ದರ್ಶನ್ ಮಂಡ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಸುಮಲತಾ ಅಂಬರೀಶ್ ಅವರ ಪರವಾಗಿ ಮತಯಾಚನೆಗೆ ಇಳಿದ ಮೇಲೆ ಅವರು ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್ಗೆ ಬ್ರೇಕ್ ಬಿದ್ದಿದೆ.
- ಹೀಗೆ ಏನಾದರೂ ಅಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಎಂ ಡಿ ಶ್ರೀಧರ್ ನಿರ್ದೇಶಿಸಿ, ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಒಡೆಯ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ರಾಗವಿ ಎಂಬ ಹೊಸ ಪ್ರತಿಭೆ ಈ ಚಿತ್ರದ ಮೂಲಕ ನಾಯಕಿ ಆಗುತ್ತಿದ್ದಾರೆ.
ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತುಕೊಂಡ ಮೇಲೆ ಒಡೆಯ ಮತ್ತು ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದ ಕೆಲಸ ನಿಂತು ಹೋಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ‘ಒಡೆಯ’ನಿಗೆ ಸದ್ದಿಲ್ಲದೆ ಚಿತ್ರೀಕರಣ ಮುಕ್ತಾಯಗೊಂಡಿದೆ. ಕೇವಲ ಎರಡು ಹಾಡು ಮಾತ್ರ ಬಾಕಿ ಇದೆ. ಅದು ಕೂಡ ಇಷ್ಟೊತ್ತಿಗೆ ಮುಗಿಯುತ್ತಿತ್ತು. ಆದರೆ, ಈ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುವ ಪ್ಲಾನ್ ಚಿತ್ರತಂಡದ್ದು. ಹೀಗಾಗಿ ಹೊರ ದೇಶಕ್ಕೆ ಹೊರಡುವುದಕ್ಕೆ ಹಾಡು ಬಾಕಿ ಉಳಿಸಿಕೊಂಡಿದ್ದಾರೆ. ಬಹು ದೊಡ್ಡ ತಾರಾಗಣ, ಬಿಗ್ ಬಜೆಟ್ ಸಿನಿಮಾ ಆಗಿದ್ದರೂ ಭಾರಿ ವೇಗವಾಗಿ ಶೂಟಿಂಗ್ ಮುಕ್ತಾಯಗೊಂಡಿದೆ. ರಾಜಕೀಯ ಪ್ರಚಾರದ ಕಾರಣಕ್ಕೆ ಸಿನಿಮಾ ಕೆಲಸಗಳನ್ನು ನಿಂತಿಲ್ಲ. ಹೀಗೆ ಹೇಳುವ ಮೂಲಕ ‘ಒಡೆಯ’ನ ಬಗ್ಗೆ ಮಾಹಿತಿ ನೀಡಿದ್ದು ನಿರ್ದೇಶಕ ಎಂಡಿ ಶ್ರೀಧರ್. ಅಂದಹಾಗೆ ಅಂದುಕೊಂಡಂತೆ ಎಲ್ಲವೂ ಆದರೆ ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.
ಸಿನಿಮಾ ಬಿಟ್ಟು ಗಜೇಂದ್ರ ಟ್ರ್ಯಾನ್ಸ್ ಪೋರ್ಟ್ ಓನರ್ ಆದ ದರ್ಶನ್!
ಇನ್ನೂ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರಕ್ಕೂ ಕೆಲಸಗಳು ನಡೆಯುತ್ತಿವೆ. ತಂತ್ರಜ್ಞರ ತಂಡ ಅಂತಿಮಗೊಂಡಿದೆ. ಕತೆ, ಚಿತ್ರಕಥೆ, ಸಂಭಾಷಣೆ ಪೂರ್ತಿ ಆಗಿದೆ. ಇದೇ ತಿಂಗಳು ಎರಡನೇ ವಾರದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಡಿ ಉಮಾಪತಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಮುಹೂರ್ತ ಮಾಡುವುದಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರು, ವೈಜಾಗ್, ಮಂಗಳೂರು ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಚಿತ್ರೀಕರಣ ನಡೆಯಲಿದೆ. ವಿಶೇಷವಾಗಿ ಅಯೋಧ್ಯೆಯಲ್ಲಿ ಈ ಚಿತ್ರಕ್ಕೆ ಬಹು ಮುಖ್ಯವಾದ ಸನ್ನಿವೇಶಗಳ ಚಿತ್ರೀಕರಣ ಮಾಡುವ ಯೋಚನೆ ಚಿತ್ರತಂಡದ್ದು. ಹೀಗೆ ತಮ್ಮ ರಾಜಕೀಯ ಕೆಲಸಗಳ ನಡುವೆಯೂ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಈ ಎರಡು ಚಿತ್ರಗಳ ಕೆಲಸಗಳಿಗೆ ಅಡ್ಡಿ ಮಾಡಿಲ್ಲ. ಅಂದುಕೊಂಡಂತೆ ‘ಒಡೆಯ’ ಹಾಗೂ ‘ರಾಬರ್ಟ್’ ಚಿತ್ರಗಳು ಚಾಲನೆಯಲ್ಲಿವೆ.