಾರ್ಟ್ 2 ನೋಡುವಾಗ ಪ್ರೇಕ್ಷಕರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಇಡೀ ಚಿತ್ರಮಂದಿರದಲ್ಲಿ ನಿರಾಸೆ ವಾತಾವರಣ ಮನೆ ಮಾಡಿತ್ತು.
5. ಈ ಚಿತ್ರದಲ್ಲಿ ರಣವೀರ್ ಸಿಂಗ್ ನಟನೆ ಸೂಪರ್, ಅವರು ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗುತ್ತಾರೆ ಎನ್ನುವವರಿಗೆ ನನ್ನದೊಂದು ಪ್ರಶ್ನೆ, ಏನು ಹೊತ್ತುಕೊಂಡಿದ್ದಾರೆ? ನಾನು ನೋಡಿದ್ದು ಅವರ ಕೂದಲು ಮಾತ್ರ. ಪಾರ್ಟ್ 1ರಲ್ಲಿ ಅವರ ಕೂದಲಿಗೆ ವ್ಯಕ್ತಿತ್ವ, ಪ್ರೆಸೆನ್ಸ್ ಇತ್ತು. ಆದರೆ ಪಾರ್ಟ್2ನಲ್ಲಿ ಅದೇ ಅಡ್ಡಿಯಾಗಿದೆ. ಬಹುಶಃ ಆ ಕೂದಲಿಗೆ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಕೊಟ್ಟರೂ ಆಶ್ಚರ್ಯವಿಲ್ಲ.
6. ಸಿನಿಮಾದಲ್ಲಿನ ಹಿಂಸಾಚಾರವಂತೂ ಮಿತಿಮೀರಿದೆ. ಇದೊಂದು ಸಿನಿಮಾವಲ್ಲ, ಬದಲಿಗೆ ಸಿಕ್ಕಸಿಕ್ಕ ವಸ್ತುಗಳನ್ನು ಬಳಸಿ ಹೇಗೆಲ್ಲಾ ಕ್ರೂರವಾಗಿ ಹಿಂಸೆ ನೀಡಬಹುದು ಎನ್ನುವ ಹ್ಯಾಂಡ್ಬುಕ್ನಂತಿದೆ. ಸಿರಿಂಜ್, ಸ್ಪ್ಯಾನರ್, ಚಾಕುಗಳು, ಮೊಳೆ ಇರುವ ಬಾಲ್ಗಳು, ಕೊಡಲಿ, ಚೈನ್, ಗನ್, ಬಾಂಬ್...ಹೀಗೆ ಪ್ರತಿಯೊಂದನ್ನೂ ಆಯುಧವಾಗಿ ಬಳಸಿದ್ದಾರೆ.
7. ಹಿಂದಿನ ದೃಶ್ಯಕ್ಕಿಂತ ಮುಂದಿನ ದೃಶ್ಯದಲ್ಲಿ ಹಿಂಸೆಯನ್ನು ಹೆಚ್ಚು ಹಿಂಸಾತ್ಮಕವಾಗಿ ಅಥವಾ ಹಾಸ್ಯಸ್ಪದವಾಗಿ ಮಾಡುವುದು ಹೇಗೆ ಎಂದು ನಿರ್ದೇಶಕರು ತಮ್ಮ ಜೊತೆಗೆ ತಾವೇ ಸ್ಪರ್ಧೆಗೆ ಇಳಿದಂತಿದೆ. ಆ ಹಿಂಸೆ ಎಷ್ಟು ಅತಿರೇಕಕ್ಕೆ ಹೋಗುತ್ತದೆ ಎಂದರೆ, ಅದು ನೋಡುಗರಿಗೆ ಶಾಕ್ ಕೊಡುವ ಬದಲು ನಗು ತರಿಸುತ್ತದೆ. ಒಬ್ಬ ವ್ಯಕ್ತಿಯ ಎರಡು ಕಾಲುಗಳನ್ನು ಕತ್ತರಿಸಿ, ಮೈಮೇಲೆ ಸೀಮೆಎಣ್ಣೆ ಸುರಿದಿದ್ದರೂ, ಆತ ಯಾವುದೋ ‘ಟೆಡ್ ಟಾಕ್’ ನೀಡುವಂತೆ ಆರಾಮವಾಗಿ ಸಂಭಾಷಣೆ ಹೊಡೆಯುತ್ತಿರುತ್ತಾನೆ! ವೈದ್ಯಕೀಯ ವಿಜ್ಞಾನಕ್ಕೆ ಜೈ ಅನ್ನಬೇಕು. ಇಂಥ ದೃಶ್ಯಗಳ ಕಾರಣಕ್ಕೆ ಇವರಿಗೆ ಆಸ್ಕರ್ ಅಲ್ಲ, ನೋಬೆಲ್ ಪ್ರಶಸ್ತಿಯೇ ಸಿಗಬೇಕು.
8. ಒಟ್ಟಾರೆ ಈ ಚಿತ್ರ ನಿದ್ರೆ ತರಿಸುವ ಅಥವಾ ಕಾಮಿಡಿ ತರಿಸುವ ಸಿನಿಮಾ. ಮೊದಲ ಭಾಗ ರಂಜಿಸಿತ್ತು. ಎರಡನೇ ಭಾಗ ‘ನಾನು ಯಾಕೆ ಈ ಚಿತ್ರ ನೋಡಿದೆ’ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
9. ರಣವೀರ್, ನೀವು ಇದಕ್ಕಿಂತ ಉತ್ತಮ ಚಿತ್ರಗಳನ್ನು ಮಾಡಬಲ್ಲಿರಿ. ಆದಿತ್ಯ ಧರ್ ಅವರೇ ಜಿಂಗೋಇಜಂ ಮತ್ತು ಪ್ರೊಪಗಾಂಡಾ ಈಗ ಹಳೆದಾಗಿವೆ. ಇದನ್ನು ಬಿಟ್ಟು ಹೊರಬನ್ನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.